ಉದಯ ಟಿವಿಯಲ್ಲಿ ಶುರುವಾಗಲಿದೆ ಹೊಸ ಪ್ರೇಮಕಥೆ: 'ಕೃಷ್ಣವಂಶಿ'ಯಲ್ಲಿ ಗಿರಿಜಾ ಲೋಕೇಶ್ ಪ್ರಧಾನ ಪಾತ್ರ!
ಕೌಟುಂಬಿಕ ಧಾರಾವಾಹಿಗಳಿಂದಲೇ ಫೇಮಸ್ ಆಗಿರುವ ಉದಯ ವಾಹಿನಿಯು ಇದೀಗ ‘ಕೃಷ್ಣವಂಶಿ’ ಎಂಬ ಮತ್ತೊಂದು ಭಾವನಾತ್ಮಕ ಪ್ರಪಂಚಕ್ಕೆ ವೀಕ್ಷಕರನ್ನು ಕರೆದೊಯ್ಯಲು ಸಜ್ಜಾಗಿದೆ. ʻಕೃಷ್ಣವಂಶಿʼ ಧಾರಾವಾಹಿಯು ನಾಚಿಕೆ ಸ್ವಭಾವದ ಹುಡುಗ ಕೃಷ್ಣ ಹಾಗೂ ವಾಚಾಳಿ ಹುಡುಗಿ ವಂಶಿಯ ಮಧ್ಯೆ ಅರಳುವ ಕಥಾಹಂದರವನ್ನು ಹೊಂದಿದೆ. ಒಳ್ಳೆ ಹುಡುಗಿ ವಂಶಿ ಮಾತಿನ ಮಲ್ಲಿ. ನಾಚಿಕೆ ಹುಡುಗ ಕೃಷ್ಣ ಹೆಚ್ಚು ಓದಿದವನಲ್ಲ. ಅಣ್ಣನ ಹೊಟೇಲ್ ನಡೆಸುತ್ತಿರುತ್ತಾನೆ. ವಂಶಿಗೆ ಕೃಷ್ಣನ ನಾಚಿಕೆ ಸ್ವಭಾವವೇ ಇಷ್ಟವಾಗುತ್ತದೆ. ಕೃಷ್ಣನಿಗೂ ನಾಚಿಕೆಯ ನಡುವೆ ಪ್ರೀತಿ ಅರಳುತ್ತದೆ. ಇಬ್ಬರ ಪ್ರೀತಿಗೆ ಅನೇಕ ಸಲ ಅಗ್ನಿಪರೀಕ್ಷೆ ಎದುರಾಗುತ್ತದೆ. ಜೊತೆಗೆ ತಂದೆಯ ಮಮತೆಯ ಕಥೆಯು ಇದೆ. ಈ ಸೀರಿಯಲ್ನಲ್ಲಿ ಯಾರೆಲ್ಲಾ ಇದ್ದಾರೆ? ಇನ್ನಿತರ ಮಾಹಿತಿಗಳು ಇಲ್ಲಿದೆ.
-
ತಂದೆ ದೊರೆಸ್ವಾಮಿಗೆ ತನ್ನ ಮಗಳು ವಂಶಿಯೇ ಜೀವಾಳ. ಮಗಳು ಮದುವೆಯಾಗಿ ದೂರ ಹೋಗುವ ಕಲ್ಪನೆಯೇ ಅವರಿಗೆ ಅಸಹನೀಯ. ಮನೆ ಅಳಿಯನಾಗಲು ಒಪ್ಪುವಂಥ ಹುಡುಗನನ್ನೇ ಮಗಳು ಮದುವೆಯಾಗಲಿ ಎಂಬ ಆಸೆಯಲ್ಲಿರುತ್ತಾನೆ.
ವಂಶಿಯ ಕನಸು ಬೇರೆ ದಿಕ್ಕಿನಲ್ಲಿ ಸಾಗುತ್ತದೆ. ಅವಳು ಪ್ರೀತಿಯಿಂದ ಕೂಡಿದ ಅವಿಭಕ್ತ ಕುಟುಂಬದಲ್ಲಿ ಅಪ್ಪನ ಮನೆಯವರೆಲ್ಲರ ಜೊತೆ ಗಂಡನ ಮನೆಯಲ್ಲಿ ಒಟ್ಟಿಗೇ ಬದುಕುವ ಕನಸು ಹೊತ್ತಿದ್ದಾಳೆ. ಹಾಗಾದರೆ, ವಂಶಿ ಕನಸು ನನಸಾಗುತ್ತಾ? ಕೃಷ್ಣ ಮತ್ತು ವಂಶಿಯರ ಪ್ರೀತಿ ಯಶಸ್ವಿಯಾಗುತ್ತಾ ಎನ್ನುವುದೇ ಮುಂದಿನ ಕಥಾ ಹಂದರ.
ಕೃಷ್ಣವಂಶಿ ಸೀರಿಯಲ್ನಲ್ಲಿ ಹೀರೋ ಕೃಷ್ಣನಾಗಿ ರೋಹನ್ ಅವರು ನಟಿಸುತ್ತಿದ್ದಾರೆ.
ಕೃಷ್ಣವಂಶಿ ಧಾರಾವಾಹಿಯಲ್ಲಿ ನಾಯಕಿ ವಂಶಿಯಾಗಿ ಶಾರದಾ ಪುಂಡಿ ಅಭಿನಯಿಸುತ್ತಿದ್ದಾರೆ.
ಪರಿಣಿತ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತೇಜಸ್ವಿನಿ ಭಾಸ್ಕರ್ ಮಂಗಾಡಹಳ್ಳಿ ನಿರ್ಮಾಣ ಮಾಡುತ್ತಿರುವ ʻಕೃಷ್ಣವಂಶಿʼ ಧಾರಾವಾಹಿಗೆ ಸುಬ್ರಹ್ಮಣ್ಯ ಪ್ರಸಾದ್ ನಿರ್ದೇಶನವಿದೆ.
ಹಿರಿಯ ನಟಿ ಗಿರಿಜಾ ಲೋಕೇಶ್ ಅವರು ಕೃಷ್ಣವಂಶಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಹಿರಿಯ ನಟ ಹನುಮಂತೇಗೌಡ ಅವರು ಕೃಷ್ಣವಂಶಿ ಧಾರಾವಾಹಿಯಲ್ಲಿ ತಂದೆ ದೊರೆಸ್ವಾಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಸೀರಿಯಲ್ನಲ್ಲಿ ಹಂಸ, ವಿಜಯ್, ರಜಿನಿ ಟಿ. ಡಿ., ಸಿದ್ದಾರ್ಥ ಮಾಧ್ಯಮಿಕ, ಸಿಂಧೂ ಪಿ., ಸಂದೀಪ್, ಪುಷ್ಪ ಅನಿಲ್ ಕುಮಾರ್, ಸುಕೃತಾ ನಾಗ್ ಮತ್ತಿತರರು ನಟಿಸಿದ್ದಾರೆ. ಮಾರ್ಚ್ 2 ರಿಂದ ಸೋಮವಾರದಿಂದ ಶನಿವಾರ ರಾತ್ರಿ 9.30ಕ್ಕೆ ಉದಯ ಟಿವಿಯಲ್ಲಿ ‘ಕೃಷ್ಣವಂಶಿʼ ಧಾರಾವಾಹಿ ಪ್ರಸಾರವಾಗಲಿದೆ