ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼ'ದೇಶದಲ್ಲಿ ಚರ್ಚಿಸಲು 100 ವಿಷಯಗಳಿವೆ’': ಜಾರ್ಖಂಡ್ ವಿದ್ಯಾರ್ಥಿ ಪ್ರತಿಭಟನೆ ನಿರ್ಲಕ್ಷಿಸಿದ ಮಲ್ಲಿಕಾರ್ಜುನ ಖರ್ಗೆ; ಭುಗಿಲೆದ್ದ ಆಕ್ರೋಶ

Mallikarjun Kharge: ʼʼದೇಶದಲ್ಲಿ ನೂರಾರು ಪ್ರತ್ಯೇಕ ವಿಷಯಗಳಿವೆ” ಎಂದು ಹೇಳುವ ಮೂಲಕ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಜಾರ್ಖಂಡ್‌ ಸರ್ಕಾರದ ಮೇಲಿನ ಆರೋಪಗಳ ಪ್ರಶ್ನೆಯಿಂದ ನುಣುಚಿಕೊಂಡಿರುವುದು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಅವರ ಇಬ್ಬಗೆಯ ನೀತಿಯನ್ನು ಬಿಜೆಪಿ ಖಂಡಿಸಿದೆ.

ಜಾರ್ಖಂಡ್ ವಿದ್ಯಾರ್ಥಿ ಪ್ರತಿಭಟನೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಖರ್ಗೆ

ಮಲ್ಲಿಕಾರ್ಜುನ ಖರ್ಗೆ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Aug 11, 2026 8:54 PM

ದೆಹಲಿ, ಆ. 11: ಜಾರ್ಖಂಡ್‌ನ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್‌ ಲಾಠಿಚಾರ್ಜ್ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ ಐಸಿಸಿ ಅಧ್ಯಕ್ಷ ಮತ್ತು ವಿಪಕ್ಷ ನಾಯಕ ಮಲ್ಲಿಕಾರ್ಜು ಖರ್ಗೆ (Mallikarjun Kharge) ತೀವ್ರ ಅಸಾಮಾಧಾನ ವ್ಯಕ್ತ ಪಡಿಸಿದ್ದಾರೆ. “ದೇಶದಲ್ಲಿ ನೂರಾರು ಪ್ರತ್ಯೇಕ ವಿಷಯಗಳಿವೆ” ಎಂದು ಹೇಳುವ ಮೂಲಕ ಜಾರ್ಖಂಡ್‌ ಸರ್ಕಾರದ ಮೇಲಿನ ಆರೋಪಗಳ ಪ್ರಶ್ನೆಯಿಂದ ನುಣುಚಿಕೊಂಡಿರುವುದು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಸಂಸತ್ ಭವನದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳು ಜಾರ್ಖಂಡ್‌ನಲ್ಲಿನ ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಸರ್ಕಾರ ಕೈಗೊಂಡ ಪೊಲೀಸ್‌ ಕ್ರಮದ ಕುರಿತು ಹೈಕಮಾಂಡ್‌ ಮಾತನಾಡಿದ್ದಾರೆಯೇ? ಎಂದು ಪ್ರಶ್ನಿಸಿದಾಗ, ʼʼಅದು ಬೇರೆಯದೇ ವಿಚಾರ. ದೇಶದಲ್ಲಿ ನೂರಾರು ವಿಷಯಗಳಿವೆ. ಎಲ್ಲ ನೂರು ವಿಷಯಗಳನ್ನ ಒಂದೇ ದಿನ ಚರ್ಚಿಸಲು ಸಾಧ್ಯವಿದೆಯೇ?ʼʼ ಎಂದು ಖಾರವಾಗಿ ಉತ್ತರಿಸಿ ಸ್ಥಳದಿಂದ ನಿರ್ಗಮಿಸಿದರು. ಸದ್ಯ ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ದಿನಗಟ್ಟಲೆ ಮಾತನಾಡುವ ಕಾಂಗ್ರೆಸ್‌ ನಾಯಕರಿಗೆ ಜಾರ್ಖಂಡ್‌ನ ಹೋರಾಟ, ಅಲ್ಲಿ ಯುವ ಜನತೆ ಎದುರಿಸುತ್ತಿರುವ ಸಂಕಷ್ಟ ಕಾಣುತ್ತಿಲ್ಲವೆ? ಎಂದು ಹಲವರು ಪ್ರಶ್ನಿಸಿದ್ದಾರೆ.

ಜಾರ್ಖಂಡ್‌ ಪ್ರತಿಭಟನೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ:



ಜಾರ್ಖಂಡ್ ವಿದ್ಯಾರ್ಥಿಗಳ ಹೋರಾಟ

ಜಾರ್ಖಂಡ್ ಪಬ್ಲಿಕ್ ಸರ್ವಿಸ್ ಕಮಿಷನ್ ಮತ್ತು ಜಾರ್ಖಂಡ್‌ ಸಿಬ್ಬಂದಿ ನೇಮಕಾತಿ ಆಯೋಗ ನಡೆಸುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆಗಳಲ್ಲಿ ನಡೆದ ಅಕ್ರಮ ಮತ್ತು ಭ್ರಷ್ಟಾಚಾರ ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ರಾಂಚಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಪರೀಕ್ಷಾ ಅಕ್ರಮಗಳ ಕುರಿತು ಸಿಬಿಐ ತನಿಖೆಯಾಗಬೇಕು ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು ಎಂದು ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ.

ವಿಧಾನಸೌದಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ ಹಾಗೂ ಲಾಠಿಚಾರ್ಜ್ ಮಾಡಿದ್ದಾರೆ. ಇದು ದೇಶಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಜಲ ಫಿರಂಗಿ ಬಳಸಿದ ಪೊಲೀಸರಿಗೆ ಸೆಡ್ಡು ಹೊಡೆದ ಜೆನ್‌ ಝೀಗಳು; ರೈನ್‌ ಡ್ಯಾನ್ಸ್‌ ಮೂಲಕ ಪ್ರತಿಕ್ರಿಯಿಸಿದ ಜಾರ್ಖಂಡ್‌ ವಿದ್ಯಾರ್ಥಿಗಳ ವಿಡಿಯೊ ವೈರಲ್‌

ಖರ್ಗೆ ಪ್ರತಿಕ್ರಿಯೆಗೆ ಎನ್‌ಡಿಎ ಟೀಕೆ

ಖರ್ಗೆ ಹೇಳಿಕೆಯನ್ನ ಪ್ರಸ್ತಾಪಿಸಿ ಆಡಳಿತರೂಢ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆದಿದೆ. ದೆಹಲಿಯಲ್ಲಿ ನೀಟ್ ಅಕ್ರಮ ಹಾಗೂ ಪ್ರಶ್ನೆ ಪತ್ರಕೆ ಸೋರಿಕೆ ವಿರುದ್ಧ ಧ್ವನಿ ಎತ್ತುವ ಕಾಂಗ್ರೆಸ್‌ ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಮಾಡಿದಾಗ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿದೆ. ಕಾಂಗ್ರೆಸ್‌ಗೆ ಯುವ ಜನತೆಯ ಉದ್ಯೋಗ ಹಾಗೂ ಭವಿಷ್ಯಕ್ಕಿಂತ ರಾಜಕೀಯವೇ ಮುಖ್ಯವಾಗಿದೆ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.