ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mango Price Drop: ಮಾವು ಬೆಲೆ ಕುಸಿತ; ರೈತರಿಗೆ ನೆರವಾಗುವಂತೆ ಕೇಂದ್ರಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಪತ್ರ

H.D. Deve Gowda: ರೈತರಿಂದ ನೇರ ಖರೀದಿ ಹಾಗೂ ರೈತ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒ) ಮೂಲಕ ನ್ಯಾಯಯುತ ಬೆಲೆ ನೀಡಿ ಖರೀದಿಸುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ಇದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ತಕ್ಷಣವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಮಾಜಿ ಪ್ರಧಾನಿ ಕೋರಿದ್ದಾರೆ.

ಮಾವು ಬೆಲೆಗಾರರಿಗೆ ನೆರವಾಗುವಂತೆ ಕೇಂದ್ರಕ್ಕೆ ಎಚ್‌.ಡಿ.ದೇವೇಗೌಡ ಪತ್ರ

Profile Prabhakara R Jun 22, 2025 4:18 PM

ಬೆಂಗಳೂರು: ಮಾವು ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ಕರ್ನಾಟಕದ ರೈತರ ನೆರವಿಗೆ ಧಾವಿಸಲು ಕೋರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾನ್‌ ಅವರಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (H.D. Deve Gowda) ಅವರು ಪತ್ರ ಬರೆದಿದ್ದಾರೆ. ರೈತರ ಸಂಕಷ್ಟ ನಿವಾರಿಸಲು ಬೆಲೆ ಕೊರತೆ ಪಾವತಿ ಯೋಜನೆ (PDPS) ಮತ್ತು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ (ಎಂಐಎಸ್‌) NAFED ಮತ್ತು NCCF ಮೂಲಕ ಮಾವಿನ ಹಣ್ಣು ಖರೀದಿಗಾಗಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕರಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮನವಿ ಮಾಡಿದ್ದಾರೆ.

ಕರ್ನಾಟಕವು ಭಾರತದಲ್ಲಿ ತೋಟಗಾರಿಕಾ ಬೆಳೆಗಳ ಪ್ರಮುಖ ಉತ್ಪಾದಕ ರಾಜ್ಯವಾಗಿದೆ, ಇದು ಹಣ್ಣು, ತರಕಾರಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹೆಸರುವಾಸಿಯಾಗಿದೆ. ಜಾಗತಿಕವಾಗಿ ಅತಿದೊಡ್ಡ ಹಣ್ಣು ಉತ್ಪಾದಕ ರಾಷ್ಟ್ರವಾದ ಭಾರತದ ಭಾಗವಾಗಿ, ಕರ್ನಾಟಕವು ಗಣನೀಯ ಕೊಡುಗೆ ನೀಡುತ್ತಿದೆ. ಇದಲ್ಲದೆ, ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾದ ಮಾವು, ವಿಶೇಷವಾಗಿ ಬೆಂಗಳೂರು ಗ್ರಾಮೀಣ, ನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ರಬಿ ಋತುವಿನಲ್ಲಿ ಅಂದಾಜು 8-10 ಲಕ್ಷ ಟನ್ ಮಾವು ಉತ್ಪಾದನೆಯಾಗುತ್ತದೆ. ಆದಾಗ್ಯೂ, ಹವಾಮಾನ ವೈಪರೀತ್ಯ ಮತ್ತು ರೋಗಗಳಿಂದಾಗಿ, ಈ ವರ್ಷ ಮಾವಿನ ಇಳುವರಿ ಶೇ. 30 ಕ್ಕಿಂತ ಕಡಿಮೆಯಾಗಿದೆ.

ಈ ವರ್ಷ ಮೇ ನಿಂದ ಜೂನ್ ವರೆಗೆ, ಮಾರುಕಟ್ಟೆಗೆ ಮಾವು ಭಾರೀ ಪ್ರಮಾಣದಲ್ಲಿ ಬಂದಿದ್ದರಿಂದ ಬೆಲೆ ಏರಿಳಿತಗಳಿಗೆ ಕಾರಣವಾಗಿದೆ. ಬೆಲೆಗಳು ಟನ್‌ಗೆ 12,000 ರಿಂದ ₹3,000 ಕ್ಕೆ ಇಳಿದಿವೆ. ಆದರೆ ಕೃಷಿ ವೆಚ್ಚ ಟನ್‌ಗೆ 25,466 ರೂ. ಆಗಿದೆ. ಇದರಿಂದ ರೈತರು ಆರ್ಥಿಕವಾಗಿ ನಷ್ಟಕ್ಕೊಳಗಾಗಿದ್ದಾರೆ. ಅನೇಕ ಸಣ್ಣ ಮತ್ತು ಅತಿ ಸಣ್ಣ ಮಾವು ಬೆಳೆಗಾರರು ಮೂಲ ವೆಚ್ಚಗಳನ್ನು ಭರಿಸಲು ಸಾಧ್ಯವಾಗುತ್ತಿಲ್ಲ, ಇದು ಪ್ರತಿಭಟನೆಗಳಿಗೆ ಕಾರಣವಾಗಿದೆ.



ಇದಲ್ಲದೆ, ಕರ್ನಾಟಕದ ನೆರೆಯ ಆಂಧ್ರದ ಚಿತ್ತೂರು ಜಿಲ್ಲೆಗೆ ಪ್ರವೇಶಿಸುವ ತೋತಾಪುರಿ ಮಾವಿನ ಹಣ್ಣುಗಳ ಮೇಲೆ ನಿಷೇಧ ವಿಧಿಸುರುವುದು ಪೂರೈಕೆ ಸರಪಳಿಯನ್ನು ಅಡ್ಡಿಪಡಿಸಿದೆ. ಇದು ಕರ್ನಾಟಕದ ಮಾವು ಬೆಳೆಗಾರರಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದ್ದು, ವಿಶೇಷವಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅನೇಕ ಜಿಲ್ಲೆಗಳಲ್ಲಿ ಪ್ರತಿಭಟನೆಗಳಿಗೆ ಕಾರಣವಾಗಿದೆ.

ಕರ್ನಾಟಕದ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಆಂಧ್ರಪ್ರದೇಶವನ್ನು ಈ ನಿಷೇಧವನ್ನು ತಕ್ಷಣವೇ ರದ್ದುಗೊಳಿಸುವಂತೆ ಕೇಳಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ರೈತರಿಗೆ ಸಹಾಯ ಮಾಡಲು ಮತ್ತು ಗ್ರಾಮೀಣ ಸಂಕಷ್ಟವನ್ನು ನಿವಾರಿಸಲು NAFED ಮತ್ತು NCCF ನಂತಹ ಕೇಂದ್ರ ಸಂಸ್ಥೆಗಳ ಮೂಲಕ ಖರೀದಿಯನ್ನು ಪ್ರಾರಂಭಿಸುವಂತೆ ರಾಜ್ಯ ಸರ್ಕಾರವು ಕೇಂದ್ರವನ್ನು ಕೋರಿದೆ.

ಬೆಲೆ ಕೊರತೆ ಪಾವತಿ ಯೋಜನೆ (PDPS) ಮತ್ತು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ (ಎಂಐಎಸ್‌) ಮಾವಿನ ಹಣ್ಣುಗಳನ್ನು ಸಂಗ್ರಹಿಸಲು ಕೇಂದ್ರ ಸರ್ಕಾರವು ನಾಫೆಡ್‌ಗೆ ಸೂಚಿಸಬೇಕೆಂದು ನಾನು ವಿನಂತಿಸುತ್ತೇನೆ. ರೈತರಿಂದ ನೇರ ಖರೀದಿ ಹಾಗೂ ರೈತ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒ) ಮೂಲಕ ನ್ಯಾಯಯುತ ಬೆಲೆ ನೀಡಿ ಖರೀದಿಸುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ಇದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ತಕ್ಷಣವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೋರಿದ್ದಾರೆ.