Roopa Gururaj Column: ಮುಷ್ಟಿಯಲ್ಲಿ ಜೀವನದ ಪಾಠವನ್ನು ತಿಳಿಸಿದ ಗುರು
ಎಷ್ಟೇ ಅಡ್ಡಿಗಳು ಬರಲಿ ಧರ್ಮಮಾರ್ಗದಲ್ಲೇ ನಡೆಯಬೇಕು ಎಂಬ ಸಂಕಲ್ಪವನ್ನು ಶಿಷ್ಯರಲ್ಲಿ ಗಟ್ಟಿ ಮಾಡುತ್ತಾ ಸಾವಿರಾರು ಶಿಷ್ಯರನ್ನು ತಿದ್ದಿ ತೀಡಬೇಕು. ಒಳ್ಳೆಯ ಚಿಂತನೆ ಗಳನ್ನು ಅವರ ಮನದಲ್ಲಿ ಬಿತ್ತಿ, ರಾಷ್ಟ್ರಕ್ಕೆ ಸತ್-ಪ್ರಜೆಗಳನ್ನು ರೂಪಿಸಿ ಕೊಡುಗೆಯಾಗಿ ನೀಡುವ ಅರ್ಪಣಾ ಮನೋಭಾವ ಗುರುಕುಲದ ಗುರುಗಳಿಗೆ ಇದ್ದಾಗ ನಮ್ಮ ದೇಶವು ಧಾರ್ಮಿಕವಾಗಿ, ಸಾಮಾಜಿಕ ವಾಗಿ ಸಂಪೂರ್ಣ ಅಭಿವೃದ್ಧಿಯಾಗುತ್ತದೆ..
-
ಒಂದೊಳ್ಳೆ ಮಾತು
ಅದೊಂದು ಗುರುಗಳ ಆಶ್ರಮ, ಅಲ್ಲಿ ಅನೇಕ ಶಿಷ್ಯರಿದ್ದರು. ವಿದ್ಯಾರ್ಜನೆ ಮುಗಿಸಿ ಬದುಕು ಕಟ್ಟಿಕೊಳ್ಳಲು ಹೋಗುತ್ತಿದ್ದರು, ಮತ್ತೆ ಹೊಸದಾಗಿ ಶಿಷ್ಯರು ಬರುತ್ತಿದ್ದರು. ಹೀಗೆ ಒಬ್ಬ ಶಿಷ್ಯ ತನ್ನ ವಿದ್ಯಾಭ್ಯಾಸ ಮುಗಿಸಿ ಗುರುಗಳ ಅನುಮತಿ ಪಡೆದು ಮನೆಗೆ ಹೊರಟನು. ಹೊರಡುವ ಮುನ್ನ ಗುರುಗಳಿಗೆ ನಮಸ್ಕರಿಸಿ, “ಗುರುಗಳೇ ಹೊರಗಿನ ಜಗತ್ತಿನೊಂದಿಗೆ ನಾನು ಹೇಗೆ ನಡೆದುಕೊಳ್ಳಬೇಕು ತಿಳಿಸಿ" ಎಂದು ಕೇಳಿದನು.
ಆಗ ಒಳಗೆ ಹೋದ ಗುರುಗಳು ಮುಷ್ಟಿಯಲ್ಲಿ ಏನೋ ತಂದು ಅವನಿಗೆ ಕೊಟ್ಟು, “ಇದರಂತೆ ನಡೆದು ಆದರ್ಶ ಜೀವನ ನಡೆಸು, ಎಲ್ಲವೂ ಒಳ್ಳೆಯದಾಗುತ್ತದೆ" ಎಂದರು. ಗುರುಗಳು ಏನು ಕೊಟ್ಟಿದ್ದಾರೆ ಎಂದು ನೋಡಲು ಶಿಷ್ಯ ಮುಷ್ಟಿಯನ್ನು ಬಿಚ್ಚಿದ. ಅದರಲ್ಲಿ ಹತ್ತಿ, ಸೂಜಿ-ದಾರ, ಮೊಂಬತ್ತಿ ಇದ್ದವು. ನೋಡಿ ಪೆಚ್ಚಾದ ಶಿಷ್ಯ, “ಗುರುಗಳೇ ಇದರಿಂದ ನಾನು ಆದರ್ಶ ದಿಂದಿರುವುದು ಹೇಗೆ?" ಎಂದು ಕೇಳಿದ.
ಇದನ್ನೂ ಓದಿ: Roopa Gururaj Column: ಉಪಕಾರಸ್ಮರಣೆ ಇಲ್ಲದ ಮನುಷ್ಯ
ಗುರುಗಳು ಅವನ ಕೈಯಲ್ಲಿದ್ದ ಒಂದೊಂದನ್ನೇ ತೆಗೆದು ತೋರಿಸಿ ಹೇಳುತ್ತಾ ಹೋದರು: “ನೋಡು, ಹತ್ತಿಯಿಂದ ಬಟ್ಟೆಯನ್ನು ಮಾಡುತ್ತಾರೆ. ಬಟ್ಟೆ ಎಲ್ಲರ ಮಾನ ಕಾಪಾಡುತ್ತದೆ. ಬಟ್ಟೆ ಸಮ್ಮಾನಕ್ಕೂ ಪಾತ್ರವಾಗಿ ರಕ್ಷಣೆಯನ್ನು ಕೊಡುತ್ತದೆ. ನೀನು ಇದರಂತೆ ಇರಬೇಕು. ಸಾಧ್ಯವಾದಷ್ಟು ಅಸಹಾಯಕರ, ದೀನದಲಿತರ ಮಾನ-ಸಮ್ಮಾನವನ್ನು ಕಾಪಾಡಬೇಕು; ಇನ್ನು ಮೋಂಬತ್ತಿಯು ಉರಿದು, ಬೇರೆಯವರಿಗೆ ಬೆಳಕು ಕೊಟ್ಟು ತಾನು ಕರಗಿ ಹೋಗು ತ್ತದೆ.
ನಿನ್ನ ಕಷ್ಟಗಳು ಎಷ್ಟೇ ಇರಲಿ, ಅವುಗಳನ್ನು ಬದಿಗಿಟ್ಟು ಕಷ್ಟದಲ್ಲಿರುವವರ ಬಗ್ಗೆ ಮರುಗಿ ನಿನ್ನ ಕೈಲಾದ ಸಹಾಯಮಾಡು, ಆಗ ನಿನಗೆ ಸಂತೋಷ ಸಿಗುತ್ತದೆ. ಈಗ ಸೂಜಿ-ದಾರದ ವಿಷಯ. ಎರಡು ಕಣ್ಣಿರುವ ಕತ್ತರಿಯು ಬಟ್ಟೆಗಳನ್ನು ಕತ್ತರಿಸಿದರೆ, ಹಾಗೆ ಕತ್ತರಿಸಿದ ಬಟ್ಟೆ ಗಳನ್ನು ಒಂದು ಕಣ್ಣಿರುವ ಸೂಜಿಯು ಸಣ್ಣ ದಾರದಿಂದ ಹೊಲಿದು ಜೋಡಿಸುತ್ತದೆ.
ಕತ್ತರಿಗೆ ಕತ್ತರಿಸುವುದಷ್ಟೇ ಗೊತ್ತು, ಅದಕ್ಕೆ ಮರುಜೋಡಿಸಲು ಬರುವುದಿಲ್ಲ. ಕೆಲವರು, ಪ್ರೀತಿಸಿ ಒಂದಾಗಿರುವ ಎರಡು ಮನಸ್ಸುಗಳನ್ನು ಕತ್ತರಿಸಿ ಬೇರೆ ಬೇರೆ ಮಾಡುತ್ತಾರೆ. ಮೊದಲು ಒಂದಾಗಿದ್ದ ಜೀವಗಳು ದೂರವಾಗಿ ನೋವು ದುಃಖದಿಂದ ಬಳಲುತ್ತವೆ.
ಹಾಗೆ ಬೇರೆ ಬೇರೆಯಾದ ಎರಡು ಮನಸ್ಸುಗಳನ್ನು ನೀನು, ಒಂದೇ ಕಣ್ಣಿರುವ ಸೂಜಿಯು ದಾರದ ಸಹಾಯದಿಂದ ಹೊಲಿದು ಸೇರಿಸಿದಂತೆ ಜೋಡಿಸಿ, ಅವರ ಮೊಗದಲ್ಲಿ ನಗು ಅರಳುವಂತೆ ಮಾಡಿ ಒಂದುಗೂಡಿಸಬೇಕು. ಪ್ರೀತಿಸುವ ಮನಸ್ಸುಗಳನ್ನು ಕತ್ತರಿಯಂತೆ ಕತ್ತರಿಸದೆ, ಸೂಜಿ-ದಾರದಿಂದ ಸೇರಿಸಿ ಜೋಡಿಸಬೇಕು" ಎಂದರು ಗುರುಗಳು.
ಶಿಷ್ಯನಿಗೆ ಗುರುಗಳ ಉಪದೇಶ ಅರ್ಥವಾಗಿ, ಅದರಿಂದ ಪ್ರಭಾವಿತನಾಗಿ, “ಗುರುಗಳೇ, ನಾನು ಯಾರ ಮನಸ್ಸಿಗೂ ನೋವಾಗದಂತೆ ಇರುತ್ತೇನೆ. ನೋವುಂಡು ಬೇರ್ಪಟ್ಟ ಮನಸ್ಸುಗಳನ್ನು ಸೂಜಿ-ದಾರದಿಂದ ಹೊಲಿದು ಜೋಡಿಸಿದಂತೆ ನಾನು ಒಂದುಗೂಡಿಸುತ್ತೇನೆ" ಎಂದನು.
ಇಂಥ ಸೂಕ್ಷ್ಮಗಳನ್ನು ನಾವು ಮನೆಯಲ್ಲೂ ನಮ್ಮ ಮಕ್ಕಳಿಗೆ ಹೇಳಿಕೊಡಬೇಕು. ಮಕ್ಕಳು ಬರೀ ವಿದ್ಯಾಭ್ಯಾಸ ಮಾಡಿದರೆ ಸಾಲದು, ಜತೆಗೆ ಬದುಕಿನ ಸೂಕ್ಷ್ಮಗಳು ಕೂಡ ಅವರಿಗೆ ಅರಿವಿರಬೇಕು. ಅವರನ್ನು ದೇಶದ ಸತ್-ಪ್ರಜೆಗಳನ್ನಾಗಿಸುವುದು ತಂದೆ-ತಾಯಿಯಾಗಿ ನಮ್ಮ ಜವಾಬ್ದಾರಿ ಕೂಡ. ವಿದ್ಯಾಭ್ಯಾಸ ಹೇಳಿಕೊಡುವ ಪ್ರತಿ ಗುರುಕುಲದಲ್ಲೂ ಜತೆಯಲ್ಲಿ ಬದುಕುವ ಕಲೆಯನ್ನೂ, ಸಹಾಯ ಮಾಡುವ ಗುಣವನ್ನೂ, ನೊಂದು ಬೇರ್ಪಟ್ಟ ಜೀವ ಗಳಿಗೆ ಸಾಂತ್ವನ ಮಾಡಿ ಅವರು ಒಂದಾಗಿ ಬದುಕು ನಡೆಸುವಂತೆ ಮಾಡುವುದನ್ನೂ ಕಲಿಸುವಂತಾಗಬೇಕು.
ಎಷ್ಟೇ ಅಡ್ಡಿಗಳು ಬರಲಿ ಧರ್ಮಮಾರ್ಗದಲ್ಲೇ ನಡೆಯಬೇಕು ಎಂಬ ಸಂಕಲ್ಪವನ್ನು ಶಿಷ್ಯರಲ್ಲಿ ಗಟ್ಟಿ ಮಾಡುತ್ತಾ ಸಾವಿರಾರು ಶಿಷ್ಯರನ್ನು ತಿದ್ದಿ ತೀಡಬೇಕು. ಒಳ್ಳೆಯ ಚಿಂತನೆ ಗಳನ್ನು ಅವರ ಮನದಲ್ಲಿ ಬಿತ್ತಿ, ರಾಷ್ಟ್ರಕ್ಕೆ ಸತ್-ಪ್ರಜೆಗಳನ್ನು ರೂಪಿಸಿ ಕೊಡುಗೆಯಾಗಿ ನೀಡುವ ಅರ್ಪಣಾ ಮನೋಭಾವ ಗುರುಕುಲದ ಗುರುಗಳಿಗೆ ಇದ್ದಾಗ ನಮ್ಮ ದೇಶವು ಧಾರ್ಮಿಕವಾಗಿ, ಸಾಮಾಜಿಕವಾಗಿ ಸಂಪೂರ್ಣ ಅಭಿವೃದ್ಧಿಯಾಗುತ್ತದೆ..