M J Akbar Column: ನಾಲ್ಕು ಸಮುದ್ರಗಳ ನಡುವಿನ ನಿರಂತರ ಯುದ್ದ
ಸೋವಿಯತ್ ಯೂನಿಯನ್ ತನ್ನ ಕಮ್ಯುನಿಸ್ಟ್ ಸಿದ್ಧಾಂತದ ಬೋಗಸ್ ನೆಪ ಹೇಳಿ ತ್ಸಾರಿಸ್ಟ್ ಆಳ್ವಿಕೆ ಯನ್ನೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಕಳೆದೊಂದು ಶತಮಾನದಲ್ಲಿ ಅಸಂಖ್ಯ ಯುದ್ಧಗಳು ನಡೆದಿವೆ. ಅವುಗಳಲ್ಲಿ, ಬೇರೆ ಬೇರೆ ಸಂಗತಿಗಳನ್ನು ಆಧರಿಸಿ ಬೇರೆ ಬೇರೆ ಫಲಿತಾಂಶಗಳೇ ಬಂದಿವೆ.


ಅಕ್ಬರ್ ನಾಮಾ
ಎಂ.ಜೆ.ಅಕ್ಬರ್
(ಭಾಗ-1)
ಜಗತ್ತು ಮತ್ತೊಮ್ಮೆ ಯುದ್ಧದ ಗರ್ಭ ಧರಿಸಿದೆ. ಇದರ ಅಪ್ಪ ಯಾರು ಎಂಬುದೇ ಈಗಿನ ಪ್ರಶ್ನೆ. ವಂಶವಾಹಿಗಳು ಸಾಯುವುದಿಲ್ಲ. ಈಗ ನಡೆಯುತ್ತಿರುವುದೆಲ್ಲ 1914 ಮತ್ತು 1918ರ ನಡುವೆ ನಡೆದಿದ್ದ ಬೆಳವಣಿಗೆಗಳ ಇನ್ನೊಂದು ರೂಪವಷ್ಟೆ. ಆಗ ಏನು ನಡೆದಿತ್ತು? ಒಟ್ಟೋಮನ್ ಸಾಮ್ರಾಜ್ಯ ಪತನಗೊಂಡಿತ್ತು.
ವಿಜಯಪತಾಕೆ ಹಾರಿಸಿದ್ದ ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಒಟ್ಟೋಮನ್ ಸಾಮ್ರಾಜ್ಯದ ಜಾಗದಲ್ಲಿ ನವ ವಸಾಹತುಶಾಹಿ ವ್ಯವಸ್ಥೆಯನ್ನು 1920ರ ದಶಕದಲ್ಲಿ ಸ್ಥಾಪನೆ ಮಾಡಿದ್ದವು. ಯುರೋಪಿನಲ್ಲಿ ದಮನಕ್ಕೊಳಗಾದ ಯಹೂದಿಗಳಿಗೆ ಬೈಬಲ್ ಹುಟ್ಟಿದ ನೆಲದಲ್ಲಿ ನೆಲೆ ಕಲ್ಪಿಸು ವುದಾಗಿ ಬ್ರಿಟನ್ ಭರವಸೆ ನೀಡಿತ್ತು.
ಸೋವಿಯತ್ ಯೂನಿಯನ್ ತನ್ನ ಕಮ್ಯುನಿಸ್ಟ್ ಸಿದ್ಧಾಂತದ ಬೋಗಸ್ ನೆಪ ಹೇಳಿ ತ್ಸಾರಿಸ್ಟ್ ಆಳ್ವಿಕೆ ಯನ್ನೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಕಳೆದೊಂದು ಶತಮಾನದಲ್ಲಿ ಅಸಂಖ್ಯ ಯುದ್ಧಗಳು ನಡೆದಿವೆ. ಅವುಗಳಲ್ಲಿ, ಬೇರೆ ಬೇರೆ ಸಂಗತಿಗಳನ್ನು ಆಧರಿಸಿ ಬೇರೆ ಬೇರೆ ಫಲಿತಾಂಶಗಳೇ ಬಂದಿವೆ.
ಈಗ ನಡೆಯುತ್ತಿರುವ ‘ಸಾಂಕ್ರಾಮಿಕ ಯುದ್ಧ’ ಮುಖ್ಯವಾಗಿ ನಾಲ್ಕು ಸಮುದ್ರಗಳ ದಂಡೆಯಲ್ಲಿರುವ ದೇಶಗಳನ್ನೇ ಕೇಂದ್ರವಾಗಿಸಿಕೊಂಡು ನಡೆಯುತ್ತಿದೆ. ಮೆಡಿಟರೇನಿಯನ್ ಸಮುದ್ರ, ಕಪ್ಪು ಸಮುದ್ರ, ಕ್ಯಾಸ್ಪಿಯನ್ ಸಮುದ್ರ ಮತ್ತು ಕೆಂಪು ಸಮುದ್ರಕ್ಕೆ ಅಂಟಿಕೊಂಡಿರುವ ದೇಶಗಳು ಯುದ್ಧದಲ್ಲಿ ತೊಡಗಿವೆ. ಆದರೆ ಈ ಸಮುದ್ರದ ದಂಡೆಗಳು ಇನ್ನೂ ವಿಸ್ತಾರವಾದ ಜಗತ್ತಿಗೆ ಹರಡಿಕೊಂಡಿವೆ.
ಇದನ್ನೂ ಓದಿ: M J Akbar Column: ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಅತಿದೊಡ್ಡ ಗಿಫ್ಟ್ ಇದು !
ಮೆಡಿಟರೇನಿಯನ್ ಸಮುದ್ರದ ದಂಡೆಯಲ್ಲಿ ಯುರೋಪ್ ಹಾಗೂ ಆಫ್ರಿಕಾ ಖಂಡಗಳಿವೆ. ಕೆಂಪು ಸಮುದ್ರವು ಹಿಂದೂ ಮಹಾಸಾಗರದವರೆಗೂ ವಿಸ್ತರಿಸಿದೆ. ಕಪ್ಪು ಸಮುದ್ರದ ದಂಡೆಯಲ್ಲಿ ಪ್ರಮುಖ ಬಂದರೆಂದರೆ ಉಕ್ರೇನ್ನ ಕ್ರಿಮಿಯಾ ಬಂದರು. ಅದು ಈಗ ರಷ್ಯಾದ ವಶದಲ್ಲಿದೆ. ಕಪ್ಪು ಸಮುದ್ರದ ನೀರು ಟರ್ಕಿ, ಜಾರ್ಜಿಯಾ, ಬಲ್ಗೇರಿಯಾ ಮತ್ತು ರೊಮೇನಿ ಯಾವನ್ನೂ ತಲುಪುತ್ತದೆ. ಕ್ಯಾಸ್ಪಿಯನ್ ಸಮುದ್ರವು ಇರಾನ್, ರಷ್ಯಾ, ಕಜಖಸ್ತಾನ್, ಅಜರ್ಬೈಜನ್ ಮತ್ತು ತುರ್ಕ್ಮೆನಿಸ್ತಾನಗಳಿಗೆ ಸಾಗರೋತ್ಪನ್ನಗಳನ್ನೂ, ಹಡಗು ಮಾರ್ಗವನ್ನೂ ಒದಗಿಸುತ್ತದೆ.
ಮಹಾಯುದ್ದದಲ್ಲಿದೆ ಮೂಲ
20ನೇ ಶತಮಾನದಲ್ಲಿ ನಡೆದ ಒಂದು ಮತ್ತು ಎರಡನೇ ವಿಶ್ವ ಮಹಾಯುದ್ಧಗಳ ನಡುವೆ ಇರುವ ಕೊಂಡಿ ಇಂದು ಶಾಲಾ ಮಕ್ಕಳ ಪುಸ್ತಕಕ್ಕೆ ಪಠ್ಯವಾಗಿದೆ. ಆದರೆ, ಆ ಯುದ್ಧಗಳ ‘ಆಫ್ಟರ್ ಎಫೆಕ್ಟ್’ ಬಗ್ಗೆ ಮಾತ್ರ ಜನರಿಗೆ ಇನ್ನೂ ಅಸ್ಪಷ್ಟವಾಗಿ ಒಂದಷ್ಟು ತಿಳಿದಿದೆಯೇ ಹೊರತು, ಸ್ಪಷ್ಟವಾಗಿ ಇದಮಿತ್ಥಂ ಎಂಬ ಕಲ್ಪನೆ ಇಲ್ಲ. ಬೋಸ್ನಿಯಾದ ರಾಜಧಾನಿ ಸರಾಜೆವೋ ಮೇಲೆ ಭಯೋತ್ಪಾದ ಕರು ಬಾಂಬ್ ದಾಳಿ ನಡೆಸಿದ ನೆಪದಲ್ಲಿ ಮೊದಲ ವಿಶ್ವ ಮಹಾಯುದ್ಧ ಆರಂಭವಾಗಿತ್ತು.
1914ರಲ್ಲಿ ಆರಂಭವಾದ ಆ ಯುದ್ಧ ಹೆಚ್ಚುಕಮ್ಮಿ 1918ರಲ್ಲಿ ನಿಂತಿತು. ಯುರೇಷಿಯಾದ ಸರಹದ್ದುಗಳನ್ನು ಶತಮಾನಗಳ ಕಾಲ ಆಳಿದ್ದ ರಷ್ಯಾದ ತ್ಸಾರ್ಗಳು, ಹಂಗೇರಿಯ ಆಸ್ಟ್ರೋಗಳು ಮತ್ತು ಕ್ಯಾಲಿಫೇಟ್ನ ಒಟ್ಟೋಮನ್ಗಳು ಆ ಯುದ್ಧದಲ್ಲಿ ನಿರ್ನಾಮವಾದರು. 1854ರ ಕ್ರಿಮಿ ಯನ್ ಯುದ್ಧದಲ್ಲೇ ಒಟ್ಟೋಮನ್ನರ ಅವಸಾನ ಆರಂಭವಾಗಿತ್ತು. ಆದರೆ ಇವರ ಮೈತ್ರಿಕೂಟ ದಲ್ಲಿದ್ದ ರಷ್ಯಾ, ಬ್ರಿಟನ್ ಮತ್ತು ಫ್ರಾನ್ಸ್ನ ಬೇರೆ ಬೇರೆ ಗುರಿಗಳಿಂದಾಗಿ ಸರ್ವನಾಶ ಮುಂದೂಡಿಕೆ ಯಾಗುತ್ತಿತ್ತು.
1914-18ರ ನಡುವಿನ ವಿಶ್ವ ಮಹಾಯುದ್ಧದಲ್ಲಿ ಒಟ್ಟೋಮನ್ನರು ಜರ್ಮನಿಯ ಜತೆ ಕೈಜೋಡಿ ಸಿದಾಗ ಅವರ ಸರ್ವನಾಶ ಖಚಿತವಾಯಿತು. ಇದನ್ನೊಂದು ಜಿಹಾದ್ ಎಂದೇ ಅವರು ಕರೆದಿದ್ದರು. ಭಾರತೀಯ ಮುಸ್ಲಿಮರನ್ನು ಬ್ರಿಟಿಷ್ ಸೇನೆಯಿಂದ ದೂರವಿಡುವುದು ಕೂಡ ಈ ಜಿಹಾದ್ ನ ಉದ್ದೇಶಗಳಲ್ಲಿ ಒಂದಾಗಿತ್ತು. ಆದರೆ, ಪಂಜಾಬ್ ಮತ್ತು ಗಡಿಭಾಗದ ಬಡವರಿಗೆ ಧರ್ಮಕ್ಕಿಂತ ಹೆಚ್ಚಾಗಿ ಅದು ಹೊಟ್ಟೆಪಾಡಿನ ವಿಷಯವಾಗಿತ್ತು.
ಹೀಗಾಗಿ ಅವರು ಹಣದಾಸೆಗಾಗಿ ಬ್ರಿಟಿಷ್ ಸೇನೆಗೆ ಸೇರಿದ್ದರು. ವೈರುಧ್ಯವೆಂದರೆ ಭಾರತೀಯ ಮುಸ್ಲಿಮರು ಒಟ್ಟೋಮನ್ನರ ಸೋಲಿನ ನಂತರವೇ ಈ ಜಿಹಾದ್ನಲ್ಲಿ ಆಸಕ್ತಿ ತಾಳಿದರು. ಆದರೆ ಇತಿಹಾಸದಲ್ಲಿ ದಾಖಲಾದ ವೈರುಧ್ಯ ಇದೊಂದೇ ಅಲ್ಲ.
ಬ್ರಿಟನ್ ಮತ್ತು ಫ್ರಾನ್ಸ್ನ ಕಳ್ಳಾಟ
1918ರಲ್ಲಿ ಜಯ ಗಳಿಸಿದ ಪ್ರಮುಖ ದೇಶಗಳಾದ ಬ್ರಿಟನ್ ಮತ್ತು ಫ್ರಾನ್ಸ್ಗಳು ಏಷ್ಯಾ ಮತ್ತು ಆಫ್ರಿಕಾದಲ್ಲಿ ನಾನಾ ದೇಶಗಳನ್ನು ಆಳುತ್ತಿದ್ದ ವಸಾಹತುಶಾಹಿ ದೇಶಗಳೂ ಆಗಿದ್ದವು. ಟರ್ಕಿಯ ಆಳ್ವಿಕೆಯಿಂದ ಬಿಡುಗಡೆಗೊಂಡ ಅರಬ್ ಭೂಪ್ರದೇಶಗಳಿಗೆ ನಿಜವಾಗಿಯೂ ಸ್ವಾತಂತ್ರ್ಯ ನೀಡಿ ತಮ್ಮ ಮೈಮೇಲೆ ತಾವೇ ಚಪ್ಪಡಿ ಎಳೆದುಕೊಳ್ಳುವುದು ಯಾವ ರೀತಿಯಲ್ಲೂ ಬ್ರಿಟನ್ ಮತ್ತು ಫ್ರಾನ್ಸ್ಗೆ ತಕ್ಕುದಾದ ನಡೆ ಆಗಿರಲಿಲ್ಲ. 1914ರಲ್ಲಿ ನಡೆದ ಪಶ್ಚಿಮ ಏಷ್ಯಾ ಯುದ್ಧದ ಮೊದಲ ಹಂತದಲ್ಲಿ ಸೋತಿದ್ದ ಈ ದೇಶಗಳು ಅರಬ್ ಬುಡಕಟ್ಟು ಪಂಗಡಗಳ ಮುಖ್ಯಸ್ಥರಿಗೆ ಸ್ವಾತಂತ್ರ್ಯ ನೀಡುವುದಾಗಿ ಭರವಸೆ ನೀಡಿದ್ದವು. ಆದರೆ ನಿಜವಾಗಿಯೂ ಸ್ವಾತಂತ್ರ್ಯ ನೀಡುವ ಉದ್ದೇಶ ಬ್ರಿಟನ್ ಮತ್ತು ಫ್ರಾನ್ಸ್ಗೆ ಇರಲಿಲ್ಲ. ಈ ವಂಚಕ ನೀತಿ ‘ಸೈಕ್ಸ್-ಪಿಕೋಟ್’ ಒಪ್ಪಂದದಲ್ಲಿ ರಹಸ್ಯವಾಗಿ ದಾಖಲಾಗಿತ್ತು.
ಇಡೀ ಯುರೋಪ್ನಲ್ಲಿ ಬೆಳಕು ಆರುತ್ತಿದೆ. ನಮ್ಮ ಜೀವಮಾನದಲ್ಲಿ ಇನ್ನೊಮ್ಮೆ ಬೆಳಕು ನೋಡು ವುದಿಲ್ಲ’ ಎಂದು ಆಗ ಬ್ರಿಟನ್ನಿನ ವಿದೇಶಾಂಗ ಸಚಿವರಾಗಿದ್ದ ಸರ್ ಎಡ್ವರ್ಡ್ ಗ್ರೇ ಅವರು 1914ರ ಆಗಸ್ಟ್ 3ರಂದು ಯುರೋಪಿನ ದೊಡ್ಡ ದೊಡ್ಡ ಶಕ್ತಿಗಳು ವಿಶ್ವ ಮಹಾಯುದ್ಧಕ್ಕೆ ಕಹಳೆ ಊದು ತ್ತಿದ್ದಂತೆಯೇ ಹೇಳಿಕೆ ನೀಡಿದ್ದರು. ಅವರ ಭವಿಷ್ಯ ನಿಜವಾಯಿತು. ಬೆಳಕು ಒಂದು ಜೀವಮಾನ ಕ್ಕಿಂತ ಹೆಚ್ಚಿನ ಅವಧಿಗೆ ಆರಿ ಹೋಗಿತ್ತು. ಏಕೆಂದರೆ ವಂಚನೆಯಿಂದ ಅಸ್ಥಿರತೆ ಉಂಟಾಗುವುದು ಶತಃಸಿದ್ಧ. ಯುರೇಷಿಯಾದಲ್ಲಿ ಈಗಲೂ ಬೆಳಕು ಮೂಡಿಲ್ಲ. ಕತ್ತಲ ಆಗಸದಲ್ಲಿ ಡ್ರೋನ್ ಮತ್ತು ಮಿಸೈಲ್ಗಳು ಬೆಳಕು ಮೂಡಿಸುತ್ತಿವೆ.
ಪಶ್ಚಿಮದ ದೇಶಗಳು ಮಧ್ಯಪ್ರಾಚ್ಯವೆಂದು ಕರೆಯುವ ಮತ್ತು ನಿಜವಾದ ನಕ್ಷೆಯಲ್ಲಿ ಪಶ್ಚಿಮ ಏಷ್ಯಾ ಎಂದು ಗುರುತಿಸಲ್ಪಡುವ ಅರಬ್ ಪ್ರದೇಶಗಳಲ್ಲಿ ಬ್ರಿಟಿಷರು ಮತ್ತು ಫ್ರೆಂಚರ ನಡುವೆ ಏರ್ಪಟ್ಟ ರಹಸ್ಯ ಒಪ್ಪಂದದಿಂದಾಗಿ ಯುದ್ಧ ಹೆಚ್ಚುಕಮ್ಮಿ ಸಾರ್ವತ್ರಿಕವೂ ಸಾರ್ವಕಾಲಿಕವೂ ಆಗಿ ಹೋಯಿತು. ಬ್ರಿಟನ್ನಿನ ಮಾರ್ಕ್ ಸೈಕ್ಸ್ ಮತ್ತು ಫ್ರಾನ್ಸ್ ನ ಫ್ರಾಂಕೋಯಿಸ್ ಜಾರ್ಜಸ್ ಪಿಕೋಟ್ ನಡುವೆ ಸಾಕಷ್ಟು ಚರ್ಚೆಗಳ ಬಳಿಕ ಏರ್ಪಟ್ಟ ಈ ಒಪ್ಪಂದದಲ್ಲಿ ಅರಬ್ ಪ್ರದೇಶಗಳನ್ನು ಬೇರೆ ಬೇರೆ ಪ್ರಭಾವ ವಲಯಗಳನ್ನಾಗಿ ವಿಂಗಡಿಸಿ ಬ್ರಿಟನ್, ಫೃಾನ್ಸ್, ಇಟಲಿ ಹಾಗೂ ತ್ಸಾರ್ಗಳ ರಷ್ಯಾದ ಅಧಿಪತ್ಯಕ್ಕೆ ನೀಡಲಾಗಿತ್ತು.
ಇರಾಕ್ ಮತ್ತು ಅರೇಬಿಯಾದ ಒಳ ಪ್ರದೇಶಗಳನ್ನು ಬ್ರಿಟನ್ ಪಡೆದಿತ್ತು. ಫ್ರಾನ್ಸ್ನ ಪಾಲಿಗೆ ಸಿರಿಯಾ, ಲೆಬನಾನ್ ಮತ್ತು ದಕ್ಷಿಣ ಟರ್ಕಿಯ ಸಣ್ಣದೊಂದು ಭಾಗವೂ ಸೇರಿದಂತೆ ಮೆಡಿಟರೇನಿ ಯನ್ ಸಮುದ್ರದ ಪೂರ್ವಕ್ಕಿರುವ ‘ನೀಲಿ ವಲಯ’ ಹೋಯಿತು. ರಷ್ಯಾಕ್ಕೆ ಅರ್ಮೇನಿಯಾವನ್ನು ನೀಡಲಾಯಿತು. ಪ್ಯಾಲೆಸ್ತೀನನ್ನು ಯಾವುದೇ ಅಂತಾರಾಷ್ಟ್ರೀಯ ಆಡಳಿತಕ್ಕೆ ನಿರ್ದಿಷ್ಟವಾಗಿ ವಹಿಸಿಕೊಡಲಿಲ್ಲ. ಆದರೆ ಅದು ಬ್ರಿಟನ್ನಿನ ಸರಹದ್ದಿಗೆ ಒಳಪಟ್ಟಿತು.
1916ರ ಮೇ 16ರಂದು ‘ಸೈಕ್ಸ್- ಪಿಕೋಟ್’ ಒಪ್ಪಂದಕ್ಕೆ ಸರ್ ಎಡ್ವರ್ಡ್ ಅವರು ಬ್ರಿಟನ್ನಿನ ವಿದೇಶಾಂಗ ಮಂತ್ರಿಯ ಹುದ್ದೆಯನ್ನು ಕಳೆದುಕೊಳ್ಳುವುದಕ್ಕಿಂತ ಸ್ವಲ್ಪ ಮೊದಲು ಸಹಿ ಹಾಕಿ ದ್ದರು. ಯಹೂದಿಗಳಿಗೆ ಪ್ರತ್ಯೇಕ ನಾಡಿನ ಚಿಂತನೆ 1947ರಲ್ಲಿ ಸರ್ ಎಡ್ವರ್ಡ್ ಗ್ರೇ ಉತ್ತರಾಧಿಕಾರಿ ಆರ್ಥರ್ ಜೇಮ್ಸ್ ಬಾಲೋರ್ ಎಂಬುವವರು ಪ್ಯಾಲೆಸ್ತೀನ್ನಲ್ಲಿ ಯಹೂದಿಗಳಿಗೆ ಒಂದು ಶಾಶ್ವತ ನೆಲೆ ಕಲ್ಪಿಸುವ ಚಿಂತನೆಯನ್ನು ಬೆಂಬಲಿಸಿದರು.
ಅದೇ ವರ್ಷ ಮಾಸ್ಕೋದಲ್ಲಿ ಅಲ್ಲೋಲಕಲ್ಲೋಲ ಉಂಟಾಗಿ ಕೆಂಪು ಧ್ವಜ ಅಧಿಕಾರಕ್ಕೆ ಬಂತು. ಲಿಯೋನ್ ಟ್ರಾಟ್ಸ್ಕಿ ಸೋವಿಯತ್ ಯೂನಿಯನ್ ನ ವಿದೇಶಾಂಗ ಮಂತ್ರಿಯಾದರು. ಅವರು ಸೈಕ್ಸ್-ಪಿಕೋಟ್ ನಡುವಿನ ರಹಸ್ಯ ಒಪ್ಪಂದವನ್ನು ಬಹಿರಂಗಗೊಳಿಸಿದರು. ಆದರೆ ಅರಬ್ ನಾಯಕರು ಅದನ್ನು ನಂಬಲಿಲ್ಲ. ಲಂಡನ್ ಮತ್ತು ಪ್ಯಾರಿಸ್ನಿಂದ ಏನು ಸಂದೇಶ ಬರುತ್ತಿತ್ತೋ ಅದನ್ನೇ ಅವರು ನಂಬಿದ್ದರು. ಆದರೆ ಕ್ರಮೇಣ ಬ್ರಿಟನ್ ಮತ್ತು ಫ್ರಾನ್ಸ್ ತಮಗೆ ಸ್ವಾತಂತ್ರ್ಯ ನೀಡು ವುದಿಲ್ಲ ಎಂಬುದು ಅವರಿಗೆ ಖಚಿತವಾಗತೊಡಗಿತು.
ಸ್ವಾತಂತ್ರ್ಯದ ಬದಲು ಅಲ್ಲಿ ನವ ವಸಾಹತುಶಾಹಿ ವ್ಯವಸ್ಥೆ ಜಾರಿಗೆ ಬರತೊಡಗಿತು. ಆಗ ಅರಬ್ಬರಿಗೆ ಚಡಪಡಿಕೆ ಆರಂಭವಾಯಿತು. ಬ್ರಿಟನ್ ಮತ್ತು ಫ್ರಾನ್ಸ್ಗೆ ಅರಬ್ ಪ್ರದೇಶಗಳನ್ನು ಲೂಟಿ ಹೊಡೆಯುವುದರಲ್ಲಿ ಆಸಕ್ತಿಯಿತ್ತೇ ಹೊರತು ಆ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡುವು ದರಲ್ಲಿ ಯಾವ ಆಸಕ್ತಿಯೂ ಇರಲಿಲ್ಲ.
ಟರ್ಕಿ ಅದುಹೇಗೋ ಆ ಸೋಲಿನಿಂದ ಉಂಟಾದ ಬಿಕ್ಕಟ್ಟಿನಿಂದ ಪಾರಾಯಿತು. ಅದಕ್ಕೊಂದು ಒಳ್ಳೆಯ ಭವಿಷ್ಯವೂ ಲಭಿಸಿತು. ಏಕೆಂದರೆ ಅದೃಷ್ಟವಶಾತ್ ಕೆಮಲ್ ಅಟಾತುರ್ಕ್ ನಂಥ ನಾಯಕ ಅದಕ್ಕೆ ಸಿಕ್ಕಿದ್ದ. ಆತ ಸೇನೆಯಲ್ಲಿದ್ದ ಪರಮ ದೇಶಭಕ್ತ ಜನರಲ್ ಆಗಿದ್ದ.
ಅವನು ಸಾಮ್ರಾಜ್ಯದ ವೈಭವವನ್ನು ಉಳಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಟರ್ಕಿಯ ಸಮಗ್ರತೆ ಯನ್ನು ಉಳಿಸಿಕೊಳ್ಳಲು ಹೋರಾಡಿದ್ದ. ತಮ್ಮ ಪರವಾಗಿ ಗ್ರೀಸ್ ದೇಶವನ್ನು ಛೂ ಬಿಟ್ಟು ಟರ್ಕಿ ಯನ್ನು ಪತನಗೊಳಿಸಲು ಯತ್ನಿಸಿದ ಬ್ರಿಟನ್ ಮತ್ತು ಫ್ರಾನ್ಸ್ಗೆ ಅವನು ಸೋಲುಣ್ಣಿಸಿದ. ಅರಬ್ ಪ್ರಾಂತಗಳಿಗೆ ತುಂಡರಸರು ಇದ್ದರು. ಇತಿಹಾಸದ ಹೊಸ ಶಕೆಯಲ್ಲಿ ಅವರ ಹಿತಾಸಕ್ತಿಗಳು ಯಾವತ್ತೂ ಒಂದಾಗುತ್ತಿರಲಿಲ್ಲ.
ಇಸ್ರೇಲ್ ಜನಿಸಿದ್ದು ಹೀಗೆ
ಜಾಗತಿಕ ಭೂಪಟದಲ್ಲಿ ಇಸ್ರೇಲ್ ಎಂಬ ದೇಶದ ರಚನೆಗೆ ಮೊದಲು ಅಡಿಗಲ್ಲು ಹಾಕಿದ್ದು ಉಕ್ರೇನ್ನ ಖಾರ್ಕೀವ್ನಲ್ಲಿ. ಇತಿಹಾಸ ಮತ್ತು ಭೂಗೋಳ ಆಗಾಗ ಸಂಧಿಸುವ ದೇಶವೆಂದರೆ ಉಕ್ರೇನ್. 1882ರ ಜನವರಿ 25ರಂದು 25 ರಷ್ಯನ್ ಯಹೂದಿ ವಿದ್ಯಾರ್ಥಿಗಳು ತಮಗೊಂದು ತಾಯ್ನೆಲ ಬೇಕು, ಅದರ ಹೆಸರು ಇಸ್ರೇಲ್ ಎಂದಿರಬೇಕು ಎಂದು ಹೋರಾಟ ಆರಂಭಿಸಿದ್ದರು. ಅದೇ ವರ್ಷದ ಜುಲೈ 6ರಂದು ಅವರ ಪೈಕಿ 14 ಜನರು ಜಫಾಕ್ಕೆ ತೆರಳಿದರು.
ಜುಲೈ 31ರಂದು 10 ಸ್ವಯಂಸೇವಕರು ಸೇರಿಕೊಂಡು ‘ಅಲಿಯಾ’ ಎಂಬ ಕನಸಿನ ದೇಶಕ್ಕೆ ಯಹೂದಿಗಳ ವಲಸೆಗೆ ಚಾಲನೆ ನೀಡಲು ರಿಶೋನ್ ಲೆಜಿಯೋನ್ ಎಂಬ ಸಂಘಟನೆ ಆರಂಭಿಸಿ ದರು. ಅಲಿಯಾ ಅಂದರೆ ಹೀಬ್ರೂ ಮತ್ತು ಅರೇಬಿಕ್ನಲ್ಲಿ ಉನ್ನತೀಕರಣ ಅಥವಾ ಮೇಲಕ್ಕೇರು ವುದು ಎಂದರ್ಥ. ಆ ವರ್ಷ ಸಾಕಷ್ಟು ಚಟುವಟಿಕೆಗಳು ನಡೆದವು. ಡಿಸೆಂಬರ್ 12ರಂದು ಗಲಿಲೀನಲ್ಲಿ ಮೊದಲ ಯಹೂದಿ ನೆಲೆಯನ್ನು ಸ್ಥಾಪಿಸಲಾಯಿತು. ಈ ಪ್ರದೇಶಗಳೆಲ್ಲ ಒಟ್ಟೋಮನ್ ಕ್ಯಾಲಿಫೇಟ್ನ ಭಾಗವಾಗಿದ್ದವು. ಯಹೂದಿಗಳನ್ನು ನೇಣಿಗೇರಿಸಿದ ಯುರೋಪಿ ಯನ್ನರಿಗಿಂತ ಇಲ್ಲಿನ ಜನ ಕೊಂಚ ದಯಾಳುಗಳಾಗಿದ್ದರು.
ಎರಡೇ ವರ್ಷದೊಳಗೆ, 1884ರಲ್ಲಿ, ಮೊದಲ ಯಹೂದಿ ಸಮಾವೇಶ ನಡೆಯಿತು. ಅದು ಯಹೂದಿಗಳಿಗೆ ಪ್ರತ್ಯೇಕ ತಾಯ್ನಾಡನ್ನು ಪಡೆದುಕೊಳ್ಳುವ ಕನಸಿಗೆ ಇನ್ನಷ್ಟು ನೀರೆರೆಯಿತು. 1891ರ ಮಾರ್ಚ್ 5ರಂದು ಈ ಹೋರಾಟಗಾರರು ಅಮೆರಿಕದ ಅಧ್ಯಕ್ಷ ಬೆಂಜಮಿನ್ ಹ್ಯಾರಿಸನ್ ಅವರಿಗೆ ಒಂದು ಪತ್ರ ಬರೆದು ಜೆರುಸಲೇಂನ ಸುತ್ತಮುತ್ತ ಯಹೂದಿಗಳ ದೇಶವನ್ನು ಸ್ಥಾಪಿಸಲು ನೆರವು ಕೋರಿದರು.
ನಂತರ ಆರು ವರ್ಷಗಳಲ್ಲಿ, 1897ರ ಆಗಸ್ಟ್ 27ರಂದು ಬಸೆಲ್ನಲ್ಲಿ ಥಿಯೋಡೋರ್ ಹೆರ್ಜಲ್ ನಿಂದ ವಿಶ್ವ ಯಹೂದಿ ಸಂಘಟನೆ ಸ್ಥಾಪನೆಯಾಯಿತು. 1898ರಲ್ಲಿ ಅವನು ಜಫಾಕ್ಕೆ ತೆರಳುವ ಮೂಲಕ ಮೊದಲ ಬಾರಿ ಯಹೂದಿಗಳ ಪವಿತ್ರ ನೆಲಕ್ಕೆ ಕಾಲಿಟ್ಟನು. ಮೊದಲ ಯಹೂದಿ ಕಾರ್ಮಿಕರ ಹೋರಾಟಕ್ಕೆ ಜಫಾ ಕೇಂದ್ರಸ್ಥಾನವಾಗಿತ್ತು. 1902ರಲ್ಲಿ ಜೆರುಸಲೇಂನಲ್ಲಿ ಮೊದಲ ವೈದ್ಯಕೀಯ ಕೇಂದ್ರ ಆರಂಭಗೊಂಡಿತು.
1903ರಲ್ಲಿ ಟೆಲ್ ಅವಿವ್ನಲ್ಲಿ ಜಗತ್ತಿನ ಮೊದಲ ಹೀಬ್ರೂ ಪ್ರೌಢಶಾಲೆ ಆರಂಭವಾಯಿತು. ಇತ್ತ ಯುರೋಪ್ನಲ್ಲಿ ಯಹೂದಿಗಳ ಹತ್ಯಾಕಾಂಡ ನಿರಂತರವಾಗಿ ನಡೆಯುತ್ತಿದ್ದುದರಿಂದ ಹೆರ್ಜಲ್ ಉಗಾಂಡಾದಲ್ಲಿ ತಾತ್ಕಾಲಿಕ ಆಶ್ರಯ ಕೇಳಿದ. ಆ ಉಪಾಯ ಬಹಳ ದೂರ ಸಾಗಲಿಲ್ಲ. 1907ರ ಅಕ್ಟೋಬರ್ 29ರಂದು ಯಹೂದಿಗಳ ರಕ್ಷಣೆಗಾಗಿ ‘ಬಾರ್-ಗಿಯೋರಾ’ ಎಂಬ ಸಂಘಟನೆ ಆರಂಭ ಗೊಂಡಿತು.
(ಮುಂದುವರಿಯುವುದು)
(ಲೇಖಕರು ಹಿರಿಯ ಪತ್ರಕರ್ತರು)