ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Janamejaya Umarji Column: ಎದೆಯ ಹಣತೆ ಮತ್ತು ಬುಕರ್‌ ಪ್ರಶಸ್ತಿಯ ಸುತ್ತಮುತ್ತ...

‘ದಾಸ್ ಕ್ಯಾಪಿಟಲ್’ ಕೃತಿಯಲ್ಲಿನ ಉಳ್ಳವರು ವರ್ಸಸ್ ಇಲ್ಲದವರು ಇದ್ದಂತೆ, ನಿಜಾರ್ಥದಲ್ಲಿ ಇಲ್ಲದವರ ಹೆಸರು ಬಳಸಿಕೊಂಡು ಉಳ್ಳವರಾಗುವುದು. ಎಲ್ಲರೂ ಎಲ್ಲದಕ್ಕೆ ಪ್ರತಿಕ್ರಿಯೆ ಕೊಡಬೇಕು ಅಂತೇನಿಲ್ಲ, ಅದು ವೈಯಕ್ತಿಕ. ಮೊನ್ನೆ ಭೇಟಿಯಾದ ಸಾಹಿತಿಯೊಬ್ಬರು “ನೀವು ‘ಹಾರ್ಟ್‌ಲ್ಯಾಂಪ್’ ಓದಿದಿರಾ?" ಎಂದು ಕೇಳಿದರು. “ಇಲ್ಲ" ಎಂದೆ.

ಎದೆಯ ಹಣತೆ ಮತ್ತು ಬುಕರ್‌ ಪ್ರಶಸ್ತಿಯ ಸುತ್ತಮುತ್ತ...

Profile Ashok Nayak Jun 16, 2025 9:45 AM

ಅವಲೋಕನ

ಜನಮೇಜಯ ಉಮರ್ಜಿ

ಪಾತ್ರೆಯಲ್ಲಿನ ಕೆಲವೇ ಅಗುಳನ್ನು ಒಮ್ಮೆ ಹಿಸುಕಿ ನೋಡಿ ‘ಅನ್ನ ಆಗಿದೆ’ ಎನ್ನುವುದು ಎಲ್ಲ ವಿಷಯಗಳಿಗೂ ಅನ್ವಯವಾಗುವುದಿಲ್ಲ. ಹಾಗೆಯೇ ಕೆಲವು ಚಿಂತನೆ ಮತ್ತು ವಿಚಾರಗಳಿಗೆ ವಿಸ್ತೃತ ವಾದ ಚರ್ಚೆ ಹಾಗೂ ಅಭಿವ್ಯಕ್ತಿಗಳು ತಲಸ್ಪರ್ಶಿಯಾಗಿ ಬೇಕೆನಿಸುತ್ತವೆ. ಇಂಥ ಪರಿಪಾಕಗಳು ಒಳಿತು ಕೆಡಕುಗಳಾಚೆಗಿನ ಮತ್ತೊಂದು ಪ್ರಜ್ಞಾವಲಯವನ್ನು ಎಚ್ಚರಿಸುತ್ತವೆ ಎಂಬ ಹಿನ್ನೆಲೆಯಲ್ಲಿ ಕೆಲವು ಚಿಂತನೆಗಳನ್ನು ಮಾಡಬೇಕಾಗುತ್ತದೆ.

ಸಾಹಿತ್ಯ ಲೋಕದಲ್ಲಿ ಈಗ ಒಂದೇ ಪ್ರಶ್ನೆ- ಬುಕರ್ ಪ್ರಶಸ್ತಿ ಬಂದಿದ್ದಕ್ಕೆ ಅಭಿನಂದಿಸಿದವರು ಯಾರು? ಸುಮ್ಮನೆ ಇರುವವರು ಯಾರು? ಇತ್ತೀಚೆಗೆ ಧಾರವಾಡದ ಪ್ರತಿಷ್ಠಿತ ವಿದ್ಯಾಸಂಸ್ಥೆ ಯೊಂದರ ಚುನಾವಣೆಯಲ್ಲಿಯೂ ಹೀಗೇ ಆಯಿತು- ‘ವಚನ ದರ್ಶನ’ ಒಪ್ಪದವರು ವರ್ಸಸ್ ಸುಮ್ಮನೆ ಇರುವವರು- ಅಂತ. ಮಂಡ್ಯದ ಸಾಹಿತ್ಯ ಸಮ್ಮೇಳನದ ವೇಳೆಯಲ್ಲಿ ಬಾಡೂಟವೇ ಬೇಕಾದವರು ವರ್ಸಸ್ ಸುಮ್ಮನೇ ಇರುವವರು ಅಂತ ಇದ್ದರು. ಕೆಲ ಸೋಗಲಾಡಿಗಳಿಗೆ ವಿಭಜನೆ ಯಲ್ಲೇ ಆನಂದ- ಯಾವುದನ್ನೂ ಯಥಾರ್ಥವಾಗಿ ತೆಗೆದುಕೊಳ್ಳದೇ ನೇರವಾಗಿ ಗೆರೆ ಎಳೆದು ಬಿಡುವುದು.

‘ದಾಸ್ ಕ್ಯಾಪಿಟಲ್’ ಕೃತಿಯಲ್ಲಿನ ಉಳ್ಳವರು ವರ್ಸಸ್ ಇಲ್ಲದವರು ಇದ್ದಂತೆ, ನಿಜಾರ್ಥದಲ್ಲಿ ಇಲ್ಲದವರ ಹೆಸರು ಬಳಸಿಕೊಂಡು ಉಳ್ಳವರಾಗುವುದು. ಎಲ್ಲರೂ ಎಲ್ಲದಕ್ಕೆ ಪ್ರತಿಕ್ರಿಯೆ ಕೊಡಬೇಕು ಅಂತೇನಿಲ್ಲ, ಅದು ವೈಯಕ್ತಿಕ. ಮೊನ್ನೆ ಭೇಟಿಯಾದ ಸಾಹಿತಿಯೊಬ್ಬರು “ನೀವು ‘ಹಾರ್ಟ್‌ಲ್ಯಾಂಪ್’ ಓದಿದಿರಾ?" ಎಂದು ಕೇಳಿದರು. “ಇಲ್ಲ" ಎಂದೆ.

ಇದನ್ನೂ ಓದಿ: Janamejaya Umarji Column: ಅನುಭವ ಮಂಟಪ: ಸ್ಥಾವರ ಜಂಗಮವೆಂಬೋ ದಿಗಿಲು ಭುಗಿಲು

“ಪ್ರಶಸ್ತಿ ಬಗ್ಗೆ ನಿಮ್ಮ ಅಭಿಪ್ರಾಯ?" ಎಂದರು, “ಒಳ್ಳೆಯದಾಯಿತು" ಎಂದೆ. “ಆದರೆ ನೀವು ಬುಕರ್ ಪ್ರಶಸ್ತಿಯ ಬಗ್ಗೆ ಒಂದು ಪೋಸ್ಟ್ ಕೂಡ ಹಾಕಿಲ್ಲ, ನೀವು ವಿರೋಧಿಸುತ್ತೀರಾ?" ಎಂದರು. “ಇಲ್ಲ" ಎಂದೆ. “ಇಲ್ಲ, ನೀವು ಒಂದು ಕಡೆ ನಿಲ್ಲಲೇಬೇಕು. ನೀವು ಬುಕರ್ ಬೆಂಬಲಿಸುವವರಾ ಅಥವಾ ವಿರೋಧಿಸುವವರಾ?" ಎಂದು ಮತ್ತೆ ಕೇಳಿದರು. ಅದಕ್ಕೆ, “ನಾನು ಎರಡೂ ಅಲ್ಲ" ಅಂದೆ. “ಹಾಗಾದ್ರೆ ನಿಮಗೆ ಅಸಮಾಧಾನ ಇದೆಯಾ?" ಎಂದು ಕೇಳಿದರು.

“ಅಸಮಾಧಾನ ಇಲ್ಲ, ಹಲವು ವಿಚಾರಗಳಲ್ಲಿ, ನಿಲುವುಗಳಲ್ಲಿ ಸಹಮತವಿಲ್ಲ" ಎಂದೆ. ಹಿಂದೆ ಸಾಹಿತಿಯೊಬ್ಬರಿಗೆ ಪ್ರಶಸ್ತಿ ಬಂದಾಗ, ವೃದ್ಧ ಸಾಕ್ಷಿಪ್ರಜ್ಞೆಯೊಬ್ಬರ ಅಭಿಪ್ರಾಯವನ್ನು ಪತ್ರಕರ್ತರು ಕೇಳಿದಾಗ, “ಅವರು ಕೊಟ್ಟಿದ್ದಾರೆ, ಇವರು ತಗೊಂಡಿದ್ದಾರೆ" ಎಂದರಂತೆ. ಇನ್ನೊಬ್ಬರು, “ಅವರಿಗೆ ಬಂದರೆ ನನಗೇ ಬಂದಂತೆ ಅಲ್ಲವೇ?" ಎಂದರಂತೆ. ಪ್ರತಿಕ್ರಿಯೆಗೂ ಹಲವು ಅರ್ಥಗಳಿರುತ್ತವೆ,

ಗ್ರಹಿಕೆಯಲ್ಲಿಯೂ ಹಲವು ವ್ಯತ್ಯಾಸಗಳಿರಬಹುದು. ಆದರೆ ಇದು ಚರ್ಚೆಯ ವಸ್ತುವಲ್ಲ. ಒಂದರ ಪಕ್ಷ ತೆಗೆದುಕೊಳ್ಳುವುದೇ ಸಾಹಿತ್ಯದ ಕೆಲಸವಾ ಎಂಬುದೇ ತಕರಾರು. ನಾಡಿನ ಬುದ್ಧಿಜೀವಿಗಳೆಂದು ಕರೆಸಿಕೊಳ್ಳುವ, ಎಲ್ಲದಕ್ಕೂ ಬಂದು ಪ್ರತಿಕ್ರಿಯೆ ಕೊಡುವ ಹಲವರು, ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಕುರಿತು ಒಂದೂ ಮಾತನ್ನಾಡಿಲ್ಲ.

‘ಪಹಲ್ಗಾಮ್‌ನಲ್ಲಿ ಕೊಲುವವನಿಗೆ ಧರ್ಮವುಂಟೇ ಅಯ್ಯಾ?’ ಎಂದು ಕೇಳಿದವರೂ ಇದ್ದಾರೆ, ಸೈನಿಕರನ್ನೇ ಸಂಶಯದಿಂದ ನೋಡಿದವರೂ ಇದ್ದಾರೆ. ಇವರನ್ನು ಏನೆನ್ನಬೇಕು? ಆರ್‌ಸಿಬಿ ಕಪ್ ಚುಕ್ಕೆ ಸರಕಾರದ ವೈಫಲ್ಯ ಎಂದು ಇವರ‍್ಯಾರಾದರೂ ಹೇಳಿದ್ದಾರಾ? ಹೇಳಿಲ್ಲ. ಹೀಗಾಗಿ ಪ್ರಸಾದಿಗಳು ವರ್ಸಸ್ ಪ್ರಾಮಾಣಿಕರು ಎನ್ನಬೇಕೇ? ಕಮಲ್ ಹಾಸನ್‌ರ ಉದ್ಧಟತನವನ್ನು ಖಂಡಿಸದೇ ಕೆಲ ಅರಿವು ಮರೆವುಗಳು ಕೇವಲ ಲಿಪಿಯ ಮೂಲಕ ಭಾಷಾ ಕುಟುಂಬವನ್ನು ಅದರ ಪ್ರಾಚೀನತೆಯನ್ನು ಅಳೆಯಲು ಹೋದರು, ಸಂಸ್ಕೃತ ದ್ವೇಷಕ್ಕೆ ತಿರುಗಿಸಿ ಪ್ರತಿಭಟನೆಯನ್ನು ಠುಸ್ ಮಾಡಿದರು.

ಇವರಿಗೆ ಕನ್ನಡ ಕಲಿಗಳು ಎನ್ನಬೇಕೇ? ಎಲ್ಲವೂ ಸಾರ್ವಜನಿಕ ವಲಯದಲ್ಲಿದೆ, ಅದನ್ನು ಜನರಿಗೇ ಬಿಡುವುದು ಒಳಿತು. ಸಾಹಿತ್ಯವೆಂದರೆ ಹಿತದಿಂದ ಕೂಡಿದ್ದು. ಸಾಹಿತ್ಯದ ಲಾಭವೇ ಆನಂದ. ಅದು ರಸಗ್ರಹಣದಿಂದ ಸಾಧ್ಯ. ಸಾಹಿತ್ಯವು ಬೆಳಕೇ ವಿನಾ, ಆಯುಧವಲ್ಲ. ಸಂಘರ್ಷವು ಸಾಹಿತ್ಯದ ಕೆಲಸವಲ್ಲ; ಪರಿವರ್ತನೆ, ಪ್ರೇರಣೆಗಳು ಅದರ ಉಪಲಾಭಗಳು ಎನ್ನಬಹುದೇನೋ. ಹಿಂದೆ ಶತ ಕೋಟಿ ರಾಜರುಗಳು ಆಳಿಹೋದರೂ ಅವರ ಹೆಸರು ಉಳಿದಿಲ್ಲ; ಯಾರದಾದರೂ ಹೆಸರು ಉಳಿದಿದ್ದರೆ ಅದು ಸಾಹಿತ್ಯದಿಂದ. ವ್ಯಾಸ-ವಾಲ್ಮೀಕಿಗಳ, ಕುವೆಂಪು-ಬೇಂದ್ರೆ-ಅಡಿಗ-ಗುಂಡಪ್ಪ-ಭೈರಪ್ಪ ಮುಂತಾದವರ ಕೃತಿಗಳು ಆನಂದದಾಯಕ, ಹೀಗಾಗಿ ಅಜರಾಮರ. ನಾವು ಪಶ್ಚಿಮಕ್ಕೆ ಹೊರಳಿದೆವು,

ಪೂರ್ವವ ಮರೆತೆವು. ಹೀಗಾಗಿ ಉತ್ತರ ಕಾಣದ ಹಲವು ಪ್ರಶ್ನೆಗಳು ನಮ್ಮ ಮುಂದಿವೆ. ಕಾರಣ ಏನೆಂದು ಪ್ರದಕ್ಷಿಣೆ ಹಾಕಿ ಬಂದರೆ, ಸ್ವಂತಿಕೆ ಅಥವಾ ಸತ್ವದ ಮರೆವೇ ಅದರ ಮೂಲವೆಂಬುದು ಸ್ಪಷ್ಟ. ಭಾರತದ ಸತ್ವ ಇರುವುದೇ ಇಲ್ಲಿನ ಸನಾತನವಾದ ಸಾಹಿತ್ಯದಲ್ಲಿ. ರಾಮಾಯಣ-ಮಹಾ ಭಾರತ ಎಂಬ ಎರಡು ಮಹಾಕಾವ್ಯಗಳು ಐತಿಹಾಸಿಕ. ಕನ್ನಡದಲ್ಲಿ ಮುನ್ನೂರು ರಾಮಾಯಣಗಳು ಬಂದಿವೆ, ಮಾನವೀಯ ಚಿಂತನೆಯ ಆಳವಾದ ಬೇರುಗಳು ಭಾರತೀಯ ಸಾಹಿತ್ಯದಲ್ಲಿ ಅಡಗಿವೆ.

ಇಡೀ ಪ್ರಪಂಚಕ್ಕೆ ತಿಳಿದ ಸತ್ಯ ಇದು. ಇಲ್ಲಿ ಸಾಹಿತ್ಯವನ್ನು ಪೋಷಿಸಿಕೊಂಡು ಬಂದದ್ದು ದಾರ್ಶನಿಕ ಸಂಸ್ಕೃತಿ. ‘ರವಿ ಕಾಣದ್ದನ್ನು ಕವಿ ಕಂಡ’ ಅಂದದ್ದು ಅದಕ್ಕೇನೇ. ಆದರೆ ಇಂದು ತಥಾಕಥಿತ ಮುಖ್ಯವಾಹಿನಿಯ ಸಾಹಿತ್ಯವು, ‘ನಾ ನಿನಗೆ ನೀ ನನಗೆ, ನಾನೂ ನೀನೂ ಲಾಬಿಗೆ, ಲೈಬ್ರರಿಗೆ, ಪ್ರಶಸ್ತಿಗೆ’ ಎನ್ನುವಂತಾಗಿದೆ. ‘ಇದು ನನ್ನದಲ್ಲ’ ಎಂದು ತೀರ್ಮಾನಿಸಿ ಜನರು ಹತ್ತಿರ ಸುಳಿಯುತ್ತಿಲ್ಲ.

ಜನರು ಕೊಂಡು ಓದುವ ಸಾಹಿತ್ಯವನ್ನು ಇವರು ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಸಾಹಿತ್ಯದ ‘ಸ್ವತ್ವ’ ವು ಟೌನ್‌ಹಾಲ್ ಪ್ರತಿಭಟನೆಗಳಲ್ಲಿ ಇಲ್ಲ, ದತ್ತಪೀಠದ ವಿರುದ್ಧದ ಹೋರಾಟದಲ್ಲಿಯೂ ಇಲ್ಲ. ಕಳೆದ 50 ವರ್ಷಗಳಲ್ಲಿ ‘ಸ್ವತ್ವ’ಯುತ ಸಾಹಿತ್ಯ ಎಷ್ಟು ಬಂದಿದೆ, ಅಕಡೆಮಿಕ್ ಮಾನದಂಡಗಳ ಮುಖ್ಯವಾಹಿನಿಯಲ್ಲಿ ಎಷ್ಟು ಉಳಿದಿದೆ? ಎಂದು ಪ್ರಶ್ನಿಸಿದರೆ ಉತ್ತರ ನಿರಾಶಾದಾಯಕವಾಗಿದೆ.

ಪಾಶ್ಚಾತ್ಯ ಹಿತಾಸಕ್ತಿಗೆ ಬರೆಯುವ ಜೀವಪರರು ಇಲ್ಲಿದ್ದಾರೆ. ಅಸಲಿಗೆ, ಪ್ರಶಸ್ತಿ ಗಳಿಸಿದ ಹಾದಿ ಯಲ್ಲಿರುವ ವ್ಯಕ್ತಿ, ವಸ್ತು, ವಿಷಯಗಳನ್ನು ನೋಡಿದಾಗ ಬಹುಪಾಲು ಅಂಶಗಳು ಇದೇ ರೀತಿಯವು- ‘ಭಾರತದಲ್ಲಿ ಎಲ್ಲವೂ ಸರಿಯಿಲ್ಲ. ಹಿಂದೂ ಧರ್ಮ ಮಾತ್ರ ಜಾತಿಪೂರಿತವಾಗಿದೆ ಮತ್ತು ಶೋಷಣೆ ಯಿಂದ ಕೂಡಿದೆ. ರಾಷ್ಟ್ರೀಯತೆಯು ಅಪಾಯಕಾರಿ. ಆಧುನಿಕತೆಯೆಂದರೆ ಪಾಶ್ಚಾತ್ಯೀಕರಣ.

ಭಾರತದ ‘ಸ್ವತ್ವ’ ಅಧ್ಯಾತ್ಮದಲ್ಲಿಲ್ಲ. ಆಧ್ಯಾತ್ಮಿಕ ಸಾಹಿತ್ಯ ಸಾಹಿತ್ಯವಲ್ಲ. ಲಿಂಗ, ವರ್ಗ, ಬಣ್ಣ ಭೇದಗಳು ಮಾತ್ರ ಸಾಹಿತ್ಯದ ವಸ್ತುಗಳು. ಪರಿಹಾರ ನೀಡುವ ಸಾಹಿತ್ಯಕ್ಕೆ ಪ್ರಶಸ್ತಿಯಿಲ್ಲ, ಸಮಸ್ಯೆ ಗಳನ್ನು ಜೀವಂತ ಇಡುವುದಕ್ಕೆ ಮಾತ್ರ ಪ್ರಶಸ್ತಿ’. ಇಲ್ಲಿಯ ಯೋಗ, ಅಧ್ಯಾತ್ಮ, ವೈದ್ಯಶಾಸ್ತ್ರದಂಥ, ಪ್ರತಿಫಲಾಪೇಕ್ಷೆಯಿಲ್ಲದೆ ಪ್ರವರ್ತಿಸಿದ ಸಂತರ ಮತ್ತು ಋಷಿಗಳ ಕಥೆಗಳಿಗೆ, ಸಾವಿರ ವರ್ಷ ಸ್ವರಾಜ್ಯಕ್ಕಾಗಿ ಹೋರಾಡಿದ ವೀರಮಣಿಗಳ ಹಾಡುಗಳಿಗೆ, ಕಲಾವಿದರ, ಶಿಲ್ಪಗಳ, ದೇವಾಲಯ ಕಟ್ಟಿದ ಮಹನೀಯರ ಕಾದಂಬರಿಗಳಿಗೆ ಎಂದಾದರೂ ಇಂಥ ಪ್ರಶಸ್ತಿ ಬಂದದ್ದು ನೋಡಿದ್ದೇವೆಯೇ? ವಸಾಹತುಶಾಹಿ ದ್ವಾರಪಾಲಕರು ಇವುಗಳನ್ನು ಮೊದಲ ಬಾಗಿಲಿಗೇ ಹೋಗಲು ಬಿಡುವುದಿಲ್ಲ.

‘ಸ್ವತ್ವ’ವೇ ಇಲ್ಲ, ಅದು ಜೋಡಿಸುವುದಿಲ್ಲ ಎಂದಾದ ಮೇಲೆ ಸಾಮಾನ್ಯ ಜನರು ಸಹ ಇವುಗಳಿಗೆ ‘ಕ್ಯಾರೇ’ ಎನ್ನುವುದಿಲ್ಲ. ಭಾರತೀಯತೆಯನ್ನು ಗೌರವಿಸುವ ಜಾಗತಿಕ ಮಟ್ಟದ ಸಾಹಿತ್ಯ ಪ್ರಶಸ್ತಿ ಗಳನ್ನು ಭಾರತೀಯರೇ ಸ್ಥಾಪಿಸಬೇಕಾದ ಅಗತ್ಯವಿದೆ. ಭಾರತೀಯ ಧರ್ಮ, ಭಾರತೀಯತೆ ಮತ್ತು ಆಧ್ಯಾತ್ಮಿಕ ವಾಸ್ತವಿಕತೆಯನ್ನು ಹೇಳುವ ಉತ್ಕೃಷ್ಟ ಕಥನ ತಂತ್ರಗಳು ಬೇರೂರಿರುವ ಸಾಹಿತ್ಯ ವನ್ನು ಗೌರವಿಸುವ ಬಹುಮಾನಗಳು ಬೇಕಾಗಿವೆ.

ವಚನಗಳು ಸೇರಿದಂತೆ ಇಲ್ಲಿನ ಅಪೂರ್ವ ಭಕ್ತಿ ಸಾಹಿತ್ಯವು ಜಾಗತಿಕವಾಗಿ ಅನುವಾದಗೊಂಡು ಪ್ರಸಾರವಾಗಿರುವ ಸಾಹಿತ್ಯಕ್ಕೆ ಪ್ರಶಸ್ತಿಗಳು ಬರಬೇಕು. ಇಂಗ್ಲಿಷ್ ಏಕಸ್ವಾಮ್ಯ ಮತ್ತು ವ್ಯಾಮೋಹ ಎರಡನ್ನೂ ಹೊಡೆದು ಹಾಕಬೇಕಾಗಿದೆ. ಭಾರತವು ಸಾವಿರ ವರ್ಷಗಳ ಗುಲಾಮಿತನದಿಂದ ಹೊರ ಬಂದಿದ್ದರೂ, ಸಾಹಿತ್ಯ ಕ್ಷೇತ್ರದಲ್ಲಿ ವಸಾಹತುಶಾಹಿ ಇನ್ನೂ ಉಳಿದಿದೆ. ಪ್ರಶಸ್ತಿಗಾಗಿನ ಬರಹ, ಸುಪಾರಿ ಬರಹ, ವ್ಯಾಪಾರಿ ಬರಹಗಳ ಭರಾಟೆಯಲ್ಲಿ ತನ್ನತನವೇ ಮಾಯವಾಗಿದೆ.

ಟೀಕುಗಳಿಂದ ಉಳಿದು ಬಂದ ಭಾರತದ ಸಾಹಿತ್ಯ ‘ಸತ್ವ’ ಮತ್ತು ‘ಸ್ವತ್ವ’, ಇಂದು ‘ಇಸಂ’ಗಳು ಎಂಬ ಗೌಡಕಿಗೆ ನಲುಗಿವೆ. ಶ್ರೇಷ್ಠ ಸಾಹಿತ್ಯವೆಂದರೆ ಗಾಯಗಳನ್ನು ಕೆರೆದು ತೋರುವುದಲ್ಲ, ಕಾರಣ ಗಳನ್ನು ತಪ್ಪಾಗಿ ಅರ್ಥೈಸುವುದಲ್ಲ. ಸಾಹಿತ್ಯವೆಂದರೆ ಸಂತೋಷ ತರುವುದು, ಸಂತೋಷ ಹಂಚು ವುದು. ಸಾಹಿತ್ಯವನ್ನು ದರ್ಶನವನ್ನಾಗಿಸುವ, ಕವಿಯನ್ನು ಋಷಿಯಾಗಿಸುವ, ಒಟ್ಟಿನಲ್ಲಿ ಖುಷಿ ಯಾಗಿಡಬೇಕಾದ ಸಾಹಿತ್ಯವೆಂಬ ಮಾಧ್ಯಮ ಕವಲು ಕವಲಾಗಿದೆ. ಎದೆಯಲ್ಲಿ ಸಂಘರ್ಷದ ಉರಿಯ ಬದಲು ಸಾಮರಸ್ಯದ ಜ್ಯೋತಿ ಬೆಳಗುವ ಸಾಹಿತ್ಯಕ್ಕೆ ಜೈ ಎನ್ನಬೇಕಾಗಿದೆ.

(ಲೇಖಕರು ಸಾಹಿತಿ)