Prakash Shesharaghavachar Column: ಸ್ವಯಂ ಉದ್ಯೋಗಕ್ಕೆ ವರವಾದ ಮುದ್ರಾ ಯೋಜನೆ
ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ಗಳ ಕಿರುಕುಳದಿಂದಾಗಿ ಹಲವರು ಆತ್ಮಹತ್ಯೆ ಮಾಡಿ ಕೊಂಡಾಗ, ಇದಕ್ಕೆ ಕಡಿವಾಣ ಹಾಕಲೆಂದು ಸರಕಾರವು ಕಠಿಣ ಕಾನೂನನ್ನು ತರಬೇಕಾಯಿತು. ಕೆಲ ವರ್ಷಗಳ ಹಿಂದೆ, ಸ್ವಯಂ ಉದ್ಯೋಗ ಆರಂಭಿಸಲು ಬಂಡವಾಳಕ್ಕಾಗಿ ಬ್ಯಾಂಕ್ ಸಾಲವು ಸುಲಭವಾಗಿ ಸಿಗುತ್ತಿರ ಲಿಲ್ಲ.ಅದಕ್ಕೆ ಸೂಕ್ತ ಖಾತರಿ ನೀಡಬೇಕಿತ್ತು ಅಥವಾ ಆಸ್ತಿಪತ್ರವನ್ನು ಒತ್ತೆಯಿಟ್ಟು ಪಡೆಯಬೇಕಿತ್ತು.


ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
sprakashbjp@gmail.com
ಸರಕಾರಿ ನೌಕರಿ ಅಥವಾ ಬ್ಯಾಂಕ್ನಲ್ಲಿ, ಈಗಾದರೆ ಸಾಫ್ಟ್ ವೇರ್ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಿದರೆ ಮಾತ್ರ ಉದ್ಯೋಗಸ್ಥರು ಎಂಬ ಭಾವನೆ ಇಂದಿಗೂ ಅನೇಕರಲ್ಲಿದೆ. ಇತ್ತೀಚೆಗೆ, ಗುಜರಾತಿನ ಕಂದಾಯ ಇಲಾಖೆಯಲ್ಲಿ 14 ಸಾವಿರ ಹುದ್ದೆಗಳಿಗೆ 8 ಲಕ್ಷ ಜನ ಅರ್ಜಿಯನ್ನು ಸಲ್ಲಿಸಿದ್ದಾರೆ. ಇವರಲ್ಲಿ ಬಹುತೇಕರು ಇತರ ಕಡೆ ಉದ್ಯೋಗದಲ್ಲಿದ್ದರೂ, ಸರಕಾರಿ ನೌಕರಿಯ ಆಕರ್ಷಣೆಯ ಕಾರಣಕ್ಕೆ ತಮ್ಮ ಅದೃಷ್ಟ ಪರೀಕ್ಷಿಸಲು ಅರ್ಜಿ ಹಾಕಿರುತ್ತಾರೆ. ಸರಕಾರಿ ನೌಕರಿಗಳು ಇಂದಿಗೂ ತಮ್ಮ ಆಕರ್ಷಣೆಯನ್ನು ಕಾಪಿಟ್ಟುಕೊಂಡಿವೆ ಎಂಬುದಕ್ಕೆ ಇದು ಸಾಕ್ಷಿ.
ಬೃಹತ್ ಕೈಗಾರಿಕೆಗಳು ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತವೆ ಎಂಬುದು ನಮ್ಮ ಭ್ರಮೆ ಯಾಗಿದೆ. ಕೇವಲ 1.25 ಕೋಟಿ ಜನರು ಈ ಬೃಹತ್ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವುದು; ಆದರೆ ಆರು ಕೋಟಿ ಜನರು ಸಣ್ಣ ಪ್ರಮಾಣದ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಣ್ಣ ವ್ಯಾಪಾರಸ್ಥರು 20 ಕೋಟಿ ಜನರಿಗೆ ಉದ್ಯೋಗ ನೀಡಿದ್ದಾರೆ. ಉದ್ಯೋಗ ಸೃಷ್ಟಿಯ ವಿಷಯ ದಲ್ಲಿ ಬೃಹತ್ ಉದ್ದಿಮೆಗಳಿಗಿಂತ ಸಣ್ಣ ಉದ್ದಿಮೆಗಳ ಕೊಡುಗೆಯೇ ಹೆಚ್ಚಿರುವುದು ಇದರಿಂದ ಅರಿವಾಗು ತ್ತದೆ.
ಬಡ್ಡಿಗೆ ಹಣ ನೀಡುವವರ ಬಳಿ ಶೇ.24 ಅಥವಾ ಶೇ.36ರಷ್ಟು ಬಡ್ಡಿ ನೀಡಿ ಖಾಸಗಿಯವರು ಸಾಲ ಪಡೆಯುತ್ತಾರೆ. ಇನ್ನು, ಮೀಟರ್ ಬಡ್ಡಿಗೆ ಸಾಲ ಪಡೆದು ನಾನಾ ಸಂಕಷ್ಟಕ್ಕೆ ಗುರಿಯಾಗುವ ಸಣ್ಣ ವ್ಯಾಪಾರಿಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಈ ಪೈಕಿ ಅನೇಕರು ಬಡ್ಡಿಯನ್ನು ನೀಡಲಾಗದೆ ತಮ್ಮ ವ್ಯಾಪಾರವನ್ನು ನಿಲ್ಲಿಸುತ್ತಾರೆ. ಖಾಸಗಿಯವರ ಸಾಲದ ಸುಳಿಯಲ್ಲಿ ಸಿಲುಕಿ ಅನೇಕರು ಪರದಾಡುತ್ತಾರೆ.
ಇದನ್ನೂ ಓದಿ: Prakash Shesharaghavachar Column: ಭಾವೋದ್ವೇಗಕ್ಕೆ ಒಳಗಾಗದೆ ವಾಸ್ತವವನ್ನು ಅರ್ಥೈಸಿಕೊಳ್ಳಿ
ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ಗಳ ಕಿರುಕುಳದಿಂದಾಗಿ ಹಲವರು ಆತ್ಮಹತ್ಯೆ ಮಾಡಿ ಕೊಂಡಾಗ, ಇದಕ್ಕೆ ಕಡಿವಾಣ ಹಾಕಲೆಂದು ಸರಕಾರವು ಕಠಿಣ ಕಾನೂನನ್ನು ತರಬೇಕಾಯಿತು. ಕೆಲ ವರ್ಷಗಳ ಹಿಂದೆ, ಸ್ವಯಂ ಉದ್ಯೋಗ ಆರಂಭಿಸಲು ಬಂಡವಾಳಕ್ಕಾಗಿ ಬ್ಯಾಂಕ್ ಸಾಲವು ಸುಲಭ ವಾಗಿ ಸಿಗುತ್ತಿರಲಿಲ್ಲ.ಅದಕ್ಕೆ ಸೂಕ್ತ ಖಾತರಿ ನೀಡಬೇಕಿತ್ತು ಅಥವಾ ಆಸ್ತಿಪತ್ರವನ್ನು ಒತ್ತೆಯಿಟ್ಟು ಪಡೆಯಬೇಕಿತ್ತು.
ಈ ಪರಿಪಾಠ ಕಷ್ಟಕರವಾಗಿದ್ದುದರಿಂದ ಲಕ್ಷಾಂತರ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದರು. ಇದನ್ನು ಮನಗಂಡ ಮೋದಿ ಸರಕಾರವು 2015ರಲ್ಲಿ ಸ್ವಯಂ ಉದ್ಯೋಗ ಸ್ಥರಿಗೆ ಸಾಲ ಒದಗಿಸಿ, ಅವರ ಕನಸನ್ನು ನನಸು ಮಾಡುವ ‘ಮುದ್ರಾ’ ಯೋಜನೆಯನ್ನು ರೂಪಿಸಿತು. ಈ ಯೋಜನೆಯಲ್ಲಿ ಸಣ್ಣ ಉದ್ಯಮಿಗಳಿಗೆ ಔಪಚಾರಿಕ ಸಾಲ ಸೌಲಭ್ಯವನ್ನು ಒದಗಿಸಲಾಗುವುದು.
ಯಾವುದೇ ಏಜೆಂಟರಿಲ್ಲದೆ, ಕಠಿಣ ನಿಬಂಧನೆಗಳನ್ನು ಹೇರದೆ, ಆಧಾರ ಕೇಳದೆ, ವ್ಯವಹಾರದ ಅಗತ್ಯಗಳ ಮೇಲೆ ಸಾಲ ಒದಗಿಸುವ ಈ ಯೋಜನೆಯನ್ನು ಮೋದಿ ಸರಕಾರ ಜಾರಿಗೊಳಿಸಿದ್ದು ಹಲವರ ಪಾಲಿಗೆ ಭವ್ಯ ಭರವಸೆಯಾಗಿ ಕಂಡಿತು ಎನ್ನಲಡ್ಡಿಯಿಲ್ಲ.
ಮುದ್ರಾ ಸಾಲವನ್ನು ಫಲಾನುಭವಿಗಳಿಗೆ ಮೂರು ಹಂತದಲ್ಲಿ ನೀಡಲಾಗುತ್ತಿದೆ. ಸಾಲದ ಮೊತ್ತದ ಗಾತ್ರಕ್ಕೆ ತಕ್ಕಂತೆ ಈ ಸಾಲಗಳಿಗೆ ನಾಮಕರಣ ಮಾಡಲಾಗಿದೆ. ಆರಂಭಿಕ ಹಂತದ ವ್ಯವಹಾರಗಳಿಗೆ 50000 ರುಪಾಯಿವರೆಗೆ ನೀಡುವ ಸಾಲಕ್ಕೆ ‘ಶಿಶು’ ಎಂದೂ, ಬೆಳೆಯುತ್ತಿರುವ ವ್ಯವಹಾರಗಳಿಗೆ 50001 ರಿಂದ 5 ಲಕ್ಷ ರುಪಾಯಿವರೆಗೆ ನೀಡುವ ಸಾಲಕ್ಕೆ ‘ಕಿಶೋರ’ ಎಂದೂ ಹಾಗೂ 5 ಲಕ್ಷದಿಂದ 20 ಲಕ್ಷ ರುಪಾಯಿವರೆಗೆ ನೀಡುವ ಸಾಲಕ್ಕೆ ‘ತರುಣ’ ಎಂದೂ ಹೆಸರಿಟ್ಟು ವರ್ಗೀಕರಿಸಲಾಗಿದೆ.
ಅತಿಯಾದ ಕಾಗದಪತ್ರ/ದಾಖಲೆಗಳ ಭರಾಟೆಯಿಲ್ಲದ ಈ ಸಾಲ ವ್ಯವಸ್ಥೆಯು ಹೊಸದಾಗಿ ಉದ್ಯೋಗ ಆರಂಭಿಸುವವರಿಗೆ ವರದಾನವಾಗಿದೆ. ಸಣ್ಣ ಉದ್ಯಮಿಗಳಿಗೆ ಸಾಲ ಸೌಲಭ್ಯ ನೀಡುವ ಯೋಜನೆಯು ಇದೇ ಮೊದಲ ಬಾರಿಗೆ ಜಾರಿಗೆ ಬಂದಿರುವಂಥದ್ದೇನೂ ಅಲ್ಲ; ಬ್ಯಾಂಕುಗಳು ತಮ್ಮ ಸಾಲದ ಶೇ.40ರಷ್ಟನ್ನು ಕೃಷಿ, ಶಿಕ್ಷಣ ಮತ್ತು ಸಣ್ಣ ಉದ್ಯಮಗಳಂಥ ಹಿಂದುಳಿದ ವಲಯಗಳಿಗೆ ಕೊಡುವುದನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದೆ.
ಸಾಲ ಸೌಲಭ್ಯವನ್ನು ನೀಡಲೆಂದೇ NABARD ಮತ್ತು SIDBI ನಂಥ ಸಂಸ್ಥೆಗಳನ್ನು ರೂಪಿಸಲಾಗಿದೆ. ಆದರೆ ಈ ಸಾಲಗಳು ದೊರೆಯುವುದು ಗ್ಯಾರಂಟಿ ನೀಡುವಿಕೆಯ ಆಧಾರದ ಮೇಲೆ ಮಾತ್ರ. ಮುದ್ರಾ ಯೋಜನೆಯು ಜಾರಿಗೆ ಬಂದ 10 ವರ್ಷಗಳಲ್ಲಿ 52 ಕೋಟಿಯಷ್ಟು ಮಂದಿಯ ಸಾಲದ ಅರ್ಜಿ ಯನ್ನು ಅನುಮೋದಿಸಿ 33 ಲಕ್ಷ ಕೋಟಿ ರು. ಹಣವನ್ನು ವಿತರಿಸಲಾಗಿದೆ.
ಉದ್ಯಮಿಗಳ ವಿಶ್ವಾಸಾರ್ಹತೆಯ ಮೇಲೆ, ಯಾವುದೇ ಖಾತರಿ ಪಡೆಯದೆ ಸಾಲವನ್ನು ನೀಡಲಾಗಿದೆ. ಈಗಾಗಲೇ ‘ಶಿಶು’ ವರ್ಗದಲ್ಲಿ 11,68,000 ರು., ‘ಕಿಶೋರ’ ವರ್ಗದಲ್ಲಿ 13,40,000 ರು. ಮತ್ತು ‘ತರುಣ’ ವರ್ಗದಲ್ಲಿ 810000 ರು. ಸಾಲವನ್ನು ಪಡೆದ ಮಹತ್ವಾಕಾಂಕ್ಷಿಗಳು ವಿಭಿನ್ನ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಕೋಟ್ಯಂತರ ಸಣ್ಣ ಸಣ್ಣ ಉದ್ಯೋಗಸ್ಥರು ‘ಮುದ್ರಾ’ ಸಾಲವನ್ನು ಪಡೆದು ವ್ಯಾಪಾರ ಮಾಡುವ ತಮ್ಮ ಬಹುದಿನದ ಕನಸನ್ನು ಸಾಕಾರ ಮಾಡಿಕೊಂಡಿ ದ್ದಾರೆ.
ಈಗಾಗಲೇ ವ್ಯಾಪಾರ ನಡೆಸುತ್ತಿದ್ದವರು ಅದರ ವಿಸ್ತರಣೆಗೂ ಸಾಲ ಪಡೆದಿದ್ದಾರೆ. ತಮಿಳುನಾಡಿನ ತಿರುವಳ್ಳುವರ್ ಜಿಲ್ಲೆಯ ಸರಸ್ವತಿ ದಿನಗೂಲಿ ನೌಕರಳು. ಆಕೆ ತನ್ನದೇ ಹಿಟ್ಟಿನ ಗಿರಣಿಯನ್ನು ಆರಂಭಿಸುವ ಕನಸು ಕಾಣುತ್ತಿದ್ದಳು. ಅವಳಿಗೆ ಆಗ ನೆರವಿಗೆ ಬಂದಿದ್ದು ‘ಮುದ್ರಾ’ ಯೋಜನೆ. ಬ್ಯಾಂಕ್ನಲ್ಲಿ 5 ಲಕ್ಷ ರುಪಾಯಿ ಸಾಲ ಪಡೆದು ತನ್ನ ಕನಸನ್ನು ನನಸು ಮಾಡಿಕೊಂಡ ಅವಳು, ಈಗ ಸ್ವತಃ ನಾಲ್ಕು ಜನರಿಗೆ ತನ್ನ ಗಿರಣಿಯಲ್ಲಿ ಉದ್ಯೋಗವನ್ನು ನೀಡಿದ್ದಾಳೆ.
ಕೇರಳದ ನಿಲಂಬರ್ ಗ್ರಾಮದ ಸಿಂಧೂ, ಕಾಲು ಒರೆಸಿಕೊಳ್ಳುವ ಮ್ಯಾಟ್ ತಯಾರು ಮಾಡಿ ಮಾರುವ ಉದ್ಯಮದ ಕನಸು ಕಂಡಿದ್ದಳು. ಬಂಡವಾಳದ ಕೊರತೆಯಿಂದಾಗಿ ದಿನಕ್ಕೆ ಕೇವಲ ಹತ್ತರಿಂದ ಹನ್ನೆರಡು ಮ್ಯಾಟ್ಗಳನ್ನು ಮಾತ್ರವೇ ತಯಾರಿಸಲು ಅವಳಿಗೆ ಸಾಧ್ಯವಾಗಿತ್ತು. ಆದರೆ ‘ಮುದ್ರಾ’ ಸಾಲ ಯೋಜನೆಯ ಸೌಲಭ್ಯವನ್ನು ಪಡೆದ ನಂತರ ಸಿಂಧೂ ಈಗ ದಿನಕ್ಕೆ 400 ರಿಂದ 600 ಮ್ಯಾಟ್ ತಯಾರು ಮಾಡುತ್ತಿದ್ದಾಳೆ.
ತನ್ನ ಕುಟುಂಬಕ್ಕೆ ಆರ್ಥಿಕ ಬೆನ್ನೆಲುಬು ಆಗಿರುವುದಲ್ಲದೆ ತನ್ನ ಸಂಸ್ಥೆಯಲ್ಲಿ ಮೂರು ಮಂದಿಗೆ ಕೆಲಸವನ್ನೂ ನೀಡಿದ್ದಾಳೆ. ದೆಹಲಿಯ ಬಿಂದು ‘ಮುದ್ರಾ’ ಸಾಲವನ್ನು ಪಡೆಯುವ ಮುನ್ನ ಪ್ರತಿದಿನ 50 ಪೊರಕೆಗಳನ್ನು ಮಾರಾಟ ಮಾಡುತ್ತಿದ್ದಳು, ಈಗ ಅದು 500 ದಾಟಿದೆ. ತಮ್ಮ ಮನೆಯಲ್ಲಿಯೇ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಹಲವರು, ‘ಮುದ್ರಾ’ ಸಾಲ ಪಡೆದು ತಮ್ಮ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಿಕೊಂಡು, ಇತರರಿಗೆ ಕೆಲಸ ಕೊಡುವ ಸಾಮರ್ಥ್ಯವನ್ನೂ ಗಳಿಸಿದ್ದಾರೆ.
ಮೈಸೂರಿನ ಕಮಲಾ ತಮ್ಮ ಟೈಲರಿಂಗ್ ಅಂಗಡಿಯ ವಿಸ್ತರಣೆಗಾಗಿ ‘ಮುದ್ರಾ’ ಸಾಲವನ್ನು ಪಡೆದು, ಸಾಕಷ್ಟು ಅಭಿವೃದ್ಧಿಯಾಗಿ, ಈಗ ನಾಲ್ಕು ಜನರನ್ನು ಕೆಲಸಕ್ಕೆ ತೆಗೆದುಕೊಂಡು ತಮ್ಮ ವ್ಯವಹಾರ ವನ್ನು ಮತ್ತಷ್ಟು ವಿಸ್ತರಿಸಿದ್ದಾರೆ. ಇವೆಲ್ಲಾ ಒಂದಷ್ಟು ಉದಾಹರಣೆಗಳಷ್ಟೇ.
ಅಂಕಿ-ಅಂಶಗಳ ಪ್ರಕಾರ, ‘ಮುದ್ರಾ’ ಯೋಜನೆಯು ಈವರೆಗೆ ತಲುಪದ ಹೆಚ್ಚಿನ ಸ್ಥಳಗಳನ್ನು ತಲುಪಿರುವುದು ದೃಢಪಟ್ಟಿದೆ. ವಿಶೇಷವಾಗಿ, ಗ್ರಾಮೀಣ ಪ್ರದೇಶಗಳು ಮತ್ತು ಎರಡನೇ ಹಂತದ ನಗರಗಳಿಗೂ ಇದರ ಪ್ರಯೋಜನ ದಕ್ಕಿದೆ, ಸಮಾಜದ ಎಲ್ಲ ವರ್ಗಗಳನ್ನೂ ತಲುಪಿದೆ. ಹಿಂದುಳಿದ ವರ್ಗಗಳಿಗೆ ಸೇರಿರುವ ಶೇ.28ರಷ್ಟು, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಶೇ.22ರಷ್ಟು ಉದ್ಯಮಿಗಳು ‘ಮುದ್ರಾ’ ಸಾಲವನ್ನು ಪಡೆದಿದ್ದು, ಈ ವಿಶಿಷ್ಟ ಸಾಲ ಯೋಜನೆಯು ಜನರಿಗೆ ಸಾಮಾಜಿಕವಾಗಿಯೂ ಮತ್ತು ಆರ್ಥಿಕವಾಗಿಯೂ ಬಲವನ್ನು ತುಂಬಿ, ಪ್ರಧಾನಿಯವರ ‘ವಿಕಸಿತ ಭಾರತ’ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಬುನಾದಿ ಹಾಕುತ್ತಿದೆ.
ಸಂತಸದ ವಿಚಾರವೆಂದರೆ, ‘ಮುದ್ರಾ’ ಸಾಲದ ಫಲಾನುಭವಿಗಳಲ್ಲಿ ಶೇ.69ರಷ್ಟು ಮಂದಿ ಮಹಿಳಾ ಉದ್ಯಮಿಗಳು. ಅಂದರೆ, ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಯೋಜನೆಯು ಪ್ರಮುಖ ಪಾತ್ರವನ್ನು ವಹಿಸುತ್ತಿದೆ.
ಖಾತರಿ ನೀಡದೆ ವಿತರಿಸಿರುವ ಸಾಲದ ವಸೂಲಾತಿಯ ಸ್ಥಿತಿಗತಿಯೇನು? ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು. ಅಂಕಿ-ಅಂಶಗಳ ಪ್ರಕಾರ, ‘ಮುದ್ರಾ’ ಯೋಜನೆಯಡಿ ನೀಡಲಾದ ಸಾಲದಲ್ಲಿ ವಸೂಲಾಗದಿರುವಂಥದ್ದರ ಪ್ರಮಾಣವು 2021ರಲ್ಲಿ ಶೇ.4.7ರಷ್ಟು ಇತ್ತು. 2023-24ರ ವೇಳೆಗೆ ಅದು ಶೇ.3.4ಕ್ಕೆ ಇಳಿದಿದೆ.
ಫಲಾನುಭವಿಗಳು ತಮ್ಮ ವ್ಯವಹಾರವನ್ನು ಲಾಭದಾಯಕವಾಗಿ ನಡೆಸುತ್ತಿದ್ದಾರೆ ಎಂಬುದಕ್ಕೆ ಸಾಲದ ಮರುಪಾವತಿಯ ಪ್ರಮಾಣವೇ ಸಾಕ್ಷಿಯಾಗಿದೆ. ‘ಮುದ್ರಾ’ ಯೋಜನೆ ಜಾರಿಗೆ ಬಂದು ಹತ್ತು ವರ್ಷಗಳಾದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು, “ಮೊದಲ ಬಾರಿಗೆ ಉದ್ಯಮಿಗಳಿಗೆ ಗ್ಯಾರಂಟಿ ಕೇಳದೆ ಸಾಲ ನೀಡಿ, ತಳಮಟ್ಟದ ಉದ್ಯಮಶೀಲತೆಯನ್ನು ಬೆಳೆಸಲಾಗುತ್ತಿದೆ. ಈ ಯೋಜನೆಯು ಪರಿವರ್ತನಾತ್ಮಕ ಪರಿಣಾಮವನ್ನು ತೋರಿಸಿದೆ.
52 ಕೋಟಿ ಸಾಲಗಾರರಲ್ಲಿ ಹೆಚ್ಚಿನ ಫಲಾನುಭವಿಗಳು ಮಹಿಳೆಯರಾಗಿದ್ದು, ಅವರು ತಮ್ಮ ‘ಮುದ್ರಾ’ ಸಾಲಗಳನ್ನು ತ್ವರಿತವಾಗಿ ಮರುಪಾವತಿಸುತ್ತಾರೆ" ಎಂದು ಮಹಿಳಾ ಉದ್ಯಮಿಗಳನ್ನು ಶ್ಲಾಘಿಸಿದ್ದಾರೆ. ‘ಮುದ್ರಾ’ ಯೋಜನೆಯಲ್ಲಿ 12.5 ಕೋಟಿಯಷ್ಟು ಹಾಲಿ ವ್ಯಾಪಾರಸ್ಥರು ಸಾಲ ಪಡೆದಿದ್ದರೆ,
ಹೊಸದಾಗಿ ವ್ಯಾಪಾರ ಮಾಡಲು ಸಾಲ ಪಡೆದಿರುವವರ ಸಂಖ್ಯೆಯು 3.50 ಕೋಟಿಯನ್ನು ದಾಟಿದೆ. ಸಾಲವನ್ನು ಪಡೆದು ತಮ್ಮ ಉದ್ಯಮದಲ್ಲಿ ಇತರರಿಗೆ ಕೆಲಸ ನೀಡಿರುವವರನ್ನು ಪರಿಗಣಿಸಿದರೆ, ಅಂಥವರ ಸಂಖ್ಯೆಯು 7 ಕೋಟಿಯನ್ನು ದಾಟುತ್ತದೆ. ಕೇವಲ ‘ಮುದ್ರಾ’ದಂಥ ಒಂದೇ ಯೋಜನೆ ಯು 10 ಕೋಟಿಗೂ ಮೀರಿದ ಸಂಖ್ಯೆಯ ಜನರ ಬದುಕಿಗೆ ಆಸರೆಯಾಗಿದೆ ಎಂದರೆ, ಇದರ ಯಶಸ್ಸಿನ ಅಗಾಧತೆಯನ್ನು ನೀವೇ ಊಹಿಸಿಕೊಳ್ಳಿ!
ಉದ್ಯೋಗವೆಂದರೆ, ಕೇವಲ ಸರಕಾರಿ ಅಥವಾ ವೈಟ್ ಕಾಲರ್ ಉದ್ಯೋಗಗಳು ಮಾತ್ರವೇ ಅಲ್ಲ; ಸ್ವಯಂ ಉದ್ಯೋಗಗಳು ಕೂಡ ನಿರುದ್ಯೋಗ ಸಮಸ್ಯೆಯ ನಿವಾರಣೆಯಲ್ಲಿ ಗಮನಾರ್ಹ ಪಾತ್ರ ವನ್ನು ವಹಿಸುತ್ತವೆ. ಈ ಕ್ಷೇತ್ರವು ಬಹುತೇಕ ಅನೌಪಚಾರಿಕವಾಗಿರುವುದರಿಂದ, ಈ ಬೃಹತ್ ಸಂಖ್ಯೆ ಯು ಉದ್ಯೋಗ ಸೂಚ್ಯಂಕದ ಅಡಿಯಲ್ಲಿ ಬರುವುದಿಲ್ಲ.
ಪಿಎಫ್, ಇಎಸ್ಐ ಸವಲತ್ತು ದೊರೆಯದ ಕ್ಷೇತ್ರಗಳಲ್ಲಿನ ಉದ್ಯೋಗಗಳನ್ನು ವೈಜ್ಞಾನಿಕವಾಗಿ ಅಳೆಯುವ ಮಾನದಂಡ ಇಲ್ಲದಿರುವುದರಿಂದ, ‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವ ವಾಡುತ್ತಿದೆ’ ಎಂಬ ಗ್ರಹಿಕೆ ಬಿಂಬಿತವಾಗಿ, ರಾಜಕೀಯವಾಗಿ ವಿರೋಧ ಪಕ್ಷಗಳ ಟೀಕೆಗೆ ಆಹಾರ ವಾಗಿದೆಯಷ್ಟೇ. ‘ಮುದ್ರಾ’ ಸಾಲವು ಯಾವುದೇ ಮೀಸಲಾತಿಯ ಹಂಗಿಲ್ಲದೆ ಸಾಮಾಜಿಕ ನ್ಯಾಯ ವನ್ನು ಎತ್ತಿಹಿಡಿಯುತ್ತಿದೆ.
ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದವರು ಇದರ ಲಾಭ ಪಡೆದು, ಸ್ವಯಂ ಉದ್ಯೋಗಸ್ಥರಾಗಿ ಆರ್ಥಿಕ ಪ್ರಗತಿ ಸಾಧಿಸುತ್ತಿದ್ದಾರೆ ಮತ್ತು ಲಕ್ಷಾಂತರ ಯುವಕರು ತಮ್ಮದೇ ಸ್ವಂತ ವ್ಯಾಪಾರ/ಉದ್ಯಮದ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಮೋದಿ ಸರಕಾರದ ದೂರದೃಷ್ಟಿಯ ‘ಮುದ್ರಾ’ ಯೋಜನೆಗೆ ಈ ಎಲ್ಲ ಶ್ರೇಯಸ್ಸು ಸಲ್ಲುತ್ತದೆ.
(ಲೇಖಕರು ಬಿಜೆಪಿಯ ವಕ್ತಾರರು)