Prakash Shesharaghavachar Column: ತುರ್ತುಸ್ಥಿತಿ: ಮೀಸಾ ಬಂದಿಗಳ ಕರಾಳ ಅನುಭವ
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗವು ದಿನನಿತ್ಯ ಸೆನ್ಸಾರ್ಶಿಪ್ಗೆ ಒಳಪಟ್ಟಿದ್ದು, ಆ ಅನ್ಯಾಯದ ವಿರುದ್ಧ ಸೊಲ್ಲೆತ್ತಲು ಧೈರ್ಯವಿಲ್ಲದೆ, ಅಧಿಕಾರಸ್ಥರ ದಬ್ಬಾಳಿಕೆಗೆ ಬೆದರಿ ಅವರ ಮುಂದೆ ದಯನೀಯವಾಗಿ ತೆವಳಿತ್ತು. ವಿಪಕ್ಷಗಳ ಧ್ವನಿಯನ್ನು ಅಡಗಿಸಲಾಗಿತ್ತು. ಸಂವಿಧಾನಕ್ಕೆ 42ನೇ ತಿದ್ದುಪಡಿ ತಂದು ಬಹುಮತದ ಸರಕಾರವು ಜಾರಿಗೆ ತಂದ ಕಾಯಿದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಾತೀತವಾಗಿಸಲಾಗಿತ್ತು.


ಸಂಕಟಪರ್ವ
ಪ್ರಕಾಶ್ ಶೇಷರಾಘವಾಚಾರ್
ಅದು 1975 ಜೂನ್ 25ರ ದಿನ. ಐವತ್ತು ವರ್ಷದ ಹಿಂದೆ, ತುರ್ತು ಪರಿಸ್ಥಿತಿಯ ಹೆಸರಲ್ಲಿ ಪ್ರಜಾ ಪ್ರಭುತ್ವದ ಮೇಲಿನ ದೌರ್ಜನ್ಯಕ್ಕೆ ಚಾಲನೆ ಸಿಕ್ಕ ದಿನ. ದೇಶವೊಂದರ ಪ್ರಧಾನಿಯು ಸರ್ವಾಧಿಕಾರಿ ಯಾದರೆ ಏನೆಲ್ಲಾ ಅನಾಹುತಗಳನ್ನು ಮಾಡಬಹುದು, ಇತಿಹಾಸದ ಪುಟಗಳಲ್ಲಿ ಏನೆಲ್ಲಾ ಕರಾಳತೆ ದಾಖಲಾಗಬಹುದು ಎಂಬುದನ್ನು ಪರಿಚಯಿಸಿದ ದಿನ...
21 ತಿಂಗಳವರೆಗೆ ಪ್ರಜಾಪ್ರಭುತ್ವದ ನಾಲ್ಕೂ ಅಂಗಗಳಿಗೆ ಬೀಗಮುದ್ರೆ ಹಾಕಲಾಗಿತ್ತು. ಅಕ್ರಮವಾಗಿ ಬಂಧಿತರಾಗಿ ಜೈಲು ಸೇರಿದವರ ನೆರವಿಗೆ ನ್ಯಾಯಾಂಗವು ಬರಲಿಲ್ಲ. ಎದುರಾಳಿ ರಾಜಕೀಯ ಪಕ್ಷದ ಜನಪ್ರತಿನಿಧಿಗಳನ್ನು ರಾತ್ರೋರಾತ್ರಿ ಬಂಧಿಸಿ ಸೆರೆಮನೆಗೆ ತಳ್ಳಲಾಯಿತು. ಕಾರ್ಯಾಂಗವು ಹೆದರಿದ ಹುಲ್ಲೆಯಾಗಿ ನಟಿಸಿ, ದೊರೆತ ಅವಕಾಶದ ಗರಿಷ್ಠ ಲಾಭ ಪಡೆಯಲು ಸರಕಾರದ ಮುಂದೆ ಕೈಕಟ್ಟಿ ತಲೆಬಾಗಿ ನಿಂತು, ಅನ್ಯಾಯಗಳ ಸರಮಾಲೆಗೆ ನೆರವಿನ ಹಸ್ತ ಚಾಚಿತ್ತು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗವು ದಿನನಿತ್ಯ ಸೆನ್ಸಾರ್ಶಿಪ್ಗೆ ಒಳಪಟ್ಟಿದ್ದು, ಆ ಅನ್ಯಾಯದ ವಿರುದ್ಧ ಸೊಲ್ಲೆತ್ತಲು ಧೈರ್ಯವಿಲ್ಲದೆ, ಅಧಿಕಾರಸ್ಥರ ದಬ್ಬಾಳಿಕೆಗೆ ಬೆದರಿ ಅವರ ಮುಂದೆ ದಯನೀಯವಾಗಿ ತೆವಳಿತ್ತು. ವಿಪಕ್ಷಗಳ ಧ್ವನಿಯನ್ನು ಅಡಗಿಸಲಾಗಿತ್ತು. ಸಂವಿಧಾನಕ್ಕೆ 42ನೇ ತಿದ್ದುಪಡಿ ತಂದು ಬಹುಮತದ ಸರಕಾರವು ಜಾರಿಗೆ ತಂದ ಕಾಯಿದೆಯನ್ನು ನ್ಯಾಯಾಲಯ ದಲ್ಲಿ ಪ್ರಶ್ನಾತೀತವಾಗಿಸಲಾಗಿತ್ತು.
ಇನ್ನು, ಸಂಸತ್ ಅಧಿವೇಶನವಂತೂ ಕಾಟಾಚಾರಕ್ಕೆ ನಡೆಯುತ್ತಿತ್ತು. ಅಂದು ತನ್ನ ವಿರೋಧಿ ಗಳನ್ನು ಮಣಿಸಲು ಸರಕಾರಕ್ಕೆ DRI ಮತ್ತು MISA (Maintenance of internal Security Act) ಕಾಯಿದೆಗಳು ಪ್ರಬಲ ಅಸ್ತ್ರವಾಗಿದ್ದವು. ಇದನ್ನು ದುರುಪಯೋಗಪಡಿಸಿ ಕೊಂಡು ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯಲಾಯಿತು.
ಇದನ್ನೂ ಓದಿ: Prakash Shesharaghavachar Column: ಸ್ವಯಂ ಉದ್ಯೋಗಕ್ಕೆ ವರವಾದ ಮುದ್ರಾ ಯೋಜನೆ
ವಿಶೇಷವಾಗಿ, ನ್ಯಾಯಾಲಯದಲ್ಲಿ ಪ್ರಶ್ನಿಸಲಾಗದಂಥ ಮತ್ತು ಜಾಮೀನು ನೀಡಲಾಗದಂಥ ‘ಮೀಸಾ’ ಕಾಯಿದೆಯನ್ನು ದುರ್ಬಳಕೆ ಮಾಡಿಕೊಂಡು ಸಾವಿರಾರು ಜನರ ಜೀವನದೊಂದಿಗೆ ಚೆಲ್ಲಾಟವಾಡಿದರು. ಅದೆಷ್ಟೋ ಜನರ ಬದುಕುಗಳು ಅಸ್ತವ್ಯಸ್ತವಾದವು, ಮೂರಾಬಟ್ಟೆಯಾದವು.
ಅದೆಷ್ಟೋ ಜನರು ಸುದ್ದಿಯೇ ಆಗದೆ ಕಣ್ಮರೆಯಾಗಿ ಹೋದರು. ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದ ನೇತೃತ್ವವನ್ನು ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ (ಆರೆಸ್ಸೆಸ್) ವಹಿಸಿಕೊಂಡಿತ್ತು. ಇಂದಿರಾ ಗಾಂಧಿಯವರ ಸರ್ವಾಧಿಕಾರದ ವಿರುದ್ಧ ಸಂಘದ ಕಾರ್ಯಕರ್ತರು ರಣಕಹಳೆ ಮೊಳಗಿಸಿದ್ದರು, ಸಹಸ್ರಾರು ಸಂಖ್ಯೆಯಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ತುರ್ತು ಪರಿಸ್ಥಿತಿಗೆ ಪ್ರಬಲ ಸವಾಲೊಡ್ಡಿದ್ದರು.
1975ರ ನವೆಂಬರ್ನಲ್ಲಿ ಕಾಮನ್ವೆಲ್ತ್ ನಿಯೋಗವು ಭಾರತಕ್ಕೆ ಭೇಟಿನೀಡಿತ್ತು; ಭಾರತದಲ್ಲಿ ಎಲ್ಲವೂ ಸರಿಯಿದೆ, ತುರ್ತು ಪರಿಸ್ಥಿತಿಯನ್ನು ಯಾರೂ ವಿರೋಧಿಸುತ್ತಿಲ್ಲ ಎಂಬುದನ್ನು ತೋರಿಸ ಲೆಂದು ಈ ನಿಯೋಗವು ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡುವುದಕ್ಕೆ ಕೇಂದ್ರ ಸರಕಾರ ವ್ಯವಸ್ಥೆ ಮಾಡಿತ್ತು. ಬೆಂಗಳೂರಿನ ಅಶೋಕ ಹೋಟೆಲ್ನಲ್ಲಿ ಇದರ ಸಭೆಯು ಆಯೋಜನೆಯಾಗಿತ್ತು.
ತುರ್ತು ಪರಿಸ್ಥಿತಿಯ ದೌರ್ಜನ್ಯ ಹಾಗೂ ಅದರ ವಿರುದ್ಧ ನಡೆಯುತ್ತಿದ್ದ ಹೋರಾಟದ ಬಗ್ಗೆ ಕಾಮನ್ ವೆಲ್ತ್ ನಿಯೋಗಕ್ಕೆ ತಿಳಿಸಲು ತಂಡವೊಂದನ್ನು ಸಜ್ಜುಗೊಳಿಸಲಾಗಿತ್ತು. ಈ ತಂಡದಲ್ಲಿ ಸುರೇಶ್ ಕುಮಾರ್ (ಇವರು ಮುಂದೆ ಬಿಜೆಪಿ ಶಾಸಕ/ಸಚಿವ ಸ್ಥಾನವನ್ನು ಅಲಂಕರಿಸಿದರು), ಸುರೇಶ್ ನಾಯಕ್, ಸೋಮಶೇಖರ್ ಮತ್ತು ಜನತಾ ಪರಿವಾರದ ಗೋವರ್ಧನ್ ಇದ್ದರು. ಈ ನಾಲ್ವರು ಪೊಲೀಸರ ಕಣ್ಣು ತಪ್ಪಿಸಿ ಅಶೋಕ ಹೋಟೆಲ್ ಆವರಣವನ್ನು ಪ್ರವೇಶಿಸಿ, ನಿಯೋಗದ ಸದಸ್ಯರಿದ್ದ ಬಸ್ಸಿನೊಳಗೆ ನುಗ್ಗಿ ಕರಪತ್ರವನ್ನು ಹಂಚಿದರು.
ತುರ್ತು ಪರಿಸ್ಥಿತಿಯ ಹೆಸರಲ್ಲಿ ನಡೆಯುತ್ತಿದ್ದ ದೌರ್ಜನ್ಯವನ್ನು ತಮ್ಮ ಹರುಕು-ಮುರುಕು ಇಂಗ್ಲಿಷ್ ನಲ್ಲಿ ವಿವರಿಸಿದರು. ಇದೇ ಥರ ಇನ್ನೊಂದು ಬಸ್ ಹತ್ತಿ ಕರಪತ್ರ ಹಂಚಲು ಮುಂದಾದಾಗ ಎಚ್ಚೆತ್ತ ಪೊಲೀಸರು ಇವರೆಲ್ಲರ ಕಾಲರ್ ಹಿಡಿದು ಹೊರಗೆಳೆದು ಹಾಕಿ, ನಿಯೋಗದವರ ಎದುರಿಗೇ ಮನ ಬಂದಂತೆ ಥಳಿಸಿದರು. ತದನಂತರ ನಾಲ್ವರನ್ನೂ ಬಂಧಿಸಿ ಹೈಗ್ರೌಂಡ್ಸ್ ಠಾಣೆಗೆ ಕರೆದೊಯ್ದರು.
ಇಲ್ಲಿಂದ ಆ ನಾಲ್ವರಿಗೆ ತುರ್ತು ಪರಿಸ್ಥಿತಿಯ ಕರಾಳದರ್ಶನ ಶುರುವಾಯಿತು. ಹೋರಾಟದ ಕಿಚ್ಚಿನಲ್ಲಿ ಅವರೆಲ್ಲರೂ ಮುಂದಿನ ಪರಿಣಾಮವನ್ನೂ ಲೆಕ್ಕಿಸದೆ ಪ್ರತಿಭಟನೆ ಕೈಗೊಂಡಿದ್ದರು. ತಮ್ಮ ಕಣ್ಣು ತಪ್ಪಿಸಿ ವಿದೇಶಿ ನಿಯೋಗದ ಮುಂದೆ ಅವರು ನಡೆಸಿದ ಪ್ರತಿಭಟನೆಯಿಂದ ಪೊಲೀಸರು ಸ್ತಂಭೀಭೂತರಾಗಿದ್ದರು. ‘ತಾವು ನಿರೀಕ್ಷಿಸದ ಘಟನೆ ನಡೆದುಹೋಗಿದೆ, ಇದರಿಂದ ತಮ್ಮ ಕೆಲಸಕ್ಕೆ ಇನ್ನೇನು ಕುತ್ತುಬರುವುದೋ’ ಎಂಬ ಭಯದಲ್ಲಿದ್ದ ಪೊಲೀಸರು ಆ ಯುವಕರ ಕೃತ್ಯದಿಂದ ರೊಚ್ಚಿಗೆದ್ದಿದ್ದರು. ಹೀಗಾಗಿ ಹೈಗ್ರೌಂಡ್ಸ್ ಠಾಣೆಯ ಲಾಕಪ್ನಲ್ಲಿ ಈ ನಾಲ್ವರನ್ನೂ ಮೂಟೆಯಂತೆ ಬಿಸಾಡಿದರು.
ಠಾಣೆಯ ಇನ್ಸ್ಪೆಕ್ಟರ್ ವಿಚಾರಣೆಗೆಂದು ಸುರೇಶ್ ಕುಮಾರ್ರನ್ನು ಮೊದಲು ಪಕ್ಕದ ರೂಮಿಗೆ ಕರೆದೊಯ್ದರು. ಅಲ್ಲಿ ಕಬ್ಬಿಣದ ರಾಟೆಯಲ್ಲಿ ಹಗ್ಗವನ್ನು ಇಳಿ ಬಿಡಲಾಗಿತ್ತು. “ಕರಪತ್ರವನ್ನು ಮುದ್ರಿಸಿದ್ದೆಲ್ಲಿ? ನಿಮ್ಮ ನಾಯಕರು ಯಾರೆಂದು ಹೇಳಿಬಿಡು, ಇಲ್ಲವಾದರೆ ತುಂಬಾ ತೊಂದರೆ ಅನುಭವಿಸುತ್ತೀಯ" ಎಂದು ಪೊಲೀಸರು ಬೆದರಿಸಿದರು.
ಅವರ ಕೆಟ್ಟ ಭಾಷೆಯ ಬೈಗುಳಕ್ಕೆ ಬಗ್ಗದ ಸುರೇಶ್ ಕುಮಾರ್, ತಮಗೇನೂ ಗೊತ್ತಿಲ್ಲ ಎಂದರು. ಪದೇಪದೆ ಕೇಳಿದಾಗಲೂ ಅವರಿಂದ ಅದೇ ಉತ್ತರ ಬಂದಾಗ, ಸುರೇಶರ ಎರಡೂ ಕೈಗಳನ್ನು ಪೊಲೀಸರು ಹಿಂದಿನಿಂದ ಕಟ್ಟಿ ರಾಟೆಯ ಹಗ್ಗದಿಂದ ನಿಧಾನವಾಗಿ ಮೇಲಕ್ಕೆಳೆಯಲು ಶುರು ಮಾಡಿದರು.
ಕಾಲು ಭೂಮಿಯಿಂದ ಮೇಲಕ್ಕೆ ಹೋದಕೂಡಲೆ ಯಮಯಾತನೆ ಶುರುವಾಗುತ್ತದೆ. ಮೇಲೆ ಮೇಲೆ ಹೋದಷ್ಟೂ ನೋವು ದುಪ್ಪಟ್ಟಾಗಿ ಭಯಂಕರವಾಗಿ ಕೂಗುವುದು ಹೊರತುಪಡಿಸಿ ಬೇರೆ ದಾರಿ ಇರುವುದಿಲ್ಲ. ಇದನ್ನೇ ಪೊಲೀಸ್ ಭಾಷೆಯಲ್ಲಿ ‘ಏರೋಪ್ಲೇನ್ ಶಿಕ್ಷೆ’ ಎಂದು ಕರೆಯುವುದು. ಹಗ್ಗವನ್ನು ಎಳೆದಷ್ಟೂ ಬೆನ್ನಚರ್ಮ ಹರಿದುಹೋಗುವಷ್ಟು ಚಿತ್ರಹಿಂಸೆಯಾಗುತ್ತದೆ. ಇಂಥ ಹಿಂಸೆಗೂ ಸುರೇಶ್ ಬಗ್ಗದಿದ್ದಾಗ ಪೊಲೀಸರು ಲಾಠಿಯಿಂದ ಬಾರಿಸತೊಡಗಿದರು.
ಏರೋಪ್ಲೇನ್ ಶಿಕ್ಷೆಯ ನೋವಿನ ಜತೆಗೆ ಲಾಠಿ ಹೊಡೆತದ ನೋವೂ ಸೇರಿಕೊಂಡಿತು. ಕಿಂಚಿತ್ತೂ ಮಾನವೀಯತೆ ಇಲ್ಲದೆ ಅವರಿಗೆ ಬಿಟ್ಟು ಬಿಟ್ಟು ಹೊಡೆಯಲಾಯಿತು. ಈ ಹಿಂಸೆಯು ಅತಿರೇಕವಾಗಿ ನೋವು ತಡೆಯಲಾರದೆ ಸ್ವಲ್ಪ ಹೊತ್ತಿನ ತರುವಾಯ ಸುರೇಶ್ ಕುಮಾರ್ ಮೂರ್ಛೆ ಹೋದರು....
ಮೂರ್ಛೆಯಿಂದ ಎದ್ದಾಗ ಸುರೇಶ್ಗೆ ತಾವು ಮೂಲೆಯಲ್ಲಿ ಬಿದ್ದಿರುವುದು ಅರಿವಾಯಿತು. ಈಗ ಗೋವರ್ಧನ್ರ ಸರದಿ. ಸುರೇಶ್ ನಿಧಾನವಾಗಿ ಎದ್ದು ಹೊರ ಹೋಗಲು ಯತ್ನಿಸಿದಾಗ, “ಇಲ್ಲೇ ಇರು, ಅವನಿಗೆ ಕೊಡುವ ಚಿತ್ರಹಿಂಸೆಯನ್ನು ನೋಡು, ಇಲ್ಲವೇ ಬಾಯಿಬಿಡು" ಎಂದು ಪೊಲೀಸರು ತಮ್ಮ ಭಾಷೆಯಲ್ಲಿ ಅಬ್ಬರಿಸಿದರು. ಗೋವರ್ಧನ್ರ ಮೇಲೆ ಪೊಲೀಸರ ಪೌರುಷ ಆರಂಭವಾಯಿತು,
ನಂತರ ಸೋಮಶೇಖರ್ರ ಮೇಲೆ ನಡೆಯಿತು. ಆದರೆ ಸುರೇಶ್ ನಾಯಕರು ತಮ್ಮ ಸರದಿ ಬಂದಾಗ ಬುದ್ಧಿ ಉಪಯೋಗಿಸಿ, “ನನಗೆ ಹೃದಯಸಂಬಂಧಿ ಕಾಯಿಲೆಯಿದೆ, ನನಗೇನಾದರೂ ಆದರೆ ನೀವೇ ಹೊಣೆ" ಎಂದಾಗ ಭಯಬಿದ್ದ ಪೊಲೀಸರು ಅವರ ತಂಟೆಗೆ ಹೋಗಲಿಲ್ಲ. ಹೈಗ್ರೌಂಡ್ಸ್ ಠಾಣೆಯಲ್ಲೇ ಇವರನ್ನು 4 ದಿನ ಕಾನೂನುಬಾಹಿರವಾಗಿ ಇಟ್ಟುಕೊಂಡ ಪೊಲೀಸರು ಬಾಯಿ ಬಿಡಿಸಲು ಸರ್ವ ಪ್ರಯತ್ನ ಮಾಡಿದರು; ಊಟ ಕೊಡದೆ ಹಸಿವಿನಿಂದ ಒದ್ದಾಡುವಂತೆ ಮಾಡಿದ್ದಲ್ಲದೆ ಮೂರೂ ಜನರಿಗೆ ಸರದಿಯ ಮೇಲೆ ಚಿತ್ರಹಿಂಸೆ ನೀಡಿದರು.
ತುರ್ತು ಪರಿಸ್ಥಿತಿಯ ವೇಳೆ ಬಂಧಿತರಾದವರ ಪರ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದ ರಾಮಾ ಜೋಯಿಸ್ ಮತ್ತು ಸಂತೋಷ್ ಹೆಗ್ಡೆಯವರು ಹೈಕೋರ್ಟ್ನಲ್ಲಿ ಅವರ ಪರವಾಗಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದಾಗ, ಪೊಲೀಸರು ತಾವು ಕೊಟ್ಟ ಚಿತ್ರಹಿಂಸೆಯು ಬಯಲಾಗುವ ಭೀತಿಯಿಂದ ಈ ನಾಲ್ವರನ್ನೂ ಕೂಡಲೇ ಮೀಸಾ ಕಾಯಿದೆಯಡಿಯಲ್ಲಿ ಬಂಧಿಸಿ ಸೆಂಟ್ರಲ್ ಜೈಲಿಗೆ ಕಳುಹಿಸಿಬಿಟ್ಟರು.
ತುರ್ತು ಪರಿಸ್ಥಿತಿ ಅವಧಿಯಲ್ಲಿ ಅನೇಕ ವಿಧದಲ್ಲಿ ಹಿಂಸಿಸುವುದರಲ್ಲಿ ಪೊಲೀಸರು ನಿಷ್ಣಾತ ರಾಗಿದ್ದರು. ಅದೆಷ್ಟು ಅತಿರೇಕವಾಗಿತ್ತೆಂದರೆ, ಪ್ರತಿಭಟಿಸಿ ಬಂಧಿತರಾಗಿದ್ದ ತುಂಬುಗರ್ಭಿಣಿ ಗಾಯತ್ರಿ ಬಾಯಿಯವರಿಗೆ ಜೈಲಿನಲ್ಲಿ ಹೆರಿಗೆ ನೋವು ಶುರುವಾದಾಗ, ಆಸ್ಪತ್ರೆಗೆ ಕರೆದೊಯ್ಯುವಾಗ ಕಾಲು-ಕೈಗಳಿಗೆ ಬೇಡಿ ಹಾಕಿದ್ದರು. ಇದಕ್ಕಿಂತ ಕ್ರೂರ ಸಂಗತಿಯೆಂದರೆ, ಪ್ರಸವದ ವೇಳೆಯಲ್ಲೂ ಆ ಬೇಡಿ ಯನ್ನು ತೆಗೆದಿರಲಿಲ್ಲ.
ಮಂಗಳೂರಿನ ಕಲ್ಕಡದಲ್ಲಿ ಇಸ್ಮಾಯಿಲ್ ಎಂಬಾತನ ಕೊಲೆಯಾದಾಗ, ತುರ್ತು ಪರಿಸ್ಥಿತಿಯ ದುರ್ಲಾಭ ಪಡೆದ ಪೊಲೀಸರು ಸಂಘ ಪರಿವಾರದ ಕಾರ್ಯಕರ್ತರನ್ನು ಬಂಧಿಸಿ ನಾನಾ ಚಿತ್ರ ಹಿಂಸೆಗೆ ಗುರಿಮಾಡಿದರು. ಆ ಹಿಂಸೆಯು ಘೋರ ವಾಗಿತ್ತು, ಕ್ರೂರಪ್ರಾಣಿಗಳನ್ನೂ ನಾಚಿಸುವಂತಿತ್ತು ಪೊಲೀಸರ ವರ್ತನೆ. ಅಂದು ಪೊಲೀಸರ ಹಿಂಸೆಯ ಬಾಧೆ ತಾಳಲಾರದೆ ಬಾವಿಗೆ ಹಾರಿ ತಪ್ಪಿಸಿ ಕೊಂಡಿದ್ದರು ಎಂದು ಸುರೇಶ್ರವರು ಹೇಳಿದಾಗ ಅರೆಕ್ಷಣ ಮೈ ಜುಂ ಎಂದಿದ್ದು ನಿಜ!
ತಮಗೆ ನೀಡಿದ ಚಿತ್ರಹಿಂಸೆಯನ್ನು ವಿವರಿಸುವಾಗ ಸುರೇಶ್ ಕುಮಾರ್ ಭಾವುಕರಾಗುತ್ತಾರೆ. ತಾವು ಅನುಭವಿಸಿದ ನೋವು, 50 ವರ್ಷವಾದರೂ ಅವರಲ್ಲಿ ಮಾಸಿಲ್ಲ; ಅಂದು ಜೀವ ಉಳಿಯುವುದಾ ಎಂಬ ಅನಿಶ್ಚಿತತೆಯಿದ್ದುದು ಇಂದಿಗೂ ಮನದಲ್ಲಿ ದಟ್ಟವಾಗಿ ಉಳಿದಿದೆ. ಅಂದಿಗೆ 18 ವರ್ಷ ದವರಾಗಿದ್ದ ಸುರೇಶ್ ಕುಮಾರ್ ಮತ್ತು ಅವರ ತಂಡವು 4 ದಿನ ಪಟ್ಟ ಕಷ್ಟವು, ಅವರ ಜೀವನದಲ್ಲಿ ಮರೆಯಲಾಗದ ಕಹಿ ಅನುಭವವಾಗಿದೆ.
ಇನ್ನು, ಜಾರ್ಜ್ ಫೆರ್ನಾಂಡಿಸ್ ಅವರ ತಮ್ಮ ಲಾರೆನ್ಸ್ ಫೆರ್ನಾಂಡಿಸ್ ಅನುಭವಿಸಿದ ಕ್ರೂರ ಹಿಂಸೆಯು ಕಲ್ಲೆದೆಯವರಲ್ಲೂ ಕಣ್ಣೀರು ತರಿಸುವಂಥದ್ದು. ಪೊಲೀಸರ ಚಿತ್ರಹಿಂಸೆಯಿಂದಾಗಿ ಪ್ರಜ್ಞೆ ತಪ್ಪಿದ್ದ ಲಾರೆನ್ಸ್ರನ್ನು ‘ಮೃತಪಟ್ಟಿದ್ದಾರೆ’ ಎಂದು ರೈಲುಕಂಬಿಯ ಮೇಲೆ ಎಸೆದು ಹೋಗಿದ್ದರಂತೆ...
ಅಂದು ನಡೆದ ಸಂಘರ್ಷವನ್ನು ಇಂದಿನ ಪೀಳಿಗೆಯವರು ಊಹಿಸಲೂ ಅಸಾಧ್ಯ. ಆ ಬದ್ಧತೆ, ಛಲ, ಸೈದ್ಧಾಂತಿಕ ಅಚಲ ನಿಲುವು ಮುಂತಾದವನ್ನು ಬದಲಾದ ಇಂದಿನ ರಾಜಕೀಯ ವಾತಾವರಣದಲ್ಲಿ ನಿರೀಕ್ಷಿಸಲಾಗದು. ಅಯೋಧ್ಯಾ ಹೋರಾಟದ ತರುವಾಯ ಸಂಘರ್ಷದ ರಾಜಕೀಯ ಮತ್ತೆ ಸಾಧ್ಯವಾ? ಎಂಬಂತಾಗಿದೆ.
ರಾಜಕೀಯಪ್ರೇರಿತವಾಗಿ ತಾವು ‘ಸಂವಿಧಾನ ರಕ್ಷಕರು’ ಎಂದು ಇಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ಸಿಗರು, ತಮ್ಮ ಕೈಯಲ್ಲಿ ಮೂರನೇ ಎರಡರಷ್ಟು ಬಹುಮತವಿದ್ದಾಗ ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ತಾವು ಮಾಡಿದ ಅಪಾರ ಹಾನಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
(ಲೇಖಕರು ಬಿಜೆಪಿಯ ವಕ್ತಾರರು)