ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಏರ್‌ ಇಂಡಿಯಾದ ಮೂವರು ಅಧಿಕಾರಿಗಳು ವಜಾ; ಡಿಜಿಸಿಎಯಿಂದ ಆದೇಶ

Air India: ವಿಮಾನಯಾನ ಸುರಕ್ಷತಾ ನಿಯಂತ್ರಕವಾದ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಮಹತ್ವದ ಆದೇಶ ಹೊರಡಿಸಿದ್ದು, ಅದರ ಭಾಗವಾಗಿ ಮೂವರು ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ವಿಭಾಗೀಯ ಉಪಾಧ್ಯಕ್ಷ ಸೇರಿದಂತೆ ಮೂವರು ಹಿರಿಯ ಏರ್ ಇಂಡಿಯಾ ಅಧಿಕಾರಿಗಳನ್ನು ವಿಮಾನ ಸಿಬ್ಬಂದಿ ವೇಳಾಪಟ್ಟಿ ಮತ್ತು ರೋಸ್ಟರಿಂಗ್‌ಗೆ ಸಂಬಂಧಿಸಿದ ಎಲ್ಲ ಜವಾಬ್ದಾರಿಗಳಿಂದ ತಕ್ಷಣ ಜಾರಿಗೆ ಬರುವಂತೆ ತೆಗೆದುಹಾಕಿ ಆದೇಶ ಹೊರಡಿಸಿದೆ.

ಏರ್‌ ಇಂಡಿಯಾದ ಮೂವರು ಅಧಿಕಾರಿಗಳು ವಜಾ

ಸಾಂದರ್ಭಿಕ ಚಿತ್ರ.

Profile Ramesh B Jun 21, 2025 6:48 PM

ಹೊಸದಿಲ್ಲಿ: ಜೂ. 12ರಂದು ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ (Air India) ವಿಮಾನ ದುರಂತದ ಬಳಿಕ ವಿಮಾನಯಾನ ಸುರಕ್ಷತಾ ನಿಯಂತ್ರಕವಾದ ನಾಗರಿಕ ವಿಮಾನಯಾನ ನಿರ್ದೇಶನಾಲಯವು (DGCA) ಎಚ್ಚೆತ್ತುಕೊಂಡಿದ್ದು, ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಅದರ ಭಾಗವಾಗಿ ಮೂವರು ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ವಿಭಾಗೀಯ ಉಪಾಧ್ಯಕ್ಷ ಸೇರಿದಂತೆ ಮೂವರು ಹಿರಿಯ ಏರ್ ಇಂಡಿಯಾ ಅಧಿಕಾರಿಗಳನ್ನು ವಿಮಾನ ಸಿಬ್ಬಂದಿ ವೇಳಾಪಟ್ಟಿ ಮತ್ತು ರೋಸ್ಟರಿಂಗ್‌ಗೆ ಸಂಬಂಧಿಸಿದ ಎಲ್ಲ ಜವಾಬ್ದಾರಿಗಳಿಂದ ತಕ್ಷಣ ಜಾರಿಗೆ ಬರುವಂತೆ ತೆಗೆದುಹಾಕಿ ಆದೇಶ ಹೊರಡಿಸಿದೆ. ʼʼಟಾಟಾ ಗ್ರೂಪ್ ಒಡೆತನದ ಏರ್‌ ಇಂಡಿಯಾದ ಹೆಸರು ಬಹಿರಂಗಪಡಿಸದ ಮೂವರು ಅಧಿಕಾರಿಗಳ ವಿರುದ್ಧ ಆಂತರಿಕ ಶಿಸ್ತಿನ ಕ್ರಮಗಳನ್ನು ಪ್ರಾರಂಭಿಸುವಂತೆ ಡಿಜಿಸಿಎ ಸೂಚಿಸಿದೆʼʼ ಎಂದು ಮೂಲಗಳು ತಿಳಿಸಿವೆ.

"ಡಿಜಿಸಿಎ ನಿರ್ದೇಶನವನ್ನು ನಾವು ಅಂಗೀಕರಿಸಿದ್ದೇವೆ ಮತ್ತು ಆದೇಶವನ್ನು ಜಾರಿಗೆ ತಂದಿದ್ದೇವೆ. ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಖಚಿತಪಡಿಸಿಕೊಳ್ಳಲು ಏರ್ ಇಂಡಿಯಾ ಬದ್ಧವಾಗಿದೆ" ಎಂದು ವಕ್ತಾರರು ತಿಳಿಸಿದ್ದಾರೆ.

ಈ ಅಧಿಕಾರಿಗಳ ವಿರುದ್ಧ ಆಂತರಿಕ ಶಿಸ್ತಿನ ಕ್ರಮಗಳನ್ನು ಶೀಘ್ರದಲ್ಲೇ ಪ್ರಾರಂಭಿಸಬೇಕು ಮತ್ತು ಅಂತಹ ಪ್ರಕ್ರಿಯೆಗಳ ಕೈಗೊಂಡಿರುವ ಕುರಿತು 10 ದಿನಗಳಲ್ಲಿ ವರದಿ ಮಾಡಬೇಕು ಎಂದು ವಾಯುಯಾನ ನಿಯಂತ್ರಕ ಹೇಳಿದೆ.



ಈ ಸುದ್ದಿಯನ್ನೂ ಓದಿ: Flight Cancelled: 16 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಏರ್‌ ಇಂಡಿಯಾ ಕಾರ್ಯಾಚರಣೆ ಕಡಿತ; ಮಹತ್ವದ ನಿರ್ಧಾರ ಘೋಷಿಸಿದ ಸಂಸ್ಥೆ

“ನಿಗದಿತ ಅವಧಿಯೊಳಗೆ ನಿಮ್ಮ ಉತ್ತರವನ್ನು ಸಲ್ಲಿಸಲು ವಿಫಲವಾದರೆ, ದಾಖಲೆಯಲ್ಲಿ ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ ಕ್ರಮವನ್ನು ಏಕಪಕ್ಷೀಯವಾಗಿ ನಿರ್ಧರಿಸಲಾಗುತ್ತದೆ” ಎಂದು ಡಿಜಿಸಿಎ ಎಚ್ಚರಿಸಿದೆ. ಈ ನಿರ್ದೇಶನಕ್ಕೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ, ಡಿಜಿಸಿಎ ಮಾಡಿದ ಅವಲೋಕನಗಳ ಗಂಭೀರತೆಯನ್ನು ಒಪ್ಪಿಕೊಂಡಿದೆ. ಮೇ 16 ಮತ್ತು ಮೇ 17ರಂದು ಬೆಂಗಳೂರಿನಿಂದ ಲಂಡನ್ ಹೀಥ್ರೂಗೆ ತೆರಳಿದ ಏರ್ ಇಂಡಿಯಾದ 2 ವಿಮಾನಗಳು ಗರಿಷ್ಠ ಹಾರಾಟದ ಸಮಯ ಮಿತಿಯಾದ 10 ಗಂಟೆಯನ್ನು ಮೀರಿದ್ದವು.

ಡಿಜಿಸಿಎ ಮಾನದಂಡಲ್ಲಿ ಏನಿದೆ?

  • ಡಿಜಿಸಿಎ ಮಾನದಂಡಗಳ ಪ್ರಕಾರ, ಕಾಕ್‌ಪಿಟ್‌ನಲ್ಲಿ ಕಾರ್ಯನಿರ್ವಹಿಸುವ ಪೈಲಟ್‌ಗಳು ನಿರ್ದಿಷ್ಟ ಅರ್ಹತೆ ಹೊಂದಿರಬೇಕು.
  • ಇಬ್ಬರೂ ಪೈಲಟ್‌ಗಳು ನಿರ್ದಿಷ್ಟ ಕಾರ್ಯಾಚರಣೆಗೆ ಅರ್ಹರಾಗಿರಬೇಕು. ಉದಾಹರಣೆಗೆ, ಕಡಿಮೆ-ಗೋಚರತೆಯ ಕಾರ್ಯಾಚರಣೆಗಳು, ಲೇಹ್ ಅಥವಾ ಲಡಾಖ್‌ನಂತಹ ಎತ್ತರದ ವಾಯುನೆಲೆಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿ ಪಡೆದಿರಬೇಕು.
  • ಎರಡೂ ಪೈಲಟ್‌ಗಳು ಎಲ್ಲ ಪರವಾನಗಿ ಹೊಂದಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯ.
  • ವಿಮಾನ ಹಾರಾಟದ ಮೊದಲು ಪೈಲಟ್‌ಗಳಿಗೆ ಸಾಕಷ್ಟು ವಿಶ್ರಾಂತಿ ನೀಡುವುದು ಕಡ್ಡಾಯ.

ಅನುಮಾನಗಳೇನು?

  • ಈ ಉಲ್ಲಂಘನೆಗಳನ್ನು ಸಾಫ್ಟ್‌ವೇರ್ ವ್ಯವಸ್ಥೆಗಳು ಏಕೆ ಗುರುತಿಸುವುದಿಲ್ಲ?
  • ಪೈಲಟ್‌ಗಳು ವಿಮಾನಗಳನ್ನು ಹಾರಿಸುವ ಮೊದಲು ಇಂತಹ ಸಮಸ್ಯೆಗಳನ್ನು ಏಕೆ ಗಮನಿಸುವುದಿಲ್ಲ?
  • ಇದು ಸ್ವಯಂಚಾಲಿತ ವ್ಯವಸ್ಥೆಗಳಲ್ಲಿ ಮಾನವ ಹಸ್ತಕ್ಷೇಪದ ಸಾಧ್ಯತೆಯನ್ನು ಸೂಚಿಸುತ್ತದೆ. ರೋಸ್ಟರಿಂಗ್ ಪ್ರಕ್ರಿಯೆಯನ್ನು ಕುಶಲತೆಯಿಂದ ನಿರ್ವಹಿಸಲಾಗುತ್ತಿದೆಯೇ? ಎಂದು ಡಿಜಿಸಿಎ ಪ್ರಶ್ನಿಸಿದೆ ಎಂಬುದಾಗಿ ವರದಿಯೊಂದು ತಿಳಿಸಿದೆ.

230 ಪ್ರಯಾಣಿಕರು ಸೇರಿ ಒಟ್ಟು 242 ಮಂದಿಯನ್ನು ಹೊತ್ತುಕೊಂಡು ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾ ಜೂ. 12ರಂದು ಅಹಮದಾಬಾದ್‌ನಲ್ಲಿ ಪತನವಾಗಿ ಒಟ್ಟು 260ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.