Hatras Murder Case: ಡಿಸಿಯ ಕಾರ್ ಡ್ರೈವರ್ ಮಗಳನ್ನು ಕೊಲೆಗೈದಿದ್ದ ಹಂತಕ ಖಾಕಿ ಬಲೆಗೆ-ಅತ್ತಿಗೆಯಿಂದಲೇ ನಾದಿನಿ ಹತ್ಯೆಗೆ ಸುಪಾರಿ!
ಹತ್ರಾಸ್ ಜಿಲ್ಲಾಧಿಕಾರಿಗಳ ಕಾರ್ ಡ್ರೈವರ್ ಮಗಳ ಹತ್ಯೆಗೆ ಸಂಬಂಧಿಸಿದಂತೆ ಶಾಕಿಂಗ್ ಸಂಗತಿಯೊಂದು ಹೊರಬಿದ್ದಿದೆ. ಪ್ರಕರಣದ ಪ್ರಮುಖ ಆರೋಪಿ ಪೊಲೀಸರು ಬಲೆಗೆ ಬಿದ್ದಿದ್ದಾನೆ. ಮೃತ ದುರ್ದೈವಿ ಕಲ್ಪಿತಾಳ ಹತ್ಯೆಗೆ ಆಕೆಯ ಅತ್ತಿಗೆಯೇ ಸುಪಾರಿ ಕೊಟ್ಟಿದ್ದಳು ಎಂಬ ವಿಚಾರ ಬಯಲಾಗಿದೆ. ಆಕೆಯ ಪ್ರಿಯಕರನೇ ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.


ಲಖನೌ: ಇತ್ತೀಚಿಗೆ ಹತ್ರಾಸ್ ಜಿಲ್ಲಾಧಿಕಾರಿಗಳ ಕಾರ್ ಡ್ರೈವರ್ ರಾಕೇಶ್ ಕುಮಾರ್ ಶರ್ಮಾ ಅವರ ಮಗಳು ಕಲ್ಪಿತಾ ಶರ್ಮಾ ಹತ್ಯೆಯಾಗಿತ್ತು(Hatras Murder Case). ಪ್ರಕರಣವನ್ನು ದಾಖಲಿಸಿಕೊಂಡ ಖಾಕಿ ಪಡೆ ಆರೋಪಿಗಳಿಗೆ ಬಲೆ ಬೀಸಿತ್ತು. ಇದೀಗ ಪ್ರಕರಣದ ಪ್ರಮುಖ ಆರೋಪಿಯನ್ನು ಎಸ್ಒಜಿ ಹಾಗೂ ಹಥ್ರಾಸ್ ಪೊಲೀಸ್ ಜಂಟಿ ಕಾರ್ಯಾಚರಣೆಯಲ್ಲಿ ಎನ್ಕೌಂಟರ್ ಮೂಲಕ ಬಂಧಿಸಲಾಗಿದೆ. ನವೀನ್ ಎಂಬ ಆರೋಪಿಯ ಮೇಲೆ ಪೋಲಿಸರು ಗುಂಡು ಹಾರಿಸಿದ್ದು, ಗಾಯಗೊಂಡ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಬಳಿ ಪಿಸ್ತೂಲ್ ಪತ್ತೆಯಾಗಿದೆ. ಈ ಎನ್ಕೌಂಟರ್ ಹಥ್ರಾಸ್ ಗೇಟ್ ಠಾಣಾ ವ್ಯಾಪ್ತಿಯಲ್ಲಿರುವ ಕೋಟ್ವಾಲಿ ಪ್ರದೇಶದಲ್ಲಿ ನಡೆದಿದೆ.
ಜೂನ್ 14ರ ಶನಿವಾರ ಸಂಜೆ, ಸರ್ದಾರ್ ತಹಶೀಲ್ದಾರ್ ಕಚೇರಿ ಬಳಿಯ ಮಾರ್ಕೆಟ್ನಿಂದ ತನ್ನ ತಾಯಿಯ ಜೊತೆಗೆ ಮನೆಗೆ ಹಿಂದಿರುಗುತ್ತಿದ್ದ ಕಲ್ಪಿತಾಳನ್ನು ಎರಡು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಗುಂಡು ಹಾರಿಸಿ ಬರ್ಬರವಾಗಿ ಕೊಲೆಮಾಡಿದ್ದರು. ಗಾಯಗೊಂಡ ಕಲ್ಪಿತಾಳನ್ನು ಸ್ಥಳೀಯರು ಕೂಡಲೇ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅದಾಗಲೇ ಆಕೆ ಮೃತಪಟ್ಟಿದ್ದಳು. ಕಲ್ಪಿತಾಳ ತಂದೆ ಹಾಥ್ರಾಸ್ ಜಿಲ್ಲಾಧಿಕಾರಿಗಳಿಗೆ ಡ್ರೈವರ್ ಆಗಿದ್ದು, ಕುಟುಂಬವು ಸರ್ದಾರ್ ತಹಶೀಲ್ದಾರ್ ಆವರಣದ ಕ್ವಾಟ್ರಸ್ನಲ್ಲಿ ವಾಸಿಸುತ್ತಿದೆ.
ಈ ಸುದ್ದಿಯನ್ನೂ ಓದಿ: Murder Mystery: ಬರೋಬ್ಬರಿ 700 ವರ್ಷಗಳ ಬಳಿಕ ಬಯಲಾಯ್ತು ಪಾದ್ರಿ ಕೊಲೆ ರಹಸ್ಯ; ಮರ್ಡರ್ ಮಿಸ್ಟರಿ ಹಿಂದಿರುವ ಲೇಡಿ ಯಾರು?
ಕಲ್ಪಿತಾಳ ಅತ್ತಿಗೆಯಿಂದಲೇ ಸುಪಾರಿ
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಲ್ಪಿತಾ ತಾಯಿ ಊರ್ಮಿಳಾ ದೇವಿ ನಾವು ಸಂಜೆ ಮಾರ್ಕೆಟ್ನಿಂದ ಹಿಂತಿರುಗುತ್ತಿದ್ದಾಗ, ದುಷ್ಕರ್ಮಿಗಳು ಇದ್ದಕ್ಕಿದ್ದಂತೆ ನಮ್ಮನ್ನು ತಡೆದು ನನ್ನ ಮಗಳ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದರು. ನಾವು ನಮ್ಮ ಸ್ಕೂಟರ್ನಿಂದ ಕೆಳಗೆ ಬಿದ್ದೆವು. ನನ್ನ ಸೊಸೆ ಜ್ಯೋತಿ ಶರ್ಮಾ ಅವಳ ಪ್ರೇಮಿಯೇ ಕೊಲೆ ಮಾಡಿದ್ದಾನೆ. ನಮಗೆ ಮೂವರು ಮಕ್ಕಳಿದ್ದಾರೆ, ಅದರಲ್ಲಿ ಕಲ್ಪಿತಾಳೇ ಚಿಕ್ಕವಳಾಗಿದ್ದಾಳೆ. ನಮ್ಮ ಹಿರಿಯ ಮಗ ಮತ್ತು ಸೊಸೆ ಜ್ಯೋತಿ ನಡುವೆ ಕೆಲವು ಕಾರಣಗಳಿಂದ ಜಗಳ ನಡೆಯುತ್ತಿದೆ. ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜ್ಯೋತಿ ಈ ಹಿಂದೆ ಪ್ರಿಯಕರನ ಸಹಾಯದಿಂದ ನಮ್ಮ ಮನೆಯಿಂದ ರಿವಾಲ್ವರ್ ಕದ್ದಿದ್ದಳು. ಅವರೇ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಹಥ್ರಾಸ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಚಿರಂಜೀವ್ ನಾಥ್ ಸಿನ್ಹಾ ಮಾತನಾಡಿ, ಕಲ್ಪಿತಾಳ ತಾಯಿಯೇ ಘಟನೆಗೆ ಪ್ರತ್ಯಕ್ಷದರ್ಶಿಯಾಗಿದ್ದಾರೆ.
ಕೌಟುಂಬಿಕ ವಿವಾದವೇ ಘಟನೆಗೆ ಮುಖ್ಯ ಕಾರಣವಾಗಿದೆ. ಪ್ರಾಥಮಿಕ ಹಂತದ ತನಿಖೆಯಲ್ಲಿ ಕಲ್ಪಿತಾಳ ಅತ್ತಿಗೆಯ ಪ್ರಿಯಕರನೇ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನುಳಿದ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಮುಂದುವರೆದಿದ ಎಂದಿದ್ದಾರೆ.