Tulu Language: ಗ್ರಾಮ ಪಂಚಾಯತ್ ಸಭೆಗಳಲ್ಲಿ ತುಳು ಭಾಷೆ ಬಳಕೆ ನಿಷೇಧ, ಸಿಡಿದೆದ್ದ ತುಳುನಾಡು
Tulu Language: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ತುಳು ಭಾಷೆ ಬಳಕೆಗೆ ನಿರ್ಬಂಧಕ್ಕೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಹೊರಡಿಸಿರುವ ದ.ಕ ಜಿಲ್ಲಾ ಪಂಚಾಯತ್ ಸುತ್ತೋಲೆ ಭಾರೀ ವಿವಾದವನ್ನು ಸೃಷ್ಟಿಸಿದೆ. ತುಳುನಾಡಿನಲ್ಲಿಯೇ ತುಳು ಭಾಷೆಯನ್ನು ತುಳಿಯುವ ಈ ಕ್ರಮಕ್ಕೆ ಅವಕಾಶ ನೀಡಲಾರೆವು ಎಂದು ಹೋರಾಟಗಾರರು ಹಾಗೂ ಭಾಷಾಭಿಮಾನಿಗಳು ಹೇಳಿದ್ದಾರೆ.


ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಗ್ರಾಮ ಪಂಚಾಯತ್ (Grama Panchayat) ಸಭೆಗಳಲ್ಲಿ ತುಳು ಭಾಷೆ (Tulu Language) ಮಾತನಾಡಬಾರದು ಎಂದು ಜಿಲ್ಲಾಡಳಿತ ಹೊರಡಿಸಿರುವ ಒಂದು ಸುತ್ತೋಲೆ ಇದೀಗ ಜಿಲ್ಲೆಯಲ್ಲಿ ಆಕ್ರೋಶ ಮೂಡಿಸಿದೆ. ಈ ವಿವಾದಾತ್ಮಕ ಸುತ್ತೋಲೆ ತುಳುವರ ಸ್ವಾಭಿಮಾನವನ್ನು ಕೆಣಕಿದೆ. ತುಳುನಾಡಿನಲ್ಲಿಯೇ ತುಳು ಭಾಷೆಯನ್ನು ತುಳಿಯುವ ಈ ಕ್ರಮಕ್ಕೆ ಅವಕಾಶ ನೀಡಲಾರೆವು ಎಂದು ಹೋರಾಟಗಾರರು ಹಾಗೂ ಭಾಷಾಭಿಮಾನಿಗಳು ಹೇಳಿದ್ದಾರೆ.
ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ತುಳು ಭಾಷೆ ಬಳಕೆಗೆ ನಿರ್ಬಂಧಕ್ಕೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಹೊರಡಿಸಿರುವ ದ.ಕ ಜಿಲ್ಲಾ ಪಂಚಾಯತ್ ಸುತ್ತೋಲೆ ಭಾರೀ ವಿವಾದವನ್ನು ಸೃಷ್ಟಿಸಿದೆ. ಈ ಸುತ್ತೋಲೆ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದು, ನಮ್ಮ ನೆಲದ ಭಾಷೆಯನ್ನು ಮಾತನಾಡದಂತೆ ತಡೆ ಹಿಡಿಯುವ ದೊಣ್ಣೆ ನಾಯಕ ಯಾರು ಎಂದು ತುಳು ಹೋರಾಟಗಾರರು ಸಿಡಿದೆದ್ದಿದ್ದಾರೆ. ಇದಕ್ಕೆ ಪ್ರತಿಯಾಗಿ ಇನ್ಮುಂದೆ ತುಳು ಭಾಷೆಯಲ್ಲೇ ಸಭೆಯಲ್ಲಿ ಮಾತನಾಡುವುದಾಗಿ ಹೇಳಿದ್ದಾರೆ.
ವಿವಾದಿತ ಸುತ್ತೋಲೆಯಲ್ಲೇನಿದೆ?
ಕಾರ್ಕಳದ ಯಶಸ್ವಿ ನಾಗರಿಕ ಸೇವಾ ಸಂಘದ ಮುರಳೀಧರ್ ಎಂಬಾತ ಜಿಲ್ಲಾಡಳಿತಕ್ಕೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ದ.ಕ ಜಿಲ್ಲಾ ಪಂಚಾಯತ್ ಆಡಳಿತ ಈ ಸುತ್ತೋಲೆಯನ್ನು ಹೊರಡಿಸಿದೆ. ಗ್ರಾ.ಪಂ ಸಾಮಾನ್ಯ ಸಭೆಗಳಲ್ಲಿ ಅಧಿಕಾರಿ ಮತ್ತು ಜನಪ್ರತಿನಿಧಿಗಳು ತುಳು ಭಾಷೆ ಬಳಕೆ ಮಾಡಬಾರದು, ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಲು ಪಂಚಾಯತ್ ಪಿಡಿಓಗಳು ನಿರ್ದೇಶನ ನೀಡಬೇಕು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಇದರನ್ವಯ ನಿಯಮಾನುಸಾರ ಪರಿಶೀಲನೆ ನಡೆಸಿ ಅಗತ್ಯ ಕ್ರಮಕ್ಕೆ ಜಿ.ಪಂ ಸಿಇಓ ಆದೇಶ ಹೊರಡಿಸಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆದೇಶವನ್ನು 2025 ಎಪ್ರಿಲ್ 22ರಲ್ಲಿ ಹೊರಡಿಸಲಾಗಿದ್ದು, ಸದ್ಯ ಸಾಮಾಜಿಕ ತಾಣಗಳಲ್ಲಿ ಈ ಪತ್ರ ವೈರಲ್ ಆಗಿದೆ.
ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಸರಿನಲ್ಲಿ ದ.ಕ ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳಿಗೆ ತುಳು ಭಾಷೆ ಬಳಸದಂತೆ ಹೊರಡಿಸಿರುವ ಸೂಚನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಬಿಜೆಪಿಗರು ಕೂಡ ಇದಕ್ಕೆ ವಿರೋಧ ಸೂಚಿಸಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿರುವ ಮಾಜಿ ಸಿಎಂ ಡಿವಿ ಸದಾನಂದ ಗೌಡ, ‘ತುಳು ಭಾಷೆ - ಕನ್ನಡ ನಾಡಿನ ಮಣ್ಣಿನ ಭಾಷೆ. ನಮ್ಮ ಕರ್ನಾಟಕದಲ್ಲಿ ತುಳು ಮಾತನಾಡಬಾರದು ಎನ್ನುವ ಸರ್ಕಾರದ ಆದೇಶ! ಹಾಗಾದರೆ, ಉರ್ದು ಭಾಷೆಯ ಬಳಕೆ ಸರಕಾರೀ ಕಡತದಲ್ಲಿ ಮಾಡಬಹುದೇ ? ಮಿಸ್ಟರ್ ಟ್ರೊಲ್ ಮಿನಿಸ್ಟರ್ ಎಲ್ಲಿದ್ದೀರಾ?’ ಎಂದು ಕಿಡಿಕಾರಿದ್ದಾರೆ.
ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪೋಸ್ಟ್ ಮಾಡಿ, ‘ವಿಧಾನಸಭೆಯಲ್ಲಿ ಸಭಾಧ್ಯಕ್ಷರು ಸೇರಿದಂತೆ ಶಾಸಕರೆಲ್ಲ ತುಳುವಿನಲ್ಲಿ ಸಂವಹನ ಮಾಡಬಹುದಾದರೆ ಗ್ರಾಮ ಪಂಚಾಯತಿಗಳಲ್ಲಿ ತುಳು ಮಾತನಾಡಬಾರದೆಂದರೆ ಏನರ್ಥ? ಈ ಸರ್ಕಾರಕ್ಕೆ ಏನಾಗಿದೆ ಎಂಬುದೇ ಅರ್ಥ ಆಗುತ್ತಿಲ್ಲ. ಗ್ರಾಮ ಪಂಚಾಯತಿಗಳಲ್ಲಿ ಸ್ಥಳೀಯ ಭಾಷೆಯಲ್ಲೇ ವ್ಯವಹರಿಸಬೇಕೇ ಹೊರತು ಇದೇ ಭಾಷೆ ಮಾತಾಡಬೇಕು ಎಂದು ಹೇರಿಕೆ ಮಾಡುವುದು ಸರಿಯಲ್ಲ. ಎಂಕ್ಲೆನ ಪೆರ್ಮೆದ ತುಳುವನಾಡ್, ತುಳು ಭಾಷೆ ಎಂಕ್ಲೆನ ಪೆರ್ಮೆ’ ಎಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಬಿಜೆಪಿ ಪೋಸ್ಟ್ ಮಾಡಿ, ತುಳುನಾಡಿನ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿದೆ. ತುಳು ಭಾಷೆಯ ಹಕ್ಕಿಗಾಗಿ ನಾವು ಹೋರಾಡುತ್ತಾ ಇದ್ದರೆ, ಕಾಂಗ್ರೆಸ್ ಸರ್ಕಾರ ಪಂಚಾಯತ್ ಸಭೆಯಲ್ಲಿ ತುಳು ಮಾತನಾಡೋದನ್ನು ತಡೆಯೋದು ತುಳು ಸಂಸ್ಕೃತಿಯ ಮೇಲೆ ಮಾಡಿರುವಂತಹ ಅಪಮಾನ. ಕೂಡಲೇ ಇಂತಹ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಿ’ ಎಂದು ಹೇಳಿದೆ.
ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಅತ್ಯಂತ ಪ್ರಾಚೀನ ಭಾಷೆಯೂ ಹೌದು. ಸಂವಿಧಾನದ ಎಂಟನೇ ಶೆಡ್ಯೂಲ್ನಲ್ಲಿ ಇದನ್ನು ಸೇರಿಸಬೇಕು ಎಂಬುದು ಹಲವು ಕಾಲದ ಬೇಡಿಕೆಯಾಗಿದೆ. ತುಳುನಾಡು ಪ್ರತ್ಯೇಕ ರಾಜ್ಯಕ್ಕಾಗಿಯೂ ಕೆಲವರು ಹೋರಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ತುಂಬಿ ’ತುಳು’ಕುವ ಮಂಗಳೂರಿಗರ ಭಾಷಾ ಪ್ರೇಮ !