Haveri News: ರೋಡಿಗೆ ಬಿದ್ದ ರಾಶಿ ರಾಶಿ ಮಾತ್ರೆಗಳು!; ಆರೋಗ್ಯ ಇಲಾಖೆ ವಿರುದ್ದ ಸಾರ್ವಜನಿಕರು ಗರಂ
Haveri News: ಸರ್ಕಾರಿ ಆಸ್ಪತ್ರೆ ಅಂದರೆ ಅದು ಬಡವರ ಪಾಲಿನ ಆಶಾಕಿರಣ ಎನ್ನಲಾಗುತ್ತಿದೆ. ಆದರೆ ಅದೇ ಆಸ್ಪತ್ರೆಯ ರೋಗಿಗಳಿಗೂ ದಕ್ಕದೇ, ಆಸ್ಪತ್ರೆಗಳಲ್ಲೇ ಉಳಿದು ಇದೀಗ ಕಸವಾಗಿರುವ ಕಾರಣಕ್ಕೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹಾವೇರಿಯ ಕನಕಾಪುರ ರಸ್ತೆ ಬದಿಯಲ್ಲಿ ಹೀಗೆ ರಾಶಿ ರಾಶಿ ಮಾತ್ರೆ ನೋಡಿ ರೈತರು ಹಾಗೂ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.


ಹಾವೇರಿ: ಸಾರ್ವಜನಿಕರ ಆರೋಗ್ಯ ಕಾಪಾಡಲು ಸರಕಾರ ಪ್ರತಿ ನಿತ್ಯ ಕೋಟ್ಯಂತರ ರುಪಾಯಿಗಳನ್ನು ಖರ್ಚು ಮಾಡುತ್ತದೆ. ಆದರೆ, ಲಕ್ಷಾಂತರ ಮೌಲ್ಯದ ಮಾತ್ರೆಗಳು ಹಾವೇರಿ ನಗರದ ಸಮೀಪದಲ್ಲಿ ಇರುವ ಕನಕಾಪುರ ರಸ್ತೆ ಬದಿ ತಂದು ಚೆಲ್ಲಿರುವ ಕಂಡು ಸಾರ್ವಜನಿಕರು ದಂಗಾಗಿದ್ದಾರೆ. ಬಡವರ ಪಾಲಿಗೆ ಶಕ್ತಿಮದ್ದು ಎಂದೇ ಗುರುತಿಸಿಕೊಂಡಿರುವ ‘ಫೋಲಿಕ್ ಆ್ಯಸಿಡ್’ ಮಾತ್ರೆ ಸಹಿತ ರಾಶಿಗಟ್ಟಲೇ ಮಾತ್ರೆಗಳು ಅವಧಿ ಮುಗಿದ ಕಾರಣಕ್ಕೆ ತಾಲೂಕಿನ ಕನಕಾಪುರ ಶನಿವಾರ ರಸ್ತೆ ಬದಿಯಲ್ಲಿ ಕಸವಾಗಿ ಪತ್ತೆಯಾಗಿವೆ. ಇದರಿಂದ ಆರೋಗ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಗರಂ ಆಗಿದ್ದಾರೆ.
ಸರ್ಕಾರಿ ಆಸ್ಪತ್ರೆ ಅಂದರೆ ಅದು ಬಡವರ ಪಾಲಿನ ಆಶಾಕಿರಣ ಎನ್ನಲಾಗುತ್ತಿದೆ. ಆದರೆ ಅದೇ ಆಸ್ಪತ್ರೆಯ ರೋಗಿಗಳಿಗೂ ದಕ್ಕದೇ, ಆಸ್ಪತ್ರೆಗಳಲ್ಲೇ ಉಳಿದು ಇದೀಗ ಕಸವಾಗಿರುವ ಕಾರಣಕ್ಕೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ರಕ್ತರ ಕೊರತೆ ಇರುವ ಅನಿಮಿಯಾ ರೋಗಿಗಳಿಗೆ, ಐರನ್ ಹಾಗೂ ಫೋಲಿಕ್ ಆ್ಯಸಿಡ್ ಹೆಸರಿನ ಕಬ್ಬಿಣದ ಅಂಶವಿರುವ ವಿಟಮಿನ್ ಮಾತ್ರೆಗಳನ್ನು ನೀಡಲಾಗುತ್ತದೆ. ಅಶಕ್ತತೆ, ಸುಸ್ತು, ರಕ್ತದ ಕೊರತೆ ಇರುವ ಗರ್ಭಿಣಿ, ಬಾಣಂತಿಯರು, ಮಕ್ಕಳಿಗೆ ಈ ಮಾತ್ರೆಗಳನ್ನು ನೀಡಲಾಗುತ್ತದೆ.

ಬಡವರು ಮಾತ್ರವಲ್ಲದೇ ಬಹುತೇಕ ಭಾರತದಾದ್ಯಂತ ಕಬ್ಬಿಣಾಂಶದ ಕೊರತೆ ಹಿನ್ನೆಲೆಯಲ್ಲಿ, ಅದರಲ್ಲೂ ಪ್ರೌಢಶಾಲೆಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಕಡ್ಡಾಯವಾಗಿ ಈ ಮಾತ್ರೆಯನ್ನು ಶಿಕ್ಷಕರು ಮುಂದೆ ನಿಂತು ಮಕ್ಕಳಿಗೆ ನುಂಗಿಸಬೇಕಿದೆ. ಆದರೆ ಇಲ್ಲಿ ಬಡವರಿಗೆ ಉಚಿತ ಹಂಚಿಕೆಗೆಂದು ಬಂದಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ಮಾತ್ರೆಗಳು ಸಕಾಲಕ್ಕೆ ಯಾರಿಗೂ ದಕ್ಕದೇ ಕಸವಾಗಿವೆ.
ಇನ್ನು ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ಅದರದ್ದೇ ಮಾರ್ಗವಿದೆ. ಆದರೆ ಅವುಗಳನ್ನು ಪಾಲಿಸದೇ, ಸಾರ್ವಜನಿಕ ರಸ್ತೆಯ ಬದಿಯಲ್ಲಿ ರಾಶಿಗಟ್ಟೆಲೇ ಸುರಿದು ಹೋಗಿರುವುದು ಮತ್ತಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ | e-attendance: ಸರ್ಕಾರಿ ಶಾಲೆಗಳಲ್ಲಿ ಫೇಸ್ ರೆಕಗ್ನಿಷನ್ ಹಾಜರಾತಿ ವ್ಯವಸ್ಥೆ ಅನುಷ್ಠಾನಕ್ಕೆ ಸರ್ಕಾರ ಆದೇಶ
ರೈತರ ಆತಂಕ
ಕನಕಾಪುರ ರಸ್ತೆ ಬದಿಯಲ್ಲಿ ಹೀಗೆ ರಾಶಿ ರಾಶಿ ಮಾತ್ರೆ ನೋಡಿ ರೈತರು ಹಾಗೂ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಇವುಗಳನ್ನು ತಿಳಿದೋ ತಿಳಿಯದೆಯೋ ಜಾನುವಾರುಗಳು ಸೇರಿ ಸಾಕು ಪ್ರಾಣಿಗಳು ತಿಂದಲ್ಲಿ ಮುಂದಾಗುವ ಸಮಸ್ಯೆಗೆ ಯಾರು ಹೊಣೆ ಎಂದು ಸಾರ್ವಜನಿಕರು ಆರೋಗ್ಯ ಇಲಾಖೆಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.