Kamal Haasan: ʼಥಗ್ ಲೈಫ್ʼ, ʼವಿಶ್ವರೂಪಮ್ʼ...: ವಿವಾದದ ಕಿಡಿ ಹೊತ್ತಿಸಿದ ಕಮಲ್ ಹಾಸನ್ 5 ಚಿತ್ರಗಳಿವು
4 ಬಾರಿಯ ರಾಷ್ಟ್ರ ಪ್ರಶಸ್ತಿ ವಿಜೇತ ನಟ, ಕಾಲಿವುಡ್ ಸ್ಟಾರ್ ಕಮಲ್ ಹಾಸನ್ (Kamal Haasan) ದೇಶ ಕಂಡ ಪ್ರತಿಭಾವಂತ ನಟರಲ್ಲಿ ಒಬ್ಬರು. ತಮಿಳಿನ ಜತೆಗೆ ಕನ್ನಡ, ತೆಲುಗು, ಮಲಯಾಳಂ, ಹಿಂದಿ, ಬಂಗಾಳಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಆ ಮೂಲಕ ಬಹುಭಾಷಾ ನಟ ಎನಿಸಿಕೊಂಡಿದ್ದಾರೆ. ತಮ್ಮ ಚಿತ್ರಗಳ ಜತೆಗೆ ವಿವಾದದ ಮೂಲಕವೂ ಅವರು ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ತಮ್ಮ ಮುಂಬರುವ ʼಥಗ್ ಲೈಫ್ʼ ಚಿತ್ರದ ಆಡಿಯೊ ಲಾಂಚ್ ವೇಳೆ ತಮಿಳಿನಿಂದಲೇ ಕನ್ನಡ ಹುಟ್ಟಿಕೊಂಡಿದ್ದು ಎಂದು ನಾಲಗೆ ಹರಿಯಬಿಟ್ಟು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ʼಥಗ್ ಲೈಫ್ʼ ಜತೆಗೆ ವಿವಾದದ ಅಲೆ ಎಬ್ಬಿಸಿದ ಕಮಲ್ ಅವರ ಟಾಪ್ 5 ಚಿತ್ರಗಳು ಯಾವುವು ಎನ್ನುವ ವಿವರ ಇಲ್ಲಿದೆ.

ಕಮಲ್ ಹಾಸನ್.


'ಥಗ್ ಲೈಫ್'
ಕಾಲಿವುಡ್ನ ಜನಪ್ರಿಯ ನಿರ್ದೇಶಕ ಮಣಿರತ್ನಂ ಮತ್ತು ಕಮಲ್ ಹಾಸನ್ ಬರೋಬ್ಬರಿ 37 ವರ್ಷಗಳ ಬಳಿಕ ಒಂದಾಗುತ್ತಿರುವ ಚಿತ್ರ ʼಥಗ್ ಲೈಫ್ʼ. ಇದೇ ಕಾರಣಕ್ಕೆ ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಕುತೂಹಲ ಹುಟ್ಟುಹಾಕಿದೆ. ಸಿಲಂಬರಸನ್, ತ್ರಿಶಾ ಕೃಷ್ಣನ್, ಅಭಿರಾಮಿ, ಜೋಜು ಜಾರ್ಜ್, ನಾಸರ್, ಪಂಕಜ್ ತ್ರಿಪಾಠಿ, ಐಶ್ವರ್ಯಾ ಲಕ್ಷ್ಮೀ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಆಡಿಯೋ ಲಾಂಚ್ ಚೆನ್ನೈಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನಟ ಶಿವ ರಾಜ್ಕುಮಾರ್ ಭಾಗವಹಿಸಿದ್ದರು. ಅವರನ್ನು ಉದ್ದೇಶಿಸಿ ಮಾತನಾಡಿದ್ದ ಕಮಲ್ ಹಾಸನ್, ʼʼಇವರು (ಶಿವ ರಾಜ್ಕುಮಾರ್) ಆ ಊರಿನಲ್ಲಿರುವ ನನ್ನ ಕುಟುಂಬ ಸದಸ್ಯ. ಇದೇ ಕಾರಣಕ್ಕೆ ಅವರು ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದಾರೆ. ತಮಿಳಿನಿಂದ ಹುಟ್ಟಿದ್ದೇ ನಿಮ್ಮ ಭಾಷೆ (ಕನ್ನಡ)ʼʼ ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಈ ಹೇಳಿಕೆಯ ವಿರುದ್ದ ಕ್ಷಮೆ ಕೋರಬೇಕು ಎಂದು ಕನ್ನಡ ಪರ ಸಂಘಟನೆಗಳು ಪಟ್ಟು ಹಿಡಿದಿದ್ದು, ಅವರ ಚಿತ್ರವನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು ಎನ್ನುವ ಕೂಗೂ ಕೇಳಿ ಬಂದಿದೆ. ಜೂ. 5ರಂದು ಚಿತ್ರ ರಿಲೀಸ್ ಆಗಲಿದ್ದು, ವಿವಾದದಿಂದ ಹಿನ್ನಡೆಯಾಗುವ ಭೀತಿ ಎದುರಾಗಿದೆ.

'ಉತ್ತಮ ವಿಲನ್'
ಸ್ಯಾಂಡಲ್ವುಡ್ ನಟ ರಮೇಶ್ ಅರವಿಂದ್ ನಿರ್ದೇಶನದಲ್ಲಿ 2015ರಲ್ಲಿ ತೆರೆಕಂಡ ತಮಿಳು ಚಿತ್ರ 'ಉತ್ತಮ ವಿಲನ್' ಸಾಕಷ್ಟು ವಿವಾದ ಹುಟ್ಟು ಹಾಕಿತ್ತು. ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರದಲ್ಲಿ ಹಿಂದುಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ವಿಶ್ವ ಹಿಂದು ಪರಿಷತ್ ಕೋರ್ಟ್ ಮೆಟ್ಟಿಲೇರಿತ್ತು. ಈ ಸಿನಿಮಾದ ಹಾಡಿನಲ್ಲಿ ಪ್ರಹ್ಲಾದ ಮತ್ತು ಹಿರಣ್ಯಕಶ್ಯಪ ಪೌರಾಣಿಕ ಪಾತ್ರಗಳನ್ನು ಅವಹೇಳನ ಮಾಡಲಾಗಿದೆ ಎನ್ನುವ ದೂರು ಕೇಳಿ ಬಂದಿತ್ತು. ಕೊನೆಗೂ ಚಿತ್ರ ರಿಲೀಸ್ ಆಗಿ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಯಶಸ್ಸು ಗಳಿಸಿತ್ತು.

'ವಿಶ್ವರೂಪಮ್'
ಕಮಲ್ ಹಾಸನ್ ನಿರ್ದೇಸಿಸಿ, ನಾಯಕನಾಗಿ ನಟಿಸಿದ, 2013ರಲ್ಲಿ ರಿಲೀಸ್ ಆದ 'ವಿಶ್ವರೂಪಮ್' ಕೂಡ ಸಾಕಷ್ಟು ವಿವಾದ ಎಬ್ಬಿಸಿತ್ತು. ತಮ್ಮ ಸಮುದಾಯವನ್ನು ಕೀಳಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಮುಸ್ಲಿಮರು ಈ ಚಿತ್ರದ ವಿರಿದ್ದ ಬೀದಿಗಿಳಿದಿದ್ದರು. ತಮಿಳುನಾಡು ಸೇರಿದಂತರ ಹಲವು ರಾಜ್ಯಗಳಲ್ಲಿ ಭಾರಿ ಪ್ರತಿಭಟನೆ ನಡೆಯಿತು. ಕೊನೆಗೆ ಕಮಲ್ ಹಾಸನ್ ಕೆಲವೊಂದು ದೃಶ್ಯಗಳಿಗೆ ಕತ್ತರಿ ಹಾಕಿ ರಿಲೀಸ್ ಮಾಡಿದ್ದರು. ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗಿದ್ದ ಈ ಚಿತ್ರದ 2ನೇ ಭಾಗ 2018 ತೆರೆಕಂಡಿತ್ತು.

'ದಶಾವತಾರಮ್'
2008ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಮ್ಯಾಜಿಕ್ ಸೃಷ್ಟಿಸಿದ್ದ ಕೆ.ಎಸ್.ರವಿಕುಮಾರ್ ನಿರ್ದೇಶನದ 'ದಶಾವತಾರಮ್' ಚಿತ್ರದಲ್ಲಿ ಕಮಲ್ ಹಾಸನ್ 10 ಪಾತ್ರಗಳಲ್ಲಿ ಅಭಿನಯಿಸಿದ್ದರು. ಈ ಚಿತ್ರ ಶೈವ ಮತ್ತು ವೈಷ್ಣವ ಧರ್ಮಗಳ ನಡುವಿನ ಸಂಘರ್ಷವನ್ನು ತೆರೆ ಮೇಲೆ ತಂದ ಹಿನ್ನೆಲೆಯಲ್ಲಿ ವಿವಾದ ಎದುರಾಗಿತ್ತು. 16ನೇ ಶತಮಾನದಲ್ಲಿ ನಡೆದಿದೆ ಎನ್ನಲಾದ ಶೈವ ಮತ್ತು ವೈಷ್ಣವ ಸಂತರ ನಡುವಿನ ಸಂಘರ್ಷವನ್ನು ಚಿತ್ರಿಸಿದ್ದಕ್ಕಾಗಿ ವಿಶ್ವ ಹಿಂದು ಪರಿಷತ್ ಮತ್ತು ಹಿಂದು ಮುನ್ನಾನಿ ಸಂಘಟನೆಗಳು ಈ ಚಿತ್ರವನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದವು.

ʼವಸೂಲ್ ರಾಜ ಎಂಬಿಬಿಎಸ್ʼ
ಬಾಲಿವುಡ್ನ ʼಮುನ್ನಾ ಭಾಯಿ ಎಂಬಿಬಿಎಸ್ʼ ಚಿತ್ರದ ರಿಮೇಕ್ ʼವಸೂಲ್ ರಾಜ ಎಂಬಿಬಿಎಸ್ʼ 2004 ಬಿಡುಗಡೆಯಾಗಿತ್ತು. ಕಮಲ್ ಜತೆ ಪ್ರಭು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಶರಣ್ ನಿರ್ದೇಶನದ ಈ ಚಿತ್ರದ ಶೀರ್ಷಿಕೆ ವೈದ್ಯರಿಗೆ ಅವಮಾನ ಎಸಗುವಂತಿದೆ ಎನ್ನುವ ವಾದ ಕೇಳಿ ಬಂದಿತ್ತು. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.