ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Thimmanna Bhagwat Column: ಎಸ್.ಸಿ.-ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಮುಗ್ಧರ ಶೋಷಣೆಗಲ್ಲ

ಕಾಯಿದೆಯ ವ್ಯಾಪಕ ದುರುಪಯೋಗ ತಡೆಯಲು ಸುಪ್ರೀಂ ಕೋರ್ಟು ಈ ಪ್ರಕರಣದಲ್ಲಿ ನೀಡಿದ ಆದೇಶ ಹಾಗೂ ನಿಯಮಾವಳಿಗಳು ಸೂಕ್ತ ಮತ್ತು ಸ್ವಾಗತಾರ್ಹವಾಗಿದ್ದವು. ಆದರೆ ಆನಂತರ ನಡೆದ ವ್ಯಾಪಕ ಪ್ರತಿಭಟನೆಗಳ ಕಾರಣ ದಿಂದ ಕೇಂದ್ರ ಸರಕಾರ ಎಸ್.ಸಿ./ ಎಸ್.ಟಿ. ದೌರ್ಜನ್ಯ ತಡೆ ಕಾಯಿದೆಗೆ 2019ರಲ್ಲಿ ತಿದ್ದುಪಡಿ ತರುವ ಮೂಲಕ ಸದರಿ ತೀರ್ಪು ಅನುಷ್ಠಾನಗೊಳ್ಳದಂತೆ ಆದದ್ದು ಈಗ ಇತಿಹಾಸ.

ಎಸ್.ಸಿ.-ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಮುಗ್ಧರ ಶೋಷಣೆಗಲ್ಲ

Profile Ashok Nayak Jun 18, 2025 5:56 AM

ಕಾನೂನ್‌ ಸೆನ್ಸ್‌

ತಿಮ್ಮಣ್ಣ ಭಾಗ್ವತ್

1989ರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯ ದುರುಪಯೋಗವು ಮುಗ್ಧರ ಶೋಷಣೆಗೆ ಕಾರಣವಾಗಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಒಂದು ಸರ್ವೆಯ ಪ್ರಕಾರ 2016ರಲ್ಲಿ ದಾಖಲಾದ 11060 ಪ್ರಕರಣಗಳ ಪೈಕಿ 5347ರಷ್ಟು ನಕಲಿ ಪ್ರಕರಣಗಳಾಗಿದ್ದವು. ಈ ಕಾಯಿದೆ ಯಡಿಯ ಕೆಲವು ನಕಲಿ ಪ್ರಕರಣಗಳಲ್ಲಿ ಆರೋಪಿತರು ನ್ಯಾಯಕ್ಕಾಗಿ ಮೇಲ್ಮನವಿ ಅರ್ಜಿ ಸಲ್ಲಿಸಿದಾಗ ಸುಪ್ರೀಂ ಕೋರ್ಟು ಮತ್ತು ವಿವಿಧ ಹೈಕೋರ್ಟುಗಳು ಆರೋಪಿಗಳಿಗೆ ಜಾಮೀನು ನೀಡಿವೆ ಮತ್ತು ಅಂಥ ಪ್ರಕರಣಗಳನ್ನು ರದ್ದುಪಡಿಸಿವೆ.

ಅಂಥ ಕೆಲವು ಅದೇಶಗಳ ಮತ್ತು ಅವಲೋಕನಗಳ ಸಂಕ್ಷಿಪ್ತ ವಿವರ ಹೀಗಿದೆ:

  1. ಸುಭಾಶ ಕಾಶೀನಾಥ ಮಹಾಜನ ವರ್ಸಸ್ ಮಹಾರಾಷ್ಟ್ರ ಸರಕಾರ (ಸುಪ್ರೀಂ ಕೋರ್ಟ್): “ಮೇಲ್ನೋಟಕ್ಕೆ ಯಾವುದೇ ಹುರುಳಿಲ್ಲದ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನನ್ನು ನಿರಾಕರಿಸು ವಂತಿಲ್ಲ ಹಾಗೂ ಅದು ನ್ಯಾಯಾಂಗದ ವಿವೇಚನೆಗೆ ಸೇರಿದ ವಿಷಯ. ಈ ಕಾಯಿದೆಯಡಿಯಲ್ಲಿ ಯಾವುದೇ ಸಾರ್ವಜನಿಕ ಸೇವಕರನ್ನು ಬಂಧಿಸುವ ಮುನ್ನ ಸಂಬಂಧಿಸಿದ ಇಲಾಖೆಯ ನೇಮಕಾತಿ ಅಧಿಕಾರಿಯ ಅನುಮೋದನೆ ಅಗತ್ಯ.

ಸಾರ್ವಜನಿಕ ಸೇವಕರಲ್ಲದಿದ್ದಲ್ಲಿ, ವಿಶೇಷ ಪೊಲೀಸ್ ಅಧೀಕ್ಷಕರ ಅನುಮೋದನೆ ಪಡೆಯಬೇಕು. ಉಪ ಪೊಲೀಸ್ ಅಧೀಕ್ಷಕರು ಒಂದು ಪ್ರಾಥಮಿಕ ತನಿಖೆಯನ್ನು ನಡೆಸಿ ಸದರಿ ಆರೋಪಗಳ ಸತ್ಯಾ ಸತ್ಯತೆಯನ್ನು ಪರಿಶೀಲಿಸಬೇಕು ಮತ್ತು ಆರೋಪಗಳು ಏನಾದರೂ ದುರುದ್ದೇಶಗಳಿಂದ ಕೂಡಿವೆಯೋ ಎಂಬುದನ್ನು ಪರಿಶೀಲಿಸಬೇಕು".

ಕಾಯಿದೆಯ ವ್ಯಾಪಕ ದುರುಪಯೋಗ ತಡೆಯಲು ಸುಪ್ರೀಂ ಕೋರ್ಟು ಈ ಪ್ರಕರಣದಲ್ಲಿ ನೀಡಿದ ಆದೇಶ ಹಾಗೂ ನಿಯಮಾವಳಿಗಳು ಸೂಕ್ತ ಮತ್ತು ಸ್ವಾಗತಾರ್ಹವಾಗಿದ್ದವು. ಆದರೆ ಆನಂತರ ನಡೆದ ವ್ಯಾಪಕ ಪ್ರತಿಭಟನೆಗಳ ಕಾರಣ ದಿಂದ ಕೇಂದ್ರ ಸರಕಾರ ಎಸ್.ಸಿ./ ಎಸ್.ಟಿ. ದೌರ್ಜನ್ಯ ತಡೆ ಕಾಯಿದೆಗೆ 2019ರಲ್ಲಿ ತಿದ್ದುಪಡಿ ತರುವ ಮೂಲಕ ಸದರಿ ತೀರ್ಪು ಅನುಷ್ಠಾನಗೊಳ್ಳದಂತೆ ಆದದ್ದು ಈಗ ಇತಿಹಾಸ. ಅಲ್ಲದೆ ಸುಪ್ರೀಂ ಕೋರ್ಟ್ ಕೂಡ ಈ ನಿರ್ಣಯವನ್ನು ಭಾಗಶಃ ಹಿಂಪಡೆದು‌ ಕೊಳ್ಳುವಂಥ ಸನ್ನಿವೇಶ ಸೃಷ್ಟಿಯಾಯಿತು.

ಇದನ್ನೂ ಓದಿ: Thimmanna Bhagwat Column: ಏಕರೂಪದ ನಾಗರಿಕ ಸಂಹಿತೆ: ಬೆಳಗಲಿ ಹೃದಯ ದೀವಿಗೆ

  1. ಡಾ.ಎನ್.ಟಿ.ದೇಸಾಯಿ ವರ್ಸಸ್ ಗುಜರಾತ್ ಸರಕಾರ (ಗುಜರಾತ್ ಹೈಕೋರ್ಟ್): ಮೇಲ್ನೋಟಕ್ಕೆ ದೂರುದಾರರು ಮಾಡಿರುವ ಆರೋಪಗಳ ಬಗ್ಗೆಯೇ ಈ ಕೋರ್ಟಿಗೆ ಸಂಶಯ ಬರುತ್ತಿದೆ. ಒಂದು ವೇಳೆ ದೂರುದಾರರು ಹೇಳುತ್ತಿರುವ ಕಥೆಗಳನ್ನು ಮುಗ್ಧ ಚಿಕ್ಕ ಮಗುವಿನಂತೆ ಯಾಂತ್ರಿಕವಾಗಿ ಒಪ್ಪಿಕೊಂಡರೂ, ಜಾಮೀನು ನಿರಾಕರಣೆ ಮಾಡಿದರೆ ದೂರುದಾರರು ಸುಳ್ಳು ಆರೋಪಗಳ ಮೂಲಕ ಹೆಣೆಯಬಹುದಾದ ಕುತಂತ್ರಕ್ಕೆ ನ್ಯಾಯವ್ಯವಸ್ಥೆ ಶರಣಾದಂತೆ ಆಗುತ್ತದೆ ಮತ್ತು ತಾವು ಹೇಳಿದ ಮಾತ್ರಕ್ಕೆ ಸುಳ್ಳು ಆರೋಪಗಳ ಮೂಲಕ ಯಾವುದೇ ವ್ಯಕ್ತಿಯನ್ನು ಅವರು ಬಂಧನಕ್ಕೊಳಪಡಿಸಬಹುದಾಗಿರುತ್ತದೆ.

ನ್ಯಾಯಾಲಯವು ಕಿವುಡ, ಮೂಕ ಹಾಗೂ ಕುರುಡಾಗಿ ಆಪಾದಿತನಿಗೆ ನಿರೀಕ್ಷಣಾ ಜಾಮೀನಿನ ರೂಪದಲ್ಲಿ ನೈಜವಾಗಿ ದೊರಕಬೇಕಾದ ನ್ಯಾಯವನ್ನು ನಿರಾಕರಿಸಿದಂತಾಗುತ್ತದೆ. ಒಂದು ವೇಳೆ ಅಂತಿಮವಾಗಿ ಆಪಾದಿತರು ನಿರ್ದೋಷಿ ಎಂದು ಪರಿಗಣಿಸಲ್ಪಟ್ಟರೆ ಸುಳ್ಳು ಆಪಾದನೆಯಾಧಾರ ದಲ್ಲಿ ಬಂಧನಕ್ಕೊಳಗಾಗಿ ಜಾಮೀನೂ ಇಲ್ಲದೆ ಜೈಲುವಾಸದಲ್ಲಿ ಪಡುವ ಯಾತನೆ, ಮುಂದೆ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾಗುವುದು ಮತ್ತು ಅದಕ್ಕಿಂತ ಹೆಚ್ಚಾಗಿ ಆಪಾದಿತ ರೆಂಬ ಹಣೆಪಟ್ಟಿಯಿಂದ ಸಮಾಜದಲ್ಲಿ ಅವರು ಅನುಭವಿಸುವ ಅವಮಾನ ಇವೆಲ್ಲಕ್ಕೂ ನ್ಯಾಯಾಲಯವು ಅಸಹಾಯಕ ಮಾರ್ಗವನ್ನು ಹಿಡಿದಿದ್ದು ಕಾರಣವಾಗುತ್ತದೆ. ನ್ಯಾಯವನ್ನು ಒದಗಿಸುತ್ತೇವೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ನ್ಯಾಯಾಲಯಗಳೇ ನಾಚಿಕೆಯಿಂದ ತಲೆ ತಗ್ಗಿಸುವಂತಾಗುವದಿಲ್ಲವೇ?".

  1. ಪಂಕಜ್ ಸುತಾರ ವರ್ಸಸ್ ಗುಜರಾತ್ ಸರಕಾರ (ಗುಜರಾತ್ ಹೈಕೋರ್ಟ್): “ವೈಯಕ್ತಿಕ ದ್ವೇಷ ಸಾಧನೆಗೆ ಅಥವಾ ಪ್ರತೀಕಾರದ ಸಲುವಾಗಿ ಈ ಕಾಯಿದೆಯನ್ನು ಬ್ಲ್ಯಾಕ್‌ಮೇಲ್ ಮಾಡುವ ಅಸ್ತ್ರವಾಗಿ ಬಳಸಿಕೊಳ್ಳುವುದನ್ನು ಅನುಮತಿಸಲಾಗದು. ಬೆಳಕನ್ನು ನೀಡುವ ಸಲುವಾಗಿ ಸಜ್ಜುಗೊಳಿಸಿಕೊಂಡ ಮೋಂಬತ್ತಿಯನ್ನು ಬೆಂಕಿ ಹಚ್ಚಲು ಬಳಸಬಹುದೇ? ಶಸ್ತ್ರ ಚಿಕಿತ್ಸೆ ನಡೆಸಿ ಜೀವ ಉಳಿಸುವುದಕ್ಕಾಗಿ ಇರುವ ಕತ್ತರಿಯನ್ನು ಮುಗ್ಧರ ಜೀವ ತೆಗೆಯಲು ಉಪಯೋಗಿಸಬಹುದೇ?".
  2. ಶರದ್ ವರ್ಸಸ್ ಮಹಾರಾಷ್ಟ್ರ ಸರಕಾರ, (ಮುಂಬಯಿ ಹೈಕೋರ್ಟ್): “ಸಾರ್ವಜನಿಕ ಅಧಿಕಾರಿಗಳು ಕಾಯಿದೆಯ ದುರುಪಯೋಗದ ಕರಿನೆರಳಿನಲ್ಲಿ ಅಂಜಿಕೆ ಹಾಗೂ ಆತಂಕದಲ್ಲಿ ಕಾರ್ಯನಿರ್ವಹಿಸುವ ಸನ್ನಿವೇಶ ಸೃಷ್ಟಿಯಾಗುವುದನ್ನು ನಾವು ಸಹಿಸುವುದಿಲ್ಲ. ಸದರಿ ಕಾಯಿದೆ ವ್ಯಾಪಕವಾಗಿ ದುರುಪಯೋಗ ಆಗುತ್ತಿರುವುದರಿಂದ ಶಾಸಕಾಂಗವು ಈ ಕಾಯಿದೆ ಯನ್ನು ಮರು ಪರಿಶೀಲಿಸಬೇಕು ಎಂಬುದು ನಮ್ಮ ಅಭಿಪ್ರಾಯವಾಗಿದೆ. ಈ ಆದೇಶದ ಪ್ರತಿಯನ್ನು ಭಾರತದ ಕಾನೂನು ಆಯೋಗಕ್ಕೆ ಕಳುಹಿಸಬೇಕೆಂದು ಆದೇಶಿಸುತ್ತೇವೆ".
  3. ಶ್ರೀಚಂದ್ರು ರಾಥೋಡ್ ಪ್ರಕರಣ (ಕರ್ನಾಟಕ ಹೈಕೋರ್ಟ್): ಶ್ರೀಚಂದ್ರು ರಾಥೋಡ್ ಎಂಬುವವರು ಬಾಗಲಕೋಟೆಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ವಿರುದ್ಧ ಈ ಕಾಯಿದೆ ಯಡಿಯಲ್ಲಿ ದೂರುಗಳನ್ನು ಸಲ್ಲಿಸಿದ್ದರು. ಮುಖ್ಯೋಪಾಧ್ಯಾಯರ ವಿರುದ್ಧ 10 ಲಕ್ಷ ರುಪಾಯಿಗಳ ಲಂಚದ ಆರೋಪವನ್ನೂ ಮಾಡಲಾಗಿತ್ತು.

ದೂರುದಾರರಿಗೆ ಈ ಕಾಯಿದೆಯಡಿ ದೂರು ಸಲ್ಲಿಸುವುದೇ ಒಂದು ಪ್ರವೃತ್ತಿಯಾಗಿದೆ. ಕಾಯಿದೆ ಯನ್ನು ದುರುಪಯೋಗ ಮಾಡಿಕೊಂಡು ಕೇಸ್ ದಾಖಲಿಸಿದ್ದಾರೆ ಮತ್ತು ಆ ಸುಳ್ಳು ಕೇಸುಗಳನ್ನು ನಡೆಸಲು ಸರಕಾರದಿಂದ ಆರ್ಥಿಕ ನೆರವು ಪಡಿದಿದ್ದಾರೆ ಎಂದು ಪ್ರತಿವಾದಿ ಪರ ವಕೀಲರು ನ್ಯಾಯ ಪೀಠಕ್ಕೆ ವಿವರಿಸಿದ್ದರು.

ಹೈಕೋರ್ಟ್ ಸದರಿ ದೂರುಗಳನ್ನು ನಕಲಿ ಎಂದು ಪರಿಗಣಿಸಿ ಕೇಸನ್ನು ವಜಾ ಮಾಡಿತು ಮತ್ತು ದೂರುದಾರರು ಸರಕಾರದಿಂದ ಪಡೆದ ರು. 1.5 ಲಕ್ಷವನ್ನು ವಸೂಲಿ ಮಾಡುವಂತೆ ಆದೇಶಿಸಿತು.

ಈ ಮೇಲಿನವುಗಳಲ್ಲದೇ ಇನ್ನೂ ಅನೇಕ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ ಗಳು ಇಂಥದೇ ಅವಲೋಕನಗಳನ್ನು ಮಾಡಿವೆ. ಈ ಕಾಯಿದೆಯು ವ್ಯಾಪಕವಾಗಿ ದುರುಪಯೋಗ ವಾಗುತ್ತಿರುವುದು ಖಂಡನೀಯ.

ಅಲ್ಲದೇ, ನ್ಯಾಯಕ್ಕಾಗಿ ಪ್ರಾಮಾಣಿಕರು ಹೈಕೋರ್ಟ್‌ವರೆಗೂ ಹೋಗಬೇಕಾದ ಸ್ಥಿತಿ ಇರುವುದು ಆತಂಕಕಾರಿ.

ಏನು ಪರಿಹಾರ/ಉಪಾಯ?

ಎಸ್.ಸಿ./ಎಸ್.ಟಿ ಜನರ ಮೇಲೆ ನಡೆಯಬಹುದಾದ ದೌರ್ಜನ್ಯ ತಡೆಯಲು ತರಲಾದ ಈ ಕಾಯಿದೆ ಯ ಉದ್ದೇಶ ನಿಜಕ್ಕೂ ಶ್ಲಾಘನೀಯ. ಆದರೆ ಈ ಕಾಯಿದೆಯಡಿಯಲ್ಲಿನ ಪ್ರಕರಣಗಳು non-bailable ಮತ್ತು cognizable ಆಗಿರುವುದರಿಂದ ನಕಲಿ ಕೇಸ್ ದಾಖಲಿಸಿ ಪ್ರಾಮಾಣಿಕ ಅಧಿಕಾರಿ ಗಳನ್ನು ಬ್ಲ್ಯಾಕ್‌ಮೇಲ್ ಮಾಡುವುದು ಸುಲಭವಾಗಿದೆ.

ಜಾತಿಯನ್ನು ಒಂದು ಅಸ್ತ್ರವಾಗಿ ಬಳಸಿ ವೈಯಕ್ತಿಕ ದ್ವೇಷ ಸಾಧನೆಗೆ ಅಥವಾ ಇತರ ವ್ಯಾಜ್ಯ ಗಳನ್ನು ತಮ್ಮ ಪರವಾಗಿ ಬಗೆಹರಿಸಿಕೊಳ್ಳುವ ಉದ್ದೇಶದಿಂದ ನಕಲಿ ಪ್ರಕರಣಗಳನ್ನು ದಾಖಲಿಸಿದ ಅನೇಕ ಉದಾಹರಣೆಗಳಿವೆ. ಅಂಥ ಪ್ರಕರಣಗಳಲ್ಲಿ ಬಂಧನವಾಗುವುದು ಖಚಿತವಾದ್ದರಿಂದ ಪೊಲೀಸರೂ ಶಾಮೀಲಾದರೆ ಆರೋಪಿಗಳು ಅನಗತ್ಯ ಕಿರುಕುಳ ಮತ್ತು ಶೋಷಣೆಗೆ ಒಳಗಾಗುತ್ತಾರೆ.

ಆರೋಪಿಗಳು ಸರಕಾರಿ ನೌಕರರಾಗಿದ್ದಲ್ಲಿ 48 ಗಂಟೆಗಿಂತ ಹೆಚ್ಚು ಅವಧಿಗೆ ಬಂಧನದಲ್ಲಿದ್ದರೆ ಅಮಾನತಿಗೂ ಒಳಗಾಗುತ್ತಾರೆ. ನಕಲಿ ಆರೋಪವೆಂದು ನಿರೂಪಿಸಲು ಸಾಕ್ಷಿಗಳೂ ಭಯಗೊಂಡು ಹಾಜರಾಗದಿರಬಹುದು. ಆರೋಪ ಸುಳ್ಳೆಂದು ತಿಳಿದಿದ್ದರೂ ಮೇಲಧಿಕಾರಿಗಳೂ ಅವರ ಬೆಂಬಲಕ್ಕೆ ನಿಲ್ಲುವುದಿಲ್ಲ.

ಸಮಾಜದಲ್ಲೂ ಅವಮಾನ ಎದುರಿಸಬೇಕಾಗಬಹುದು. ಇಂಥ ಪ್ರಕರಣಗಳಲ್ಲಿ ಸಿಲುಕಿಕೊಳ್ಳ ದಿರಲು ಅಂಥವರ ಜತೆ ಜಾಗರೂಕತೆಯಿಂದ ವರ್ತಿಸುವುದೇ ಜಾಣತನ. ಆದರೆ ಅಂಥ ಸಂದರ್ಭ ಬಂದೊದಗಿದರೆ ಕೈಗೊಳಬಹುದಾದ ಕೆಲವು ಕ್ರಮಗಳು ಈ ಮುಂದಿನಂತಿವೆ:

  1. ನಿರೀಕ್ಷಣಾ ಜಾಮೀನು: ದೌರ್ಜನ್ಯ ತಡೆ ಕಾಯಿದೆಯ 18ನೇ ಕಲಮು, Attrocity ಪ್ರಕರಣ ಗಳಲ್ಲಿ ನಿರೀಕ್ಷಣಾ ಜಾಮೀನು ನೀಡುವುದನ್ನು ಪ್ರತಿಬಂಧಿಸುತ್ತದೆ. ಆದರೆ ನಕಲಿ ಪ್ರಕರಣ ಗಳಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಜಾಮೀನು ತಿರಸ್ಕೃತವಾದರೆ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಬೇಕು. ‌ಹಲವು ಪ್ರಕರಣಗಳಲ್ಲಿ ಹೈಕೋರ್ಟ್ ಜಾಮೀನು ನೀಡಿದೆ.
  2. ಎಫ್ಐಆರ್ ಮತ್ತು ಚಾರ್ಜ್‌ಶೀಟ್ ರದ್ದು ಪಡಿಸಲು ಹೈಕೋರ್ಟಿಗೆ ಅರ್ಜಿ ಹಾಕಬಹುದು. ಬಿಎನ್‌ಎಸ್‌ನ 528 ( Cr.P.C.482 )ನೇ ಕಲಂ ಅಡಿಯಲ್ಲಿ ಯಾವುದೇ ಕಾಯಿದೆಯ ಅಥವಾ ನ್ಯಾಯ ಪ್ರಕ್ರಿಯೆಗಳ ದುರುಪಯೋಗದ ವಿರುದ್ಧ ಹೈಕೋರ್ಟುಗಳಿಗೆ ಇರುವ ಅಂತರ್ಗತ ಅಧಿಕಾರವನ್ನು ( inherent powers) ಅಟ್ರಾಸಿಟಿ ಪ್ರಕರಣಗಳಲ್ಲಿಯೂ ಬಳಸಬಹುದು ಎಂದು ಸುಪ್ರೀಂ ಕೋರ್ಟು ಸ್ಪಷ್ಟವಾಗಿ ಹೇಳಿದೆ (ಪೃಥ್ವಿರಾಜ್ ಚೌಹಾಣ್ ವರ್ಸಸ್ ಭಾರತ ಸರಕಾರ).

೩. ಜಾತಿನಿಂದನೆಯ ಆರೋಪ ಬಂದಾಗ ಅಂಥ ನಿಂದನೆಯು ಸಾರ್ವಜನಿಕರಿಗೆ ಕಾಣುವ ಸ್ಥಳದಲ್ಲಿ ಸಂಭವಿಸಬೇಕು. ಕೇವಲ ಮನೆಯ ಸದಸ್ಯರು, ಸ್ನೇಹಿತರು ಅಥವಾ ಆರೋಪಿ ಮತ್ತು ದೂರುದಾರ ರಿಬ್ಬರೇ ಇದ್ದಾಗ ಮಾಡಿದ ನಿಂದನೆ ಈ ಕಾಯಿದೆಯ 3(1) (x)ರ ಅಡಿಯಲ್ಲಿ ಅಪರಾಧವಾಗುವುದಿಲ್ಲ ಮತ್ತು ಆರೋಪಿತನು ದೂರುದಾರನ ಜಾತಿಯನ್ನು ಉದ್ಗರಿಸಬೇಕು. ಕೇವಲ ಜಾತಿನಿಂದನೆ ಮಾಡಿದ್ದಾರೆ ಎಂಬ ಆರೋಪವನ್ನು ಸದರಿ ಕಲಮಿನ ಅಡಿಯಲ್ಲಿ ಅಪರಾಧವೆಂದು ಪರಿಗಣಿಸ ಲಾಗುವುದಿಲ್ಲ. ಒಬ್ಬ ಇನ್ನೊಬ್ಬನನ್ನು ಮೂರ್ಖ ಅಥವಾ ಕಳ್ಳ ಎಂದು ನಿಂದಿಸಿದರೆ ಅದು ಅಪರಾಧ ಹೌದಾದರೂ ಮತ್ತು ಆ ಇನ್ನೊಬ್ಬ ಎಸ್.ಸಿ./ಎಸ್.ಟಿ. ಜಾತಿಗೆ ಸೇರಿದ್ದರೂ ಅದನ್ನು ಜಾತಿನಿಂದನೆ ಎಂದು ಪರಿಗಣಿಸಲಾಗುವುದಿಲ್ಲ (ರಮೇಶಚಂದ್ರ ವೈಶ್ಯ ವರ್ಸಸ್ ಉತ್ತರ ಪ್ರದೇಶ ಸರಕಾರ).

  1. ಸುಳ್ಳು ಪ್ರಕರಣಗಳಿಗೆ ಶಿಕ್ಷೆ: ತನ್ನ ವಿರುದ್ಧ ಸುಳ್ಳು ಆರೋಪ ಮಾಡಿದ ವ್ಯಕ್ತಿಯ ವಿರುದ್ಧ ಪ್ರತಿ-ಕೇಸನ್ನು ( counter case) ದಾಖಲಿಸಬಹುದು. ಸುಳ್ಳು ಆರೋಪ ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸಿದರೆ ಅಂಥ ಸುಳ್ಳು ಆರೋಪ ಮಾಡಿದವರಿಗೆ ಬಿಎನ್‌ಎಸ್‌ನ 248ನೇ ಕಲಮಿನ ಡಿಯಲ್ಲಿ 5 ರಿಂದ 10 ವರ್ಷದವರೆಗೆ ಜೈಲುಶಿಕ್ಷೆ ಮತ್ತು 2 ಲಕ್ಷ ರುಪಾಯಿಗಳವರೆಗಿನ ದಂಡದ ಶಿಕ್ಷೆಯಾಗುತ್ತದೆ.
  2. ಮಾನಹಾನಿ ಪ್ರಕರಣ: ಬಿಎನ್‌ಎಸ್‌ನ ಕಲಂ 356ರ ಅಡಿಯಲ್ಲಿ ಸುಳ್ಳು ಆರೋಪ ಮಾಡಿದವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಬಹುದು. ಮಾನಹಾನಿಗೆ 2 ವರ್ಷ ದವರೆಗಿನ ಜೈಲುಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿರುತ್ತದೆ, ಅಲ್ಲದೆ ಪರಿಹಾರದ ಮೊತ್ತವನ್ನು ಕೂಡಾ ಶಿಕ್ಷೆಯ ರೂಪದಲ್ಲಿ ವಿಧಿಸಲಾಗುತ್ತದೆ.

6. ಸಮಾಜ ಮತ್ತು ಸರಕಾರೇತರ ಸಂಸ್ಥೆಗಳು ಸುಳ್ಳು ಆರೋಪಗಳಡಿಯಲ್ಲಿ ಬಂಧನ ಮತ್ತು ಪ್ರಕರಣಗಳಿಗೆ ಒಳಗಾದವರಿಗೆ ನೈತಿಕ ಹಾಗೂ ಅಗತ್ಯವಿದ್ದರೆ ಆರ್ಥಿಕ ಬೆಂಬಲ ನೀಡಿ ಅವರ ಆತ್ಮಸ್ಥೈರ್ಯ ಕುಂದದಂತೆ ನೋಡಿಕೊಳ್ಳಬೇಕು. ಕೆಲವೇ ಜನರ ಸ್ವಾರ್ಥ ಮನೋಭಾವ, ಸಮುದಾಯಗಳ ನಡುವಿನ ದ್ವೇಷಕ್ಕೆ ಕಾರಣವಾಗಬಾರದು.

ಶಾಸಕಾಂಗವು ರಾಜಕೀಯ ಉದ್ದೇಶಗಳನ್ನು ಬದಿಗೊತ್ತಿ ಈ ಕಾಯಿದೆಯ ಮೂಲ ಉದ್ದೇಶಗಳಿಗೆ ಭಂಗ ಬಾರದಂತೆ ದುರುಪಯೋಗ ತಡೆಗೆ ಸೂಕ್ತ ವ್ಯವಸ್ಥೆಯನ್ನು ರೂಪಿಸಬೇಕು. ಸುಭಾಶ್ ಕಾಶೀನಾಥ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿದ ತೀರ್ಪನ್ನು ಅಸಿಂಧುಗೊಳಿಸಿದ 2019ರ ತಿದ್ದುಪಡಿ ನಿಜಕ್ಕೂ ದುರದೃಷ್ಟಕರ. ಅದನ್ನು ಎಸ್.ಸಿ./ ಎಸ್.ಟಿ.ಯೇತರರು ವಿರೋಧಿಸಬೇಕಿತ್ತು.

ಸುಪ್ರೀಂ ಕೋರ್ಟಿನಲ್ಲೂ ಪ್ರಶ್ನಿಸಬೇಕಿತ್ತು. ದೌರ್ಭಾಗ್ಯವೆಂದರೆ ಯಾರಿಗೂ ಈ ಕುರಿತು ಗಮನ ಹರಿಸಲು ಸಮಯ ಮತ್ತು ಆಸಕ್ತಿ ಎರಡೂ ಇಲ್ಲ. ಆ ತಿದ್ದುಪಡಿ ತರುವ ಮೂಲಕ ಸರಕಾರವು ಕಾಯಿದೆಯ ದುರುಪಯೋಗಕ್ಕೆ ಇದ್ದ ಅವಕಾಶವನ್ನು ಪುನಃ ಒದಗಿಸಿತು ಎಂದೇ ಹೇಳಬೇಕಾಗು ತ್ತದೆ.

(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)