Harish Kera Column: ಓ ಹೆಣ್ಣೇ, ಗಂಡನನ್ನು ಏಕೆ ಕೊಂದೆ ?
ಹೊಸ ತಲೆಮಾರು ಹಿಂಸೆಗೆ ಬಹಳ ಹತ್ತಿರವಾಗಿದೆ. ಕೆಲವು ಹಿಂಸೆಗಳು ಹಿಂಸೆಯೆಂದೇ ಇವರಿಗೆ ಅನ್ನಿಸ ದಂತೆ ಇಂಟರ್ನೆಟ್, ಫಿಲಂಗಳು, ವೆಬ್ ಶೋಗಳು, ಸೋಶಿಯಲ್ ಮೀಡಿಯಾ ಇವರನ್ನು ತರಬೇತು ಗೊಳಿಸಿದೆ. ಮಕ್ಕಳು ಇಂಥ ಕಂಟೆಂಟ್ಗೆ ಮೊದಲಿಗಿಂತ ಹೆಚ್ಚು ತೆರೆದುಕೊಂಡಿದ್ದಾರೆ. ಹೆತ್ತವರು ಮಕ್ಕಳನ್ನು ಈ ವಿಷಯದಲ್ಲಿ ಸೂಕ್ಷ್ಮಜ್ಞರನ್ನಾಗಿ ಮಾಡಬೇಕು. ಹಿಂಸೆಯ ಲಕ್ಷಣಗಳು ಬಿಗಡಾಯಿಸುವ ಮೊದಲೇ ಚಿಕಿತ್ಸೆ ಕೊಡಿಸಬೇಕು.


ಕಾಡುದಾರಿ
ಈ ವಾರದ ಟ್ರೆಂಡಿಂಗ್ ಸುದ್ದಿಗಳಲ್ಲಿ ಮೇಘಾಲಯದ ʼಹನಿಮೂನ್ ಮರ್ಡರ್ʼ ಒಂದು. ಬೆಂಗಳೂರು ಕಾಲ್ತುಳಿತದ ಸುದ್ದಿಯನ್ನೂ ಅದು ಒಳತಳ್ಳಿತು. ಹೆಂಡತಿಯನ್ನು ಕೊಲ್ಲುವ ಗಂಡನೂ ಹೊಸತಲ್ಲ. ಪತಿಯನ್ನು ಕೊಲ್ಲಿಸುವ ಪತ್ನಿಯೂ ಇತ್ತೀಚಿನದಲ್ಲ. ಆದರೂ ಅದು ಏಕೆ ರಾಷ್ಟ್ರೀಯ ಸುದ್ದಿಯಾಯಿತು ಎಂದರೆ ಹಲವು ಕಾರಣ. ಅದರಲ್ಲಿ ಅಡಗಿದ್ದ ನಿಗೂಢತೆ ಒಂದು. ಮದುವೆಯಾಗಿ ಇನ್ನೂ ತಿಂಗಳು ಸಹ ಆಗಿಲ್ಲ ಎಂಬುದು ಇನ್ನೊಂದು. ಚಾರಣಕ್ಕೆ ಹೋದ ಜೋಡಿಯನ್ನು ಯಾರೋ ಅಪಹರಿಸಿ ಗಂಡನನ್ನು ಕೊಂದು ಆಕೆಯನ್ನು ಅಪಹರಿಸಿರಬಹುದು ಎಂದು ಊಹಿಸಿ ದವರೇ ಹೆಚ್ಚು. ತಿರುವುಗಳಿರುವ ಪತ್ತೇದಾರಿ ಕತೆ ಯಾರಿಗೆ ತಾನೆ ಇಷ್ಟವಿಲ್ಲ? ಹಾಗೇ ಇದು ವಿಚಿತ್ರ ತಿರುವುಗಳನ್ನು ಪಡೆಯುತ್ತ ಹೋಯಿತು. ಒಂಟಿಯಾಗಿ ಸಿಕ್ಕಿದ ಗಂಡನ ಶವ. ಕಾಣೆಯಾದ ಪತ್ನಿ. ಕೊಲೆ ನಡೆದ ವಾರಗಳ ಬಳಿಕ ದಿಡೀರನೆ ಅಲ್ಲಿಂದ ಸಾವಿರಾರು ಕಿಮೀ ದೂರದಲ್ಲಿ ಪ್ರತ್ಯಕ್ಷಳಾಗುವ ಸುಂದರಿ. ಆಕೆ ಕ್ಷಣಕ್ಕೊಂದು ಕಟ್ಟುವ ಕತೆಗಳು. ಪತ್ನಿಯನ್ನು ಕೊಲ್ಲುವ ಪತಿ ನಮಗೇನೂ ಅಂಥ ಟಿಆರ್ಪಿ ಸರಕಲ್ಲ. ಆದರೆ ಬಾಯ್ಫ್ರೆಂಡ್ ಜೊತೆ ಸೇರಿ ಗಂಡನನ್ನು ಕೊಲ್ಲುವ ಚೆಲುವೆ? ಟಿಆರ್ಪಿ ʼಕಿತ್ಕೊಂಡ್ ಓಡುತ್ತೆ.ʼ ಈಗ ಆಕೆ ಆರೋಪಿ, ಆ ಮಾತು ಬೇರೆ. ಸದ್ಯ ಆಕೆ ಅಪರಾಧಿ ಎಂದೇ ಗ್ರಹಿಸಿ ಮಾತಾಡೋಣ.
ಇತ್ತೀಚೆಗೆ ಹೀಗೆ ಗಂಡನನ್ನು ಕೊಲ್ಲಿಸಿದ ಹೆಂಡತಿಯ ಕೇಸ್ ಸೋನಂ- ರಘುವಂಶಿಯದಷ್ಟೆ ಅಲ್ಲ. ಮಾರ್ಚ್ನಲ್ಲಿ ಉತ್ತರ ಪ್ರದೇಶದ ನೌಕಾಧಿಕಾರಿಯೊಬ್ಬನ್ನು ಅವನ ಹೆಂಡತಿಯೂ ಆಕೆಯ ಗೆಳೆಯನೂ ಸೇರಿ ಕೊಂದು ಕತ್ತರಿಸಿ 15 ತುಂಡು ಮಾಡಿ ಡ್ರಂನಲ್ಲಿ ತುಂಬಿಸಿ ಕಾಂಕ್ರೀಟ್ ಮೆತ್ತಿದರು. ಕಾರ್ಕಳದ ಅಜೆಕಾರಿನಲ್ಲಿ ಬ್ಯೂಟಿಪಾರ್ಲರ್ ಮಾಲಕಿ ಗಂಡನಿಗೆ ಊಟದಲ್ಲಿ ಸ್ವಲ್ಪಸ್ವಲ್ಪವೇ ವಿಷವುಣಿಸಿ ಸಾಯಿಸಿದ ಆರೋಪ. ಕಾರಣ ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿಕೊಂಡ ಇನ್ನೊಬ್ಬನ ಪರಿಚಯ, ಗೆಳೆತನ, ಪ್ರೇಮ. ಕಳೆದ ವರ್ಷ ಅಕ್ಟೋಬರ್ನಲ್ಲಿ ಬೆಂಗಳೂರಿನಿಂದ ಕಾರಿನಲ್ಲಿ ಹೋಗಿ ಕೊಡಗಿನ ಸುಂಟಿಕೊಪ್ಪದಲ್ಲಿ ಗಂಡನನ್ನು ಕೊಲ್ಲಿಸಿ ಪೆಟ್ರೋಲ್ ಸುರಿದು ಸುಟ್ಟುಹಾಕಿದ ಪತ್ನಿ. ಕಾರಣ ಇಬ್ಬಿಬ್ಬರು ಬಾಯ್ಫ್ರೆಂಡ್ಗಳು ಹಾಗೂ ಗಂಡನ ಆಸ್ತಿ. ಬಳ್ಳಾರಿ ಯಲ್ಲಿ ಪ್ರಿಯಕರನ ಜೊತೆ ಸೇರಿ ಗಂಡನಿಗೆ ನಿದ್ರೆ ಮಾತ್ರೆ ಕೊಟ್ಟು ದಿಂಬಿನಿಂದ ಉಸಿರುಗಟ್ಟಿಸಿ ಕೊಂದ ಮಹಿಳೆ. ಹೀಗೆ ಹೇಳುತ್ತಲೇ ಹೋಗಬಹುದು. ಇದೇನಾಗುತ್ತಿದೆ, ಯಾಕೆ ಹೆಣ್ಣು ಮಕ್ಕಳು ತಮ್ಮ ಗಂಡಂದಿರನ್ನು ಹೀಗೆ ಕೊಲ್ಲುತ್ತಿದ್ದಾರೆ. ಬೇಡವೆಂದರೆ ಬಿಟ್ಟುಹೋಗಬಹುದಲ್ಲ. ಕೊಲ್ಲುವುದೇಕೆ ಎಂದು ನೀವು ಪ್ರಶ್ನಿಸುತ್ತೀರಿ ಎಂದು ನನಗೆ ಗೊತ್ತಿದೆ.

ಸ್ವಲ್ಪ ನಿಲ್ಲಿ. ಈಗ ಇನ್ನೊಂದು ಕಡೆಯ ಚಿತ್ರಣವನ್ನೂ ಸ್ವಲ್ಪ ನೋಡೋಣ. ಗೆಳತಿಗಾಗಿ ಹೆಂಡತಿಯನ್ನು ಕೊಂದವರ ಸಂಖ್ಯೆಯೇನೂ ಕಡಿಮೆ ಇಲ್ಲ. ತಾನು ವಿವಾಹದಾಚೆಗಿನ ಸಂಬಂಧ ಹೊಂದಿದ್ದು, ಅದನ್ನು ಪ್ರಶ್ನಿಸಿದ ಪತ್ನಿಯನ್ನು ಮುಗಿಸಿದ ಗಂಡಸರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಈ ವಿಚಾರದಲ್ಲಿ ಇನ್ನೊಂದು ಆಯಾಮ ಇದೆ, ಅದು ಪತ್ನಿಯ ವಿವಾಹೇತರ ಸಂಬಂಧ ಮತ್ತು ಅದರಿಂದ ಕ್ರುದ್ಧನಾಗಿ ಆಕೆಯನ್ನು ಕೊಲ್ಲುವ ಗಂಡ. ಇದಕ್ಕೆ ಈ ವಾರದಲ್ಲಿಯೇ ನಡೆದ ಕೆಲವು ಘಟನೆಗಳ ಉದಾಹರಣೆ ಕೊಡಬಹುದು. ಆನೆಕಲ್ನಲ್ಲಿ ಇನ್ನೊಂದು ಸಂಬಂಧ ಹೊಂದಿದ್ದ ಪತ್ನಿಯ ತಲೆಯನ್ನು ಕತ್ತರಿಸಿ ಪೊಲೀಸ್ ಠಾಣೆಗೆ ತಂದನೊಬ್ಬ ಗಂಡ. ಇನ್ನು ಆಕೆ ಗಂಡನ ಜೊತೆಗಿದ್ದು ತನ್ನ ಕಡೆ ಗಮನ ಕೊಡುತ್ತಿಲ್ಲ ಎಂದು ರೇಗಿ ಪ್ರಿಯಕರನೇ ಪ್ರಿಯತಮೆಯನ್ನು ಹೋಟೆಲ್ಗೆ ಕರೆಸಿ ಇರಿದು ಕೊಂದ ಘಟನೆಯೂ ನಡೆದಿದೆ. ಪತ್ನಿಗೆ ʼಅನೈತಿಕ ಸಂಬಂಧʼ ಇದೆ ಎಂದು ಅನುಮಾನಗೊಂಡು ಕ್ರೋಧತಪ್ತರಾಗಿ ಆಕೆಯನ್ನು ಕೊಲ್ಲುವ ಗಂಡಸರು ಬಹಳ ಸಂಖ್ಯೆಯಲ್ಲಿದ್ದಾರೆ, ಆಕೆಗೆ ಅದು ಇದೆಯೋ ಇಲ್ಲವೋ ಬೇರೆ ಮಾತು. ಆದರೆ ಇಂಥ ಗಂಡಸರ ಪ್ರಕರಣಗಳಲ್ಲಿ ಇಲ್ಲದ ರೋಚಕತೆ ಮಹಿಳೆಯರ ಅಪರಾಧಗಳಲ್ಲಿ ಹಣಕಿಹಾಕುತ್ತದೆ. ಯಾಕೆಂದು ನಿಮಗೇ ಗೊತ್ತಿದೆ.
ಈಗ ಸ್ವಲ್ಪ ಅಂಕಿ ಅಂಶಗಳನ್ನು ಗಮನಿಸೋಣ. ಇದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ನೀಡಿದ 2022ರ ಸಾಲಿನ ವಿವರಗಳು. ಯಾಕೆಂದರೆ ಆ ಬಳಿಕದ ವರ್ಷಗಳ ಸಮಗ್ರ ಚಿತ್ರಣ ಇನ್ನೂ ದೊರೆತಿಲ್ಲ. ದೇಶದಲ್ಲಿ ನಡೆಯುವ ಕೊಲೆಗಳ ಮೂರನೇ ಪ್ರಮುಖ ಕಾರಣವೇ ಲವ್ ಅಫೇರ್. ಮೊದಲ ಹಾಗೂ ಎರಡನೇ ಕಾರಣಗಳು ಕ್ರಮವಾಗಿ ವಿವಾದ ಹಾಗೂ ವೈಯಕ್ತಿಕ ದ್ವೇಷ. ದೇಶದಲ್ಲಿ ನಡೆಯುವ ಹತ್ತು ಕೊಲೆಗಳಲ್ಲಿ ಒಂದರಲ್ಲಿ ಕೊಲೆಯಾದ ವ್ಯಕ್ತಿಯ ಲವರ್, ಗಂಡ ಅಥವಾ ಹೆಂಡತಿ ಮುಖ್ಯ ಪಾತ್ರ ವಹಿಸಿರುತ್ತಾರೆ. 2022ರಲ್ಲಿ ಭಾರತದಲ್ಲಿ ನಡೆದ 28522 ಕೊಲೆಗಳಲ್ಲಿ 2821ಕ್ಕೆ ಇಂಥ ʼಆಚೆʼಯ ಸಂಬಂಧವೇ ಕಾರಣವಂತೆ. ಇದರಲ್ಲಿ ಪತ್ನಿಯರೂ, ಪತಿಯರೂ ಹೆಚ್ಚು ಕಡಿಮೆ ಸಮ ಸಂಖ್ಯೆಯಲ್ಲಿಯೇ ಇದ್ದಾರೆ. 220 ಗಂಡಸರು ಪತ್ನಿಯರಿಂದಲೂ, 270 ಸ್ತ್ರೀಯರು ಗಂಡನಿಂದಲೂ ಕೊಲೆಯಾಗಿದ್ದಾರಂತೆ. ಇನ್ನೂ ಬೇಕೆಂದರೆ ಆತ್ಮಹತ್ಯೆ ಕೇಸುಗಳನ್ನು ನೋಡಿ. ಅದೇ ವರ್ಷದ 17,924 ಸೂಸೈಡ್ ಪ್ರಕರಣಗಳಲ್ಲಿ 8,204ದಷ್ಟು, ಅಂದರೆ ಸರೀ ಅರ್ಧದಷ್ಟು, ವಿವಾಹಕ್ಕೆ ಸಂಬಂಧಿಸಿದ ತೊಡಕುಗಳಿಂದ ಆದವು.
ಇದನ್ನೂ ಓದಿ: Harish Kera Column: ಕಪ್ ನಮ್ಮದೇ, ತಪ್ಪೂ ನಮ್ಮದೇ
ಎಲ್ಲಾ ಸರಿ. ವಿವಾಹದಾಚೆಯ ಸಂಬಂಧ ಎಂಬುದು ಅಪರಾಧದ ಪ್ರಮುಖ ಕಾರಣವಾಗುವತ್ತ ದಾಪುಗಾಲು ಹಾಕುತ್ತಿದೆ ಎಂಬುದರಲ್ಲಿ ಮಾತ್ರ ಸಂಶಯವಿಲ್ಲ. ಸದ್ಯ ಅಪರಾಧ ಮನೋತಜ್ಞರನ್ನು ಕಾಡುತ್ತಿರುವ ಸಂಗತಿ ಎಂದರೆ ಮಹಿಳೆಯರೇಕೆ ತಮಗೆ ಬೇಡವಾದ ಗಂಡನನ್ನು ಬಿಟ್ಟು ಹೋಗುವ ಬದಲು, ಇಷ್ಟೊಂದು ಸಂಖ್ಯೆಯಲ್ಲಿ ಭೂಮಿಯಿಂದಲೇ ತೊಡೆದುಹಾಕಲು ಮುಂದಾಗುತ್ತಾರೆ ಎಂಬುದು. ಈ ಪ್ರಶ್ನೆಯನ್ನು ಗಂಡಸರಿಗೆ ಅನ್ವಯಿಸಿದರೆ ಸುಲಭ ಉತ್ತರಗಳಿವೆ- ವಂಚಿತ ಭಾವಿಂದ ಉಂಟಾದ ವ್ಯಗ್ರತೆ, ಅಧಿಕಾರದ ಸ್ಥಾಪನೆ.
ಇನ್ನೊಂದು ಕಾರಣವೆಂದರೆ ಗಂಡಸು ಪತ್ನಿಯನ್ನು ಬಿಡಲು ಬಯಸಿದರೆ ಆತನ ಆಸ್ತಿಯ ಅರ್ಧ ಪಾಲು ಆಕೆಯೊಂದಿಗೇ ಹೋಗುತ್ತದೆ. ಅಪರಾಧ ಪ್ರವೃತ್ತಿಯ ಗಂಡು ಇದನ್ನು ಇಷ್ಟಪಡಲಾರ. ಆದರೆ ಮಹಿಳೆಯರ ವಿಷಯಕ್ಕೆ ಬಂದಾಗ ಇದಕ್ಕೆ ಉತ್ತರ ಹುಡುಕುವುದು ಜಟಿಲವಾಗುತ್ತದೆ. ಹಸೆಮಣೆಯಲ್ಲಿ ಕತ್ತು ಬಗ್ಗಿಸಿ ತಾಳಿ ಕಟ್ಟಿಸಿಕೊಳ್ಳುವ ಹೆಣ್ಣು, ಆ ಕ್ಷಣದಲ್ಲಿ ಸಂತೋಷವಾಗಿಯೇ ಇರುವಂತೆ ಕಾಣುವ ಆಕೆ, ಯಾಕೆ ಅವನ ಪಾಲಿಗೆ ಕೆಲವೇ ದಿನಗಳಲ್ಲಿ ಮೃತ್ಯುದೇವತೆಯಾಗುತ್ತಾಳೆ?
ಇಲ್ಲಿಂದ ಮುಂದೆ ನಾನು ಹೇಳಲಿರುವ ಮಾತುಗಳೆಲ್ಲ ಈ ಅಪರಾಧ ಟ್ರೆಂಡ್ಗಳನ್ನು ಗಮನಿಸು ತ್ತಿರುವ ಅಪರಾಧ ತಜ್ಞರು, ಮನಶ್ಶಾಸ್ತ್ರಜ್ಞರು ಹೇಳಿರುವ ಮಾತುಗಳು. ಮುಖ್ಯವಾಗಿ ಭಾರತದಲ್ಲಿ ಮದುವೆ ಎಂಬುದು ಬಹಳ ಒತ್ತಡದ ಒಂದು ವ್ಯವಸ್ಥೆ. ತನ್ನದೇ ಜಾತಿಯ, ಮತದ, ಅಂತಸ್ತಿನ, ಕುಟುಂಬದವರು ನೋಡಿದ ಗಂಡನ್ನೇ ಮದುವೆಯಾಗುವ ಪ್ರೆಶರ್. ಮದುವೆ ಮುಹೂರ್ತದ ಅಂತಿಮ ಕ್ಷಣದವರೆಗೂ ಈ ಮದುವೆ ತನಗೆ ಬೇಡವೆಂದು ರಚ್ಚೆ ಹಿಡಿದ ವಧು, ಕೊನೆಯ ಕ್ಷಣದಲ್ಲಿ ಕುಟುಂಬದ ಮರ್ಯಾದೆ ಹೋಗುವುದು ಬೇಡವೆಂದು ತಾಳಿ ಕಟ್ಟಿಸಿಕೊಳ್ಳುತ್ತಾಳೆ. ಶಿಕ್ಷಿತರೂ ಇದಕ್ಕೆ ಹೊರತಲ್ಲ. ಡೈವೋರ್ಸ್ ಎಂಬುದು ಜಟಿಲ ಪ್ರಕ್ರಿಯೆ. ಜೊತೆಗೆ ವಿಚ್ಛೇದನ ಎಂಬುದು ಮಧ್ಯಮ ವರ್ಗದಲ್ಲಿ ಇಂದಿಗೂ ನಿಷೇಧಿತ, ಅಪವಿತ್ರ ಸಂಗತಿ. ಸಂಸಾರ ಎಂಬುದು ಉಸಿರುಕಟ್ಟುವ ಅನೇಕ ಭಾರಗಳ ವಿಷಕಾರಿ ಮೊತ್ತ. ಮನಸ್ಸಿನ ದನಿಗೆ ಓಗೊಡುವ ಸಂಗಾತಿಗಳು ಎಷ್ಟು ಮಂದಿಗೆ ಸಿಗುತ್ತಾರೆ? ಹಾಗಿಲ್ಲದೆ ಹೋದಾಗ ಉಂಟಾಗುವ ಒತ್ತಡ ರಿಲೀಸ್ ಆಗುವುದು ಸೂಕ್ತ ಜೊತೆಗಾರ ಸಿಕ್ಕಾಗ. ಅಂಥ ವ್ಯಕ್ತಿಯ ಸಂಗದಲ್ಲಿ ಆಕೆ ಜೀವಂತಿಕೆ ಅನುಭವಿಸುತ್ತಾಳೆ.
ಆ ಹೊತ್ತಿನಲ್ಲಿ ಆಕೆಯ ಭಾವನಾತ್ಮಕ ಪ್ರವಾಹ ಹೇಗಿರುತ್ತದೆಂದರೆ ಇನ್ಯಾವ ಸಾಮಾಜಿಕ ಕಟ್ಟು ಕಟ್ಟಳೆಗಳನ್ನು ಅಕೆ ಲೆಕ್ಕಿಸುವುದಿಲ್ಲ. ಆಗ ಅಪರಾಧ, ಕೊಲೆ, ಜೈಲು, ಸಂಸಾರದ ಸರ್ವನಾಶ- ಇಂಥ ಆಮೇಲಿನ ಸುಡುವಾಸ್ತವಗಳೆಲ್ಲ ಕಣ್ಣಿಗೆ ಕಾಣಿಸುವುದೇ ಇಲ್ಲ. ಹೊಸದಾಗಿ ಬದುಕು ಆರಂಭಿಸಬೇಕು ಎಂಬ ಭಾವವೊಂದೇ ವಿಜೃಂಭಿಸುತ್ತಿರುತ್ತದೆ. ಸೋನಂ ವಿಷಯದಲ್ಲಿ, ಆಕೆ ಪ್ರೀತಿಸಿದ್ದು ತನ್ನ ತಂದೆಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರನನ್ನು. ಸಮಾಜದ ಮತ್ತು ಆಕೆಯ ತಂದೆಯ ದೃಷ್ಟಿಯಲ್ಲಿ ಆತ ಯಾವ ರೀತಿಯಲ್ಲೂ ಆಕೆಗೆ ಸರಿಜೋಡಿಯಲ್ಲ. ಆಕೆಗೆ ಮದುವೆ ಎಂಬುದು ಟ್ರಿಗರ್ ಪಾಯಿಂಟ್. ಈ ಕ್ಷಣದಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳದೇ ಹೋದರೆ ಜೀವನ ಇಲ್ಲಿಗೆ ಮುಗಿದಂತೆ ಎಂಬ ಚಡಪಡಿಕೆ ಶುರುವಾಗಿದೆ. ಅದಕ್ಕೆ ದೊಡ್ಡ ಅಡ್ಡಿ ಯಾರು- ಹೊಸ ಗಂಡ. ಅದನ್ನು ನಿವಾರಿಸಬೇಕು. ಸರಳವಾದ ಡೈವೋರ್ಸ್ ಹಾದಿ ಬಿಟ್ಟು ಆಕೆ ಹಿಡಿದದ್ದು ಕೊಲೆಯ ದಾರಿ. ವಿಚಿತ್ರವೆಂದರೆ ಇಲ್ಲಿ ಆಕೆಗೆ ರಘುವಂಶಿಯ ಮೇಲೆ ದ್ವೇಷವೇನೂ ಇಲ್ಲ. ಅವನನ್ನು ದಾರಿಯಿಂದ ತೊಡೆದುಹಾಕಬೇಕು ಎಂಬುದಷ್ಟೇ ಕಾರಣ.
ಕೆಲವು ಪ್ರಕರಣಗಳಲ್ಲಿ ಸ್ತ್ರೀಯರು ಜೀವನದ ಹಿಂದಿನ ಘಟನೆಗಳಿಂದ ಆದ ಯಾತನೆಯ ಗಾಯ ಗಳನ್ನು ಅಥವಾ ಮಾನಸಿಕ ಕಾಯಿಲೆಗಳನ್ನು ಹೊತ್ತಿರಬಹುದು. ಸಂಬಂಧದಲ್ಲಿ ಸವಾಲು ಎದುರಾದಾಗ ಅದು ಹಿಂಸಾತ್ಮಕವಾಗಿ ವ್ಯಕ್ತವಾಗಬಹುದು. ಅನೇಕ ಮಹಿಳೆಯರು ಗಂಡನಿಗೆ ಹೊಡೆಯುತ್ತಿರುತ್ತಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಭಾವನಾತ್ಮಕವಾಗಿ ಮೂಲೆಗೆ ಒತ್ತರಿಸ ಲಾದ ಭಾವನೆ ಹೊಂದಿರುವವರು ದಾಂಪತ್ಯದಿಂದ ತಾನು ಪಾರಾಗಲು ದಾರಿಯಿಲ್ಲ ಅನಿಸಿದಾಗ ಕೊಲೆಯಂಥ ಕೃತ್ಯಕ್ಕೆ ಇಳಿಯುತ್ತಾರೆ. ಸಂಬಂಧವನ್ನು ಬಿಟ್ಟುಬಿಡುವುದಕ್ಕಿಂತಲೂ ಕೊಲೆಯೇ ಹೆಚ್ಚು ಸರಿ ಎಂದು ತಮ್ಮನ್ನೇ ಸಮಜಾಯಿಸಿಕೊಳ್ಳುತ್ತಾರೆ.
ಡೈವೋರ್ಸ್ ಯಾಕೆ ಒಂದು ಸಾಧ್ಯತೆಯಾಗಿ ಕಾಣುವುದಿಲ್ಲ ಎಂದರೆ ಅದರೊಂದಿಗೆ ಅಂಟಿಕೊಂಡಿ ರುವ ಸಾಮಾಜಿಕ ಅಸಹ್ಯ ಭಾವ, ನಮ್ಮ ಸಾಂಸ್ಕೃತಿಕ ಹಿನ್ನೆಲೆ ಮತ್ತು ಜಟಿಲತೆ, ಆರ್ಥಿಕ ಅವಲಂಬನೆ, ಫ್ಯಾಮಿಲಿ ಪ್ರೆಶರ್, ಸಮಾಜ ಏನೆಂದೀತೋ ಎಂಬ ಭಾವ, ಮಕ್ಕಳಿದ್ದಲ್ಲಿ ಅವರ ಹೊಣೆ, ಕಾನೂನು ಹೋರಾಟದ ಹೊರೆ ಇತ್ಯಾದಿ. ಇದಕ್ಕೆಲ್ಲ ಅಂತಿಮ ಪರಿಹಾರ ಕೊಲೆ. ವಿಚ್ಛೇದನ ವನ್ನು ಸಹಜ ಎಂಬಂತೆ ನೋಡದ, ಇಚ್ಛೆಯಿಲ್ಲದ ಮದುವೆಗಳಿಂದ ಸರಳ ವಿಚ್ಛೇದನವನ್ನು ಸಾಧ್ಯವಾಗಿಸದ ಸಮಾಜದ ಪಾಪವೂ ಈ ಅಪರಾಧಗಳ ಹಿಂದೆ ಇದೆ.
ಇನ್ನು ಯುವ ಸಮುದಾಯದಲ್ಲಿ ಈ ಸಮಸ್ಯೆ ಇನ್ನಷ್ಟು ಜಟಿಲ. ಹೊಸ ತಲೆಮಾರು ಹಿಂಸೆಗೆ ಬಹಳ ಹತ್ತಿರವಾಗಿದೆ. ಕೆಲವು ಹಿಂಸೆಗಳು ಹಿಂಸೆಯೆಂದೇ ಇವರಿಗೆ ಅನ್ನಿಸದಂತೆ ಇಂಟರ್ನೆಟ್, ಫಿಲಂಗಳು, ವೆಬ್ ಶೋಗಳು, ಸೋಶಿಯಲ್ ಮೀಡಿಯಾ ಇವರನ್ನು ತರಬೇತುಗೊಳಿಸಿದೆ. ಮಕ್ಕಳು ಇಂಥ ಕಂಟಂಟ್ಗೆ ಮೊದಲಿಗಿಂತ ಹೆಚ್ಚು ತೆರೆದುಕೊಂಡಿದ್ದಾರೆ. ಹೆತ್ತವರು ಮಕ್ಕಳನ್ನು ಈ ವಿಷಯದಲ್ಲಿ ಸೂಕ್ಷ್ಮಜ್ಞರನ್ನಾಗಿ ಮಾಡಬೇಕು. ಹಿಂಸೆಯ ಲಕ್ಷಣಗಳು ಇವರಲ್ಲಿ ಬಿಗಡಾಯಿಸುವ ಮೊದಲೇ ಕೌನ್ಸೆಲಿಂಗ್, ಚಿಕಿತ್ಸೆ ಕೊಡಿಸಬೇಕು.
ಇದನ್ನೆಲ್ಲ ನೋಡುವಾಗ, ಲಂಕೇಶರ ʼಗುಣಮುಖʼ ನಾಟಕದಲ್ಲಿ ಅಲಾವಿ ಖಾನ್ ಎಂಬ ಪಾತ್ರ ಹೇಳುವ 'ಓ ದೇವರೇ, ಮನುಷ್ಯನನ್ನು ಏಕಿಷ್ಟು ಕ್ಲಿಷ್ಟ ವಸ್ತುವನ್ನಾಗಿ ಸೃಷ್ಟಿಸಿದೆ' ಎಂಬ ಸಂಭಾಷಣೆ ನೆನಪಾಗದೆ ಇರುತ್ತದೆಯೇ?