ನೇಕಾರ ಸಮುದಾಯದಿಂದ ಪ್ರತ್ಯೇಕವಾಗಿ ಜಾತಿ ಗಣತಿಗೆ ಚಾಲನೆ: ರಾಜ್ಯಾಧ್ಯಕ್ಷ ಬಿ.ಎಸ್.ಸೋಮಶೇಖರ್ ಹೇಳಿಕೆ
ನೇಕಾರ ಸಮುದಾಯವು ತನ್ನ ಸಮುದಾಯದ ನಿಖರ ಜನಸಂಖ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ತನ್ನದೇ ಆದ “ಆಪ್” ಅನ್ನು ಸಿದ್ಧಪಡಿಸಿದೆ. ಈ ಆಪ್ ಮೂಲಕ ರಾಜ್ಯದಲ್ಲಿರುವ ನೇಕಾರರು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರುಗಳ ಮಾಹಿತಿಯನ್ನು ಒದಗಿಸಲು ಅನುಕೂಲ ಕಲ್ಪಿಸಲಾಗಿದೆ.


ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಜೂನ್ ಜುಲೈ ಆಗಸ್ಟ್ ೩ ತಿಂಗಳ ಅವಧಿಯಲ್ಲಿ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದಿಂದ ಸ್ವತಂತ್ರವಾಗಿ ಜಾತಿ ಗಣತಿ ಸಮೀಕ್ಷೆ ನಡೆಸಲಾಗುವುದು ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎಸ್.ಸೋಮಶೇಖರ್ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ "ಜಾತಿಗಣತಿ ವರದಿ "ಯನ್ನು ನೇಕಾರ ಸಮುದಾಯವು ಸ್ವಾಗತಿಸುತ್ತದೆ.
ಆದರೆ ಈ ಆಯೋಗವು ರಾಜ್ಯದಲ್ಲಿರುವ ನೇಕಾರ ಸಮುದಾಯಗಳ ಜನಸಂಖ್ಯೆಯನ್ನು ನಿಖರವಾಗಿ ದಾಖಲಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ೧೦ ವರ್ಷಗಳ ಹಿಂದೆ 150ಕೋಟಿ ವೆಚ್ಚದಲ್ಲಿ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಅಂಶಗಳ ಹಿನ್ನೆಲೆಯಲ್ಲಿ ನಡೆಸಿರುವ ಜಾತಿ ಗಣತಿ ಅವೈಜ್ಞಾನಿಕ ವಾಗಿದೆ.
ಆದ್ದರಿಂದ ನಾವೇ ನಮ್ಮ ಸಮುದಾಯಗಳ ಜಾತಿ ಗಣತಿಯನ್ನು ಮಾಡಿ ಸರ್ಕಾರಕ್ಕೆ ಸಲ್ಲಿಸುತ್ತೇವೆ. ಆಗ ಸರ್ಕಾರ ನಡೆಸಿರುವ ಮಾಹಿತಿಯೊಂದಿಗೆ ಇದನ್ನು ತಾಳೆ ಮಾಡಿ ನಿಖರವಾದ ಜನಸಂಖ್ಯೆ ದಾಖಲಿಸಿ ಅದರಂತೆ ಸೌಲಭ್ಯಗಳನ್ನು ನೀಡಲಿ ಎಂದರು.
ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿನ ಅಂಕಿ-ಅಂಶಗಳು ಸಮುದಾಯಕ್ಕೆ ದೊಡ್ಡ ಆಘಾತವನ್ನು ತಂದೊಡ್ಡಿದೆ. ರಾಜ್ಯದ ನೇಕಾರ ಸಮುದಾಯವು ವರದಿಯ ಬಗ್ಗೆ ತೀವ್ರ ಅಸಮಾ ಧಾನ ವ್ಯಕ್ತಪಡಿಸಿದ್ದು, ನೇಕಾರ ಸಮುದಾಯಗಳ ಮಠಾದೀಶರು, ರಾಜಕೀಯ ಮುಖಂಡರು, ಸಮಾಜದ ಗಣ್ಯರು ಈ ಸಂಬಂಧ ಸುಮಾರು ಐದಾರು ಸಭೆಗಳನ್ನು ನಡೆಸಿ ಮರು ಸಮೀಕ್ಷೆಗಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ಹೇಳಿದರು.
ನೇಕಾರ ಸಮುದಾಯವು ತನ್ನ ಸಮುದಾಯದ ನಿಖರ ಜನಸಂಖ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ತನ್ನದೇ ಆದ “ಆಪ್” ಅನ್ನು ಸಿದ್ಧಪಡಿಸಿದೆ. ಈ ಆಪ್ ಮೂಲಕ ರಾಜ್ಯದಲ್ಲಿರುವ ನೇಕಾರರು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರುಗಳ ಮಾಹಿತಿಯನ್ನು ಒದಗಿಸಲು ಅನುಕೂಲ ಕಲ್ಪಿಸಲಾಗಿದೆ. ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟವು ಜಿಲ್ಲಾವಾರು ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸಮುದಾಯದವರ ಜಾತಿಗಣತಿ ಸಮೀಕ್ಷೆಯನ್ನು ನಡೆಸಲಿದ್ದು, ಸ್ಥಳೀಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮೂಲಕ ನೇಕಾರರನ್ನು ಸಂಪರ್ಕಿಸಿ ಕುಟುಂಬ ಸದಸ್ಯರುಗಳ ಅಂಕಿ ಅಂಶಗಳನ್ನು ಸಂಗ್ರಹಿಸಿ ಆಪ್ನಲ್ಲಿ ಅವುಗಳನ್ನು ದಾಖಲಿಸಲು ನೆರವು ನೀಡಬೇಕು ಎಂದು ಇದೇ ವೇಳೆ ಮನವಿ ಮಾಡಿದರು.
ಈ ವೇಳೆ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯ ಪದಾಧಿಕಾರಿಗಳಾದ ಜಿ.ಎಸ್.ನಾಗರಾಜ್ ಸು.ಭಾ.ಭದ್ರನ್ನವರ, ಜಿಲ್ಲಾಧ್ಯಕ್ಷ ಬಿ.ಜೆ.ಗಣೇಶ್, ಗೌರವಾಧ್ಯಕ್ಷ ಹೆಚ್.ಕೆ. ಲಕ್ಷ್ಮೀಪತಿ, ಚಂತಾಮಣಿ ನಾಗರಾಜ್, ಮಂಜುನಾಥ್, ವೆಂಕಟೇಶ್,ಶಿವಕುಮಾರ್, ಉಮಾದೇವಿ, ಮತ್ತಿತರರು ಇದ್ದರು.