Ravi Sajangadde Column: ಎಮರ್ಜೆನ್ಸಿಗೆ ಐವತ್ತು, ಮರೆಯಲಾಗದ ಆಪತ್ತು !
‘ಉಳುವವನೇ ಹೊಲದೊಡೆಯ’ ಎಂಬ ಕಾನೂನು ಕರ್ನಾಟಕದಲ್ಲಿ ಆಗಷ್ಟೇ ಜಾರಿಯಾಗಿತ್ತು. ಇದರನ್ವಯ ಗೇಣಿದಾರರಿಗೆ ಭೂಮಿ ಹಂಚಿದ್ದು ಭೂಮಾಲೀಕರ ಆಕ್ರೋಶಕ್ಕೆ ಕಾರಣವಾಯಿತು. ಪರಿಣಾಮ ಹಲವು ಬಡವರ ಮನೆಗೆ ಬೆಂಕಿ ಹಚ್ಚುವ, ಮನೆ/ ಜಮೀನಿನಿಂದ ಹೊರದಬ್ಬುವ ಕಾನೂನು ಬಾಹಿರ ಚಟುವಟಿಕೆಗಳು ಗರಿಗೆದರಿದವು.


ಸಂಕಷ್ಟಪರ್ವ
ರವೀ ಸಜಂಗದ್ದೆ
ದೇಶಕ್ಕೆ ಆಂತರಿಕ ಅಥವಾ ಬಾಹ್ಯ ಬೆದರಿಕೆಗಳಿದ್ದರೆ, ಅಂಥ ವೇಳೆ ಕೇಂದ್ರ ಸರಕಾರವು ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲು ಮತ್ತು ಅದಕ್ಕೆ ರಾಷ್ಟ್ರಪತಿ ಗಳು ಅಂಕಿತ ಹಾಕಲು ಸಂವಿಧಾನದ 352ನೇ ಪರಿಚ್ಛೇದದಲ್ಲಿ ಅವಕಾಶವಿದೆ. 1962ರ ಭಾರತ-ಚೀನಾ ಯುದ್ಧ, 1971ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭಗಳು ಮತ್ತು 1975ರ ಜೂನ್ 25ರಿಂದ 1977ರ ಮಾರ್ಚ್ 21ರವರೆಗೆ- ಹೀಗೆ ಭಾರತದಲ್ಲಿ 3 ಬಾರಿ ತುರ್ತುಸ್ಥಿತಿ ಜಾರಿಯಾಗಿದೆ.
ಮೊದಲಿನ ಎರಡು, ಯುದ್ಧದ (ಬಾಹ್ಯ ಬೆದರಿಕೆ) ಸಂದರ್ಭಗಳಾಗಿದ್ದರೆ, ಮೂರನೆಯದ್ದರ (ಆಂತರಿಕ ದಂಗೆ/ಬೆದರಿಕೆ?!) ಕುರಿತು ಅನೇಕ ಪರ-ವಿರೋಧ ನಿಲುವುಗಳಿವೆ. 1975 ಜೂನ್ 25ರ ಮಧ್ಯರಾತ್ರಿಯಿಂದ ಹೇರಲಾದ ತುರ್ತು ಪರಿಸ್ಥಿತಿಗೆ ಇನ್ನೇನು 50 ವರ್ಷ ತುಂಬುತ್ತಿದೆ. ಅದನ್ನು ಹೇರಿದ್ದರ ಕಾರಣವೇನು? ಅದರಿಂದಾಗಿ ಜನಜೀವನದ ಮೇಲಾದ ನಕಾರಾತ್ಮಕ ಪರಿಣಾಮವೇನು ಮತ್ತು ಜನಸಂಘಕ್ಕೆ (ಈಗಿನ ಬಿಜೆಪಿ) ಆದ ರಾಜಕೀಯ ಲಾಭವೇನು? ಎಂಬುದರ ಅವಲೋಕನ ವಿದು.
‘ಉಳುವವನೇ ಹೊಲದೊಡೆಯ’ ಎಂಬ ಕಾನೂನು ಕರ್ನಾಟಕದಲ್ಲಿ ಆಗಷ್ಟೇ ಜಾರಿಯಾಗಿತ್ತು. ಇದರನ್ವಯ ಗೇಣಿದಾರರಿಗೆ ಭೂಮಿ ಹಂಚಿದ್ದು ಭೂಮಾಲೀಕರ ಆಕ್ರೋಶಕ್ಕೆ ಕಾರಣವಾಯಿತು. ಪರಿಣಾಮ ಹಲವು ಬಡವರ ಮನೆಗೆ ಬೆಂಕಿ ಹಚ್ಚುವ, ಮನೆ/ ಜಮೀನಿನಿಂದ ಹೊರದಬ್ಬುವ ಕಾನೂನು ಬಾಹಿರ ಚಟುವಟಿಕೆಗಳು ಗರಿಗೆದರಿದವು.
ಜತೆಗೆ ಗುಜರಾತ್, ಬಿಹಾರಗಳಲ್ಲಿನ ಕಾಂಗ್ರೆಸ್ ಸರಕಾರಗಳ ಭ್ರಷ್ಟಾಚಾರದ ವಿರುದ್ಧ ಜನಾಂದೋ ಲನ ಶುರುವಾಗಿ, ಗುಜರಾತ್ ಸರಕಾರವನ್ನು ಪ್ರಧಾನಿ ಇಂದಿರಾ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿ ಮಾಡುವಂತಾಯಿತು. ಹಾಗಿದ್ದೂ ಆಂದೋಲನದ ಕಿಚ್ಚು ತಗ್ಗದೆ ವಿಧ್ವಂಸಕ ಕೃತ್ಯಗಳು ಹೆಚ್ಚಾದವು.
ಇದನ್ನೂ ಓದಿ: Ravi Sajangadde Column: ಕಪ್ ನಮ್ಮದಾಯ್ತು, ಹಲವರ ಬದುಕು ಕಪ್ಪಾಯ್ತು !
ಇದರಿಂದ ಕುಪಿತರಾದ ಇಂದಿರಾ, ಬಿಹಾರದ ಸರಕಾರವನ್ನು ವಜಾಗೊಳಿಸದೆ ವಿರೋಧಿಗಳಿಗೆ ಸೆಡ್ಡು ಹೊಡೆದರು. ಆಂದೋಲನ ತೀವ್ರಗೊಂಡು ಅಂದಿನ ಜನಸಂಘದ ಮುಂದಾಳು ಜಯಪ್ರಕಾಶ್ ನಾರಾಯಣರ ನೇತೃತ್ವದಲ್ಲಿ ದೇಶಾದ್ಯಂತ ಪಸರಿಸಿತು. ಇದನ್ನು ಆರೆಸ್ಸೆಸ್, ಎಬಿವಿಪಿ, ಜನಸಂಘ, ಸಂಸ್ಥಾ ಕಾಂಗ್ರೆಸ್ ಮುಂತಾದ ಸಂಘಟನೆಗಳು ಬೆಂಬಲಿಸಿದವು.
ಕಾರ್ಮಿಕ ನೇತಾರ ಜಾರ್ಜ್ ಫೆರ್ನಾಂಡಿಸ್, ಕಾರ್ಮಿಕರ ಮುಷ್ಕರಕ್ಕೆ ಕರೆಕೊಟ್ಟ ಪರಿಣಾಮ, ದೇಶಾದ್ಯಂತ ಅಲ್ಲೋಲ-ಕಲ್ಲೋಲ ಸೃಷ್ಟಿಯಾಯಿತು. ಸರಕಾರಿ ಕಚೇರಿಗಳ ಮೇಲಿನ ದಾಳಿ, ರೈಲುಹಳಿಗಳ ಧ್ವಂಸ, ಪೊಲೀಸ್ ಮತ್ತು ಸೇನಾವಾಹನಗಳಿಗೆ ಬೆಂಕಿ ಹಚ್ಚುವಿಕೆ ಮುಂತಾದ ಕುಕೃತ್ಯಗಳು ಜಾಸ್ತಿಯಾದವು.
ಅಷ್ಟು ಹೊತ್ತಿಗಾಗಲೇ, ಪಾಕಿಸ್ತಾನದ ಜತೆಗಿನ ಯುದ್ಧದಿಂದಾಗಿ ಭಾರತದ ಆರ್ಥಿಕ ಪರಿಸ್ಥಿತಿಯೂ ಶೋಚನೀಯವಾಗಿತ್ತು. ಈ ದಂಗೆ-ಪ್ರತಿಭಟನೆಗಳಿಂದಾಗಿ ಆರ್ಥಿಕ ಸ್ಥಿತಿ, ಉತ್ಪಾದನಾ ವಲಯದ ಸಾಮರ್ಥ್ಯ ಕುಂಠಿತವಾಗಿ ಪರಿಸ್ಥಿತಿ ಬಿಗಡಾಯಿಸಿತು. ಇದನ್ನು ನಿಭಾಯಿಸಲು ಇಂದಿರಾ ವಿಫಲರಾಗಿ ದ್ದರು. ಇದೇ ವೇಳೆ, ಗುಜರಾತಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು, ಜನಸಂಘ ಬೆಂಬಲಿತ ಅಭ್ಯರ್ಥಿಗಳು ಬಹುಮತದಿಂದ ಆಯ್ಕೆಯಾಗಿ ಸರಕಾರ ರಚಿಸುವಂತಾಗಿದ್ದು ಇಂದಿರಾರಿಗೆ ಆಘಾತ ನೀಡಿತು.
ಸಾಲದೆಂಬಂತೆ, “1971ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಅಧಿಕಾರ ದುರುಪಯೋಗ ಪಡಿಸಿಕೊಂಡು, ಭ್ರಷ್ಟಾಚಾರವೆಸಗಿ ಗೆದ್ದಿದ್ದಾರೆ; ಅವರ ಗೆಲುವನ್ನು ಅಸಿಂಧುಗೊಳಿಸಬೇಕು" ಎಂಬುದಾಗಿ ಅವರೆದುರು ಸೋತಿದ್ದ ರಾಜ್ ನಾರಾಯಣ್ ಅಲಹಾಬಾದ್ ಹೈಕೋರ್ಟ್ ನಲ್ಲಿ ಖಟ್ಲೆ ಹೂಡಿದ್ದರು. ಇದನ್ನು ಪುರಸ್ಕರಿಸಿದ ಕೋರ್ಟು ‘ಇಂದಿರಾ ಗೆಲುವು ಅಮಾನ್ಯ’ ಎಂಬ ತೀರ್ಪಿತ್ತಿತು.
ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆಹೋದ ಇಂದಿರಾ, ಅಲ್ಲಿಂದಲೂ ವ್ಯತಿರಿಕ್ತ ತೀರ್ಪು ಹೊಮ್ಮುವ ಸುಳಿವು ಗೊತ್ತಾಗುತ್ತಿದ್ದಂತೆ, ‘ದೇಶದೆಲ್ಲೆಡೆ ಅರಾಜಕತೆ ತಾಂಡವವಾಡುತ್ತಿದ್ದು, ಈ ವೇಳೆ ತಾವು ಅಧಿಕಾರ ತ್ಯಜಿಸುವಂತಾದರೆ ವಿರೋಧಿಗಳ ಕೈ ಮೇಲಾಗಬಹುದು’ ಎಂದುಕೊಂಡು 1975 ಜೂನ್ 25ರ ರಾತ್ರಿ ತುರ್ತುಸ್ಥಿತಿ ಯನ್ನು ಘೋಷಿಸಿದರು.
ಅದೊಂಥರಾ ಅಘೋಷಿತ ಕರ್ಫ್ಯೂನಂಥ ವಾತಾವರಣ! ಹೀಗೆ ತುರ್ತುಸ್ಥಿತಿ ಹೇರಲು ಇಂದಿರಾ ರನ್ನು ಪ್ರೇರೇಪಿಸಿದ್ದು ಅವರ ಪರಮಾಪ್ತರು. ಅವರೇ- ಅಂದಿನ ಕೇಂದ್ರ ಕಾನೂನು ಸಚಿವ ಮಹಾ ರಾಷ್ಟ್ರದ ಎಚ್.ಆರ್.ಗೋಖಲೆ, ಹರಿಯಾಣದ ಬನ್ಸಿಲಾಲ್, ಬಂಗಾಳದ ಸಿದ್ಧಾರ್ಥ ಶಂಕರ ರಾಯ್ ಮತ್ತು ಮಧ್ಯಪ್ರದೇಶದ ವಿದ್ಯಾಚರಣ ಶುಕ್ಲಾ. ಇಂದಿರಾರ ಮಗ ಸಂಜಯ್ ಗಾಂಧಿ ಇವರೆಲ್ಲರ ನಾಯಕ. ತುರ್ತುಸ್ಥಿತಿ ಹೇರಿ ಪ್ರಜಾತಂತ್ರದ ಎಲ್ಲ ಮೂಲಭೂತ ಹಕ್ಕುಗಳನ್ನು ತಡೆ ಹಿಡಿಯ ಲಾಯಿತು.
ವಾರಂಟ್ ಕೂಡ ಕೊಡದೆ, ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ಜನಸಂಘದ ವಾಜಪೇಯಿ, ಆಡ್ವಾಣಿ, ಆರೆಸ್ಸೆಸ್ನ ಬಾಳಾಸಾಹೇಬ್ ದೇವರಸ್ ಮುಂತಾದ ವಿವಿಧ ಪಕ್ಷ/ ಸಂಘಟನೆಗಳ ಮುಖಂಡರನ್ನು ‘ಮೀಸಾ’ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಲಾಯಿತು. ಆರೆಸ್ಸೆಸ್ ಸಹಿತ 24 ಸಂಘಟನೆಗಳನ್ನು ಕಾರಣವಿಲ್ಲದೆ ನಿಷೇಧಿಸಲಾಯಿತು.
ಸರಕಾರದ ವಿರುದ್ಧ ಸಿಡಿದೆದ್ದವರು ಈ ಸಂಘಟನೆಗಳ ಸದಸ್ಯರಾಗಿದ್ದರು. ತುರ್ತುಸ್ಥಿತಿಯನ್ನು ವಿರೋಧಿಸಿದ ಸಾವಿರಾರು ವಿಚಾರವಾದಿ ಗಳು, ಪತ್ರಿಕಾ ಸಂಪಾದಕರು, ಸಾಹಿತಿಗಳು ಬಂಧನಕ್ಕೊಳ ಗಾದರು, ದೇಶಾದ್ಯಂತದ ಜೈಲುಗಳು ತುಂಬಿದವು. ಸರಕಾರದ ನೀತಿಗಳ ವಿರುದ್ಧ ಯಾವುದೇ ವಿಚಾರಗಳನ್ನು ಪ್ರಕಟಿಸದಂತೆ ಪತ್ರಿಕಾ ಕಚೇರಿಗಳಿಗೆ ಫರ್ಮಾನು ಹೊರಡಿಸಲಾಯಿತು. ಈ ಅಪಸವ್ಯದ ವಿರುದ್ಧ ಖಡ್ಗವಾಗಿ ಝಳಪಿಸಬೇಕಿದ್ದವರ ಲೇಖನಿಗಳು ಮೊನಚು ಕಳಕೊಂಡವು, ಕೆಲವು ಲೇಖನಿಗಳಲ್ಲಿ ಶಾಯಿಯೇ ಮುಗಿದಿತ್ತು!
ತುರ್ತುಸ್ಥಿತಿಯ ನಂತರ ಆಡ್ವಾಣಿಯವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, “ಅವರು ನಿಮ್ಮನ್ನು ಬಾಗಲು ಹೇಳಿದರೆ, ನೀವು ಬಾಗುವ ಬದಲು ನೆಲದಲ್ಲಿ ಹೊರಳಿದಿರಿ" ಎಂದರು. ಇದು ಅಂದು ಮಾಧ್ಯಮಗಳು ನಡೆದುಕೊಂಡ ರೀತಿ! ಮಹಾರಾಷ್ಟ್ರದ ದುರ್ಗಾಮಾತಾ ದೇಶಮುಖ್ ಮತ್ತು ಕರ್ನಾಟಕದ ಶಿವರಾಮ ಕಾರಂತರು ಮಾತ್ರವೇ ಕೇಂದ್ರವು ತಮಗೆ ನೀಡಿದ್ದ ಪ್ರಶಸ್ತಿಗಳನ್ನು ವಾಪಸ್ ಮಾಡಿ ತುರ್ತುಸ್ಥಿತಿಯನ್ನು ಖಂಡಿಸಿದರು, ಉಳಿದವರಾರೂ ತುಟಪಿಟಿಕ್ ಎನ್ನಲಿಲ್ಲ!
ಜನರ ನಡುವಿನ ನಾಯಕರು ಮತ್ತು ಜನಪರ ಸಂಘಟನೆಗಳ ಸದಸ್ಯರು ಹೆಸರು/ಚಹರೆ ಬದಲಿಸಿ, ಪೊಲೀಸರ ಕಣ್ಣುತಪ್ಪಿಸಿ, ಭೂಗತವಾಗಿದ್ದು ಕೊಂಡು ತುರ್ತುಸ್ಥಿತಿಯ ಕರಾಳತೆಯನ್ನು ಹಳ್ಳಿ ಹಳ್ಳಿಯಲ್ಲೂ ವಿವರಿಸಿದರು. ತುರ್ತುಸ್ಥಿತಿ ಘೋಷಣೆಯ ನಂತರದ ದಿನಗಳಲ್ಲಿ ದೇಶದಲ್ಲಿ ಸಮಯಕ್ಕೆ ಸರಿಯಾಗಿ ರೈಲುಗಳು ಓಡುತ್ತಿದ್ದವು, ಸರಕಾರಿ ನೌಕರರು ಕೆಲಸಕ್ಕೆ ಹಾಜರಾಗುತ್ತಿದ್ದರು.
ಲಂಚಾವತಾರ ಕಡಿಮೆಯಾದಂತೆ ಭಾಸವಾಗಿತ್ತು. ಆಗಾಗ ನಡೆಯುತ್ತಿದ್ದ ಪ್ರತಿಭಟನೆ, ಹರತಾಳಗಳು ಬಂದ್ ಆಗಿದ್ದವು. ಕಾರ್ಖಾನೆಗಳಲ್ಲಿ ಉತ್ಪಾದನೆ ಸ್ಥಿರವಾಗಿತ್ತು. ಆಲಸ್ಯ, ಅಸಡ್ಡೆ, ಉಡಾಫೆ ಇದ್ದವರಲ್ಲಿ ಕೆಲ ತಿಂಗಳಾದರೂ ಶಿಸ್ತು ಮೂಡಿಸಿದ್ದು ತುರ್ತುಸ್ಥಿತಿಯ ಪ್ಲಸ್ ಪಾಯಿಂಟ್!
ಆಗ ಪರಿಸ್ಥಿತಿ ಅವಲೋಕಿಸಿದ ಇಂದಿರಾ, ತುರ್ತುಸ್ಥಿತಿಗೆ ಅಂತ್ಯಹಾಡಿ ಜನರ ವಿಶ್ವಾಸವನ್ನು ಮತ್ತೊಮ್ಮೆ ಗೆಲ್ಲುವ ಹುಮ್ಮಸ್ಸಿನೊಂದಿಗೆ ಚುನಾವಣೆ ಘೋಷಣೆಯಾಗುವಂತೆ ನೋಡಿಕೊಂಡರು. ತುರ್ತುಸ್ಥಿತಿಯ ಘೋಷಣೆಯು ಕಾಂಗ್ರೆಸ್ನ ಜನಪ್ರಿಯತೆ ಕುಸಿಯುವಂತಾಗಲು ಹೊಡೆದ ಮೊದಲ ಮೊಳೆಯಾದರೆ, ಚುನಾವಣಾ ಘೋಷಣೆಯು ಕಾಂಗ್ರೆಸ್ ಪಾರಮ್ಯದ ಮೇಲೆ ಇಂದಿರಾ/ ಸಂಜಯ್ ಹೊಡೆದ ಎರಡನೇ ಮೊಳೆಯಾಗಿತ್ತು!
1977ರ ಮಾರ್ಚ್ 16-20ರ ನಡುವೆ ಚುನಾವಣೆ ನಡೆಯಿತು, 21ಕ್ಕೆ ತುರ್ತುಸ್ಥಿತಿ ಅಂತ್ಯವಾಯಿತು. ಚುನಾವಣೆಯಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾಪಕ್ಷ ಗೆದ್ದು, ದೇಶದ ಮೊದಲ ಕಾಂಗ್ರೆಸ್ಸೇತರ ಸರಕಾರವನ್ನು ರಚಿಸಿತು. ಜನರ ಬದುಕನ್ನು ಬರ್ಬಾದ್ ಮಾಡಿದ ತುರ್ತುಸ್ಥಿತಿಯ ಹೇರಿಕೆಯಂಥ ಸ್ವಯಂಕೃತಾಪರಾಧದ ಫಲವಾಗಿ ಇಂದಿರಾ ಅಧಿಕಾರದಿಂದ ಕೆಳಗಿಳಿಯ ಬೇಕಾ ಯಿತು. ಜೈಲಿನಲ್ಲಿದ್ದ ಹಲವು ಜನ ನಾಯಕರು ಬಿಡುಗಡೆಯಾದರು. ಅಂದು ಇಂದಿರಾ ತುರ್ತುಸ್ಥಿತಿ ಯನ್ನು ಘೋಷಿಸಿದ್ದರ ಫಲವಾಗಿ ಜನಸಂಘ, ಜನತಾ ಪಕ್ಷ ಮತ್ತು ಈಗಿನ ಬಿಜೆಪಿ ದೇಶದಲ್ಲಿ ಕಾಲ ಕ್ರಮದಲ್ಲಿ ಅಸ್ತಿತ್ವ ಕಂಡುಕೊಂಡು ಬೇರು ಬಿಡುವಂತಾಯಿತು.
ದಿನಗಳೆದಂತೆ ಬಿಜೆಪಿ ಕೇಂದ್ರದಲ್ಲಿ ಮತ್ತು ವಿವಿಧ ರಾಜ್ಯಗಳಲ್ಲಿ ಗದ್ದುಗೆ ಅಲಂಕರಿಸು ವಂತಾಯಿತು. ಅಷ್ಟರ ಮಟ್ಟಿಗೆ ಬಿಜೆಪಿಯು ಇಂದಿರಾರಿಗೆ ಆಭಾರಿಯಾಗಿರಲೇಬೇಕು. ಏಕೆಂದರೆ, ಒಂದೊಮ್ಮೆ ಇಂದಿರಾ ತುರ್ತುಸ್ಥಿತಿಯನ್ನು ಘೋಷಿಸಿದೇ ಇದ್ದಿದ್ದರೆ, ಬಿಜೆಪಿಯು ಇಂದು ದೇಶದೆಲ್ಲೆಡೆ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲವೇನೋ?!
ಪ್ರಜಾಪ್ರಭುತ್ವದ ಅಸ್ತಿತ್ವವನ್ನು ಅಲುಗಾಡಿಸಿದ ತುರ್ತುಸ್ಥಿತಿಯ ಹೇರಿಕೆಯಾಗಿ 50 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ, ಪುತ್ರವ್ಯಾಮೋಹದ ಉದಾಹರಣೆಯಾಗಿ ಇಂದಿರಾ ಮತ್ತು ಪ್ರಮಾದ ಎಸಗಿದ ವಿಕ್ಷಿಪ್ತ ವ್ಯಕ್ತಿತ್ವವಾಗಿ ಅವರ ಪುತ್ರ ಸಂಜಯ್ ಗಾಂಧಿ ನೆನಪಾಗುತ್ತಾರೆ.
ತುರ್ತುಸ್ಥಿತಿಯ ಆ ದಿನಗಳನ್ನು ಮೆಲುಕು ಹಾಕುವ ಅನೇಕರು ಈಗಲೂ ನಮ್ಮೊಂದಿಗಿದ್ದಾರೆ. ಅಂದು, ಅಕ್ಕಿಯ ದಾಸ್ತಾನು ಮತ್ತು ಸಾಗಿಸುವಿಕೆಗೆ ಇದ್ದ ನಿರ್ಬಂಧ, ಅಽಕಾರಿಗಳಿಗೆ ಗೊತ್ತಾಗದಂತೆ ರಾತ್ರಿ ಸಂಚಾರದ ಮೂಲಕ ಅಕ್ಕಿ ತಂದ ಕಥೆ ಇತ್ಯಾದಿಯನ್ನು ನಮ್ಮ ತಂದೆಯವರು ಆಗಾಗ ನೆನಪಿಸಿ ಕೊಳ್ಳುವುದಿದೆ.
ಇಂದಿರಾರ ಸರ್ವಾಧಿಕಾರಿ ಧೋರಣೆ, ಪೊಲೀಸರ ದಬ್ಬಾಳಿಕೆಗಳನ್ನು ನೆನೆದು ಈಗಲೂ ಕೆಲವರು ಕೆಂಡಕಾರುತ್ತಾರೆ. ಕೇರಳದ ಕಾಸರಗೋಡು ತಾಲೂಕಿನ ಪೈವಳಿಕೆಯ ಕಾಯರ್ಕಟ್ಟೆಯ, ಈಗ ಶಿಥಿಲವಾಗಿರುವ ಕಟ್ಟಡದ ಗೋಡೆಗಳ ಮೇಲೆ, ತುರ್ತುಸ್ಥಿತಿ ಮತ್ತು ಪತ್ರಿಕಾ ಸ್ವಾತಂತ್ರ್ಯದ ದಮನ ನೀತಿ ವಿರೋಧಿಸಿ ಬರೆದ ಬರಹಗಳು ಈಗ ಒಂದಷ್ಟು ಮಾಸಿದ್ದರೂ, ಆಗಿನ ಪರಿಸ್ಥಿತಿಯ ಕರಾಳತೆಗೆ ಕೈಗನ್ನಡಿ ಹಿಡಿಯುವಂತಿವೆ!
ತುರ್ತುಸ್ಥಿತಿಯ ವೇಳೆ ಭೂಗತವಾಗಿದ್ದುಕೊಂಡು ಪತ್ರಿಕೆ ಹೊರತಂದು ಹಂಚಿದವರ, ವ್ಯವಸ್ಥೆಯ ವಿರುದ್ಧದ ಹೋರಾಟಕ್ಕೆ ಜನರನ್ನು ಪ್ರೇರೇಪಿಸಿದವರ ಒಂದೊಂದು ಕಥೆಯೂ ವಿಭಿನ್ನ. ರಾಷ್ಟ್ರೋ ತ್ಥಾನ ಸಾಹಿತ್ಯ ಹೊರತಂದ, ಹೊ.ವೆ.ಶೇಷಾದ್ರಿಯವರ ಪ್ರಧಾನ ಸಂಪಾದಕತ್ವದ ‘ಭುಗಿಲು’ ಎಂಬ ಪುಸ್ತಕವನ್ನೊಮ್ಮೆ ಓದಿದರೆ, ಆ ಕರಾಳ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಆರೆಸ್ಸೆಸ್ ಕಾರ್ಯ ಕರ್ತರು ಅನುಭವಿಸಿದ ಕಷ್ಟಗಳ ಅರಿವಾದೀತು.
ಸರ್ವಾಧಿಕಾರ ಮತ್ತು ಪುತ್ರವ್ಯಾಮೋಹದ ಮಿಶ್ರಣವಾಗಿದ್ದ ಇಂದಿರಾರ ನೇತೃತ್ವದ ಕಾಂಗ್ರೆಸ್ ಸರಕಾರವು ದೇಶದ ಮೇಲೆ ಹೇರಿದ ಕರಾಳ ಹೊರೆಯೇ ತುರ್ತುಸ್ಥಿತಿ. ಇನ್ಯಾವತ್ತೂ ಯಾವುದೇ ಸರಕಾರವು ಈ ಜನವಿರೋಧಿ ಕ್ರಮಕ್ಕೆ ಮುಂದಾಗದಿರಲಿ.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)