Srivathsa Joshi Column: ಸೀಕರ್ಣೆ ಸಾವಿತ್ರಿಯೂ ಸೀಕರಣೆಯ ಸಾರ್ವತ್ರಿಕತೆಯೂ...
“ದೇವರ್ಮನೆಗೆ ಬಂದು ಸಹಸ್ರನಾಮ ಆದ ಕುಂಕುಮಾನ ಹಣೆಗೂ ತಾಳಿಗೂ ಇಟ್ಕೊಂಡು ಪ್ರಸಾದದ ಕಡೆ ಕಣ್ಗುಡ್ಡೆಗಳ್ನ ತಿರುಗಿಸ್ತೇನೆ! ಕೋಸುಂಬ್ರಿ ಆಗಬಾರ್ದೆ! ಕಡ್ಬು ಆಗಬಾರ್ದೆ! ಪಾನ್ಕ ಆಗಬಾರದೆ! ಪುಳಿಯೋ ಗರೆ ಆಗಬಾರದೆ! ನನ್ನ ಕಷ್ಟಕಾಲ ನೋಡಿ... ಈ ನೈವೇದ್ಯಗಳೆಲ್ಲಾ ಬಿಟ್ಟು ಸೀಕರ್ಣೆ... ಪಂಚಾಮೃತ ಸೀಕರ್ಣೆ ಮಾಡಿಟ್ಟಿದ್ದಾಳೆ ನನ್ಮಾಂಗಲ್ಯಕ್ಕೆ ಮಾರಿ ಹಾಗೆ ಬಂದ ನಮ್ಮತ್ತೆ!


ತಿಳಿರು ತೋರಣ
srivathsajoshi@yahoo.com
ಅತ್ತೆಯನ್ನು ಸೊಸೆ, ಮತ್ತು ಸೊಸೆಯನ್ನು ಅತ್ತೆ, ಪರಸ್ಪರ ಹಣಿಯುವುದು ಹೆದರಿಸುವುದು ಹಿಡಿ ಶಾಪ ಹಾಕುವುದು ಹೊರೆ ಅಂತ ತಿಳ್ಕೊಳ್ಳೋದು ಎಲ್ಲ ಲೋಕ ರೂಢಿಯೇ ಇರಬಹುದು. ಇದಕ್ಕೆಲ್ಲ ಅಪವಾದವಾಗಿ, ಅಂದರೆ ಅತ್ತೆ-ಸೊಸೆ ಬಾಂಧವ್ಯವು ಎಣ್ಣೆ-ಸೀಗೆ ಆಗಿರದೆ ಹಾಲು-ಜೇನಿನಂತೆ ಸೌಹಾರ್ದದಿಂದಿರುವ ಉದಾಹರಣೆಗಳೂ ನಮ್ಮಲ್ಲಿ ಬೇಕಾದಷ್ಟು ಸಿಗಬಹುದು. ಪರಂತು ತನ್ನ ಅತಿ ನೆಚ್ಚಿನ ಖಾದ್ಯವಾದ ಸೀಕರಣೆ ಮಾಡಿಕೊಟ್ಟ ಅತ್ತೆಯನ್ನು, ಅದೂ ಆ ಸೀಕರಣೆಯನ್ನು ತಪ್ಪಲೆ ತುಂಬ ಗಟಗಟಾಂತ ಚಪ್ಪರಿಸಿದ ಮೇಲೂ, ಹಿತವಾಗಿ ಹಳಿದು ಹಿಡಿಶಾಪ ಹಾಕಿದ ಸೊಸೆಯೊಬ್ಬ ಳಿದ್ದರೆ ಅವಳು ಸೀಕರ್ಣೆ ಸಾವಿತ್ರಿ ಮಾತ್ರ! ಯಾರವಳು? ಕನ್ನಡಕ್ಕೊಬ್ಬರೇ ಕೈಲಾಸಂ ಎಂಬ ಖ್ಯಾತಿಯ ಟಿ.ಪಿ.ಕೈಲಾಸಂ ಅವರ ‘ಸೀಕರ್ಣೆ ಸಾವಿತ್ರಿ’ ಏಕಾಂಕ ಏಕರಂಗ ಏಕಪಾತ್ರ ರೂಪಕದ ನಾಯಕಿ. ಆಕೆಯ ಸೀಕರಣೆ ಪ್ರೀತಿ ಯಾವ ಮಟ್ಟದ್ದೆಂದು ಆಕೆಯದೇ ಮಾತುಗಳಲ್ಲಿ ಕೇಳುವುದು/ ಓದುವುದು ಚಂದ.
“ದೇವರ್ಮನೆಗೆ ಬಂದು ಸಹಸ್ರನಾಮ ಆದ ಕುಂಕುಮಾನ ಹಣೆಗೂ ತಾಳಿಗೂ ಇಟ್ಕೊಂಡು ಪ್ರಸಾದದ ಕಡೆ ಕಣ್ಗುಡ್ಡೆಗಳ್ನ ತಿರುಗಿಸ್ತೇನೆ! ಕೋಸುಂಬ್ರಿ ಆಗಬಾರ್ದೆ! ಕಡ್ಬು ಆಗಬಾರ್ದೆ! ಪಾನ್ಕ ಆಗಬಾರದೆ! ಪುಳಿಯೋಗರೆ ಆಗಬಾರದೆ! ನನ್ನ ಕಷ್ಟಕಾಲ ನೋಡಿ... ಈ ನೈವೇದ್ಯಗಳೆಲ್ಲಾ ಬಿಟ್ಟು ಸೀಕರ್ಣೆ... ಪಂಚಾಮೃತ ಸೀಕರ್ಣೆ ಮಾಡಿಟ್ಟಿದ್ದಾಳೆ ನನ್ಮಾಂಗಲ್ಯಕ್ಕೆ ಮಾರಿ ಹಾಗೆ ಬಂದ ನಮ್ಮತ್ತೆ!
ನಗುತ್ತೀರೋ ಏನೊ ಕಾಣೆ ಸೀತಮ್ಮನೋರೆ! ನಾನು ಹುಟ್ಟಿದಾರಭ್ಯ ನಮ್ಮಜ್ಜಿ, ನಮ್ಮಮ್ಮ, ನಮ್ಮನೇಲಿ ಎಲ್ಲರೂ, ಮದ್ವೆ ಆಗೋಕ್ಮುಂಚೆ ನಾನು ಹೋಗ್ತಿದ್ದ ಕನ್ನಡ ಇಸ್ಕೂಲು ಹುಡ್ಗೀರೂ ಕೂಡ ನನ್ನ ‘ಸೀಕರ್ಣೆ ಸಾವಿತ್ರಿ!’ ಅಂತ ಕೂಗೋದು ರೂಢಿ. ನಗಬೇಡಿ! ರಸಬಾಳೆ ಜೇನುತುಪ್ಪ ಬಾಬ್ತುಗಳು ಸರಿಯಾಗಿ ಸೇರಿದ ಬಾಬ್ತು ಅಂದ್ರೆ ಪ್ರಾಣ ನನ್ಗೆ. ಮೃತ್ಯುಂಜಯ ಜಪಕ್ಕೆ ನಮ್ಮತ್ತೆ ಜೋಡ್ತಪ್ಪಲೆ ತುಂಬ ಸೀಕರ್ಣೆ ಮಾಡಿಟ್ಟಳಲ್ಲಾ, ಒಂದು ಚಮ್ಚ, ಒಂದು ಮಿಳ್ಳೆ, ಒಂದು ಸೌಟು ಇಡಬಾರ್ದೆ ಸೀಕರ್ಣೆ ತುಂಬಿದ ಜೋಡ್ತಪ್ಲೇಲಿ!? ‘ಎಲಾ ಎಜಮಾನ್ರನ್ನ ಬಿಟ್ಬಿಟ್ಟು ಬಂದಿದ್ದೇನೆ!
ಇದನ್ನೂ ಓದಿ: Srivathsa Joshi Column: ಮದರ್ಸ್ ಡೇ ಆರಂಭಿಸಿದವಳೇ ಅದನ್ನು ನಿಲ್ಲಿಸಲಿಕ್ಕೂ ಹೋರಾಡಿದ್ದಳು !
ಈಗ್ಲೋ ಆಗ್ಲೋ ಯಮ, ಅಪ್ಪ ಜಾತಕದಲ್ಲಿ ನಿರ್ಧರಿಸಿದ ಹಾಗೆ, ಬಂದ್ಬಿಟ್ಟಾನು! ಈಗ ಇರಬೇಕಾದ್ದು ನಿನ್ನ ಗಂಡನ ಹತ್ತಿರ; ಇಲ್ಲಲ್ಲಾ! ಆದ್ರೂ ಅತ್ತೆಮಾವಂದ್ರ ಮಾತು ಎತ್ತ್ಹಾಕ್ಬಾರ್ದು! ಸೌಟು ಮಿಳ್ಳೆ ಹುಡ್ಕೋಕೆ ಬಿಡ್ವಿಲ್ಲ! ಬೇಗ್ಬೇಗ್ನೇ ನೈವೇದ್ಯ ಬಾಯ್ಗ್ಹಾಕ್ಕೊಂಡು ಪತಿಪಾದಾನ ಸೇರು!’ ಅನ್ತನ್ದು ಕೊಂಡು ಆ ಜೋಡ್ತಪ್ಲೇನ ಎರಡು ಕೈಯಿಂದ್ಲೂ ಎತ್ತಿ ಬಾಯ್ಬಿಟ್ಟುಕೊಂಡು ಬಗ್ಗಿಸಿಕೊಂಡರೆ, ಒಂದು ತುಂಡು ಬಾಳೆಹಣ್ಣು ಒಂದು ತೊಟ್ಟು ಜೇನುತುಪ್ಪ ಮಟ್ಟಿಗೂ ಸೋಕಬಾರದಿತ್ತೇ ನನ್ನಾಲ್ಗೇಗೆ! ನನ್ನ ಕಷ್ಟಕಾಲ.
ನನ್ನ ತಾಳೀನ ಹಿಡಿದ ಹಾನಿ! ನೋಡಿ ಸೀತಮ್ನೋರೆ! ಬಾಳೆಹಣ್ಣು, ಕಲ್ಲ್ಸಕ್ರೆ, ದ್ರಾಕ್ಷಿ, ಯಾಲಕ್ಕಿ ಬಾಬ್ತುಗಳೆಲ್ಲಾ ಮೇಲ್ತೇಲ್ತಾ ತೇಲ್ತಾ ಕೆಳಗೆ ಹರಿಯೋ ತುಪ್ಪ ಜೇನುತುಪ್ಪದ ಸಮೇತ ಅಷ್ಟೂನೂವೆ, ಜೋಡ್ತಪ್ಲೇಲಿ ಇದ್ದ ಸೀಕರ್ಣೆ ಅಷ್ಟೂನೂವೆ, ಅನಾಮತ್ತಾಗಿ ನನ್ನ ಹಾಳು ಬಿರಿದ ಬಾಯ್ಗೆ ಜಾರಬೇಕೆ? ಇದು ಬಿದ್ದ ಜ್ಞಾಪಕ! ಖಾಲಿ ಜೋಡ್ತಪ್ಲೆ ‘ಠಂಗ್ಕ್!’ ಅಂತ ನೆಲಕ್ಕೆ ಬಿದ್ದದ್ದು ಕೇಳಿದ್ದ ಜ್ಞಾಪಕ! ಸೀಕರ್ಣೆ ‘ಲೋಪ್ಪ್!’ ಅಂತ ಹೊಟ್ಟೇಗೆ ಬಿದ್ದದ್ ಜ್ಞಾಪಕ!

ತುಂಬಿದ ಹೊಟ್ಟೆ. ಕೂತಿದ್ದ ಹಾಗೆ ಗೋಡೆಗೆ ಒರಗಿದೆ! ಕಣ್ಮುಚ್ದೆ. ಒಂದೊ ಇಲ್ಲಾ ಒಂದೂವ್ವರೇನೊ ನಿಮಿಷ ಆಗಿದ್ದಿರಬಹುದ್ರ್ಹಾಗಿತ್ತು ನಾನು ಕಣ್ಣು ಬಿಟ್ಟಾಗ..." ‘ಸೀಕರ್ಣೆ ಸಾವಿತ್ರಿ’ ಏಕಾಂಕ ಏಕರಂಗ ಏಕಪಾತ್ರ ರೂಪಕವಾದರೂ ಒಂಥರದಲ್ಲಿ ನಾಟಕದೊಳಗೊಂದು ನಾಟಕ ಇದ್ದಹಾಗೆ. ಹೊರ ನಾಟಕ ಸತೀ ಸಾವಿತ್ರಿ. ಅದರಲ್ಲಿ ಸಾವಿತ್ರೀದೇವಿಯ ಪಾತ್ರ ನಿರ್ವಹಿಸುವ ಖಜ್ಜಿ ಕಪ್ಪಣ್ಣನು ಒಳನಾಟಕದಲ್ಲಿ ಸೀಕರ್ಣೆ ಸಾವಿತ್ರಿಯಾಗಿ ಪರಕಾಯಪ್ರವೇಶ ಮಾಡುವನು. ಆ ಸೀಕರ್ಣೆ ಸಾವಿತ್ರಿ ಸಂಭಾಷಿಸುವುದು ರಂಗದ ಮೇಲಿನ ಇನ್ನೊಂದು ಪಾತ್ರದೊಡನೆ ಅಲ್ಲ (ಏಕೆಂದರೆ ಅದು ಏಕಪಾತ್ರ ರೂಪಕ) ಬದಲಿಗೆ ಪ್ರೇಕ್ಷಕರಲ್ಲೊಬ್ಬರಾದ ಸೀತಮ್ಮ ಎಂಬುವವರ ಜತೆಗೆ!
ಜೋಯಿಸರ ಮಗಳಾಗಿ ಹುಟ್ಟಿ, ವಸಿಷ್ಠಪತ್ನಿ ಅರುಂಧತಿಯ ವರ್ಚಸ್ಸುಳ್ಳವಳು ಯಮನನ್ನೂ ಒದ್ದೋಡಿಸಬಲ್ಲವಳು ಎಂದು ತಂದೆಯಿಂದಲೇ ಶಿ-ರಸು ಪಡೆದು ಬೆಳೆದಿರುತ್ತಾಳೆ ಸೀಕರ್ಣೆ ಸಾವಿತ್ರಿ. ಯಮನನ್ನು ಹಿಮ್ಮೆಟ್ಟಬಲ್ಲೆ ಎಂಬ ಮೊಂಡುಧೈರ್ಯದಿಂದ ಬೇಕಂತಲೇ 25 ವರ್ಷ ಆಯುಷ್ಯ ವುಳ್ಳವನೊಡನೆ ಆಕೆಯ ಮದುವೆಯಾಗಿರುತ್ತದೆ. ಆಕೆಯೊಳಗಿದೆ ಎನ್ನಲಾದ ಅರುಂಧತಿಯ ಪ್ರಭಾವದಿಂದಾಗಿ- ಕೈಲಾಸಂ ಅದನ್ನು ‘ವಾಸ್ನೆ’ ಎಂದಿದ್ದಾರೆ- ಗಂಡ ಆಕೆಯ ಸನಿಹದಲ್ಲಿದ್ದಷ್ಟು ಕಾಲ ಬದುಕುಳಿಯುತ್ತಾನೆ.
ಒಂದು ಕ್ಷಣಕ್ಕೆಂದು ಆಕೆ ದೂರ ಸರಿದರೂ ಗಂಡನ ಪ್ರಾಣಕ್ಕೆ ಸಂಚಕಾರ. ಇಂತಿರಲು ಆ ಬಡಪಾಯಿ ಗಂಡ ಒಂದು ದಿನ ನಿಜವಾಗಿಯೂ ಎದೆನೋವು ಕಾಣಿಸಿಕೊಂಡು ಕ್ಷಣಗಣನೆ ಮಾಡುತ್ತಿರಬೇಕಾದರೆ ಸಾವಿತ್ರಿಯ ಅತ್ತೆ-ಮಾವ ಮೃತ್ಯುಂಜಯ ಜಪ ಏರ್ಪಡಿಸಿದ್ದು, ನೈವೇದ್ಯ ಕ್ಕೆಂದು ಅತ್ತೆ ಪಂಚಾಮೃತ ಸೀಕರಣೆ ತಯಾರಿಸಿದ್ದು, ಮಲಗಿದ್ದ ಗಂಡನನ್ನು ಬಿಟ್ಟು ಪ್ರಸಾದ ತಗೊಳ್ಳಲಿಕ್ಕೆಂದು ಸಾವಿತ್ರಿ ದೇವರಕೋಣೆಗೆ ಹೋದದ್ದು, ತಪ್ಪಲೆತುಂಬ ಸೀಕರಣೆ ಕಂಡು ಅದರಿಂದ ಸ್ವಲ್ಪೇಸ್ವಲ್ಪ ಸೇವಿಸಲಿಕ್ಕೆ ಅಲ್ಲಿ ಚಮಚ ಸೌಟು ಇತ್ಯಾದಿ ಏನೂ ಇಲ್ಲದ್ದರಿಂದ ತಪ್ಪಲೆಯಿಂದಲೇ ಬಾಯೊಳಗೆ ಸುರಿಸಿಕೊಂಡು ತಪ್ಪಲೆ ಖಾಲಿ ಮಾಡಿದ್ದು, ಹೊಟ್ಟೆ ತುಂಬ ಸೀಕರಣೆ ಸೇವಿಸಿದ್ದರಿಂದ ಗೋಡೆಗೊರಗಿ ಕೂತಾಗ ನಿದ್ದೆಗೆ ಜಾರಿದ್ದು, ಎಚ್ಚರವಾಗುವುದರೊಳಗೆ ಇತ್ತ ಗಂಡನ ಪ್ರಾಣಪಕ್ಷಿ ಹಾರಿ ಹೋಗಿ ಅತ್ತೆ-ಮಾವ ಆತನ ಶವಸಂಸ್ಕಾರವನ್ನೂ ಮುಗಿಸಿ ಮನೆಗೆ ಹಿಂದಿರುಗಿದ್ದು, ಸೀಕರಣೆ ವ್ಯಾಮೋಹದಿಂದಾಗಿಯೇ ತಾನು ಗಂಡನಿಂದ ಅರೆಕ್ಷಣ ದೂರ ವುಳಿಯಬೇಕಾಗಿ ಬಂದು ತನ್ನಲ್ಲಿ ಅರುಂಧತಿಪ್ರಭಾವ ಇದ್ದರೂ ಯಮನೊಡನೆ ಶರಂಪರ ಜಗಳವಾಡುವ ಅವಕಾಶವೇ ತಪ್ಪಿಹೋದದ್ದು... ಸೀಕರ್ಣೆ ಸಾವಿತ್ರಿಯ ಹಲುಬುವಿಕೆಗೆ ಇದೇ ಕಾರಣ.
“ಸೀಕರ್ಣೆ ಸಾವಿತ್ರಿ ತಾನು ಗಂಡನನ್ನು ಕಳೆದುಕೊಂಡದ್ದು ಹೇಗೆ ಎಂದು ಹೇಳುವುದರಲ್ಲಿ ನಮಗೆ ನಂಬಿಕೆ ಹುಟ್ಟುವುದಿಲ್ಲವಾದರೂ, ಆ ಅಮ್ಮ ಬಾಯಿ ಬಿಡುತ್ತಿರುವವರೆಗೂ ನಮಗೆ ತುಟಿಪಿ ಟಿಕ್ಕೆನ್ನಲು ಅವಕಾಶ ಸಿಕ್ಕುವುದಿಲ್ಲ. ಕೈಲಾಸಂ ಅವರ ಪ್ರತಿಯೊಂದು ಕೃತಿಯಲ್ಲಿಯೂ ಕತೆ ಕಡಿಮೆಯಾಗಿದ್ದರೂ ಒಂದು ಪಾತ್ರ ಸೂರ್ಯನಂತೆ ಪ್ರಜ್ವಲಿಸುತ್ತ ತನ್ನ ಪ್ರತಿಭೆಯಿಂದ ಇರುವಷ್ಟನ್ನು ಬೆಳಗುತ್ತದೆ. ಸೀಕರ್ಣೆ ಸಾವಿತ್ರಿಯಂತೂ ಒಂದು ಕೊಳಗ ದಪ್ಪಲೆ ಸೀಕರಣೆಯನ್ನು ಒಂದೇ ಬಾರಿಗೆ ನುಂಗಿದ ಬಾಯಿಯವಳು.
ಅವಳ ಬಾಯಿಗೆ ಬ್ರೇಕೇ ಇಲ್ಲ!"- ಇದು ಕೈಲಾಸಂರ ನಾಟಕರಚನೆ ಪ್ರತಿಭೆಯನ್ನು ಜಿ.ಪಿ.ರಾಜರತ್ನಂ ಕೊಂಡಾಡಿದ ರೀತಿ. ಸಾಮಾನ್ಯ ಪ್ರೇಕ್ಷಕನಿಗಾದರೂ ಅಷ್ಟೇ- ರಂಗದ ಮೇಲಿನ ಪಾತ್ರಗಳ ಸ್ವಗತದ ಮಾತುಗಳಿರಲಿ, ಸಂಭಾಷಣೆಗಳಿರಲಿ, ಅದರಲ್ಲಿ ಟಿಪಿಕಲ್ ಟಿ.ಪಿ.ಕೈಲಾಸಂ ತುಂಬಿಕೊಂಡಿರುತ್ತಾರೆ. ಒತ್ತಕ್ಷರಗಳ ಸರಣಿಯಂತೆ ಬರೆಯಬೇಕಾಗುವ ಚುರುಕು ಸಂಭಾಷಣೆಗಳೇ ಸಾಕು ಕೈಲಾಸಂ ಛಾಪು ಅನುಭವವಾಗುವುದಕ್ಕೆ.
ಈಗ ನಾವೊಮ್ಮೆ ಕೈಲಾಸಂ ಛಾಪು ಮತ್ತು ನಾಟಕದ ಸಾವಿತ್ರಿಯನ್ನು ಅಲ್ಲೇ ಬಿಟ್ಟು ಸೀಕರಣೆ ಯನ್ನಷ್ಟೇ ಎತ್ತಿಕೊಂಡು ಮುಂದುವರಿಸೋಣ. ಸಾಹಿತ್ಯದಲ್ಲಿ, ಅಂದರೆ ಅಕ್ಷರಲೋಕದಲ್ಲಿ ಸೀಕರಣೆಯ ಛಾಪು ಯಾವ ರೀತಿಯಲ್ಲಿ ಸಾರ್ವತ್ರಿಕವಾಗಿ ಇದೆಯೆಂದು ಅವಲೋಕಿಸೋಣ. ಸೀಕರಣೆ ಯಾರಿಗೆ ತಾನೆ ಇಷ್ಟವಿಲ್ಲ? ಫೇಸ್ ಬುಕ್ ಗೋಡೆ ಮೇಲೆ, ಇನ್ಸ್ಟಾಗ್ರಾಮ್ ಪೋಸ್ಟುಗಳಲ್ಲಿ, ಯುಟ್ಯೂಬ್ ವಿಡಿಯೋಗಳಲ್ಲಿ ಸಚಿತ್ರ ಸೀಕರಣೆ ವಿವರಗಳನ್ನು ನೋಡಿದರೆ ಎಂಥವರಿಗಾದರೂ ಬಾಯಿಯಲ್ಲಿ ನೀರೂರಲೇಬೇಕು.
ಅದೂ ಈ ವರ್ಷ ಮಾವಿನ ಹಣ್ಣುಗಳ ಫಸಲು ಭರಪೂರ ಇತ್ತೆಂದು ಕಾಣುತ್ತದೆ. ‘ಮಾಯ್ನಣ್ಣಿನ್ ಸೀಕರ್ಣೆ’ ಎಂದು ಬಾಯ್ತುಂಬ ಹೊಗಳುತ್ತ ಖುಷಿಯಿಂದ ಕುಣಿಯುತ್ತ ಎಲ್ಲರೂ ಫೇಸ್ಬುಕ್ ಗೋಡೆಗೆ ಮಾವಿನ ರಸವನ್ನು ಮೆತ್ತಿದ್ದೇ ಮೆತ್ತಿದ್ದು. ಒಂದಿಷ್ಟು ರಸ ಅಲ್ಲೇ ಒಣಗಿ ಮಾಂಬಳವೂ ಆಯ್ತೇನೋ! ಮೊನ್ನೆಮೊನ್ನೆಯಷ್ಟೇ ವಾಟ್ಸ್ಯಾಪ್ನಲ್ಲಿ ಹರಿದಾಡಿದ ಒಂದು ವಿಡಿಯೋದಲ್ಲಿ ಗುಜರಾತಿನ ಶ್ರಾವಣಸೇವಾ ಸಂಸ್ಥೆಯ ಗೋಶಾಲೆಯೊಂದರಲ್ಲಿ ದಾನಿ ಪುಣ್ಯಾತ್ಮರೊಬ್ಬರು ಅಲ್ಲಿನ ಎಲ್ಲ ಹಸು-ಕರುಗಳಿಗೆ ಮಾವಿನಹಣ್ಣಿನ ಸೀಕರಣೆ ಮತ್ತು ಚಪಾತಿ ತಿನ್ನಿಸಿದ ದೃಶ್ಯ ಸಹ ನಯನ ಮನೋಹರವೂ, ಹೃದಯಸ್ಪರ್ಶಿಯೂ, ಮುಖ್ಯವಾಗಿ ನಾಲಗೆಯನ್ನು ಒದ್ದೆ ಮಾಡುವಂಥದೂ ಆಗಿತ್ತು.
ಸೀಕರಣೆಯ ವ್ಯಾಪ್ತಿ ವಿಶಾಲವಾದುದು, ಅಂತೆಯೇ ಅದರ ಜನಪ್ರಿಯತೆಯೂ. ಇದಕ್ಕೆ ಎರಡು ಕಾರಣಗಳು. ಮೊದಲನೆಯದಾಗಿ ಸೀಕರಣೆ ಮಾವಿನ ಹಣ್ಣುಗಳಿಂದ ಮಾತ್ರ ಮಾಡುವು ದೆಂದೇನಿಲ್ಲ, ಕಳಿತ ಬಾಳೆಹಣ್ಣುಗಳಿಂದಲೂ ಮಾಡಬಹುದು. ನಮ್ಮಲ್ಲೆಲ್ಲ ಸೀಕರಣೆ ಬೈ ಡಿಫಾಲ್ಟ್ ಬಾಳೆಹಣ್ಣುಗಳದೇ. ಅದೂ ಸಕ್ಕರೆ ಹಾಕಿ ಮಾಡುವುದಲ್ಲ, ಬೆಲ್ಲ ಮತ್ತು ತೆಂಗಿನಕಾಯಿಯ ಹಾಲು (ಕಾಯಿತುರಿ ರುಬ್ಬಿ ತೆಗೆದ ರಸ) ಹಾಕಿ ಮಾಡುವುದು.
ಜತೆಯಲ್ಲಿ ಏಲಕ್ಕಿಯೇ ಮೊದಲಾದ ಪರಿಮಳ ದ್ರವ್ಯಗಳು. ಆದರೆ ಮಂಗರಸನ ಸೂಪಶಾಸದಲ್ಲಿ ಕೊಟ್ಟ ರೆಸಿಪಿಯಂತಾದರೆ- ‘ಕಳಿತ ಬಾಳೆಯ ಹಣ್ಣ ಸಕ್ಕರೆಯ ಪೊಸ ಪಾಕದೊಳಗೆ ಕೆಲವಂ... ಚಿಲುಪಾಲಿನೊಳ್ ಕೆಲವನಿಳುಹಿಕೊಂಡಿಂತು ನಾನಾಪರಿಯ ಸೀಕರಣೆಗಳನು ಹಸನಂ ಮಾಳ್ಪುದು’ ಎಂದಿರುವುದರಿಂದ ಬೆಲ್ಲದ ಬದಲಿಗೆ ಸಕ್ಕರೆಯ ಬಳಕೆ. ತೆಂಗಿನಕಾಯಿಯ ಹಾಲಿನ ಬದಲಿಗೆ ಹಸುವಿನ ಹಾಲನ್ನು ಕುದಿಸಿ ಬತ್ತಿಸಿದ ಕೆನೆವಾಲು.
ಬಾಳೆಹಣ್ಣು ವರ್ಷವಿಡೀ ಸಿಗುತ್ತದೆಂಬ ಕಾರಣದಿಂದ ಬಾಳೆಹಣ್ಣಿನ ಸೀಕರಣೆ ಜನಪ್ರಿಯ ಆದದ್ದಿರ ಬಹುದು. ಬಾಳೆಹಣ್ಣಿನಂತಲ್ಲದೆ ಕೆಲವು ಋತುಗಳಲ್ಲಿ ಮಾತ್ರ ಸಿಗುವ ಕರಬೂಜ, ಸಿದ್ಧೋಟಗಳ ಸೀಕರಣೆಯನ್ನೂ ಮಾಡುತ್ತಾರೆ. ಅದನ್ನೇ ಗೋಪಾಲಕೃಷ್ಣ ಅಡಿಗರು ‘ಶ್ರೀರಾಮನವಮಿಯ ದಿವಸ ರಾಮನಾಮಾಮೃತವೆ ಪಾನಕ ಪನಿವಾರ ಕೋಸಂಬರಿ; ಕರಬೂಜ ಸಿದ್ಧೋಟಗಳ ಹೋಳು ಸೀಕರಣೆ; ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ...’ ಎಂದಿದ್ದು.
ಸಿದ್ಧೋಟವೆಂದರೆ ಇಂಗ್ಲಿಷ್ನ ಮಸ್ಕ್ ಮೆಲನ್. ಎರಡನೆಯ ಕಾರಣವೆಂದರೆ ಸೀಕರಣೆಯ ಹೊಂದಿ ಕೊಳ್ಳುವ ಗುಣ. ಸೀಕರಣೆಯ ಜತೆ ಏನೇನೆಲ್ಲ ಕಾಂಬಿನೇಷನ್ಸ್ ಸಾಧ್ಯವಿದೆ ನೋಡಿ! ಪೂರಿ, ಚಪಾತಿ, ಇಡ್ಲಿ, ಕೊಟ್ಟೆಕಡಬು, ದೋಸೆ, ನೀರುದೋಸೆ, ಒತ್ತುಶ್ಯಾವಿಗೆ... ಒಂದೇ ಎರಡೇ! ಅಷ್ಟೇಕೆ, ಆಗಲೇ ಸಿಹಿಯಾಗಿರುವ ಹೋಳಿಗೆ ಜತೆಗೂ ಸೀಕರಣೆ ಅಡ್ಜಸ್ಟ್ ಆಗುತ್ತದೆಂದ ಮೇಲೆ ಅದರಂಥ ಸ್ನೇಹಮಯಿ ಖಾದ್ಯ ಇನ್ನೊಂದುಂಟೇ? ಹಾಗಂತ, ಜುಗಲ್ಬಂದಿಯೇ ಆಗಬೇಕೆಂದೇನಿಲ್ಲ.
ಸ್ವತಂತ್ರ ಅಭ್ಯರ್ಥಿಯಾಗಿಯೂ ಸ್ಪಽಸಿ ಸೀಕರಣೆ ಜಯಭೇರಿ ಬಾರಿಸಬಲ್ಲದು. ಅಂದಹಾಗೆ ಸೀಕರಣೆ ಕಾಂಬಿನೇಷನ್ಗಳನ್ನು ಪಟ್ಟಿ ಮಾಡುವಾಗ ಒಂದನ್ನು ಮರೆತೆ: ಅವಲಕ್ಕಿ! ಹೌದು, ನಮ್ಮೂರಿನಲ್ಲಿ ಚೈತ್ರಮಾಸದಲ್ಲಿ ದೇವಸ್ಥಾನದಲ್ಲೋ ಮನೆಗಳಲ್ಲೋ ಸಂಜೆಹೊತ್ತು ವಸಂತಪೂಜೆ ಭಜನೆ ಕಾರ್ಯಕ್ರಮವಿದ್ದರೆ ಅವಲಕ್ಕಿ-ಸೀಕರಣೆ ಕೂಡ ನೈವೇದ್ಯದ, ಫಳ್ಹಾರದ ಒಂದು ಪ್ರಮುಖ ಆಕರ್ಷಣೆ. ಆ ಸೀಕರಣೆ ಬಾಳೆಹಣ್ಣಿನದೂ ಆಗುತ್ತದೆ, ಕರಬೂಜದ್ದೂ ಆಗುತ್ತದೆ.
ನಾವಾಡುವ ಚಿತ್ಪಾವನಿ ಮರಾಠಿ ಭಾಷೆಯಲ್ಲಿ ಸೀಕರಣೆಯನ್ನು ‘ಶಿಕ್ರೀಣಿ’ ಎನ್ನುತ್ತೇವೆ. ಇ-ಕಾರಾಂತ ಸೀಲಿಂಗ ಪದವಾಗಿ ಗೌರವದಿಂದ ಕಾಣುತ್ತೇವೆ. ಎಷ್ಟು ಗೌರವವೆಂದರೆ ಸಂಧ್ಯಾ ವಂದನೆಯಲ್ಲಿ ‘ಉತ್ತಮೇ ಶಿಖರೇ ಜಾತೇ ಭೂಮ್ಯಾಂ ಪರ್ವತ ಮೂರ್ಧನೀ...’ ಎಂದು ಗಾಯತ್ರೀ ದೇವಿಯನ್ನು ಬೀಳ್ಕೊಡುವಾಗ ಮನಸ್ಸಿನಲ್ಲಿ ‘ಉತ್ತಮೇ ಶಿಕ್ರಿಣೀ ದೋಸೇ...’ ಎಂದುಕೊಳ್ಳುತ್ತ ದೋಸೆ-ಸೀಕರಣೆ ಮೆಲ್ಲುವಿಕೆಗೆ ಸಿದ್ಧರಾಗುತ್ತೇವೆಂದು ತಮಾಷೆಗೆ ಹೇಳುವುದಿದೆ.
ಇನ್ನೊಂದು ತಮಾಷೆಯೆಂದರೆ ಮಹಾರಾಷ್ಟ್ರ ಅಥವಾ ಉತ್ತರಕರ್ನಾಟಕದ ಕೆಲವೆಡೆ ಇರುವ ಸಂಪ್ರದಾಯದಂತೆ ಮದುವೆಯಲ್ಲಿ ಉರುಟಣೆ (ಒಗಟು) ಹೇಳುವುದಿದ್ದರೆ, ಸೀಕರಣೆಪ್ರಿಯ ಗಂಡ ನಿದ್ದರೆ, ಹೆಂಡತಿ ಹೇಳಬಹುದಾದ ಉರುಟಣೆ: ‘ಶ್ರೀಕೃಷ್ಣನ ಮಡದಿಯರು ಸತ್ಯಭಾಮಾ ರುಕ್ಮಿಣಿ; ಡ್ಯಾಷ್ ಡ್ಯಾಷ್ ರಾಯರಿಗೆ ಇಷ್ಟವು ಬಾಳೆಹಣ್ಣಿನ ಶಿಕ್ರೀಣಿ!’
ಮಹಾರಾಷ್ಟ್ರದ ಶುದ್ಧಮರಾಠಿಯಲ್ಲೂ ಶಿಕರಣ, ಶಿಕ್ರಣ, ಶಿಖರಣ ಎಂಬಿತ್ಯಾದಿ ಪದಬಳಕೆ ಇದೆಯೆಂದು ನನ್ನ ತಿಳಿವಳಿಕೆ. ಕನ್ನಡದ ಸಿಹಿಕರಣೆ ಕ್ರಮೇಣ ಸೀಕರಣೆಯಾಗಿ ಉತ್ತರ ಕರ್ನಾಟಕ ಮತ್ತು ಈಗಿನ ಮಹಾರಾಷ್ಟ್ರ ಪ್ರದೇಶಗಳಿಗೆ ಹೋದಾಗ ಸಕಾರ ಶಕಾರ ಆಗಿ ದೀರ್ಘ ಕಳೆದುಕೊಂಡು ಮರಾಠಿಯ ಶಿಕರಣ ಆದದ್ದಿರಬಹುದು. ಇಲ್ಲ, ಮರಾಠಿ ಶಿಖರಣದ ಮೂಲ ಸಂಸ್ಕೃತದ ‘ಶಿಖರಿನ್’ ಎಂದು ಕೆಲವರ ಅಭಿಪ್ರಾಯ.
ಸಂಸ್ಕೃತದಲ್ಲಿ ಶಿಖರಿನ್ ಅಂದರೆ ಶಿಖರವೇ; ಆದರೆ ಈ ತಿನಿಸು ರುಚಿಯಲ್ಲೂ ಜನಪ್ರಿಯತೆಯಲ್ಲೂ ಶಿಖರಪ್ರಾಯವಾದುದು, ಅಂದರೆ ಶ್ರೇಷ್ಠವಾದುದು, ಆದ್ದರಿಂದ ಆ ಹೆಸರು ಬಂದದ್ದಂತೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಪದಗಳ ಕೊಡುಕೊಳ್ಳುವಿಕೆ ಇದ್ದದ್ದೇ. ಆ ಭಾಷೆ ತಾಯಿ ಈ ಭಾಷೆ ಮಗಳು ಅಂತೆಲ್ಲ ಹೇಳಿ ಸೀಕರಣೆ ಪ್ರೀತಿಗಾಗಿ ಹೊಸ ವಿವಾದ ಸೃಷ್ಟಿಸುವುದು ಬೇಡ. ಅಂದ ಹಾಗೆ ಸೀಕರಣೆಗೆ ಸಂಬಂಧವಿಲ್ಲದಿದ್ದರೂ ಸಂಸ್ಕೃತ ಛಂದಸ್ಸಿನಲ್ಲಿ ‘ಶಿಖರಿಣೀ’ ಎಂಬ ಹೆಸರಿನ, ಪ್ರತಿ ಪಾದದಲ್ಲಿ ತಲಾ ಹದಿನೇಳು ಅಕ್ಷರಗಳಿರುವ, ಅಕ್ಷರವೃತ್ತ ಇರುವುದು ಹೌದು.
ಶಂಕರಾಚಾರ್ಯವಿರಚಿತ ಸೌಂದರ್ಯಲಹರೀ ಸ್ತೋತ್ರವು ಶಿಖರಿಣೀ ಛಂದಸ್ಸಿನಲ್ಲೇ ಇರುವುದೂ ಹೌದು. ಅದನ್ನು ಕೇಳುವಾಗೆಲ್ಲ ನನಗೆ ಶಿಕ್ರೀಣಿಯದೇ ನೆನಪಾಗುವುದೂ ಹೌದು! ಸಂಸ್ಕೃತ ಕವಿಗಳಿಗೆ ಸೀಕರಣೆಯ ಪರಿಚಯ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಒಂದು ಸುಭಾಷಿತದಲ್ಲಿ ಹೋಳಿಗೆಗೆ ಸಕ್ಕರೆ, ತುಪ್ಪ, ಮತ್ತು ಮಾವಿನರಸ ಒಳ್ಳೆಯ ಕಾಂಬಿನೇಷನ್ ಎಂದು ಬಣ್ಣಿಸಿದ್ದಿದೆ, ಹೀಗೆ: ‘ಇತರ ವೃಕ್ಷಫಲಂ ಫಲಮೇವ ತನ್ನೃಪ ರಸಾಲಫಲಂ ತ್ವಮೃತಂ ಮತಂ| ಯದಿ ತದೀಯರಸಃ ಸಿತಯಾ ಯುತಃ ಸಘೃತ ಪೋಲಿಕಯಾಸ್ಯ ನ ಚೋಪಮಾ||’ ಇದರ ಅರ್ಥ- “ಎಲೈ ರಾಜನೇ, ಇತರ ವೃಕ್ಷಗಳ ಫಲಗಳನ್ನು ‘ಫಲ’ ಎಂದೇ ಕರೆಯಬಹುದಾದರೂ ರಸಾಲ(ಮಾವು) ಫಲವಾದರೋ ಅಮೃತ ಎನಿಸಿದೆ.
ಮಾವಿನರಸದೊಂದಿಗೆ ಸಕ್ಕರೆ-ತುಪ್ಪ ಸೇರಿಸಿ ಹೋಳಿಗೆ ಸೇವಿಸಿದರೆ ಅದಕ್ಕೆ ಸಮಾನವಾದ ರುಚಿ ಬೇರೊಂದಿಲ್ಲ!" ಇದರಲ್ಲಿ ಮಾವಿನರಸ ಸಕ್ಕರೆ ತುಪ್ಪಗಳನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದೆ, ಅವುಗಳ ಮಿಶ್ರಣ ಎಂದಿಲ್ಲ, ಸೀಕರಣೆಯಂಥ ಸಿಹಿಸಿಹಿ ಹೆಸರೊಂದಿಲ್ಲ.
ಕನ್ನಡ ಕವಿಗಳು ಹಾಗಲ್ಲ. ಅವರು ಸೀಕರಣೆಯ ಸವಿಯನ್ನು ಬಲ್ಲರು. ವಾಚಕರಿಗೆ ಉಣಿಸಿ ತಾವೂ ಸವಿಯಬಲ್ಲರು. ‘ತುಪ್ಪ ಸಕ್ಕರೆ ಹಣ್ಣು-ಹಂಪಲವು| ಕರ್ಪೂರ ಕಸ್ತೂರಿ ಬೆರೆಸಿದ ಸೀಕರಣೆ| ಒಪ್ಪದಿ ಶ್ರೀದೇವಿ ಬಡಿಸಿಹಳಯ್ಯ’ ಎಂದಿದ್ದಾರೆ ಪುರಂದರದಾಸರು ಶ್ರೀಮನ್ನಾರಾಯಣನನ್ನು ಆರೋಗಣೆಗೆ ಕರೆಯುವ ಕೀರ್ತನೆಯಲ್ಲಿ. ‘ಘೃತ ಭಕ್ಷ್ಯ ಪಾಯಸ ಪರಡಿ ಮಧು ಶರ್ಕರಾಮಿಷಪಳದ್ಯ ಸೀಕರಣೆ ಶಾಕ ತನಿವಣ್ಗಳ ರಸ ರಸಾಯನ’ಗಳು ಲಕ್ಷ್ಮೀಶನ ಜೈಮಿನಿ ಭಾರತದಲ್ಲೂ, ‘ಪರಿಯ ಪಚ್ಚಡಿ ಯುಪ್ಪುಗಾಯ್ಭಕ್ಷ್ಯ ಪರಮಾನ್ನ ಬಹುವಿಧದ ಸೀಕರಣೆ’ಗಳು ಮತ್ತು ‘ಪಕ್ವಫಲ ರಸಾಯನದ ಸೀಕರಣೆಗಳು, ದಧಿ ದುಗ್ಧ ಮುಂತಾದ ಭೋಜ್ಯ ಪರಿಕರಗಳು’ ವಿರೂಪಾಕ್ಷಪಂಡಿತ ಎಂಬ ಕವಿಯ ಚನ್ನಬಸವ ಪುರಾಣದಲ್ಲಿ ಬಿಜ್ಜಳ ದೊರೆಯ ಆಡಳಿತದಲ್ಲಿ ದಾರಿಹೋಕರಿಗೆ ಛತ್ರಗಳಲ್ಲಿ ಊಟದ ವ್ಯವಸ್ಥೆ ಹೇಗಿತ್ತು ಎಂದು ವಿವರಿಸಿದ್ದರಲ್ಲೂ ಕಂಡುಬರುತ್ತವಂತೆ. ಪಾರ್ಶ್ವಪಂಡಿತನೆಂಬ ಜೈನಕವಿ ತನ್ನ ಕಾವ್ಯದಲ್ಲಿ ಮಾವಿನಹಣ್ಣಿನ ಸೀಕರಣೆಯನ್ನೇ ಉಲ್ಲೇಖಿಸಿದ್ದಾನಂತೆ. ಅಂದಮೇಲೆ ಸೀಕರಣೆ ಹಳಗನ್ನಡ ಕಾಲದಿಂದಲೇ ಬಂದದ್ದೆಂದು ನಮಗೆ ಗೊತ್ತಾಗುತ್ತದೆ.
ನವ್ಯ ಭವ್ಯ ಕವಿಗಳೂ ಕಮ್ಮಿಯೇನಿಲ್ಲ. ಸೀಕರಣೆ ಉಲ್ಲೇಖದ ಗೋಪಾಲಕೃಷ್ಣ ಅಡಿಗರ ಕವಿತೆ ಯನ್ನು ಆಗಲೇ ನೋಡಿದೆವು. ವಿ.ಸೀತಾರಾಮಯ್ಯನವರು ತಮ್ಮದೊಂದು ಲಲಿತಪ್ರಬಂಧ ಸಂಕಲನಕ್ಕೆ ‘ಸೀಕರಣೆ’ ಎಂದೇ ಹೆಸರಿಟ್ಟಿದ್ದಾರೆ. ಸಮಕಾಲೀನ ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬ ರಾದ, ಇದೀಗ ನಮ್ಮನ್ನಗಲಿದ ಡಾ.ಎಚ್.ಎಸ್.ವೆಂಕಟೇಶಮೂರ್ತಿಯವರು ತಮ್ಮದೊಂದು ಅಂಕಣಬರಹದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪನವರ ಹೋಳಿಗೆ-ಸೀಕರಣೆ ಪ್ರೀತಿಯನ್ನು ಹೃದಯಂಗಮವಾಗಿ ಬಣ್ಣಿಸಿದ್ದಾರೆ: “ಊಟ ತಿಂಡಿಗಳಲ್ಲಿ ಜಿಎಸ್ಸೆಸ್ ಅವರು ಒಳ್ಳೇ ರಸಿಕರು!
ಹೂರಣದ ಹೋಳಿಗೆಯ ಊಟವನ್ನು ಅವರ ಮನೆಯಲ್ಲೇ ಮಾಡಬೇಕು. ಹೋಳಿಗೆ ಹಾಕಿಸಿ ಕೊಂಡು, ಅದರ ಮೇಲೆ ತುಪ್ಪ ಸುರುವಿಕೊಂಡು, ಅದಕ್ಕೆ ಕಸಿಮಾವಿನ ಸೀಕರಣೆ ಬೆರೆಸಿಕೊಂಡು ಅದನ್ನೆಲ್ಲಾ ಹದವಾಗಿ ಕಿವುಚಿ ರಸಪಾಕ ಮಾಡಿಕೊಂಡು ಸಶಬ್ದವಾಗಿ ಅದನ್ನು ತಿನ್ನುವುದು ಜಿಎಸ್ಸೆಸ್ ಕ್ರಮ! ‘ಹೀಗೆ... ಹೋಳಿಗೆ ತಿನ್ನಬೇಕಾದ್ದು!’ ಎಂದು ಅವರು ನಮ್ಮತ್ತ ನೋಡುತ್ತಾ ಪಾಪ ತಿಳಿಯದ ಮುಗ್ಧರು ನೀವು ಎಂದು ಅನುಕಂಪ ತೋರುವ ಗತ್ತನ್ನು ನೋಡಿಯೇ ಅನುಭವಿಸ ಬೇಕು!" ಓದುಗರ ಕಣ್ಣಿಗೆ ಕಟ್ಟುವಂತೆ, ನಾಲಗೆ ನೀರೂರುವಂತೆ ಇದೆ ಈ ಚಿತ್ರಣ. ಈಗಿನ್ನು ಜಿಎಸ್ಸೆಸ್ ಮತ್ತು ಎಚ್ಚೆಸ್ವಿ ಇಬ್ಬರೂ ನೆನಪಷ್ಟೇ. ಸ್ವರ್ಗದಲ್ಲೂ ಅವರಿಬ್ಬರ ಉಭಯಕುಶಲೋಪರಿ ಮಾತುಕತೆ ಯಲ್ಲಿ ಹೋಳಿಗೆ-ಸೀಕರಣೆ ಬರುತ್ತವೋ ಏನೋ!