Rangitaranga Movie: ‘ರಂಗಿತರಂಗ’ ಮತ್ತೆ ತೆರೆಗೆ; ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ
Rangitaranga Movie: ಎಚ್.ಕೆ. ಪ್ರಕಾಶ್ ನಿರ್ಮಾಣದ, ಅನೂಪ್ ಭಂಡಾರಿ ನಿರ್ದೇಶನದ ಬ್ಲಾಕ್ಬಸ್ಟರ್ ಚಲನಚಿತ್ರ 'ರಂಗಿತರಂಗ', ಈಗ ಹತ್ತು ವರ್ಷಗಳ ನಂತರ ಮತ್ತೆ ತೆರೆಗೆ ಬರಲು ಸಜ್ಜಾಗಿದೆ. ಇದೇ ಜುಲೈ 4 ರಂದು 'ರಂಗಿತರಂಗ' ಚಿತ್ರವನ್ನು ಮರು-ಬಿಡುಗಡೆಯಾಗುತ್ತಿದೆ.


ಬೆಂಗಳೂರು: 2015ರ ಜುಲೈ 3 ರಂದು ತೆರೆಕಂಡು, ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಎಚ್.ಕೆ. ಪ್ರಕಾಶ್ ನಿರ್ಮಾಣದ, ಅನೂಪ್ ಭಂಡಾರಿ ನಿರ್ದೇಶನದ ಬ್ಲಾಕ್ಬಸ್ಟರ್ ಚಲನಚಿತ್ರ 'ರಂಗಿತರಂಗ' (Rangitaranga Movie), ಈಗ ಹತ್ತು ವರ್ಷಗಳ ನಂತರ ಮತ್ತೆ ತೆರೆಗೆ ಬರಲು ಸಜ್ಜಾಗಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, ಚಿತ್ರತಂಡದ ಸದಸ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ನಿರ್ಮಾಪಕ ಎಚ್.ಕೆ. ಪ್ರಕಾಶ್ ಮಾತನಾಡಿ. ʼಹತ್ತು ವರ್ಷಗಳ ನಂತರವೂ 'ರಂಗಿತರಂಗ' ಪ್ರಕಾಶ್ ಎಂದೇ ಗುರುತಿಸುತ್ತಾರೆ. ನಾನು ನಿರೂಪ್ ನಟಿಸಿದ್ದ ಒಂದು ಟೆಲಿಫಿಲಂ ನೋಡಿ ಮೆಚ್ಚಿಕೊಂಡಿದ್ದೆ. ಅವರೊಂದಿಗೆ ಸಿನಿಮಾ ಮಾಡಬೇಕೆಂದು ನಿರೂಪ್ ಅವರ ತಂದೆ ಸುಧಾಕರ್ ಭಂಡಾರಿ ಅವರನ್ನು ಸಂಪರ್ಕಿಸಿದಾಗ, ಅವರು ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾದ ಪ್ರೀ-ಪ್ರೊಡಕ್ಷನ್ನಲ್ಲಿ ತೊಡಗಿಸಿಕೊಂಡಿದ್ದರು. ಆಗ ಅನೂಪ್ ಅವರ ಬಳಿ ಕಥೆ ಕೇಳಿದೆ. ಹಾಡುಗಳನ್ನು ಕೇಳಿದ ಕೂಡಲೇ ಈ ಸಿನಿಮಾ ನಾನೇ ಮಾಡಬೇಕು ಎಂದು ತೀರ್ಮಾನಿಸಿದೆ. ಆ ಚಿತ್ರವೇ 'ರಂಗಿತರಂಗ'. ಯಶಸ್ಸಿನ ಉತ್ತುಂಗಕ್ಕೇರಿ ಈಗ 10ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಈ ಚಿತ್ರದಿಂದಾಗಿ, ಹತ್ತು ವರ್ಷಗಳ ನಂತರವೂ ನನ್ನನ್ನು 'ರಂಗಿತರಂಗ' ಪ್ರಕಾಶ್ ಎಂದೇ ಗುರುತಿಸುತ್ತಾರೆ. ನಿಮ್ಮೆಲ್ಲರ ಪ್ರೋತ್ಸಾಹದೊಂದಿಗೆ, 2025ರ ಜುಲೈ 4 ರಂದು 'ರಂಗಿತರಂಗ' ಚಿತ್ರವನ್ನು ಮರು-ಬಿಡುಗಡೆ ಮಾಡುತ್ತಿದ್ದೇವೆʼ ಎಂದು ಅವರು ಹೇಳಿದರು.
ʼವಿದೇಶದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ ನಾನು ಹಾಲಿವುಡ್ ಸ್ಟಾರ್ ರಸೆಲ್ ಹಾರ್ವರ್ಡ್ ಅವರೊಂದಿಗೆ ಅಂತಾರಾಷ್ಟ್ರೀಯ ಕಿರುಚಿತ್ರಗಳನ್ನು ಮಾಡಿದ್ದೆ. 'ರಂಗಿತರಂಗ' ದ ಪ್ರೀ-ಪ್ರೊಡಕ್ಷನ್ ಕಾರ್ಯದಲ್ಲಿರುವಾಗ, ಈ ಚಿತ್ರ ನಾನೇ ಮಾಡಬೇಕೆಂದು ಎಚ್.ಕೆ. ಪ್ರಕಾಶ್ ಅವರ ಆಸೆಯನ್ನು ನೋಡಿ ಅವರ ಉತ್ಸಾಹಕ್ಕೆ ಕೈಜೋಡಿಸಿದೆ. ಸಾಯಿಕುಮಾರ್ ಅವರನ್ನು ಹೊರತುಪಡಿಸಿ, ಬಹುತೇಕ ಎಲ್ಲ ಕಲಾವಿದರು ಹೊಸಬರಾಗಿದ್ದರು. ನಿರೂಪ್ ಭಂಡಾರಿ, ರಾಧಿಕಾ ಚೇತನ್, ಅವಂತಿಕಾ ಶೆಟ್ಟಿ, ಅರವಿಂದ್ – ಎಲ್ಲರ ಸಂಘಟಿತ ಶ್ರಮವೇ ಚಿತ್ರ ಉತ್ತಮವಾಗಿ ಮೂಡಿಬರಲು ಕಾರಣ. ಛಾಯಾಗ್ರಾಹಕ ವಿಲಿಯಂ ಡೇವಿಡ್ ನನ್ನ ಕಲ್ಪನೆಗೆ ಸೂಕ್ತ ದೃಶ್ಯಗಳನ್ನು ಸಂಯೋಜಿಸಿ ಯಶಸ್ಸಿಗೆ ಕಾರಣರಾದರು.
2015ರ ಜುಲೈ 3ರಂದು ನಮ್ಮ ಚಿತ್ರ ಬಿಡುಗಡೆಯಾದಾಗ, ಕಪಾಲಿ ಚಿತ್ರಮಂದಿರದಲ್ಲಿ ಚಿತ್ರ ನೋಡಿ ಬಂದ ಕೆಲವರು ನಮ್ಮ ನಿರ್ಮಾಪಕರಿಗೆ 'ನಿಮಗೆ ಪೋಸ್ಟರ್ ಖರ್ಚು ಕೂಡ ಬರುವುದಿಲ್ಲ' ಎಂದು ಹೆದರಿಸಿದ್ದರು. ಆದರೆ, ನಮ್ಮ ನಿರ್ಮಾಪಕರಿಗೆ ಚಿತ್ರ ಗೆಲ್ಲುತ್ತದೆ ಎಂಬ ಬಲವಾದ ನಂಬಿಕೆ ಇತ್ತು, ಅದು ಸುಳ್ಳಾಗಲಿಲ್ಲ. ಜನ ನಮ್ಮ ಕೈ ಹಿಡಿದರು. 'ಬಾಹುಬಲಿ', 'ಬಜರಂಗಿ ಭಾಯಿಜಾನ್', 'ಶ್ರೀಮಂತುಡು' ನಂತಹ ದೊಡ್ಡ ಚಿತ್ರಗಳ ಜತೆ ಬಿಡುಗಡೆಯಾದರೂ ನಮ್ಮ ಕನ್ನಡ ಚಿತ್ರ ಸೂಪರ್ ಹಿಟ್ ಆಯಿತು. 'ರಂಗಿತರಂಗ'ದ ಮೂಲಕ ಅಮೆರಿಕದಲ್ಲಿ ಕನ್ನಡಕ್ಕೆ ಒಂದು ಹೊಸ ಮಾರುಕಟ್ಟೆ ಸೃಷ್ಟಿಯಾಯಿತು. ಆ ವರ್ಷದ ಬಹುಪಾಲು ಪ್ರಶಸ್ತಿಗಳನ್ನು ಬಾಚಿಕೊಂಡ 'ರಂಗಿತರಂಗ' ಈ ಜುಲೈ 4 ರಂದು ಮರು-ಬಿಡುಗಡೆಯಾಗುತ್ತಿದೆ. ಮತ್ತೆ ನಮ್ಮ ಚಿತ್ರವನ್ನು ಕನ್ನಡಿಗರು ಗೆಲ್ಲಿಸುತ್ತಾರೆ ಎಂಬ ಭರವಸೆ ಇದೆʼ ಎಂದು ನಿರ್ದೇಶಕ ಅನೂಪ್ ಭಂಡಾರಿ ವಿಶ್ವಾಸ ವ್ಯಕ್ತಪಡಿಸಿದರು.
ʼಈ ಎರಡು ಚಿತ್ರಗಳು ನನ್ನ ಎರಡು ಕಣ್ಣುಗಳು. ಇಂತಹ ಕನ್ನಡ ಚಿತ್ರಗಳಲ್ಲಿ ನಟಿಸಿದ್ದು ಬಹಳ ಖುಷಿಯಾಗಿದೆ. ಈಗಲೂ ನಾನು ಹೋದ ಕಡೆ 'ರಂಗಿತರಂಗ'ದ ನನ್ನ ಪಾತ್ರಕ್ಕೆ ಜನ ಮೆಚ್ಚುಗೆ ಸೂಚಿಸುತ್ತಾರೆ. ಚಿತ್ರ ಮರು-ಬಿಡುಗಡೆಯಲ್ಲೂ ದಾಖಲೆ ಬರೆಯಲಿʼ ಎಂದು ಹಿರಿಯ ನಟ ಸಾಯಿಕುಮಾರ್ ಶುಭ ಹಾರೈಸಿದರು.
ʼನಾನು ಐಟಿ ಉದ್ಯೋಗಿಯಾಗಿದ್ದರೂ ಸಿನಿಮಾ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದೆ. ರತನ್ ಠಾಕೂರ್ ಗ್ರಾಂಟ್ ಅವರ ನಟನಾ ಶಾಲೆಯಲ್ಲಿ ನಟನೆ ಅಭ್ಯಾಸ ಮಾಡಿದೆ. ಅಣ್ಣನ ನಿರ್ದೇಶನದ ಕಿರುಚಿತ್ರಗಳಿಗೆ ನಾನೇ ಹೀರೋ. ಬೆಳ್ಳಿತೆರೆಯ ಮೇಲೆ ಅನೂಪ್ ನಿರ್ದೇಶನದ ಮೊದಲ ಚಿತ್ರಕ್ಕೂ ನಾನೇ ನಾಯಕ ಎಂದು ತಿಳಿದಾಗ ಆದ ಖುಷಿ ಅಷ್ಟಿಷ್ಟಲ್ಲ. ಮೊದಲ ದೃಶ್ಯದಲ್ಲೇ ನಾನು ಸಾಯಿಕುಮಾರ್ ಅವರೊಂದಿಗೆ ಫೈಟ್ ಮಾಡಬೇಕಿತ್ತು. ಆಗ ನನಗಾದ ಭಯ ಈಗಲೂ ಕಣ್ಣ ಮುಂದೆ ಇದೆ. ಅಮೆರಿಕಾಗೆ ಹೋದಾಗ ಅಲ್ಲಿ ನಮ್ಮ ಚಿತ್ರವನ್ನು ನೋಡಲು ಬಂದಿದ್ದ ಜನಸಾಗರ ಕಂಡು ಬಹಳ ಖುಷಿಪಟ್ಟಿದ್ದೆ. ಇಂತಹ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕನಾದ ಅಣ್ಣನಿಗೆ ಧನ್ಯವಾದಗಳುʼ ಎಂದು ನಾಯಕ ನಿರೂಪ್ ಭಂಡಾರಿ ತಮ್ಮ ಅನುಭವ ಹಂಚಿಕೊಂಡರು.
ʼನಾನು ಐಟಿ ಉದ್ಯೋಗಿ. ಅನೂಪ್ ಅವರು ಈ ಚಿತ್ರದ ಕಥೆ ಹೇಳಿದಾಗ ನಟಿಸಲು ಬಹಳ ಇಷ್ಟವಾಯಿತು. ಚಿತ್ರ ಬಿಡುಗಡೆಯಾಗಿ ಹತ್ತು ವರ್ಷಗಳಾಗಿದೆ. ಆ ನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರೂ, ಈಗಲೂ ನನ್ನನ್ನು 'ರಂಗಿತರಂಗ'ದ ಮೂಲಕವೇ ಗುರುತಿಸುತ್ತಾರೆʼ ಎಂದು ನಾಯಕಿ ರಾಧಿಕಾ ನಾರಾಯಣ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Dupatta Fashion 2025: ಹುಡುಗಿಯರ ಆಕರ್ಷಕ ಲುಕ್ಗಾಗಿ ಶೀರ್ ದುಪಟ್ಟಾ ಫ್ಯಾಷನ್
ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸಿದ್ದ ಅರವಿಂದ್ ತಮ್ಮ ಅನುಭವ ಹಂಚಿಕೊಂಡರು. ಛಾಯಾಗ್ರಾಹಕ ವಿಲಿಯಂ ಡೇವಿಡ್ ಛಾಯಾಗ್ರಹಣದ ಬಗ್ಗೆ ಮಾತನಾಡಿದರು. ಕಾರ್ಯಕಾರಿ ನಿರ್ಮಾಪಕ ಸುಧಾಕರ್ ಭಂಡಾರಿ ಅವರು 'ರಂಗಿತರಂಗ' ಆರಂಭವಾದಾಗಿನಿಂದ ಬಿಡುಗಡೆಯಾಗುವವರೆಗೂ ನಡೆದ ಸ್ವಾರಸ್ಯಕರ ಘಟನೆಗಳ ಕುರಿತು ಮಾಹಿತಿ ನೀಡಿದರು. ವಿತರಕ ಹೇಮಂತ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.