ʻಶುಭಮನ್ ಗಿಲ್ ನಾಯಕತ್ವಕ್ಕೆ ಏನಾಯ್ತು?ʼ-ಗುಜರಾತ್ ಟೈಟನ್ಸ್ ಸೋಲಿಗೆ ಇದೇ ಕಾರಣ ಎಂದ ಆಕಾಶ್ ಚೋಪ್ರಾ!
IPL 2026: ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿದ ನಂತರ ಗುಜರಾತ್ ಟೈಟನ್ಸ್ ತಂಡದ ತಂತ್ರದ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಟೀಕೆ ವ್ಯಕ್ತಪಡಿಸಿದರು. ಮಲ್ಲಾನ್ಪುರದಲ್ಲಿ ನಡೆದ ಈ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ತೆಗೆದುಕೊಂಡ ಎರಡು ಪ್ರಮುಖ ನಾಯಕತ್ವದ ನಿರ್ಧಾರಗಳನ್ನು ಚೋಪ್ರಾ ಪ್ರಶ್ನಿಸಿದ್ದಾರೆ. ಈ ನಿರ್ಧಾರಗಳೇ ಗುಜರಾತ್ ತಂಡದ ಸೋಲಿಗೆ ನೇರ ಕಾರಣವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಶುಭಮನ್ ಗಿಲ್ ನಾಯಕತ್ವವನ್ನು ಪ್ರಶ್ನಿಸಿದ ಆಕಾಶ್ ಚೋಪ್ರಾ. -
ಚಂಡೀಗಢ: ಮಲ್ಲಾನ್ಪುರದಲ್ಲಿ ಮಾರ್ಚ್ 31ರಂದು ನಡೆದಿದ್ದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಸೋತ ನಂತರ, ಮಾಜಿ ಭಾರತ ಕ್ರಿಕೆಟಿಗ ಆಕಾಶ್ ಚೋಪ್ರಾ (Aakash Chopra) ಅವರು ಶುಭಮನ್ ಗಿಲ್ (Shubman Gill) ಅವರ ನಾಯಕತ್ವದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಚೋಪ್ರಾ, ರನ್ ಚೇಸ್ ವೇಳೆ ತಂಡದ ಮ್ಯಾನೇಜ್ಮೆಂಟ್ ಮತ್ತು ಗಿಲ್ ಅವರ ತಂತ್ರಗಳನ್ನು ಟೀಕಿಸಿದರು. ವಿಶೇಷವಾಗಿ ವೇಗಿ ಪ್ರಸಿಧ್ ಕೃಷ್ಣ ಅವರನ್ನು ತಡವಾಗಿ ಬೌಲಿಂಗ್ಗೆ ತಂದುಕೊಂಡ ನಿರ್ಧಾರವನ್ನು ಪ್ರಶ್ನೆ ಮಾಡಿದ್ದಾರೆ.
ಹಿಂದಿನ ಐಪಿಎಲ್ ಆವೃತ್ತಿಯಲ್ಲಿ ಪರ್ಪಲ್ ಕ್ಯಾಪ್ ಗೆದ್ದಿದ್ದ ಪ್ರಸಿಧ್ ಕೃಷ್ಣ ಅವರನ್ನು ಕಡಿಮೆ ಮೊತ್ತದ ಪಂದ್ಯದಲ್ಲಿ 13ನೇ ಓವರ್ನಲ್ಲಿ ಬೌಲಿಂಗ್ಗೆ ಇಳಿಸಲಾಯಿತು. ಈ ನಿರ್ಧಾರವೇ ಗುಜರಾತ್ ಟೈಟನ್ಸ್ ತಂಡದ ಸೋಲಿಗೆ ಕಾರಣವಾಯಿತೇ ಎಂಬುದನ್ನು ಚೋಪ್ರಾ ಅಂದಾಜಿಸಿದ್ದಾರೆ.
ಮೊದಲು ಬ್ಯಾಟಿಂಗ್ಗೆ ಇಳಿದ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್, ನ್ಯೂ ಚಂಡೀಗಢದ ಸ್ವಲ್ಪ ಕಠಿಣ ಪಿಚ್ನಲ್ಲಿ ಪಂಜಾಬ್ ಕಿಂಗ್ಸ್ಗೆ 163 ರನ್ ಗುರಿ ನೀಡಿತು. ಪಂದ್ಯ ಆರಂಭದಲ್ಲೇ ಗುಜರಾತ್ ತಂಡ ಪ್ರಭಾವ ಬೀರಿದ್ದು, ಎರಡನೇ ಓವರ್ನಲ್ಲೇ ಆರಂಭಿಕ ಬ್ಯಾಟ್ಸ್ಮನ್ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿತ್ತು. ಪ್ರಸಿಧ್ ಕೃಷ್ಣ ಲಭ್ಯವಾಗಿದ್ದರೂ, ಅವರನ್ನು ದಾಳಿಗೆ ತಡವಾಗಿ ಬಳಸಿದುದನ್ನು ಚೋಪ್ರಾ ಗಮನಕ್ಕೆ ತಂದರು. ಪಂದ್ಯ ಬಹುತೇಕ ಕೈ ತಪ್ಪುವ ಹಂತಕ್ಕೆ ಬಂದ ನಂತರವೇ ಅವರನ್ನು ಬೌಲಿಂಗ್ಗೆ ಕರೆಸಲಾಯಿತು ಎಂದು ಅವರು ಹೇಳಿದ್ದಾರೆ.
PBKS vs GT: ಸೋಲಿಗೆ ಬಲವಾದ ಕಾರಣ ತಿಳಿಸಿದ ಗುಜರಾತ್ ನಾಯಕ ಶುಭಮನ್ ಗಿಲ್
“ಶುಭಮನ್ ಗಿಲ್ ಅವರ ನಾಯಕತ್ವಕ್ಕೆ ಏನಾಗಿದೆ? ಈ ಪ್ರಶ್ನೆಯನ್ನು ನಾನು ಕೇಳುತ್ತಿದ್ದೇನೆ, ಏಕೆಂದರೆ ಪ್ರಸಿಧ್ ಕೃಷ್ಣ ತಂಡದಲ್ಲಿದ್ದರೂ ಅವರನ್ನು ಬೌಲಿಂಗ್ಗೆ ಬಳಸಲೇ ಇಲ್ಲ. 12 ಓವರ್ಗಳು ಕಳೆದ ನಂತರ, ಎದುರಾಳಿ ತಂಡ ಪಂದ್ಯವನ್ನು ಗೆಲ್ಲುವ ಹಂತಕ್ಕೆ ಬಂದಾಗ ಮಾತ್ರ ಅವರಿಗೆ ಬೌಲಿಂಗ್ ನೀಡಲಾಯಿತು. ನಂತರ ಅವರು ಮೂರು ಓವರ್ಗಳಲ್ಲಿ ಮೂರು ವಿಕೆಟ್ ಪಡೆದು ಪಂದ್ಯಕ್ಕೆ ಸ್ವಲ್ಪ ರೋಚಕತೆ ತಂದರು, ಆದರೆ ಅದರಿಂದ ಪ್ರಯೋಜನವೇನು?” ಎಂದು ಆಕಾಶ್ ಚೋಪ್ರಾ ಪ್ರಶ್ನೆ ಮಾಡಿದ್ದಾರೆ.
ತಂಡದ ಸಂಯೋಜನೆ ಹಾಗೂ ಪ್ರಸಿಧ್ ಕೃಷ್ಣರನ್ನು ಪ್ಲೇಯಿಂಗ್ XIಗೆ ಸೇರಿಸದೆ ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಯಲ್ಲಿ ಇಟ್ಟ ನಿರ್ಧಾರವನ್ನೂ ಚೋಪ್ರಾ ಪ್ರಶ್ನಿಸಿದ್ದಾರೆ.
“ಮೊದಲನೆಯದಾಗಿ, ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಯಲ್ಲಿ ಇಟ್ಟಿದ್ದೀರಿ. ಅದಕ್ಕೆ ಕಾರಣವೇನು? ಅಶೋಕ್ ಶರ್ಮಾ ಪ್ಲೇಯಿಂಗ್ XIನಲ್ಲಿ ಇದ್ದರು. ನೀವು 50ಕ್ಕೆ 5 ಆಗಿದ್ದರೆ ಮತ್ತು ಇಂಪ್ಯಾಕ್ಟ್ ಸಬ್ ಬಳಸಬೇಕಾದ ಪರಿಸ್ಥಿತಿ ಬಂದರೆ, ಕುಮಾರ್ ಕುಶಾಗ್ರ ಅವರನ್ನು ಕಳಿಸಿದರೆ, ಪ್ರಸಿಧ್ ಕೃಷ್ಣ ನಿಮಗೆ ಲಭ್ಯವಾಗುತ್ತಿರಲಿಲ್ಲ. ಇಂತಹ ರೀತಿಯಲ್ಲಿ ಹೇಗೆ ಯೋಚಿಸುತ್ತೀರಿ?” ಎಂದು ಅವರು ಟೀಕಿಸಿದರು.
PBKS vs GT: ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ಕೂಪರ್ ಕೊನೊಲಿ ಯಾರು?
ಪ್ರಸಿಧ್ ಕೃಷ್ಣ ಇಂಪ್ಯಾಕ್ಟ್ ಪ್ಲೇಯರ್ ಏಕೆ?
ಮೈದಾನಕ್ಕಿಳಿದ ತಕ್ಷಣ ಪ್ರಸಿಧ್ ಕೃಷ್ಣ ತಮ್ಮ ಪ್ರಭಾವ ತೋರಿಸಿದರು ಮತ್ತು ಪಂದ್ಯ ದಿಕ್ಕನ್ನೇ ಬದಲಿಸುವ ಹಂತಕ್ಕೆ ತಂದರು. ಮೊದಲನೇ ಎಸೆತದಲ್ಲಿಯೇ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದ ಅವರು, ನಂತರ ಶಶಾಂಕ್ ಸಿಂಗ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ವಿಕೆಟ್ಗಳನ್ನೂ ಪಡೆದರು ಹಾಗೂ ಮೂರು ಪ್ರಮುಖ ವಿಕೆಟ್ ಸಾಧನೆ ಮಾಡಿದರು. ಅವರ ಮೂರು ಓವರ್ಗಳ ಅವಧಿಯಲ್ಲಿ 110/2ರಿಂದ 118/6ಕ್ಕೆ ಕುಸಿದ ಪಂಜಾಬ್ ತಂಡ ಕೆಲಕಾಲ ಒತ್ತಡಕ್ಕೆ ಒಳಗಾಯಿತು.
ಸಿರಾಜ್ ಬಗ್ಗೆಯೂ ಚೋಪ್ರಾ ಉಲ್ಲೇಖ
“ಇದಾದ ಬಳಿಕ ಮೊಹಮ್ಮದ್ ಸಿರಾಜ್ ಅವರ ಎರಡು ಓವರ್ಗಳು ಉಳಿದಿದ್ದವು. ನೀವು ಅಶೋಕ್ ಶರ್ಮಾ ಮೇಲೆ ವಿಶ್ವಾಸ ತೋರಿದ್ದೀರಿ, ಅದು ಸರಿಯೇ. ಆದರೆ ಸಿರಾಜ್ ಇದ್ದರು. ಶುಭಮನ್ ಗಿಲ್ ಅವರ ನಾಯಕತ್ವದಲ್ಲಿ ಇನ್ನೂ ಬಹಳ ಸುಧಾರಣೆ ಅಗತ್ಯವಿದೆ. ನನಗೆ ಮಾತೇ ಬರುತ್ತಿಲ್ಲ. ಪ್ರಸಿಧ್ ಕೃಷ್ಣರನ್ನು ಇಷ್ಟು ತಡವಾಗಿ ಏಕೆ ಬಳಸಿದರು? ಸಿರಾಜ್ ಅವರಿಗೆ ಸಂಪೂರ್ಣ ಓವರ್ಗಳನ್ನು ಏಕೆ ಕೊಡಲಿಲ್ಲ?” ಎಂದು ಆಕಾಶ್ ಚೋಪ್ರಾ ಪ್ರಶ್ನೆ ಮಾಡಿದ್ದಾರೆ.