Bengaluru Stampede: ʻತುಂಬಾ ಬೇಸರವಾಯಿತುʼ-ಕಾಲ್ತುಳಿತ ಪ್ರಕರಣದ ಬಗ್ಗೆ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಚೊಚ್ಚಲ ಐಪಿಎಲ್ ಟ್ರೋಫಿ ಗೆಲುವಿನ ವಿಜಯೋತ್ಸವದಲ್ಲಿ ಕಾಲ್ತುಳಿತಕ್ಕೆ ಸಿಲುಕಿ 11 ಮಂದಿ ಆರ್ಸಿಬಿ ಅಭಿಮಾನಿಗಳು ಸಾವಿಗೀಡಾಗಿದ್ದರು ಹಾಗೂ 47 ಮಂದಿ ಗಾಯಕ್ಕೆ ತುತ್ತಾಗಿದ್ದರು. ಈ ದುರ್ಘಟನೆಯ ಬಗ್ಗೆ ಭಾರತೀಯ ಕ್ರಿಕೆಟ್ ದಿಗ್ಗಜ ಹಾಗೂ ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು ಕಾಲ್ತುಳಿತ ಪ್ರಕರಣ ಸಂಬಂಧ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ.

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿ ಗೆಲುವಿನ ಸಂಭ್ರಮಾಚರಣೆಯ ವೇಳೆ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ನಡೆದಿದ್ದ ಕಾಲ್ತುಳಿತದಲ್ಲಿ 11 ಮಂದಿ ಆರ್ಸಿಬಿ ಅಭಿಮಾನಿಗಳು ಸಾವಿಗೀಡಾಗಿದ್ದರು ಹಾಗೂ 47 ಮಂದಿ ಗಾಯಕ್ಕೆ ತುತ್ತಾಗಿದ್ದರು. ಜೂನ್ 4 ರಂದು ಈ ದುರ್ಘಟನೆ ನಡೆದಿತ್ತು. ಇದೀಗ ಒಂದು ವಾರದ ಬಳಿಕ ಭಾರತೀಯ ಕ್ರಿಕೆಟ್ ದಿಗ್ಗಜ ಹಾಗೂ ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಪ್ರತಿಕ್ರಿಯಿಸಿದ್ದಾರೆ. ಆರ್ಸಿಬಿಯ 18 ವರ್ಷಗಳ ಕನಸು ನನಸಾದರೂ ಈ ದುರ್ಘಟನೆಯು ತಂಡದ ಹಾಗೂ ಅಭಿಮಾನಿಗಳ ಸಂಭ್ರಮವನ್ನು ಅಂತ್ಯಗೊಳಿಸಿತು.
ಎನ್ಡಿ ಟಿವಿ ಜತೆ ಮಾತನಾಡಿದ ರಾಹುಲ್ ದ್ರಾವಿಡ್, "ಹೌದು, ತುಂಬಾ ಬೇಸರವಾಯಿತು. ನಿಸ್ಸಂಶಯವಾಗಿ ತುಂಬಾ ನೋವಾಯಿತು. ನನ್ನ ಭಾವನೆಗಳು ಯಾವಾಗಲೂ ಜನರ ಜೊತೆ ಇರುತ್ತದೆ," ಎಂದು ಹೇಳಿದ್ದಾರೆ.
"ಬೆಂಗಳೂರು ನಿಜವಾಗಿಯೂ ಕ್ರೀಡಾ ಉತ್ಸಾಹಿಗಳ ನಗರವಾಗಿದೆ. ನಾನು ಕೂಡ ಇಲ್ಲಿಂದ ಬಂದವನು. ಇಲ್ಲಿನ ಜನರು ಕ್ರಿಕೆಟ್ ಮಾತ್ರವಲ್ಲ, ಎಲ್ಲಾ ಕ್ರೀಡೆಯನ್ನು ಇಷ್ಟಪಡುತ್ತಾರೆ. ಈ ನಗರದಲ್ಲಿ ಎಲ್ಲಾ ಕ್ರೀಡೆಗಳನ್ನು ಜನರು ಇಷ್ಟಪಡುತ್ತಾರೆ ಹಾಗೂ ಫುಟ್ಬಾಲ್ ಇರಲಿ ಅಥವಾ ಕಬಡ್ಡಿ ಇರಲಿ ಎಲಾ ಕ್ರೀಡಾ ತಂಡಗಳನ್ನು ಅವರು ಹಿಂಬಾಲಿಸುತ್ತಾರೆ," ಎಂದು ರಾಜಸ್ಥಾನ್ ರಾಯಲ್ಸ್ ಹೆಡ್ ಕೋಚ್ ತಿಳಿಸಿದ್ದಾರೆ.
IPL 2025: ಆರ್ಸಿಬಿಗೆ ಕಪ್ ಗೆದ್ದುಕೊಡಬಲ್ಲ ನಾಲ್ವರು ಸ್ಟಾರ್ಗಳನ್ನು ಆರಿಸಿದ ವಿಜಯ್ ಮಲ್ಯ!
"ಅದರಂತೆ ಆರ್ಸಿಬಿ ತಂಡಕ್ಕೆ ದೊಡ್ಡ ಅಭಿಮಾನಿಗಳ ಬಳಗವಿದೆ. ಇತ್ತೀಚೆಗೆ ಅನಿರೀಕ್ಷಿತವಾಗಿ ನಡೆದಿದ್ದ ದುರ್ಘಟನೆ ನಿಜವಾಗಿಯೂ ಬೇಸರದ ಸಂಗತಿ. ಈ ದುರ್ಘಟನೆಯಿಂದ ಸಾವಿಗೀಡಾದವರು ಹಾಗೂ ಗಾಯಕ್ಕೆ ತುತ್ತಾದವರ ಜೊತೆ ನಮ್ಮ ಭಾವನೆಗಳು ಇದ್ದೇ ಇರುತ್ತದೆ," ಎಂದು ಬ್ಯಾಟಿಂಗ್ ದಿಗ್ಗಜ ಹೇಳಿದ್ದಾರೆ.
18 ವರ್ಷಗಳ ಬಳಿಕ ಕಪ್ ಗೆದ್ದಿದ್ದ ಆರ್ಸಿಬಿ
ಜೂನ್ 3 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಆರ್ಸಿಬಿ ಕೇವಲ 6 ರನ್ನಿಂದ ಗೆದ್ದು ಬೀಗಿತ್ತು. ಆ ಮೂಲಕ ಸತತ 18 ವರ್ಷಗಳ ಬಳಿಕ ಬೆಂಗಳೂರು ತಂಡ ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಆರ್ಸಿಬಿ ಚೊಚ್ಚಲ ಕಪ್ ಗೆಲ್ಲುತ್ತಿದ್ದಂತೆ ರಾಜಧಾನಿ ಬೆಂಗಳೂರಿನಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.
IPL 2025: ʻನಾವು ತೀವ್ರ ದುಖಃದಲ್ಲಿದ್ದೇವೆʼ-ಕಾಲ್ತುಳಿತದ ಪ್ರಕರಣದ ಬಗ್ಗೆ ಆರ್ಸಿಬಿ ಪ್ರತಿಕ್ರಿಯೆ!
ಇದಾದ ಒಂದು ದಿನದ ಬಳಿಕ ಆರ್ಸಿಬಿ ತಂಡ, ನಗರದಲ್ಲಿ ತೆರೆದ ಬಸ್ನಲ್ಲಿ ರೋಡ್ ಶೋ ನಡೆಸಲಿದೆ ಎಂದು ಬೆಂಗಳೂರು ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರಕಟಿಸಿತ್ತು. ಆದರೆ, ಭದ್ರತೆಯ ಕಾರಣ ರೋಡ್ ಶೋ ಅನ್ನು ರದ್ದುಗೊಳಿಸಲಾಗಿತ್ತು. ಆದರೂ ಆರ್ಸಿಬಿ ಆಟಗಾರರನ್ನು ಕಣ್ತುಂಬಿಸಿಕೊಳ್ಳಲು ಸುಮಾರು ಎರಡು ಲಕ್ಷಕ್ಕೂ ಅಧಿಕ ಮಂದಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಮಾಯಿಸಿದ್ದರು ಹಾಗೂ ಕ್ರೀಡಾಂಗಣದಲ್ಲಿ ಆರ್ಸಿಬಿಯ ಸಂಭ್ರಮಾಚರಣೆಯನ್ನು ನೋಡಲು ಬಂದಿದ್ದರು.
ಇದಕ್ಕೂ ಮುನ್ನ ಆರ್ಸಿಬಿ ಆಟಗಾರರನ್ನು ಕರ್ನಾಟಕ ಸರ್ಕಾರದ ವತಿಯಿಂದ ವಿಧಾನಸೌಧದ ಮುಂಭಾಗ ಸನ್ಮಾನಿಸಲಾಗಿತ್ತು. ಇದಾದ ಬಳಿಕ ಆರ್ಸಿಬಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಬೇಕಾಗಿತ್ತು. ಆದರೆ, ಇದಕ್ಕೂ ಮುನ್ನ ಸ್ಟೇಡಿಯಂಗೆ ಪ್ರವೇಶವನ್ನು ಉಚಿತ ಎಂದು ಘೋಷಿಸಲಾಗಿತ್ತು. ಈ ಕಾರಣದಿಂದ 30 ಸಾವಿರ ಆಸನಗಳು ಇರುವ ಕ್ರೀಡಾಂಗಣಕ್ಕೆ ಲಕ್ಷಾಂತರ ಮಂದಿ ಪ್ರವೇಶ ಮಾಡಿದ್ದರಿಂದ ನೂಕು ನುಗ್ಗಲು ಉಂಟಾಗಿತ್ತು. ಕಾಲ್ತುಳಿದಲ್ಲಿ 11 ಮಂದಿ ಸಾವಿಗೀಡಾಗಿದ್ದರು ಹಾಗೂ 47ಕ್ಕೂ ಅಧಿಕ ಮಂದಿ ಗಾಯಕ್ಕೆ ತುತ್ತಾಗಿದ್ದರು.