ಅಯೋಧ್ಯೆ ರಾಮ ಮಂದಿರದ ಮೊದಲ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಆಯ್ಕೆ
ಅಯೋಧ್ಯೆ ರಾಮ ಮಂದಿರದ ನೂತನ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಆಯ್ಕೆಯಾಗಿದ್ದಾರೆ. ರಾಮ ಮಂದಿರದಲ್ಲಿ ಕೋಟಿಗಟ್ಟಲೆ ರೂಪಾಯಿ ಕಾಣಿಕೆ ಕಳವು ನಡೆದಿರುವುದು ಬೆಳಕಿಗೆ ಬಂದ ಬಳಿಕ ದೇಗುಲಕ್ಕೆ ಹೊಸ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ.
ಅಯೋಧ್ಯೆ ರಾಮ ಮಂದಿರ ಮತ್ತು ಜಿತೇಂದ್ರ ಮಿಶ್ರಾ (ಸಂಗ್ರಹ ಚಿತ್ರ) -
ಲಖನೌ, ಸೆ. 2: ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರದ (Ayodhya Ram temple) ನೂತನ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಆಯ್ಕೆಯಾಗಿದ್ದಾರೆ. ರಾಮ ಮಂದಿರದಲ್ಲಿ ಕೋಟಿಗಟ್ಟಲೆ ರೂಪಾಯಿ ಕಾಣಿಕೆ ಕಳವು ನಡೆದಿರುವುದು ಬೆಳಕಿಗೆ ಬಂದ ಬಳಿಕ ದೇಗುಲಕ್ಕೆ ಹೊಸ ಆಡಳಿತಾಧಿಕಾರಿಯನ್ನು ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಬುಧವಾರ (ಸೆಪ್ಟೆಂಬರ್ 2) ಉನ್ನತ ಮಟ್ಟದ ಸಭೆ ನಡೆಸಿದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಿತೇಂದ್ರ ಮಿಶ್ರಾ ಅವರನ್ನು ಆಯ್ಕೆ ಮಾಡಿದೆ.
ಸಿಇಒ ಹುದ್ದೆಗೆ 5,000ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. ಆ ಪೈಕಿ ಅರ್ಜಿದಾರರ ಸಮಗ್ರ ಪಟ್ಟಿಯಿಂದ ಜಿತೇಂದ್ರ ಮಿಶ್ರಾ ಅವರನ್ನು ರಾಮ ಮಂದಿರ ಟ್ರಸ್ಟ್ನ ಮೊದಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ. ಭಾರತೀಯ ವಾಯುಪಡೆಯಲ್ಲಿ ಹಲವು ಕಮಾಂಡಿಂಗ್ ಹುದ್ದೆಗಳನ್ನು ಅಲಂಕರಿಸಿದ ಅವರು ಆಪರೇಷನ್ ಸಿಂದೂರ್ ಸಮಯದಲ್ಲಿ ಪಶ್ಚಿಮ ಕಮಾಂಡ್ನ ಮುಖ್ಯಸ್ಥರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ದೇಣಿಗೆ ಕಳವು ಪ್ರಕರಣದಿಂದ ವಿವಾದಕ್ಕೊಳಗಾದ ರಾಮ ಮಂದಿರದ ಪ್ರತಿಷ್ಠೆಯನ್ನು ಮತ್ತು ಆರ್ಥಿಕ ಹೊಣೆಗಾರಿಕೆಯನ್ನು ಬಲಪಡಿಸುವ ಪ್ರಮುಖ ಹೊಣೆಗಾರಿಕೆ ಇದೀಗ ಜಿತೇಂದ್ರ ಅವರ ಮೇಲಿದೆ.
ಯಾರು ಈ ಜಿತೇಂದ್ರ ಮಿಶ್ರಾ?
ಜಿತೇಂದ್ರ ಮಿಶ್ರಾ 1986ರ ಡಿಸೆಂಬರ್ನಲ್ಲಿ ಫೈಟರ್ ಪೈಲಟ್ ಆಗಿ ಭಾರತೀಯ ವಾಯುಪಡೆಗೆ ನಿಯೋಜನೆಗೊಂಡರು. 38 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂತರ ಅವರು 2026ರ ಮೇಯಲ್ಲಿ ಭಾರತೀಯ ವಾಯುಪಡೆಯಿಂದ ನಿವೃತ್ತರಾದರು. ಅವರು ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಬೆಂಗಳೂರಿನ ಏರ್ ಫೋರ್ಸ್ ಟೆಸ್ಟ್ ಪೈಲಟ್ಸ್ ಸ್ಕೂಲ್, ಅಮೆರಿಕದ ಏರ್ ಕಮಾಂಡ್ ಮತ್ತು ಸ್ಟಾಫ್ ಕಾಲೇಜು ಮತ್ತು ಇಂಗ್ಲೆಂಡ್ನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್ನ ಹಳೆಯ ವಿದ್ಯಾರ್ಥಿ.