ಕೇವಲ ಸ್ಟೈಲ್ ಅಷ್ಟೇ - ರಿಯಾನ್ ಪರಾಗ್ ವಿರುದ್ಧ ಕ್ರಿಸ್ ಶ್ರೀಕಾಂತ್ ಕಿಡಿ!
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 2026ರ ಆವೃತ್ತಿಯಲ್ಲಿ ಅಂಕಪಟ್ಟಿಯ ಅಗ್ರಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಮೊದಲ ಸೋಲಿನ ಆಘಾತ ಎದುರಿಸಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ಸ್ ಪಡೆ ಎಡವಿದ ಬೆನ್ನಲ್ಲೇ ತಂಡದ ನಾಯಕ ರಿಯಾನ್ ಪರಾಗ್ ವಿರುದ್ಧ ಟೀಕೆಗಳು ಹರಿದುಬಂದಿವೆ. ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ರಿಯಾನ್ ಕ್ಯಾಪ್ಟನ್ಸಿ ಬಗ್ಗೆ ಕಟುವಾಗಿ ಟೀಕೆ ಮಾಡಿದ್ದಾರೆ.
ರಿಯಾನ್ ಪರಾಗ್ ಆಟ ಟೀಕಿಸಿದ ಕ್ರಿಸ್ ಶ್ರೀಕಾಂತ್. -
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ಸ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿರುವ ಯುವ ಆಲ್ರೌಂಡರ್ ರಿಯಾನ್ ಪರಾಗ್ ವಿರುದ್ಧ ಕ್ರಿಕೆಟ್ ದಿಗ್ಗಜ ಕ್ರಿಷ್ಣಾಮಚಾರಿ ಶ್ರೀಕಾಂತ್ ಕಿಡಿ ಕಾರಿದ್ದಾರೆ.
ಐಪಿಎಲ್ 2026 ಟೂರ್ನಿಯಲ್ಲಿ ಆರ್ಆರ್ ತಂಡ ಸತತ 4 ಗೆಲುವಿನ ಬಳಿಕ ಮೊದಲ ಸೋಲಿನ ಕಹಿಯುಂಡಿದೆ. ಈ ಸಂದರ್ಭದಲ್ಲಿ ರಿಯಾನ್ ಪರಾಗ್ ನಾಯಕತ್ವದ ಬಗ್ಗೆ ಭಾರತದ ಮಾಜಿ ನಾಯಕ ಕ್ರಿಸ್ ಶ್ರೀಕಾಂತ್ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 57 ರನ್ಗಳ ಸೋಲು ಕಂಡ ಬಳಿಕ ಈ ಟೀಕೆಗಳು ಹೊರಬಿದ್ದಿವೆ.
IPL 2026: ಪ್ರಫುಲ್- ಸಾಕಿಬ್ ಪವರ್ಫುಲ್ ಬೌಲಿಂಗ್ಗೆ ಶರಣಾದ ರಾಜಸ್ಥಾನ್, ಹೈದರಾಬಾದ್ಗೆ ಎರಡನೇ ಜಯ!
ಸೀಸನ್ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಮೇಲೆ ಈ ಸೋಲು ಪರಿಣಾಮ ಬೀರಿದ್ದು, ಪರಾಗ್ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಸ್ಥಿರತೆಯ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಶ್ರೀಕಾಂತ್ ತಮ್ಮ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಮಾತನಾಡಿ, "ರಿಯಾನ್ ಪರಾಗ್ ಕೇವಲ ಸ್ಟೈಲ್ ತೋರಲು ಮಾತ್ರ ಆಡುತ್ತಿದ್ದಾರೆ, ಅವರ ಪ್ರದರ್ಶನದಲ್ಲಿ ಯಾವುದೇ ಸ್ಥಿರತೆ ಕಾಣಿಸುತ್ತಿಲ್ಲ," ಎಂದು ಟೀಕಿಸಿದ್ದಾರೆ.
ಸನ್ರೈಸರ್ಸ್ ವಿರುದ್ಧ ಪಂದ್ಯದಲ್ಲಿ ಆರ್ಆರ್ ತಂಡದ ಬೌಲರ್ಗಳ ನಿರ್ವಹಣೆಯಲ್ಲಿಯೂ ಪರಾಗ್ ಅವರ ನಿರ್ಧಾರಗಳನ್ನು ಶ್ರೀಕಾಂತ್ ಪ್ರಶ್ನಿಸಿದ್ದು, ಅನುಭವಿಗಳಾದ ರವೀಂದ್ರ ಜಡೇಜಾ ಅವರಿಗೆ ಬಾಕಿ ಇದ್ದ ಓವರ್ ನೀಡದೇ ಇರುವುದು ಅಚ್ಚರಿಯ ಸಂಗತಿ ಎಂದರು.
IPL 2026: ಬರ್ಸಪರ ಕ್ರಿಕೆಟ್ ಕ್ರೀಡಾಂಗಣದ ಸಿಬ್ಬಂದಿಗೆ 25 ಲಕ್ಷ ರು ನಗದು ಬಹುಮಾನ ನೀಡಿದ ಎಸಿಎ!
ಪಂದ್ಯದಲ್ಲಿ ಹೈದರಾಬಾದ್ ತಂಡವು ಆರಂಭಿಕ ಆಘಾತದ ಹೊರತಾಗಿಯೂ ಕ್ಯಾಪ್ಟನ್ ಇಶಾನ್ ಕಿಶನ್ ಅವರ 91 ರನ್ಗಳ ಅದ್ಭುತ ಇನ್ನಿಂಗ್ಸ್ ನೆರವಿನಿಂದ 216 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ನಂತರ ಪದಾರ್ಪಣೆಯ ಪಂದ್ಯವನ್ನಾಡುತ್ತಿದ್ದ ವೇಗಿಗಳಾದ ಪ್ರಫುಲ್ ಹಿಂಗೆ ಮತ್ತು ಸಕಿಬ್ ಹುಸೇನ್ ಪ್ರಚಂಡ ಬೌಲಿಂಗ್ ದಾಳಿ ಸಂಘಟಿಸಿ ರಾಜಸ್ಥಾನ್ ತಂಡದ ಬ್ಯಾಟಿಂಗ್ ಅಬ್ಬರವನ್ನು ಅಡಗಿಸಿಬಿಟ್ಟರು.
ಇನಿಂಗ್ಸ್ನ ಮೊದಲ ಓವರ್ನಲ್ಲೇ 3 ವಿಕೆಟ್ ಕಳೆದುಕೊಂಡ ರಾಜಸ್ಥಾನ್ ತಂಡಕ್ಕೆ ಕಮ್ಬ್ಯಾಕ್ ಮಾಡುವುದು ಕಷ್ಟವಾಯಿತು. ಇನಿಂಗ್ಸ್ ಮಧ್ಯದಲ್ಲಿ ಡೊನೊವ್ಯಾನ್ ಫೆರೆರಾ (69) ಮತ್ತು ರವೀಂದ್ರ ಜಡೇಜಾ (45) ಹೋರಾಟ ನಡೆಸಿದರಾದರೂ ಆರ್ಆರ್ ಪಡೆ 19 ಓವರ್ಗಳಲ್ಲಿ 159ಕ್ಕೆ ಆಲ್ಔಟ್ ಆಯಿತು.
IPL 2026: ರಾಜಸ್ಥಾನ್ ವಿರುದ್ಧ ಸೋತರೂ ಚೆನ್ನೈ ಸೂಪರ್ ಕಿಂಗ್ಸ್ ದಾಖಲೆ ಸರಿಗಟ್ಟಿದ ಆರ್ಸಿಬಿ
ಈ ಬಗ್ಗೆ ಮಾತನಾಡಿದ ಶ್ರೀಕಾಂತ್, ಹೈದರಾಬಾದ್ ತಂಡದ ಯುವ ಬೌಲರ್ಗಳ ಸಾಧನೆಯನ್ನು ಮತ್ತು ಇಶಾನ್ ಕಿಶನ್ ಅವರ ನಾಯಕತ್ವವನ್ನು ಗುಣಗಾನ ಮಾಡಿದ್ದಾರೆ, "ಯುವ ಬೌಲರ್ಗಳು ಪಂದ್ಯವನ್ನು ಸಂಪೂರ್ಣವಾಗಿ ತಿರುಗಿಸಿದರು," ಎಂದಿದ್ದಾರೆ.
ಇನ್ನು ರಾಜಸ್ಥಾನ್ ರಾಯಲ್ಸ್ ತಂಡ ರಿಯಾಣ್ ಪರಾಗ್ ಅವರನ್ನು ಕ್ಯಾಪ್ಟನ್ಸಿ ರೇಸ್ನಲ್ಲಿ ಮುಂದಿಟ್ಟಿರುವುದು ಏಕೆ? ಎಂಬ ಪ್ರಶ್ನೆ ನೆಟ್ ಲೋಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಯಶಸ್ವಿ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟು ರಿಯಾನ್ ಪರಾಗ್ಗೆ ಪಟ್ಟಾಭಿಷೇಕ ಮಾಡಲಾಯಿತು. ತಂಡದಲ್ಲಿ ಯಶಸ್ವಿ ಜೈಸ್ವಾಲ್ ಅಂತಹ ಯುವ ತಾರೆ ಹಾಗೂ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಇದ್ದರೂ, ಪರಾಗ್ಗೆ ಕ್ಯಾಪ್ಟನ್ಸಿ ಕೊಟ್ಟಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಒಂದು ಆವೃತ್ತಿಯಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ್ದನ್ನು ಬಿಟ್ಟರೆ, ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ರಿಯಾನ್ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ.