Shashi Tharoor: ಮೋದಿಯ ಶಕ್ತಿ, ಚೈತನ್ಯ, ಇಚ್ಛೆಗೆ ಹೆಚ್ಚಿನ ಬೆಂಬಲ ದೊರೆಯಬೇಕು: ಶಶಿ ತರೂರ್
ಆಪರೇಷನ್ ಸಿಂಧೂರ್ ಅನಂತರ ಕಳೆದ ತಿಂಗಳು ಆಡಳಿತಾರೂಢ ಎನ್ಡಿಎ ಸರ್ಕಾರದ ಭಯೋತ್ಪಾದನಾ ವಿರೋಧಿ ರಾಜತಾಂತ್ರಿಕ ಸಂಪರ್ಕದ ಭಾಗವಾಗಿ ಅಮೆರಿಕ, ಬ್ರೆಜಿಲ್ ಸೇರಿದಂತೆ ಐದು ರಾಷ್ಟ್ರಗಳಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಭೇಟಿ ನೀಡಿದ್ದಾರೆ. ಇದೀಗ ಭಾರತಕ್ಕೆ ಮರಳಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿ, ಚೈತನ್ಯ ಮತ್ತು ಇತರ ದೇಶಗಳೊಂದಿಗೆ ತೊಡಗಿಸಿಕೊಳ್ಳುವ ಇಚ್ಛೆಗೆ ಹೆಚ್ಚಿನ ಬೆಂಬಲ ನೀಡಬೇಕೆಂದು ಕರೆ ನೀಡಿದ್ದಾರೆ. ಮೋದಿ ಬಗೆಗಿನ ಅವರ ಹೊಗಳಿಕೆ ಕಾಂಗ್ರೆಸ್ಗೆ ಮುಜುಗರ ತಂದಿದೆ.


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ದೇಶದ ಪ್ರಮುಖ ಆಸ್ತಿ. ಅವರ ಶಕ್ತಿ, ಚೈತನ್ಯ ಮತ್ತು ಇತರ ದೇಶಗಳೊಂದಿಗೆ ತೊಡಗಿಸಿಕೊಳ್ಳುವ ಇಚ್ಛೆಗೆ ಹೆಚ್ಚಿನ ಬೆಂಬಲ ದೊರೆಯಬೇಕಿದೆ ಎಂದು ಕಾಂಗ್ರೆಸ್ ಸಂಸದ (Congress MP) ಶಶಿ ತರೂರ್ (Shashi Tharoor) ಹೇಳಿದರು. ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ (Terror attack) ಬಳಿಕ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮತ್ತು ಭಯೋತ್ಪಾದನೆ ವಿರುದ್ಧ ಭಾರತದ ಶೂನ್ಯ ಸಹಿಷ್ಣು ನೀತಿಯನ್ನು ವಿಶ್ವಕ್ಕೆ ಸಾರಲು ನಡೆಸಿದ ಭಯೋತ್ಪಾದನಾ ವಿರೋಧಿ ರಾಜತಾಂತ್ರಿಕ ಸಂಪರ್ಕದ ಭಾಗವಾಗಿದ್ದ ಶಶಿ ತರೂರ್ ಅಮೆರಿಕ, ಬ್ರೆಜಿಲ್ ಸೇರಿದಂತೆ ಒಟ್ಟು ಐದು ದೇಶಗಳಿಗೆ ಭೇಟಿ ನೀಡಿದ್ದರು.
ಈ ಕುರಿತು ಮಾತನಾಡಿರುವ ತರೂರ್, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಭಾರತದ ಮಿಲಿಟರಿ ಪ್ರತಿಕ್ರಿಯೆ ಆಪರೇಷನ್ ಸಿಂಧೂರ್ ಬಗ್ಗೆ ಭಾರತೀಯ ನಿಯೋಗಗಳು ವಿವರಿಸಿವೆ ಎಂದು ಹೇಳಿದ ಅವರು ಪ್ರಧಾನಿ ಮೋದಿಯನ್ನು ಭಾರತದ ಪ್ರಧಾನ ಆಸ್ತಿ ಎಂದು ಬಣ್ಣಿಸಿದರು.
ಆಪರೇಷನ್ ಸಿಂಧೂರ್ ಅನಂತರ ಕಳೆದ ತಿಂಗಳು ಆಡಳಿತಾರೂಢ ಎನ್ಡಿಎ ಸರ್ಕಾರದ ಭಯೋತ್ಪಾದನಾ ವಿರೋಧಿ ರಾಜತಾಂತ್ರಿಕ ಸಂಪರ್ಕದ ಭಾಗವಾಗಿ ಅಮೆರಿಕ, ಬ್ರೆಜಿಲ್ ಸೇರಿದಂತೆ ಐದು ರಾಷ್ಟ್ರಗಳಿಗೆ ತರೂರ್ ಭೇಟಿ ನೀಡಿದ್ದರು. ಇದೀಗ ಭಾರತಕ್ಕೆ ಮರಳಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿ, ಚೈತನ್ಯ ಮತ್ತು ಇತರ ದೇಶಗಳೊಂದಿಗೆ ತೊಡಗಿಸಿಕೊಳ್ಳುವ ಇಚ್ಛೆಗೆ ಹೆಚ್ಚಿನ ಬೆಂಬಲ ನೀಡಬೇಕೆಂದು ಕರೆ ನೀಡಿದರು.
ಭಯೋತ್ಪಾದನಾ ವಿರೋಧಿ ರಾಜತಾಂತ್ರಿಕ ಸಂಪರ್ಕದ ಅಂಗವಾಗಿ ವಿಪಕ್ಷಗಳ ಸಂಸದರನ್ನು ಒಳಗೊಂಡ ಏಳು ನಿಯೋಗಗಳು ಅಮೆರಿಕ, ಯುರೋಪಿಯನ್ ಒಕ್ಕೂಟ ಮತ್ತು ಸದಸ್ಯ ರಾಷ್ಟ್ರಗಳು, ಸೌದಿ ಅರೇಬಿಯಾ ಮತ್ತು ರಷ್ಯಾ ಸೇರಿದಂತೆ ಒಟ್ಟು 32 ದೇಶಗಳಿಗೆ ಭೇಟಿ ನೀಡಿತ್ತು. ಇದು ರಾಷ್ಟ್ರೀಯ ಸಂಕಲ್ಪ ಮತ್ತು ಪರಿಣಾಮಕಾರಿ ಸಂವಹನದ ಕ್ಷಣವಾಗಿದೆ. ಭಾರತವು ಒಗ್ಗಟ್ಟಾದಾಗ, ಸ್ಪಷ್ಟತೆ ಮತ್ತು ದೃಢನಿಶ್ಚಯದಿಂದ ತನ್ನ ಧ್ವನಿಯನ್ನು ಪ್ರದರ್ಶಿಸಬಹುದು ಎಂದು ತರೂರ್ ಹೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಮಿಲಿಟರಿ ಪ್ರತಿಕ್ರಿಯೆಯ ಕುರಿತು ಈ ನಿಯೋಗಗಳು ವಿಶ್ವಕ್ಕೆ ವಿವರಿಸಿದೆ. ಅಲ್ಲದೇ ಭಯೋತ್ಪಾದನೆಯೊಂದಿಗೆ ಪಾಕಿಸ್ತಾನದ ನಿರಂತರ ಸಂಪರ್ಕಗಳ ಬಗ್ಗೆಯೂ ತಿಳಿಸಿದೆ ಎಂದು ಅವರು ಹೇಳಿದರು.
ಅಮೆರಿಕದಲ್ಲಿ ಭಾರತ ಮತ್ತು ಪಾಕಿಸ್ತಾನ ನಿಯೋಗಗಳ ಭಿನ್ನಾಭಿಪ್ರಾಯದ ಕುರಿತು ಉಲ್ಲೇಖಿಸಿದ ಅವರು, ನಾವು ಅಮೆರಿಕಕ್ಕೆ ತೆರಳಿದಾಗ ಪಾಕಿಸ್ತಾನಿ ನಿಯೋಗ ಅಲ್ಲಿದ್ದರೂ ಆ ದೇಶದ ಪ್ರತಿನಿಧಿಗಳು ನಮ್ಮನ್ನು ಭೇಟಿ ಮಾಡಿದರು. ಭಯೋತ್ಪಾದಕ ಗುಂಪುಗಳ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವ ನಮ್ಮ ಕ್ರಮಗಳಿಗೆ ಅವರು ಬೆಂಬಲವನ್ನೂ ನೀಡಿದ್ದಾರೆ. ಸತ್ಯವನ್ನು ಆಧರಿಸಿದ್ದ ನಮ್ಮ ವಾದಗಳುನ್ನು ಅವರು ಆಲಿಸಿದ್ದಾರೆ ಎಂದರು.
ಗಡಿಯಾಚೆಯಿಂದ ಬರುತ್ತಿರುವ ಬೆದರಿಕೆಯನ್ನು ನಾವು ನಿರಂತರವಾಗಿ ವಿರೋಧಿಸಿದ್ದೇವೆ. ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಲು ಜಾಗತಿಕ ಒಮ್ಮತವನ್ನು ಬಯಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಭೇಟಿ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ತರೂರ್ ಹೇಳಿದರು.
ಇದನ್ನೂ ಓದಿ: Physical abuse: ಬೆಂಗಳೂರಲ್ಲಿ ಹಾಡಹಗಲೇ ಯುವತಿ ಮೈ ಕೈ ಮುಟ್ಟಿ, ಹಲ್ಲೆಗೈದ ಗಾಂಜಾ ಗ್ಯಾಂಗ್!
ಏಳು ನಿಯೋಗಗಳಲ್ಲಿ ಅತ್ಯಂತ ಪ್ರಮುಖವಾದ ಅಮೆರಿಕಕ್ಕೆ ತೆರಳಿದ್ದ ನಿಯೋಗವನ್ನು ಮುನ್ನಡೆಸಲು ತರೂರ್ ಅವರನ್ನು ನೇಮಕ ಮಾಡಿದ್ದನ್ನು ವ್ಯಂಗ್ಯವಾಡಿದ್ದ ಕಾಂಗ್ರೆಸ್, ಬಿಜೆಪಿಯ ಪ್ರಚಾರ ಸಾಹಸಕ್ಕೆ ತರೂರ್ ಸೂಪರ್ ವಕ್ತಾರ ಎಂದಿತ್ತು. ಇದೀಗ ಪ್ರಧಾನಿ ಮೋದಿ ಅವರನ್ನು ತರೂರ್ ಹೊಗಳಿರುವುದು ಕಾಂಗ್ರೆಸ್ಗೆ ಮುಜುಗರ ತಂದಿದೆ ಎನ್ನಲಾಗುತ್ತಿದೆ.
ಈ ನಡುವೆ ತರೂರ್ ಕಾಂಗ್ರೆಸ್ನಿಂದ ಬಿಜೆಪಿಗೆ ಹೋಗುತ್ತಾರೆ ಎನ್ನುವ ವದಂತಿಗಳಿವೆ. ಇದನ್ನು ತರೂರ್ ತಳ್ಳಿ ಹಾಕಿದ್ದು ಕಳೆದ 16 ವರ್ಷಗಳಿಂದ ತಾವು ಪಕ್ಷ ಮತ್ತು ಅದರ ಸಿದ್ಧಾಂತಕ್ಕೆ ನಿಷ್ಠರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.