ಭ್ರಷ್ಟಾಚಾರದ ವಿರುದ್ಧ ಅಪರೂಪದ ಹೋರಾಟ; ನಾಯಿಯ ಮುಖವಾಡ ಧರಿಸಿ ದೂರು ನೀಡಿದ ವ್ಯಕ್ತಿ
Dog Mask: ಮಧ್ಯ ಪ್ರದೇಶದ ಖಾಂಡ್ವಾದಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ವೇಳೆ ವ್ಯಕ್ತಿಯೊಬ್ಬರು ನಾಯಿಯ ಮುಖವಾಡ ಧರಿಸಿ ಮಹಾನಗರ ಪಾಲಿಕೆ ವಿರುದ್ಧ ದೂರು ಸಲ್ಲಿಸಿದ್ದಾರೆ. ಬೀದಿ ನಾಯಿಗಳ ಸಂತಾನಶಕ್ತಿಹರಣ ಯೋಜನೆ ಹೆಸರಿನಲ್ಲಿ ಲಕ್ಷಾಂತರ ರುಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದ್ದು, ಜಿಲ್ಲಾಡಳಿತ ತನಿಖೆಗೆ ಭರವಸೆ ನೀಡಿದೆ.
ನಾಯಿಯ ಮುಖವಾಡ ಧರಿಸಿ ದೂರು ನೀಡಿದ ವ್ಯಕ್ತಿ -
ಭೋಪಾಲ್, ಆ. 19: ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಾಪ್ತಾಹಿಕ ಸಾರ್ವಜನಿಕ ಕುಂದುಕೊರತೆ ವಿಚಾರಣೆ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು ನಾಯಿಯ ಮುಖವಾಡ ಧರಿಸಿ ಖಾಂಡ್ವಾ ಮಹಾನಗರ ಪಾಲಿಕೆ ವಿರುದ್ಧ ದೂರು ಸಲ್ಲಿಸಿದ್ದಾರೆ. ಖಾಂಡ್ವಾ ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ದೀಪಕ್ ‘ಮುಲ್ಲು’ ರಾಥೋಡ್ ಅವರೊಂದಿಗೆ ಆಗಮಿಸಿದ ವ್ಯಕ್ತಿ, ಪಾಲಿಕೆಯ ಬೀದಿ ನಾಯಿಗಳ ಸಂತಾನಶಕ್ತಿಹರಣ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಪಾಲಿಕೆ ಬೀದಿ ನಾಯಿಗಳ ಸಂತಾನಶಕ್ತಿಹರಣ ಹೆಸರಿನಲ್ಲಿ ಲಕ್ಷಾಂತರ ರುಪಾಯಿ ಹಣಕಾಸಿನ ಅವ್ಯವಹಾರ ನಡೆಸಿದೆ ಎಂದು ದೀಪಕ್ ರಾಥೋಡ್ ಆರೋಪಿಸಿದ್ದಾರೆ. ಸಂತಾನಶಕ್ತಿಹರಣ ಕಾರ್ಯಕ್ರಮ ಕೇವಲ ದಾಖಲೆಗಳಲ್ಲಿ ನಡೆಯುತ್ತಿದ್ದು, ಈ ಉದ್ದೇಶಕ್ಕಾಗಿ ಸರ್ಕಾರದಿಂದ ಬಿಡುಗಡೆಯಾದ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅವರು ದೂರಿದ್ದಾರೆ.
ನಾಯಿಯ ಮುಖವಾಡ ಧರಿಸಿದ ವ್ಯಕ್ತಿಯಿಂದ ಭ್ರಷ್ಟಾಚಾರ ಆರೋಪ:
#WATCH | Khandwa, Madhya Pradesh: Protester who wore a dog mask says, "I did this for justice. We are being defamed, but the real fault lies with the Nagar Nigam. They are committing corruption in our name, corruption in the name of sterilising us. We are being defamed. But we… https://t.co/ZqKB7wbTzG pic.twitter.com/1YNPWxY2Cg
— ANI (@ANI) August 19, 2026
ನಾಯಿಯ ಮುಖವಾಡ ಧರಿಸಿದ್ದ ವ್ಯಕ್ತಿಯನ್ನು ರಾಥೋಡ್ ಸಾರ್ವಜನಿಕ ಕುಂದುಕೊರತೆ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಗಳ ಬಳಿಗೆ ಕರೆದೊಯ್ದರು. ಈ ವಿಭಿನ್ನ ಪ್ರತಿಭಟನೆ ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರ ಗಮನ ಸೆಳೆಯಿತು. ಬಳಿಕ ಪ್ರತಿಭಟನೆಯ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಲೋಕ ಭವನದ ಬಳಿ ಪ್ರಜ್ಞೆ ತಪ್ಪಿದ ವ್ಯಕ್ತಿಯ ಸಹಾಯಕ್ಕೆ ಧಾವಿಸಿದ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೆಕರ್
ಸಂತಾನಶಕ್ತಿಹರಣ ಕೇಂದ್ರದ ಕಾರ್ಯನಿರ್ವಹಣೆ ಹಾಗೂ ಇದುವರೆಗೆ ಖರ್ಚು ಮಾಡಿರುವ ಹಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ರಾಥೋಡ್ ಆಗ್ರಹಿಸಿದ್ದಾರೆ. ನಗರದಲ್ಲಿ ಬೀದಿ ನಾಯಿಗಳ ಸಮಸ್ಯೆ ಮುಂದುವರಿದಿದ್ದರೂ, ಈ ಕಾರ್ಯಕ್ರಮಕ್ಕೆ ದೊಡ್ಡ ಮೊತ್ತದ ಹಣ ಖರ್ಚು ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಕಾಶಿ ರಾಮ್ ಬಡೋಲೆ, ಸಂತಾನಶಕ್ತಿಹರಣ ಕೇಂದ್ರದ ಕಾರ್ಯನಿರ್ವಹಣೆ ಮತ್ತು ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದ ದೂರು ಸಾರ್ವಜನಿಕ ವಿಚಾರಣೆಯಲ್ಲಿ ಸ್ವೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಆರೋಪಗಳ ಕುರಿತು ತನಿಖೆ ನಡೆಸಿ ಕೇಂದ್ರದ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲಾಗುವುದು. ತನಿಖೆಯಲ್ಲಿ ಯಾವುದೇ ಅಕ್ರಮಗಳು ದೃಢಪಟ್ಟರೆ, ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಡೋಲೆ ಭರವಸೆ ನೀಡಿದ್ದಾರೆ.