ವೈದ್ಯೋ ನಾರಾಯಣೋ ಹರಿಃ; ಹೃದಯಾಘಾತಕ್ಕೊಳಗಾದ ವ್ಯಕ್ತಿಯ ಜೀವ ಉಳಿಸಿದ ಡಾಕ್ಟರ್
ವರ್ತೂರು ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಎದೆನೋವಿನಿಂದ ಬಳಲುತ್ತಿದ್ದ 67 ವರ್ಷದ ವ್ಯಕ್ತಿಯೊಬ್ಬ ಭೇಟಿ ನೀಡಿದಾಗ ಇದ್ದಕ್ಕಿದ್ದಂತೆ ರಿಸೆಪ್ಶನ್ನಲ್ಲಿ ಕುಸಿದು ಬಿದ್ದಿದ್ದಾನೆ. ಆಗ ಅಲ್ಲಿದ್ದ ಹೃದ್ರೋಗ ತಜ್ಞರಾದ ಡಾ. ರಾಕಿ ಕಥೇರಿಯಾ ಅವರು ಆತನಿಗೆ ಹೃದಯಾಘಾತವಾಗಿದೆ ಎಂಬುದನ್ನು ಅರಿತು ಕೂಡಲೇ ಸಿಪಿಆರ್ ಮಾಡಿ ಆತನ ಜೀವ ಉಳಿಸಿದ್ದಾರೆ. ಈ ಸುದ್ದಿ ಈಗ ವೈರಲ್ (Viral News) ಆಗಿದೆ.


ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಸೂಕ್ತ ವೈದ್ಯಕೀಯ ನೆರವು ಸಿಕ್ಕಿ ಬದುಕುಳಿದ ಎಷ್ಟೋ ಜನರಿದ್ದಾರೆ. ಇದೀಗ ಅಂತಹದೊಂದು ಘಟನೆ ಬೆಂಗಳೂರಿನ ವರ್ತೂರು ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದಿದೆ. ಈ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ರಾಕಿ ಕಥೇರಿಯಾ ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೊಳಗಾದ 67 ವರ್ಷದ ರೋಗಿಗೆ ತಕ್ಷಣ ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ.
67 ವರ್ಷದ ಆ ವ್ಯಕ್ತಿ ಮೂರು ದಿನಗಳಿಂದ ಎದೆನೋವಿನಿಂದ ನರಳುತ್ತಿದ್ದು, ಅದು ಗ್ಯಾಸ್ಟ್ರಿಕ್ ಎಂದುಕೊಂಡು ನಿರ್ಲಕ್ಷಿಸಿದ್ದಾರೆ. ಆದರೆ ನೋವು ಹೆಚ್ಚಾಗಿ ಸಹಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಮಣಿಪಾಲ್ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ವೈದ್ಯರ ತಪಾಸಣೆಗಾಗಿ ಕಾಯುತ್ತಿದ್ದಾಗ ಇದ್ದಕ್ಕಿದ್ದಂತೆ ರಿಸೆಪ್ಶನ್ನಲ್ಲಿ ಕುಸಿದು ಬಿದ್ದಿದ್ದಾರೆ. ಆಗ ಅಲ್ಲೆ ಇದ್ದ ಡಾ. ರಾಕಿ ಕಥೇರಿಯಾ ತಕ್ಷಣ ರೋಗಿಯ ಪರಿಸ್ಥಿತಿಯನ್ನು ಅರಿತುಕೊಂಡು ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ. ರೋಗಿಗೆ ಸ್ಕ್ಯಾನ್ ಮಾಡಿದಾಗ ಹೃದಯಾಘಾತವಾಗಿರುವುದು ತಿಳಿದುಬಂದಿದೆ. ಹಾಗಾಗಿ ವೈದ್ಯರು ರೋಗಿಗೆ ಎಂಜಿಯೊಪ್ಲ್ಯಾಸ್ಟಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಬರೋಬ್ಬರಿ 10 ವರ್ಷಗಳ ನಂತರ ಹೆತ್ತವರ ಮಡಿಲು ಸೇರಿದ ಮಗ; ಹೃದಯಸ್ಪರ್ಶಿ ವಿಡಿಯೊ ವೈರಲ್!
ಮಣಿಪಾಲ್ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞ ಡಾ. ರಾಕಿ ಕಥೇರಿಯಾ ಹೃದಯಾಘಾತವಾದ ವ್ಯಕ್ತಿಯ ಜೀವ ಉಳಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಪ್ರವಾಹದ ಸಮಯದಲ್ಲಿ, ಹೃದಯಾಘಾತದಿಂದ ಬಳಲುತ್ತಿದ್ದ ರೋಗಿಯನ್ನು ಪರೀಕ್ಷಿಸಲು ಟ್ರಕ್ ಹತ್ತಿ ಬಂದು ವ್ಯಕ್ತಿಯ ಜೀವ ಉಳಿಸಿದ್ದರು.