Shivamogga News: ಶಿವಮೊಗ್ಗದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರ ದುರ್ಮರಣ
Shivamogga News: ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಯಡವಾಲ ಗ್ರಾಮದಲ್ಲಿ ಘಟನೆ ನಡೆದಿದೆ. ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದು ಯುವಕರಿಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಯುವಕ ಅಪಾಯದಿಂದ ಪಾರಾಗಿದ್ದಾನೆ. ಮೃತ ದೇಹಗಳನ್ನು ಹೊರತೆಗೆಯಲಾಗಿದೆ.


ಶಿವಮೊಗ್ಗ: ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದು ಯುವಕರಿಬ್ಬರು ಮೃತಪಟ್ಟ ದಾರುಣ ಘಟನೆ (Shivamogga News) ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಯಡವಾಲ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಮೃತ ಯುವಕರನ್ನು ಯಡವಾಲ ಗ್ರಾಮದ ನಿವಾಸಿ ಗೌತಮ್ (22) ಹಾಗೂ ಶಿವಮೊಗ್ಗದ ಕುಂಬಾರಗುಂಡಿ ಬಡಾವಣೆ ನಿವಾಸಿ ಚಿರಂಜೀವಿ (22) ಎಂದು ತಿಳಿದುಬಂದಿದೆ. ಘಟನೆಯಲ್ಲಿ ಹೊಂಡಕ್ಕೆ ಬಿದ್ದಿದ್ದ ಮತ್ತೊಬ್ಬ ಯುವಕ ಈಜಿ ದಡ ಸೇರಿದ್ದಾನೆ ಎಂದು ತಿಳಿದುಬಂದಿದೆ.
ಮೃತ ಗೌತಮ್ ಅವರ ತೋಟದ ಪಕ್ಕದ ಜಮೀನೊಂದರ ಬಳಿ ಘಟನೆ ನಡೆದಿದೆ. ರಾತ್ರಿ ಗೌತಮ್ ಸುಮಾರು 10 ಜನ ಸ್ನೇಹಿತರ ಜತೆಗೂಡಿ ತೋಟಕ್ಕೆ ಹೋಗಿದ್ದರು. ಈ ವೇಳೆ ಕೃಷಿ ಹೊಂಡದಿಂದ ನೀರು ತರಲು ಹೋದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದು, ಈತನ ರಕ್ಷಣೆಗೆ ಹೋದ ಮತ್ತೊಬ್ಬರು ನೀರು ಪಾಲಾಗಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತಂಡ ತೆರಳಿ, ಕೃಷಿ ಹೊಂಡದಿಂದ ಮೃತದೇಹಗಳನ್ನು ಹೊರತೆಗೆದಿದೆ. ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ಮೃತ ದೇಹಗಳನ್ನು ರವಾನಿಸಲಾಗಿದೆ. ಘಟನೆ ಕುರಿತಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳ್ಳದಲ್ಲಿ ಮುಳುಗಿ ಇಬ್ಬರ ಸಾವು
ಬಾಗಲಕೋಟೆ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿ ಇಬ್ಬರು ಮೃತ ಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಚಿಕನಾಳ ಗ್ರಾಮದಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ. ಮೃತರನ್ನು ಕೊಪ್ಪಳ ಜಿಲ್ಲೆ ಬಳೂಟಗಿ ಗ್ರಾಮದ ನಿವಾಸಿ ಮಂಜುನಾಥ ಬಾಲಪ್ಪ ಬಂಡಿ(13) ಚಿಕನಾಳ ಗ್ರಾಮದ ನಿವಾಸಿ ಷಣ್ಮುಖಪ್ಪ ನಿಲಪ್ಪ ತಿಪ್ಪಣ್ಣವರ (30) ಎಂದು ತಿಳಿದು ಬಂದಿದೆ. ಈ ಸಂಬಂಧ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Hassan Heart attack: ಅಬ್ಬಾ... ಎಂಥಾ ದುರ್ವಿಧಿ! ಊಟ ಮಾಡುತ್ತಿರುವಾಗಲೇ ಹಾರಿಹೋಯ್ತು ಪ್ರಾಣ
ಹಳ್ಳದಲ್ಲಿ ಕಾಲು ಜಾರಿ ಬಿದ್ದ ಬಾಲಕನ್ನು ರಕ್ಷಿಸಲು ಹೋಗಿ ಯುವಕ ಕೂಡ ಮೃತಪಟ್ಟಿದ್ದಾನೆ ಎನ್ನಲಾಗಿದೆ. ನೀರುಪಾಲಾದ ಇಬ್ಬರ ಮೃತ ದೇಹವನ್ನು ಹೂರಗೆ ತೆಗೆದು, ಗುಡೂರ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ.