ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Central Minister V Somanna: ರೈತರ ವಿರೋಧದ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸಿ : ಇಂಜಿನಿಯರ್ ಗಳಿಗೆ ಸೂಚಿಸಿದ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ

ಎರಡು ಲಕ್ಷ ಮತಗಳ ಅಂತರದಲ್ಲಿ ನನ್ನನ್ನು ಲೋಕಸಭೆಗೆ ಕಳುಹಿಸಿದ ತುಮಕೂರು ಜಿಲ್ಲೆಯ ರೈತರ ಹಿತ ಕಾಯುವ ಕೆಲಸ ಕರ್ತವ್ಯವಾಗಿದೆ. ನಮ್ಮ ಪಾಲಿನ ನೀರು ಹೇಗೆ ಹರಿಸಲು ಸಾಧ್ಯ. 15 ರಿಂದ 20 ಟಿಎಂಸಿ ಹೆಚ್ಚಿನ ಹಂಚಿಕೆ ಮಾಡಿ ಕೊಂಡು ಮುಖ್ಯ ನಾಲೆ ಮೂಲಕ ಕುಣಿಗಲ್ ಗೆ ಮತ್ತಷ್ಟು ಹೆಚ್ಚಿಗೆ ಹರಿಸಲಿ.

ರೈತರ ವಿರೋಧದ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸಿ

Profile Ashok Nayak Jun 11, 2025 11:41 PM

ಗುಬ್ಬಿ: ಜಿಲ್ಲೆಯ ರೈತ ವಿರೋಧಿ ಎನಿಸಿದ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ಸಂಬಂಧಪಟ್ಟ ಇಂಜಿನಿಯರ್ ಗಳು ಸ್ಥಗಿತಗೊಳಿಸಿ ವಾಸ್ತವ ಅಂಶ ರೈತರ ಮುಂದಿಡಬೇಕು ಎಂದು ಕೇಂದ್ರ ರೈಲ್ವೆ ಸಚಿವ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ಸೂಚಿಸಿದರು.

ತಾಲ್ಲೂಕಿನ ಕಡಬ ಹೋಬಳಿ ಸಂಕಾಪುರ ಬಳಿ ನಡೆದಿದ್ದ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವೀಕ್ಷಿಸಿ ಅಧಿಕಾರಿಗಳ ಜೊತೆ ಚರ್ಚಿಸಿದ ಅವರು ಎರಡು ಲಕ್ಷ ಮತಗಳ ಅಂತರದಲ್ಲಿ ನನ್ನನ್ನು ಲೋಕಸಭೆಗೆ ಕಳುಹಿಸಿದ ತುಮಕೂರು ಜಿಲ್ಲೆಯ ರೈತರ ಹಿತ ಕಾಯುವ ಕೆಲಸ ಕರ್ತವ್ಯವಾಗಿದೆ. ನಮ್ಮ ಪಾಲಿನ ನೀರು ಹೇಗೆ ಹರಿಸಲು ಸಾಧ್ಯ. 15 ರಿಂದ 20 ಟಿಎಂಸಿ ಹೆಚ್ಚಿನ ಹಂಚಿಕೆ ಮಾಡಿ ಕೊಂಡು ಮುಖ್ಯ ನಾಲೆ ಮೂಲಕ ಕುಣಿಗಲ್ ಗೆ ಮತ್ತಷ್ಟು ಹೆಚ್ಚಿಗೆ ಹರಿಸಲಿ. ಅದನ್ನು ಬಿಟ್ಟು ನಮ್ಮ ನೀರನ್ನು ತಿರುವಿಸಿದ ಯೋಜನೆ ಬಗ್ಗೆ ಅಧಿಕಾರಿಗಳು ವಾಸ್ತವ ಅಂಶ ಹೇಳಬೇಕಿದೆ ಎಂದರು.

ನಮ್ಮ ನೀರು ಪ್ರತಿಪಾದಿಸಿದ ರೈತರು ನಡೆಸಿದ ಹೋರಾಟ, ಪೊಲೀಸ್ ಕೇಸ್ ಎಲ್ಲವೂ ಕಪ್ಪುಚುಕ್ಕೆ ಯಾಗಿ ಕಾಣುವ ಮುನ್ನ ಯೋಜನೆಗೆ ತಾರ್ಕಿಕ ಅಂತ್ಯ ಕಾಣಿಸಿ ಕಪ್ಪು ಚುಕ್ಕೆ ಅಳಿಸಬೇಕಿದೆ. ನಮ್ಮ ಪಾಲಿನ ನೀರು ಕಿತ್ತು ಕೊಳ್ಳುವ ಯೋಜನೆ ನಮ್ಮ ಜನ ಒಪ್ಪುವುದಿಲ್ಲ. ತಾಂತ್ರಿಕ ವ್ಯವಸ್ಥೆ ಕೂಡ ಸರಿಯಿಲ್ಲ. ಬಹಳ ಮಂದಿ ಮುಖಂಡರ ಜೊತೆ ಚರ್ಚಿಸಿದ್ದೇನೆ.ಕಳೆದ 15 ವರ್ಷದಿಂದ ಗೊಂದಲ ಉಂಟು ಮಾಡಿದ ಈ ಯೋಜನೆ ಬಗ್ಗೆ ನೀರಾವರಿ ಇಂಜಿನಿಯರ್ ಗಳು ಎಚ್ಚರಿಕೆ ವಹಿಸಿ ಮುಂದುವರೆಯಬೇಕು. ಇತಿಮಿತಿಯಲ್ಲಿ ಅಧಿಕಾರಿಗಳು ಮಾತನಾಡಬೇಕು. ಯಾವ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ವಾಸ್ತವ ಚಿತ್ರಣ ನೀಡಬೇಕು ಎಂದು ತಾಕೀತು ಮಾಡಿದ ಅವರು ನಮ್ಮ ಜಿಲ್ಲೆಯ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಜಿಲ್ಲೆಯ ರೈತರಿಗೆ ಯಾವುದೇ ಅಪಚಾರ ಆಗದಂತೆ ಸಮಸ್ಯೆ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Tumkur (Chikkanayakanahalli) News: ಹಂದನಕೆರೆ ಗುರುಗಿರಿಸಿದ್ದೇಶ್ವರ ಮಠದ ರುದ್ರರಾಧ್ಯರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

ಯಾವುದೇ ಪೂರ್ವಗ್ರಹ ಪೀಡಿತರಾಗದೇ ದೊಡ್ಡ ಅಂತರದ ಗೆಲುವು ನೀಡಿದ ಜನರ ಋಣ ತೀರಿಸಬೇಕಿದೆ. ಈ ನಿಟ್ಟಿನಲ್ಲಿ ಯೋಜನೆಯ ಬಗ್ಗೆ ಎಲ್ಲೆಲ್ಲಿ ಮಾತನಾಡಬೇಕೂ ಅಲ್ಲಲ್ಲಿ ಮಾತನಾಡಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಜೊತೆ ಚರ್ಚಿಸಿದ್ದೇನೆ. ಗೃಹಮಂತ್ರಿ ಪರಮೇಶ್ವರ್ ಜೊತೆ ಕೂಡಾ ಒಂದು ಗಂಟೆಯ ಚರ್ಚೆ ಮಾಡಿದ್ದೇನೆ. ಜಿಲ್ಲೆಯ 11 ಶಾಸಕರ ಜೊತೆ ಚರ್ಚಿಸಿ ಒಂದು ಅಂತಿಮ ತೀರ್ಮಾನ ಕೈಗೊಳ್ಳುವ ಜೊತೆಗೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ನಾಲೆ ಅಗಲೀಕರಣ ಯೋಜನೆಗೆ ಕೇಂದ್ರ ಸರ್ಕಾರದ ಅನುದಾನವನ್ನು ಪ್ರಧಾನಿಗಳ ಜೊತೆ ಮಾತನಾಡಿ ಮಂಜೂರು ಮಾಡಿಸೋಣ ಎಂದ ಅವರು ಶಾಶ್ವತ ಪರಿಹಾರ ಕಂಡು ಹಿಡಿಯುವವರೆಗೆ ರೈತರು ಶಾಂತ ರೀತಿ ವರ್ತಿಸಬೇಕಿದೆ. ಇಲ್ಲಿನ ಮುಂದಿನ ಪೀಳಿಗೆ ಶಾಪ ಹಾಕುವ ಮುನ್ನ ಸಮಸ್ಯೆ ಬಗೆಹರಿಸೋಣ. ಈ ಜೊತೆಗೆ ಹೋರಾಟದಲ್ಲಿ ಪಾಲ್ಗೊಂಡು ಮಠಾಧೀಶರ ಮೇಲಿನ ಕೇಸು ವಾಪಸ್ಸಾಗಲಿದೆ. ಯಾರನ್ನೂ ಬಂಧಿಸುವ ಕೆಲಸ ನಡೆಯುವುದಿಲ್ಲ. ಇದೇ ತಿಂಗಳ ಕೊನೆಯ ವಾರದಲ್ಲಿ ಒಂದು ಪರಿಹಾರ ಕಂಡು ಹಿಡಿಯಲಾಗುವುದು. ಅಲ್ಲಿಯವರೆಗೆ ಎಂಜಿನಿಯರ್ ಗಳು ಕೆಲಸ ಸ್ಥಗಿತಗೊಳಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕರಾದ ಎಚ್.ನಿಂಗಪ್ಪ, ಸುಧಾಕರಲಾಲ್, ದಿಶಾ ಸಮಿತಿ ಸದಸ್ಯ ವೈ.ಎಚ್.ಹುಚ್ಚಯ್ಯ, ಕಾವೇರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್, ಮುಖ್ಯ ಇಂಜಿನಿಯರ್ ಮಹೇಶ್, ಸೂಪರಿಡೆಂಟ್ ಇಂಜಿನಿಯರ್ ಫಣಿರಾಜ್, ಮುಖಂಡರಾದ ಬಿ.ಎಸ್.ನಾಗರಾಜು, ಪಿ.ಬಿ.ಚಂದ್ರಶೇಖರಬಾಬು, ಎಸ್.ಡಿ.ದಿಲೀಪ್ ಕುಮಾರ್, ಸಾಗರನಹಳ್ಳಿ ವಿಜಯಕುಮಾರ್, ಎಸ್.ನಂಜೇಗೌಡ, ರೈತ ಸಂಘದ ವೆಂಕಟೇಗೌಡ, ಕಳ್ಳಿಪಾಳ್ಯ ಲೋಕೇಶ್, ಜಿ.ಎನ್.ಬೆಟ್ಟಸ್ವಾಮಿ, ಹೊನ್ನಗಿರಿಗೌಡ, ಎಚ್.ಟಿ.ಭೈರಪ್ಪ, ಬ್ಯಾಟರಂಗೇಗೌಡ, ಪಂಚಾಕ್ಷರಿ, ಯೋಗಾನಂದಕುಮಾರ, ಸಿದ್ದಗಂಗಮ್ಮ, ಕೊಂಡಜ್ಜಿ ವಿಶ್ವನಾಥ್ ಇತರರು ಇದ್ದರು.