ಕ್ಷಣಾರ್ಧದಲ್ಲಿ ತಪ್ಪಿದ ಬಹುದೊಡ್ಡ ದುರಂತ: ಟ್ಯಾಕ್ಸಿವೇಯಲ್ಲಿ ಮುಖಾಮುಖಿಯಾದ ಇಂಡಿಗೋ, ಏರ್ ಇಂಡಿಯಾ ವಿಮಾನಗಳು
ಗುಜರಾತ್ನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಸಂಭವಿಸಲಿದ್ದ ಬಹುದೊಡ್ಡ ವಿಮಾನ ದುರಂತವೊಂದು ಕ್ಷಣಾರ್ಧದಲ್ಲಿ ತಪ್ಪಿದೆ. ಟ್ಯಾಕ್ಸಿವೇಯಲ್ಲಿ ಎರಡು ವಿಮಾನಗಳು ಮುಖಾಮುಖಿಯಾದ ಘಟನೆ ಬುಧವಾರ ಸಂಜೆ ನಡೆದಿದೆ. ಎಟಿಸಿ ತ್ವರಿತವಾಗಿ ಮಧ್ಯಪ್ರವೇಶಿಸಿ ಸೂಚನೆ ನೀಡಿದ್ದರಿಂದ ಅಪಘಾತ ತಪ್ಪಿದೆ. ಈ ಕುರಿತು ಕೂಡಲೇ ತನಿಖೆಯನ್ನು ಪ್ರಾರಂಭಿಸಿರುವುದಾಗಿ ವಿಮಾನ ನಿಲ್ದಾಣ ಪ್ರಾಧಿಕಾರದ ವಕ್ತಾರರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಗುಜರಾತ್: ಬಹುದೊಡ್ಡ ವಿಮಾನ ಅಪಘಾತವೊಂದು ಕ್ಷಣಾರ್ಧದಲ್ಲಿ ತಪ್ಪಿರುವ ಘಟನೆ ಬುಧವಾರ ಸಂಜೆ ಗುಜರಾತ್ನ (Gujarat) ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ (Ahmedabad airport) ನಡೆದಿದೆ. ಟ್ಯಾಕ್ಸಿವೇಯಲ್ಲಿ (Taxiway) ಏರ್ ಇಂಡಿಯಾ ವಿಮಾನವು (air india flight) ಇಂಡಿಗೋ ವಿಮಾನದ (Indigo flight) ಎದುರು ಬಂದಿದ್ದು, ತಕ್ಷಣವೇ ವಾಯು ಸಂಚಾರ ನಿಯಂತ್ರಣ ಕೇಂದ್ರವು ಮಧ್ಯಪ್ರವೇಶಿಸಿ ಸಂಭವಿಸಬಹುದಾದ ಬಹುದೊಡ್ಡ ದುರಂತವನ್ನು ತಪ್ಪಿಸಿದೆ. ಏರ್ ಇಂಡಿಯಾ ವಿಮಾನವು ಲ್ಯಾಂಡಿಂಗ್ ಮಾಡುತ್ತಿದ್ದಾರೆ, ಇಂಡಿಗೋ ಟೇಕ್ ಆಫ್ ಆಗುವುದರಲ್ಲಿತ್ತು. ಏರ್ ಇಂಡಿಯಾ ವಿಮಾನದಲ್ಲಿ 164 ಪ್ರಯಾಣಿಕರು ಕೂಡ ಇದ್ದರು.
ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಜೆ ಏರ್ ಇಂಡಿಯಾ ವಿಮಾನ ಮತ್ತು ಇಂಡಿಗೋ ವಿಮಾನವು ಒಂದೇ ಟ್ಯಾಕ್ಸಿವೇಯಲ್ಲಿ ಮುಖಾಮುಖಿಯಾಗಿದೆ. ರನ್ವೇ ಸಂಭವಿಸಬಹುದಾದ ಅಪಘಾತವು ಕ್ಷಣ ಮಾತ್ರದಲ್ಲಿ ತಪ್ಪಿದೆ.
ಮುಂಬೈನಿಂದ 164 ಪ್ರಯಾಣಿಕರನ್ನು ಹೊತ್ತುಕೊಂಡು ಬಂದ ಎಐ-2493 ಏರ್ ಇಂಡಿಯಾ ವಿಮಾನವು ಸಂಜೆ 6.30 ರ ಸುಮಾರಿಗೆ ತನ್ನ ಪಾರ್ಕಿಂಗ್ ಬೇ ಕಡೆಗೆ ತೆರಳುತ್ತಿತ್ತು. ಈ ವೇಳೆ ತಪ್ಪು ತಿರುವು ಪಡೆದು ಟೇಕ್ ಆಫ್ ಹಂತದಲ್ಲಿದ್ದ ಇಂಡಿಗೋ ವಿಮಾನವಿದ್ದ ಟ್ಯಾಕ್ಸಿವೇಗೆ ಪ್ರವೇಶಿಸಿತ್ತು. ಇಂಡಿಗೋ ವಿಮಾನವು ಮುಂಬೈಗೆ ತೆರಳಲು ಟೇಕ್-ಆಫ್ಗೆ ಟ್ಯಾಕ್ಸಿವೇಯಲ್ಲಿ ಚಲಿಸುತ್ತಿತ್ತು. ಅಪಾಯವನ್ನು ಅರಿತ ವಾಯು ಸಂಚಾರ ನಿಯಂತ್ರಣವು ಮಧ್ಯಪ್ರವೇಶಿಸಿ ಎರಡೂ ಪೈಲಟ್ಗಳಿಗೆ ತಕ್ಷಣದ ಸೂಚನೆಗಳನ್ನು ನೀಡಿ ಎರಡೂ ವಿಮಾನಗಳನ್ನು ಸುಮಾರು 200 ಮೀಟರ್ ಅಂತರದಲ್ಲಿ ನಿಲ್ಲಿಸುವಲ್ಲಿ ಸಫಲರಾದರು.
ವಾಯು ಸಂಚಾರ ನಿಯಂತ್ರಣದ ತ್ವರಿತ ಪ್ರತಿಕ್ರಿಯೆ ಮತ್ತು ಪೈಲಟ್ಗಳು ಕಟ್ಟುನಿಟ್ಟಾಗಿ ಆದೇಶವನ್ನು ಪಾಲಿಸಿದ್ದರಿಂದ ಸಂಭಾವ್ಯ ಅಪಘಾತವೊಂದು ಕ್ಷಣಾರ್ಧದಲ್ಲಿ ತಪ್ಪಿತು. ಬಳಿಕ ಏರ್ ಇಂಡಿಯಾ ವಿಮಾನವನ್ನು ಅದಕ್ಕೆ ನಿಗದಿಪಡಿಸಿದ ಪಾರ್ಕಿಂಗ್ ಬೇಗೆ ಎಳೆದುಕೊಂಡು ಹೋಗಲಾಯಿತು. ಅನಂತರವೇ ಇಂಡಿಗೋ ವಿಮಾನದ ನಿರ್ಗಮನ ಪ್ರಕ್ರಿಯೆಗಳನ್ನು ನಡೆಸಲಾಯಿತು. ಈ ಘಟನೆಯಿಂದ ಇಂಡಿಗೋ ವಿಮಾನ ಸಂಚಾರವು 20 ನಿಮಿಷಗಳ ಕಾಲ ವಿಳಂಬವಾಯಿತು.
ಬಳಿಕ ಈ ಕುರಿತು ಮಾಹಿತಿ ನೀಡಿದ ಇಂಡಿಗೋ ವಿಮಾನಯಾನ ಸಂಸ್ಥೆ, ಇಂಡಿಗೋ ವಿಮಾನ 6ಇ-5160 ಮುಂಬೈಗೆ ಹೊರಡಲು ಟ್ಯಾಕ್ಸಿ ಮಾಡುತ್ತಿದ್ದಾಗ ಮತ್ತೊಂದು ವಿಮಾನವು ಅದರ ಹಾದಿಗೆ ಬಂದಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೆಲಕಾಲ ಎರಡೂ ವಿಮಾನಗಳನ್ನು ನಿಲ್ಲಿಸಲಾಯಿತು. ಬಳಿಕ ವಿಮಾನವು ಸುರಕ್ಷಿತವಾಗಿ ಹೊರಟು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದು ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಏರ್ ಇಂಡಿಯಾ ಸಂಸ್ಥೆಯು, ಜೂನ್ 24 ರಂದು ಮುಂಬೈನಿಂದ ಬಂದಿಳಿದ ವಿಮಾನ ಎಐ-2493 ಲ್ಯಾಂಡಿಂಗ್ ವೇಳೆ ಟ್ಯಾಕ್ಸಿಯಿಂಗ್ ಸಮಯದಲ್ಲಿ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಪ್ರಯಾಣಿಕರು ಅಥವಾ ಸಿಬ್ಬಂದಿ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ತಕ್ಷಣವೇ ವಾಯುಯಾನ ಸಂಚಾರ ನಿಯಂತ್ರಣ ನಿರ್ದೇಶನಗಳನ್ನು ಅನುಸರಿಸಿ ಸರಿಯಾದ ಬೇಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ.
ಪಾಕಿಸ್ತಾನ ವಾಯು ಪ್ರದೇಶಕ್ಕೆ ಏರ್ ಇಂಡಿಯಾ ವಿಮಾನ ಎಂಟ್ರಿ; ತನಿಖೆ ಕೈಗೆತ್ತಿಕೊಂಡ ಕೇಂದ್ರ
ಸಂಭವಿಸಬಹುದಾದ ಅಪಘಾತದಿಂದ ತಪ್ಪಿಸಿಕೊಂಡ ಎರಡೂ ವಿಮಾನಗಳು ಏರ್ಬಸ್ ಎ320 ಸಣ್ಣ ಮಾದರಿಯ ಜೆಟ್ಗಳಾಗಿದ್ದು, ಇದರಲ್ಲಿ ಸುಮಾರು 150 ರಿಂದ 180 ಪ್ರಯಾಣಿಕರು ಸಾಗಬಹುದಾಗಿದೆ. ಘಟನೆಯ ಕುರಿತು ವಾಯುಯಾನ ನಿಯಂತ್ರಕರಿಗೆ ಮಾಹಿತಿ ನೀಡಿದ್ದು, ತನಿಖೆಯನ್ನು ಪ್ರಾರಂಭಿಸಲಾಗಿದೆ.