IND vs ENG: ʻಹೊರಗಡೆ ಮಾತುಗಳಿಗೆ ಕಿವಿ ಕೊಡಬೇಡಿʼ-ಶುಭಮನ್ ಗಿಲ್ಗೆ ಸಲಹ ನೀಡಿದ ತೆಂಡೂಲ್ಕರ್!
ಇಂಗ್ಲೆಂಡ್ ವಿರುದ್ದದ ಐದು ಪಂದ್ಯಗಳ ಟೆಸ್ಟ್ ಸರಣಿಯ ನಿಮಿತ್ತ ಭಾರತ ತಂಡದ ನಾಯಕ ಶುಭಮನ್ ಗಿಲ್ಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಮಹತ್ವದ ಸಲಹೆಯನ್ನು ನೀಡಿದ್ದಾರೆ. ಹೊರಗಡೆಯ ಯಾವುದೇ ಮಾತುಗಳಿಗೆ ಕಿವಿ ಕೊಡಬಾರದು ಎಂದು ಮಾಸ್ಟರ್ ಬ್ಲಾಸ್ಟರ್ ಹೇಳಿದ್ದಾರೆ. ಜೂನ್ 20 ರಂದು ಲೀಡ್ಸ್ನ ಹೆಡಿಂಗ್ಲೆಯಲ್ಲಿ ಮೊದಲನೇ ಟೆಸ್ಟ್ ಆರಂಭವಾಗಲಿದೆ.

ಶುಭಮನ್ ಗಿಲ್ಗೆ ಮಹತ್ವದ ಸಲಹೆ ನೀಡಿದ ಸಚಿನ್ ತೆಂಡೂಲ್ಕರ್.

ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯಕ್ಕೂ (IND vs ENG) ಮುನ್ನ ಭಾರತ ತಂಡದ ನಾಯಕ ಶುಭಮನ್ ಗಿಲ್ಗೆ (Shubman Gill) ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಮಹತ್ವದ ಸಲಹೆಯನ್ನು ನೀಡಿದ್ದಾರೆ. ಹೊರಗಡೆಯ ಮಾತುಗಳಿಗೆ ಕಿವಿ ಕೊಡದೆ, ಮೈದಾನದಲ್ಲಿ ನಿಮಗೆ ಅನಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಿ ಎಂದು ಮಾಸ್ಟರ್ ಬ್ಲಾಸ್ಟರ್ ತಿಳಿಸಿದ್ದಾರೆ. ಇಲ್ಲಿನ ಹೆಡಿಂಗ್ಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶುಭಮನ್ ಗಿಲ್ಗೆ ನಾಯಕತ್ವವನ್ನು ನೀಡಲಾಗಿದೆ. ಶುಕ್ರವಾರ ಇವರು 37ನೇ ನಾಯಕನಾಗಿ ಕಣಕ್ಕೆ ಇಳಿಯಲಿದ್ದಾರೆ.
ಕ್ರಿಕ್ಬಝ್ ಜೊತೆ ಮಾತನಾಡಿದ ಸಚಿನ್ ತೆಂಡೂಲ್ಕರ್, ತಂಡದ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಹಾಗೂ ಗಿಲ್ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಧೈರ್ಯಶಾಲಿಯಾಗಿರಬೇಕು ಮತ್ತು ಇತರರು ಏನು ಹೇಳುತ್ತಾರೆಂಬ ಬಗ್ಗೆ ಚಿಂತಿಸಬಾರದು ಎಂದು ಹೇಳಿದ್ದಾರೆ. ತಮ್ಮ ನಾಯಕತ್ವದ ಬಗ್ಗೆ ಜನರು ಹಲವು ಅಭಿಪ್ರಾಯಗಳನ್ನು ಹೊಂದಿರುತ್ತಾರೆ ಮತ್ತು ಗಿಲ್ ಅವುಗಳ ಬಗ್ಗೆ ಚಿಂತಿಸಬಾರದು ಮತ್ತು ಅವರು ಮಾಡುತ್ತಿರುವ ನಿರ್ಧಾರಗಳಿಗೆ ಬೆಂಬಲ ನೀಡಬೇಕು ಎಂದು ಭಾರತೀಯ ದಂತಕಥೆ ತಿಳಿಸಿದ್ದಾರೆ.
IND vs ENG: ಐಪಿಎಲ್ ಟ್ರೋಫಿಗಿಂತ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ದೊಡ್ಡದು ಎಂದ ಶುಭಮನ್ ಗಿಲ್!
"ತಂಡದ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳುವವರೆಗೆ ಹೊರಗಿನ ಪ್ರಪಂಚದ ಬಗ್ಗೆ ಚಿಂತಿಸದೆ, ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದು ನನ್ನ ಸಲಹೆ," ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
"ಏಕೆಂದರೆ, ಜನರು ಅಭಿಪ್ರಾಯಗಳನ್ನು ಹೊಂದಿರುತ್ತಾರೆ ಮತ್ತು ನೀವು ತುಂಬಾ ಆಕ್ರಮಣಕಾರಿ ಅಥವಾ ತುಂಬಾ ರಕ್ಷಣಾತ್ಮಕವಾಗಿದ್ದಾರೆ ಅಥವಾ ಇದು ನಡೆಯುತ್ತಿಲ್ಲ ಎಂದು ಜನರು ನಿಮ್ಮ ಬಗ್ಗೆ ಹೇಳುತ್ತಾರೆ. ಅದು ಆಗುತ್ತಿಲ್ಲ. ತಂಡದ ಹಿತಾಸಕ್ತಿಗೆ ಅನುಗುಣವಾಗಿ ಮತ್ತು ಡ್ರೆಸ್ಸಿಂಗ್ ಕೋಣೆಯಲ್ಲಿ ಏನು ಚರ್ಚಿಸಲಾಗಿದೆಯೋ ಅದನ್ನು ಅವರು ಮಾಡಬೇಕು," ಎಂದು ತಿಳಿಸಿದ್ದಾರೆ.
IND vs ENG 1st Test: ಲೀಡ್ಸ್ ಟೆಸ್ಟ್ನ ಪಿಚ್ ರಿಪೋರ್ಟ್, ಭಾರತ ಸಂಭಾವ್ಯ ಆಡುವ ಬಳಗ ಹೇಗಿದೆ?
"ನೀವು ಹೊರಗಿನ ಪ್ರಪಂಚದ ಬಗ್ಗೆ ಚಿಂತಿಸಬೇಡಿ. ತಂಡದ ಹಿತದೃಷ್ಟಿಯಿಂದ ನಿಮಗೆ ಅನಿಸಿದ ನಿರ್ಧಾರವನ್ನು ತೆಗೆದುಕೊಳ್ಳಿ. ನಾನು ನೀಡುವ ಸಲಹೆ ಕೂಡ ಇದೇ ಆಗಿದೆ. ಡ್ರೆಸ್ಸಿಂಗ್ ರೂಮ್ ಮತ್ತು ತಂಡದ ಹಿತದೃಷ್ಟಿಯಿಂದ ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು ಮುಖ್ಯ. ಇದನ್ನು ನೀವು ಬೆಂಬಲಿಸಬೇಕು," ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಹೋಲಿಕೆಯನ್ನು ನಿರಾಕರಿಸಿದ ಸಚಿನ್
1996 ರಲ್ಲಿ 23 ವರ್ಷ 169 ದಿನಗಳ ವಯಸ್ಸಿನಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಭಾರತ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ತಮಗೂ ಮತ್ತು ಗಿಲ್ ನಡುವೆ ಹೋಲಿಕೆಯನ್ನು ಅವರು ನಿರಾಕರಿಸಿದ್ದಾರೆ. ಎರಡೂ ಸಂಪೂರ್ಣವಾಗಿ ವಿಭಿನ್ನ ಯುಗಗಳಾಗಿದ್ದವು ಮತ್ತು ಪ್ರಸ್ತುತ ಭಾರತೀಯ ಕ್ರಿಕೆಟ್ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಸುವುದು ಮುಖ್ಯ ಎಂದು ತೆಂಡೂಲ್ಕರ್ ತಿಳಿಸಿದ್ದಾರೆ.
"ಅವು ಒಟ್ಟಾರೆಯಾಗಿ ವಿಭಿನ್ನ ಯುಗಗಳು, ಆದ್ದರಿಂದ ಆ ಯುಗವನ್ನು ಪ್ರಸ್ತುತ ಯುಗಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಭಾರತೀಯ ಕ್ರಿಕೆಟ್ನಲ್ಲಿ ಆಗ ನಡೆದ ಮತ್ತು ಈಗ ನಡೆಯುತ್ತಿರುವ ಘಟನೆಗಳಿಗೆ ಹೋಲಿಸುವುದರಲ್ಲಿ ಅರ್ಥವಿಲ್ಲ. ಈಗ ಏನಾಗುತ್ತಿದೆ ಎಂಬುದನ್ನು ನಾವು ಪರಿಹರಿಸಬೇಕು ಮತ್ತು ಅದನ್ನು ಮಾಡಬೇಕು," ಎಂದು ಕ್ರಿಕೆಟ್ ದಂತಕತೆ ಹೇಳಿದ್ದಾರೆ.