3 ವರ್ಷ ಜೈಲು, 50,000 ರೂ. ದಂಡ; ಜನ ಸಂದಣಿ ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರದಿಂದ ಹೊಸ ನಿಯಮ ಜಾರಿಗೆ ಸಿದ್ಧತೆ
ಜೂ. 4ರಂದು ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಕಾಲ್ತುಳಿತ ಸಂಭವಿಸಿದ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಇಂತಹ ದುರಂತ ಸಂಭವಿಸದಿರಲು ಸರ್ಕಾರ ಜನ ಸಂದಣಿ ನಿರ್ವಹಣೆ ಕುರಿತು ನಿಯಮ ಜಾರಿಗೆ ತರಲು ಮುಂದಾಗಿದೆ. ಅದರ ಪ್ರಕಾರ ಜನಸಂದಣಿ ನಿರ್ವಹಣೆಯಲ್ಲಿ ವಿಫಲವಾಗುವ ಆಯೋಜಕರಿಗೆ 3 ವರ್ಷ ಜೈಲು, 50,000 ರೂ. ದಂಡ ವಿಧಿಸಲು ಅವಕಾಶವಿದೆ.


ಬೆಂಗಳೂರು: 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡ ಬೆನ್ನಲ್ಲೇ ಜೂ. 4ರಂದು ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಕಾಲ್ತುಳಿತ ಸಂಭವಿಸಿದ (Bengaluru Stampede) 11 ಮಂದಿ ಅಸುನೀಗಿದ್ದರು. ಇದಾಗಿ ಸುಮಾರು 3 ವಾರಗಳ ನಂತರ ಇದೀಗ ಕರ್ನಾಟಕ ಸರ್ಕಾರ ಜನ ಸಂದಣಿ ನಿರ್ವಹಣೆ ಕುರಿತು ನಿಯಮ ಜಾರಿಗೆ ತರಲು ಮುಂದಾಗಿದೆ. ಅದರ ಪ್ರಕಾರ ಜನಸಂದಣಿ ನಿರ್ವಹಣೆಯಲ್ಲಿ ವಿಫಲವಾಗುವ ಆಯೋಜಕರಿಗೆ 3 ವರ್ಷ ಜೈಲು, 50,000 ರೂ. ದಂಡ ವಿಧಿಸಲು ಅವಕಾಶವಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ನಂತರ ಜನಸಂದಣಿ ನಿರ್ವಹಣೆಗಾಗಿ ಕರಡು ಮಸೂದೆಯನ್ನು ಸಿದ್ಧಪಡಿಸಲಾಗಿದೆ ಎಂದು ಕೆಲವು ದಿನಗಳ ಹಿಂದೆ ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಜನಸಂದಣಿಯನ್ನು ಶಿಸ್ತುಬದ್ಧವಾಗಿ ನಿರ್ವಹಿಸಲು ವಿಶೇಷ ಕಾನೂನಿನ ಅವಶ್ಯಕತೆಯಿದೆ ಎಂದು ಹೇಲಿದ್ದರು. "ಇಲಾಖೆ ಕರಡು ಮಸೂದೆಯನ್ನು ಸಿದ್ಧಪಡಿಸಿದೆ. ಮುಂದಿನ ಸಚಿವ ಸಂಪುಟ ಸಭೆಯ ಮೊದಲು ನಾನು ಅದನ್ನು ಮಂಡಿಸುತ್ತೇನೆ. ಸಂಪುಟ ಅದನ್ನು ಅನುಮೋದಿಸಿದರೆ ಕಾನೂನು ಜಾರಿಗೆ ಬರಲಿದೆ" ಎಂದು ಅವರು ಹೇಳಿದ್ದರು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಫುಟ್ಬಾಲ್ ಮತ್ತು ಕ್ರಿಕೆಟ್ ಪಂದ್ಯ, ಮದುವೆ ಮತ್ತು ರಾಜಕೀಯ ಕೂಟಗಳಂತಹ ಕಾರ್ಯಕ್ರಮಗಳಿಗೆ ಅನುಮತಿಸಬಹುದಾದ ಜನರ ಗರಿಷ್ಠ ಸಂಖ್ಯೆಯತ್ತಲೂ ಕಾನೂನು ಗಮನ ಹರಿಸಲಿದೆ ಎಂದು ವರದಿಗಳು ತಿಳಿಸಿವೆ. ಈ ಕಾನೂನು ಜಾತ್ರೆ ಮತ್ತು ಧಾರ್ಮಿಕ ಸಮಾರಂಭಗಳಿಗೆ ಅನ್ವಯಿಸುವುದಿಲ್ಲ ಎನ್ನಲಾಗಿದೆ.
"ಕಾರ್ಯಕ್ರಮವನ್ನು ನಡೆಸುವ ಮೊದಲು ಕಾರ್ಯಕ್ರಮ ಆಯೋಜಕರು ಅರ್ಜಿ ಸಲ್ಲಿಸದಿದ್ದರೆ ಅಥವಾ ಜನಸಂದಣಿಯನ್ನು ನಿಯಂತ್ರಿಸಲು ವಿಫಲವಾದರೆ ಹಾಗೂ ಪರಿಹಾರ ವಿತರಿಸಲು ವಿಫಲವಾದರೆ, ನಿಯಮಗಳನ್ನು ಉಲ್ಲಂಘಿಸಿದರೆ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ಐದು ಲಕ್ಷ ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು" ಎಂದು ನಿಯಮ ಹೇಳುತ್ತದೆ.