ಸರಣಿ ಸೋಲಿನ ಬೆನ್ನಲ್ಲೇ ಬಾಂಗ್ಲಾ ಟೆಸ್ಟ್ ತಂಡದ ನಾಯಕತ್ವಕ್ಕೆ ಶಾಂಟೊ ರಾಜೀನಾಮೆ
ಮೂರು ಸ್ವರೂಪಗಳಲ್ಲಿ ಮೂವರು ನಾಯಕರೊಂದಿಗೆ ತಂಡವನ್ನು ಮುಂದುವರಿಯಲು ಕ್ರಿಕೆಟ್ ಮಂಡಳಿ ಭಾವಿಸಿದರೆ, ಅದು ಅವರ ನಿರ್ಧಾರವಾಗಿರುತ್ತದೆ. ಜನರು ಇದನ್ನು ವೈಯಕ್ತಿಕ ಸಮಸ್ಯೆಯಾಗಿ ನೋಡುವುದಿಲ್ಲ ಅಥವಾ ಏಕದಿನ ನಾಯಕತ್ವದ ನಿರ್ಲಕ್ಷ್ಯದ ಬಗ್ಗೆ ನನಗೆ ಕೆಟ್ಟ ಭಾವನೆ ಇದ್ದ ಕಾರಣ ನಾನು ಇದನ್ನು ಮಾಡಿದ್ದೇನೆ ಎಂದು ಭಾವಿಸುವುದಿಲ್ಲ ಎಂದು ಶಾಂಟೊ ಹೇಳಿದರು.


ಕೊಲಂಬೊ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ(Bangladesh vs Sri Lanka) ಸೋಲಿನ ಬೆನ್ನಲ್ಲೇ ನಜ್ಮುಲ್ ಹೊಸೈನ್ ಶಾಂಟೊ(Najmul Hossain Shanto) ಅವರು ಬಾಂಗ್ಲಾದೇಶ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದಾರೆ. ಬಾಂಗ್ಲಾದೇಶಕ್ಕೆ ಮೂರು ಸ್ವರೂಪಗಳಲ್ಲಿ ಮೂವರು ನಾಯಕರು ಅಗತ್ಯವಿಲ್ಲ ಎಂದು ಭಾವಿಸಿ ರಾಜೀನಾಮೆ ನೀಡಲು ನಿರ್ಧರಿಸಿದೆ ಎಂದು ನಜ್ಮುಲ್ ಹೇಳಿದರು.
ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಏಕದಿನ ನಾಯಕತ್ವದಿಂದ ಶಾಂಟೊ ಅವರನ್ನು ಕೆಳಗಿಸಿ ಮೆಹದಿ ಹಸನ್ ಮಿರಾಜ್(Mehidy Hasan) ಅವರನ್ನು ನೂತನ ಏಕದಿನ ನಾಯಕರನ್ನಾಗಿ ನೇಮಿಸಲಾಗಿತ್ತು. ಇದೀಗ ಟೆಸ್ಟ್ ನಾಯಕತ್ವಕ್ಕೇ ಸ್ವತಃ ಅವರೇ ರಾಜಿನಾಮೆ ನೀಡಿದ್ದಾರೆ.
ಶನಿವಾರ ಮುಕ್ತಾಯ ಕಂಡ ಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ನಲ್ಲಿ ಬಾಂಗ್ಲಾ ತಂಡ ಇನಿಂಗ್ಸ್ ಮತ್ತು 78 ರನ್ ಸೋಲಿಗೆ ತುತ್ತಾಯಿತು. ಈ ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಂಟೊ, "ನಾನು ಒಂದು ಘೋಷಣೆ ಮಾಡಬೇಕಾಗಿದೆ. ನಾನು ಬಾಂಗ್ಲಾದೇಶ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ಈ ಸ್ವರೂಪದಲ್ಲಿ ನಾನು ನಾಯಕನಾಗಿ ಮುಂದುವರಿಯಲು ಬಯಸುವುದಿಲ್ಲ, ಮತ್ತು ನಾನು ಎಲ್ಲರಿಗೂ ಸ್ಪಷ್ಟ ಸಂದೇಶವನ್ನು ನೀಡಲು ಬಯಸುತ್ತೇನೆ: ಇದು ವೈಯಕ್ತಿಕ ವಿಷಯವಲ್ಲ. ಇದು ಸಂಪೂರ್ಣವಾಗಿ ತಂಡದ ಒಳಿತಿಗಾಗಿ ಎಂದು ನಾನು ನಂಬುತ್ತೇನೆ" ಎಂದು ಹೇಳಿದರು.
"ಕಳೆದ ಕೆಲವು ವರ್ಷಗಳಿಂದ, ಬಾಂಗ್ಲಾ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿರಲು ನನಗೆ ಅವಕಾಶ ಸಿಕ್ಕಿದೆ. ಮತ್ತು ಮೂರು ಸ್ವರೂಪಗಳಿಗೂ ನಾಯಕನಾಗಿ ತಂಡವನ್ನು ಮುನ್ನಡೆಸುವ ಸೌಭಾಗ್ಯ ಕೂಡ ಸಿಕ್ಕಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ತಂಡಕ್ಕೆ ಮೂವರು ನಾಯಕರನ್ನು ಹೊಂದಿರುವುದು ತಾರ್ಕಿಕ ಎಂದು ನಾನು ಭಾವಿಸುವುದಿಲ್ಲ. ಇದು ಸಂಪೂರ್ಣವಾಗಿ ನನ್ನ ವೈಯಕ್ತಿಕ ಅಭಿಪ್ರಾಯ. ಕ್ರಿಕೆಟ್ ಮಂಡಳಿ ಬೇರೆ ರೀತಿಯಲ್ಲಿ ಯೋಚಿಸಬಹುದು. ಮತ್ತು ನಾನು ಅದನ್ನು ಸಂಪೂರ್ಣವಾಗಿ ಗೌರವಿಸುತ್ತೇನೆ. ನನ್ನ ಅಭಿಪ್ರಾಯದಲ್ಲಿ, ಮೂವರು ನಾಯಕರನ್ನು ಹೊಂದಿರುವುದು ತಂಡಕ್ಕೆ ಕಷ್ಟಕರವಾಗಿರುತ್ತದೆ. ಆದ್ದರಿಂದ, ತಂಡದ ಸುಧಾರಣೆಗಾಗಿ, ನಾನು ರಾಜೀನಾಮೆ ನೀಡುತ್ತಿದ್ದೇನೆ" ಎಂದು ಅವರು ವಿವರಿಸಿದರು.
ಇದನ್ನೂ ಓದಿ Mehidy Hasan: ಬಾಂಗ್ಲಾ ಏಕದಿನ ತಂಡಕ್ಕೆ ಮೆಹದಿ ಹಸನ್ ನೂತನ ನಾಯಕ
"ಮೂರು ಸ್ವರೂಪಗಳಲ್ಲಿ ಮೂವರು ನಾಯಕರೊಂದಿಗೆ ತಂಡವನ್ನು ಮುಂದುವರಿಯಲು ಕ್ರಿಕೆಟ್ ಮಂಡಳಿ ಭಾವಿಸಿದರೆ, ಅದು ಅವರ ನಿರ್ಧಾರವಾಗಿರುತ್ತದೆ. ಜನರು ಇದನ್ನು ವೈಯಕ್ತಿಕ ಸಮಸ್ಯೆಯಾಗಿ ನೋಡುವುದಿಲ್ಲ ಅಥವಾ ಏಕದಿನ ನಾಯಕತ್ವದ ನಿರ್ಲಕ್ಷ್ಯದ ಬಗ್ಗೆ ನನಗೆ ಕೆಟ್ಟ ಭಾವನೆ ಇದ್ದ ಕಾರಣ ನಾನು ಇದನ್ನು ಮಾಡಿದ್ದೇನೆ ಎಂದು ಭಾವಿಸುವುದಿಲ್ಲ" ಎಂದು ಅವರು ಹೇಳಿದರು.