Manjunath Ajjampura Column: ಮನಸ್ಸು ಮಾಡಿದ್ದರೆ, ತುರ್ತುಪರಿಸ್ಥಿತಿಯಲ್ಲಿ ಗರೀಬಿ ಹಟಾವೋ ಆಗಿಬಿಡುತ್ತಿತ್ತು !
ಅರ್ಧ ಶತಮಾನದ ಹಿಂದೆ, ಅಂದರೆ 1975ರ ಜೂನ್ 26ರ ಬೆಳಗ್ಗೆ ಇಂದಿರಾ ಗಾಂಧಿಯವರು ಮಾಡಿದ್ದ ರೇಡಿಯೋ ಭಾಷಣವೂ ನೆನಪಿದೆ. ತುರ್ತುಪರಿಸ್ಥಿತಿಯ ಘೋಷಣೆಯನ್ನು ಸಮರ್ಥಿಸಿ ಕೊಂಡರಾದರೂ ಅವರ ಧ್ವನಿ ನಡುಗುತ್ತಿತ್ತು. ನಂತರದ್ದು ಇತಿಹಾಸ. ತುರ್ತುಪರಿಸ್ಥಿತಿಯ ಬಹು- ಆಯಾಮಗಳ ಆಘಾತಗಳ ಬಗೆಗೆ ಎಷ್ಟು ಬೇಕಾದರೂ ಬರೆಯಬಹುದು.


ಕ್ರಿಯಾಲೋಪ
ಮಂಜುನಾಥ ಅಜ್ಜಂಪುರ
ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಹೇರಿದ ತುರ್ತು ಪರಿಸ್ಥಿತಿಯ ಅಂಧಕಾರ ಪರ್ವವನ್ನು ಅನುಭವಿಸಿದವರು ಮಾತ್ರವೇ, ಆ ನೋವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಲ್ಲರು. ಸೆರೆಮನೆ ಯಲ್ಲಿದ್ದವರಿಗೆ ಎಂದಿಗೆ ಬಿಡುಗಡೆ ಎಂಬುದೂ ಗೊತ್ತಿರಲಿಲ್ಲ. ಅಂತೆಯೇ, ಹೊರಗಡೆ ಇದ್ದವರಿಗೋ ಮನೆಯೊಳಗೆ ಮತ್ತು ಮನೆಯ ಹೊರಗೆ ನಿರಂತರವಾಗಿ ಮಾ ಹಾಕಿಕೊಂಡ ಅನುಭವ, ನೀರೊಳಗೆ ಬಿದ್ದು ಉಸಿರು ಕಟ್ಟಿದ ಅನುಭವ, ಕಣ್ಣಿಗೆ ಹಾಕಿಕೊಂಡ ಪಟ್ಟಿ, ಕಿವಿಯಲ್ಲಿ ತುರುಕಿಕೊಂಡ ಹತ್ತಿ ಎಂದಿಗೆ ತೆಗೆದೇವು ಎಂಬಂಥ ಚಡಪಡಿಕೆ ಆ ದಿನಗಳು ನನಗಿನ್ನೂ ಚೆನ್ನಾಗಿ ನೆನಪಿವೆ.
ಅರ್ಧ ಶತಮಾನದ ಹಿಂದೆ, ಅಂದರೆ 1975ರ ಜೂನ್ 26ರ ಬೆಳಗ್ಗೆ ಇಂದಿರಾ ಗಾಂಧಿಯವರು ಮಾಡಿದ್ದ ರೇಡಿಯೋ ಭಾಷಣವೂ ನೆನಪಿದೆ. ತುರ್ತುಪರಿಸ್ಥಿತಿಯ ಘೋಷಣೆಯನ್ನು ಸಮರ್ಥಿಸಿ ಕೊಂಡರಾದರೂ ಅವರ ಧ್ವನಿ ನಡುಗುತ್ತಿತ್ತು. ನಂತರದ್ದು ಇತಿಹಾಸ. ತುರ್ತುಪರಿಸ್ಥಿತಿಯ ಬಹು- ಆಯಾಮಗಳ ಆಘಾತಗಳ ಬಗೆಗೆ ಎಷ್ಟು ಬೇಕಾದರೂ ಬರೆಯಬಹುದು.
ಅದು ಮುಗಿಯದಂಥ ಸರಕು. ನಡುಗಿತು ಪ್ರಜಾಪ್ರಭುತ್ವ ನನಗೆ ತುಂಬಾ ವ್ಯಥೆ ಉಂಟು ಮಾಡಿದುದು ಎಂದರೆ, ಅಪರಿಮಿತ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದ ಮತ್ತು ವಿರೋಧ ಪಕ್ಷಗಳನ್ನು ತುಳಿದೇ ಹಾಕಿದ್ದ ಇಂದಿರಾ ಅವರು ಮನಸ್ಸು ಮಾಡಿದ್ದರೆ, ತುರ್ತು ಪರಿಸ್ಥಿತಿಯ ತಮ್ಮ ನಿರಂಕುಶ ಆಳ್ವಿಕೆಯಲ್ಲಿ ದೇಶದ ಪ್ರಗತಿ, ಅಭಿವೃದ್ಧಿಗಳನ್ನು ನಿಜವಾಗಿಯೂ ಸಾಧಿಸಬಹುದಿತ್ತು, ವಾಗ್ದಾನ ನೀಡಿದ್ದಂತೆ ‘ಗರೀಬೀ ಹಟಾವ್’ ಮಾಡಬಹುದಿತ್ತು. ಆದರೆ ಅವರು ಏನೂ ಮಾಡಲಿಲ್ಲ, ಏನೇನೂ ಮಾಡಲಿಲ್ಲ. ಆ ಕರಾಳ ಅವಧಿಯಲ್ಲಿ ಪೊಲೀಸರ, ಅಧಿಕಾರಶಾಹಿ ಯ, ತೆರಿಗೆ ಅಧಿಕಾರಿಗಳ ದಮನಚಕ್ರ ಮಾತ್ರವೇ ಉರುಳುತ್ತಿತ್ತು.
ಇದನ್ನೂ ಓದಿ: Srivathsa Joshi Column: ಹೆಣ್ಣಿನ ಕಣ್ಣೀಗಷ್ಟೇ ಅಲ್ಲ ಕವಿಯ ಕಣ್ಣಿಗೂ ಕಾಡಿಗೆ ಚಂದ !
ಅಧಿಕಾರಿಗಳು ಆಡಿದ್ದೇ ಆಟ. ಹಾಗೆ ನೋಡಿದರೆ, ಹತ್ತು ವರ್ಷಗಳಲ್ಲಿ ಮಾಡಬಹುದಾದ ದೇಶಾಭಿವೃದ್ಧಿಯ ಕೆಲಸವನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ, ಎರಡೇ ವರ್ಷಗಳಲ್ಲಿ ಮುಗಿಸಿ ಬಿಡಬಹುದಿತ್ತು. ಸತ್ಯಸಂಗತಿಯೇನೆಂದರೆ, ಇಂದಿರಾ ಗಾಂಧಿ ಮತ್ತು ಅವರ ಪಟಾಲಮ್ಮಿಗೆ ಅಭಿವೃದ್ಧಿಯ ಕಡೆ ಯಾವ ಗಮನವೂ ಇರಲಿಲ್ಲ; ಅವರ ಕಣ್ಮುಂದೆ ಒಳ್ಳೆಯ ಕೆಲಸ ಮಾಡುವ ಯಾವುದೇ ಗುರಿ-ಉದ್ದೇಶಗಳೇ ಇರಲಿಲ್ಲ.
ಅದು ಬಿಡಿ, ಅಂದಿನ ಅನೇಕ ಹಿರಿಯ ಪತ್ರಕರ್ತರು, ಇತಿಹಾಸಕಾರರು ಈ ವಾಸ್ತವವನ್ನು ದಾಖಲಿಸಲು ಮರೆತದ್ದು ಸಹ ನಿಜವಾಗಿಯೂ ನೋವಿನ ಸಂಗತಿ. ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಹೇರಿದ ತುರ್ತು ಪರಿಸ್ಥಿತಿಯ ಅಂಧಕಾರ ಪರ್ವವನ್ನು ಅನುಭವಿಸಿದವರು ಮಾತ್ರವೇ, ಆ ನೋವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಲ್ಲರು. ಸೆರೆಮನೆಯಲ್ಲಿದ್ದವರಿಗೆ ಎಂದಿಗೆ ಬಿಡುಗಡೆ ಎಂಬುದೂ ಗೊತ್ತಿರಲಿಲ್ಲ.
ಅಂತೆಯೇ, ಹೊರಗಡೆ ಇದ್ದವರಿಗೋ ಮನೆಯೊಳಗೆ ಮತ್ತು ಮನೆಯ ಹೊರಗೆ ನಿರಂತರವಾಗಿ ಮಾ ಹಾಕಿಕೊಂಡ ಅನುಭವ, ನೀರೊಳಗೆ ಬಿದ್ದು ಉಸಿರು ಕಟ್ಟಿದ ಅನುಭವ, ಕಣ್ಣಿಗೆ ಹಾಕಿಕೊಂಡ ಪಟ್ಟಿ, ಕಿವಿಯಲ್ಲಿ ತುರುಕಿಕೊಂಡ ಹತ್ತಿ ಎಂದಿಗೆ ತೆಗೆದೇವು ಎಂಬಂಥ ಚಡಪಡಿಕೆ!
ನೀವು ಭಾರತೀಯರೋ, ರಾಷ್ಟ್ರೀಯರೋ? ತಮ್ಮ ಅಧಿಕಾರ ಉಳಿಸಿಕೊಳ್ಳುವ ಏಕೈಕ ದುರುದ್ದೇಶ ದಿಂದ ಇಂದಿರಾ ಗಾಂಧಿಯವರು ದೇಶದಾದ್ಯಂತ ಆಂತರಿಕ ತುರ್ತು ಪರಿಸ್ಥಿತಿ ಹೇರಿದ್ದರು. ಎಲ್ಲ ಮಾಧ್ಯಮದವರು, ಹೋರಾಟಗಾರರು, ಬುದ್ಧಿಜೀವಿಗಳು, ಬಹುತೇಕ ವಿರೋಧ ಪಕ್ಷಗಳವರು ಶರಣಾಗತರಾಗಿ ಬಿಟ್ಟಿದ್ದರು, ಅಷ್ಟೇ ಅಲ್ಲ, ಮನೆಯಲ್ಲಿ ಮಂಚದ ಅಡಿಯಲ್ಲಿ ಅಡಗಿಕೊಂಡು ಬಿಟ್ಟಿದ್ದರು.
ತುರ್ತುಪರಿಸ್ಥಿತಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಪರಿವಾರದ ಸಂಘಟನೆ ಗಳು ಮಾತ್ರವೇ ವಿರೋಧಿಸುತ್ತಿದ್ದುದರಿಂದ ಇಂದಿರಾ ಗಾಂಧಿಯವರು ಆರೆಸ್ಸೆಸ್ ಎಂದರೆ ಸಿಡಿಮಿಡಿ ಗೊಳ್ಳುತ್ತಿದ್ದರು. 1975ರ ಗಾಂಧಿ ಜಯಂತಿ ಒಂದು ವಿಶೇಷ ಸಂದೇಶ ಹೊತ್ತು ತಂದಿತು. ಆದರೆ ಆ ಸಂದೇಶ, ಸರಕಾರದ ಕಾರ್ಯಕ್ರಮಗಳ ಭಾಗವಾಗಿ ಮೂಡಿ ಬಂದಿರಲಿಲ್ಲ. ಆ ದಿನಗಳಲ್ಲಿ ಗಾಂಧಿ ಜಯಂತಿ ಆಚರಿಸಿದವರು ಸಂಘದ ಭೂಗತ ಕಾರ್ಯಕರ್ತರು.
ಎದೆಯ ಮೇಲೆ ಧರಿಸಲು ಗಾಂಧಿ ಬಿಲ್ಲೆಗಳು, ಗೋಡೆಗಳನ್ನು ಅಲಂಕರಿಸಲು ಗಾಂಧಿ ಭಿತ್ತಿಚಿತ್ರ ಗಳು. ಎರಡರಲ್ಲೂ ಗಾಂಧಿ ಚಿತ್ರದ ಕೆಳಗೆ ‘ಅಸತ್ಯ, ಅನ್ಯಾಯ, ದಬ್ಬಾಳಿಕೆಗಳಿಗೆ ತಲೆಬಾಗುವುದು ಹೇಡಿತನ’ ಎನ್ನುವ ಗಾಂಧಿ ಉಕ್ತಿ. ಆದರೆ ಅಂದಿನ ಇಂದಿರಾ-ದೇವರಾಜ ಅರಸು ಅವರ ಕಾಂಗ್ರೆಸ್ ಸರಕಾರಗಳಿಗೆ ಗಾಂಧಿಯ ಚಿತ್ರ, ಗಾಂಧಿಯ ಉಕ್ತಿ, ಗಾಂಧಿಯ ನೆನಪು ಎಲ್ಲಾ ನಿಷಿದ್ಧವಾಗಿತ್ತು.
ಗಾಂಧಿ ಭಿತ್ತಿಪತ್ರ ಅಂಟಿಸುತ್ತಿದ್ದ ಹಲವಾರು ಜನರನ್ನು ಪೊಲೀಸರು ಬಂಧಿಸಿದರು. ಅಹಿಂಸೆ, ಅಹಿಂಸೆ ಎಂದವರ ಚಿತ್ರ ಹಿಡಿದಿದ್ದಕ್ಕೆ ಹೊಡೆದು ಬಡಿದು ಬಂಧಿಸಿ, ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ಆಪಾದಿತರನ್ನು ಪೊಲೀಸರು ನ್ಯಾಯಾಧೀಶರ ಮುಂದೆ ತಂದು ನಿಲ್ಲಿಸಿದಾಗ, ನ್ಯಾಯಾಧೀಶರು ತಮ್ಮ ಕಣ್ಣು-ಕಿವಿಗಳನ್ನು ನಂಬದಾದರು. “ಏನು, ಈ ದೇಶದಲ್ಲಿ ಗಾಂಧಿ ಚಿತ್ರ ಅಂಟಿಸುವುದು ಕ್ರಿಮಿನಲ್ ಅಪರಾಧವಾಯಿತೇ?" ಎಂದು ಪ್ರಶ್ನಿಸಿದರು. ಇದಕ್ಕೆ ಪೊಲೀಸರು ಏನು ಹೇಳಿಯಾರು!
“ಇವರೆಲ್ಲಾ ಆರೆಸ್ಸೆಸ್ ಕಾರ್ಯಕರ್ತರು" ಎಂಬ ನೆಪ ಹೇಳಿದರು. “ಇರಬಹುದು, ಆದರೆ ಇವರು ಮಾಡಿದ ಅಪರಾಧವೇನು?" ಎಂಬ ನ್ಯಾಯಾಧೀಶರ ಪ್ರಶ್ನೆಗೆ ಪೊಲೀಸರು ನಿರುತ್ತರರಾದರು. ನ್ಯಾಯಾಧೀಶರು (ಕೆಲವೆಡೆ) ಪೊಲೀಸರಿಗೆ ಛೀಮಾರಿ ಹಾಕಿ, ಬಂಧಿತರನ್ನು ಬಿಡುಗಡೆ ಮಾಡಿದರು. ಹಿಂದೆ ಉಪ್ಪಿನ ಸತ್ಯಾಗ್ರಹದಲ್ಲಿ, ‘ಭಾರತ್ ಛೋಡೋ’ಚಳವಳಿಯಲ್ಲಿ ಭಾಗವಹಿಸಿ ‘ವಂದೇ ಮಾತರಂ’, ಮಹಾತ್ಮ ಗಾಂಧಿ ಕೀ ಜೈ’, ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದು ಘೋಷಿಸು ತ್ತಿದ್ದವರ ಮೇಲೆ ಬ್ರಿಟಿಷ್ ಪೊಲೀಸರ ಲಾಠಿಯೇಟು, ಬೂಟಿನೇಟು ಬೀಳುತ್ತಿತ್ತು. ‘ಸ್ವಾತಂತ್ರ್ಯ’ ಬಂದ ಮೇಲೂ ಹಾಗೆ ಘೋಷಣೆ ಕೂಗಿದವರ ಮೇಲೆ, ಕಾಂಗ್ರೆಸ್ ಸರಕಾರದ ಪೊಲೀಸರ ಲಾಠಿಯೇಟು ಬಿದ್ದುದು, ಬರಿಯ ವಿಸ್ಮಯದ-ವಿಷಾದಭಾವದ ಮಾತಲ್ಲ. ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನಾವು ಸರಿಯಾಗಿ ಅರ್ಥಮಾಡಿ ಕೊಳ್ಳದೆಯೇ, ಕಾಂಗ್ರೆಸ್ಸಿನಂಥ ಪಕ್ಷಗಳನ್ನು ಬೆಂಬಲಿಸಿ ಮತ ಹಾಕಿದುದರ ದುಷ್ಪರಿಣಾಮಗಳ ಅಂತಿಮ ಹಂತ.
1975ರ ನವೆಂಬರ್ 14ರಿಂದ ದೇಶಾದ್ಯಂತ ಪ್ರತಿಭಟನೆಯನ್ನು ಆರೆಸ್ಸೆಸ್ ಪರಿವಾರ ಸಂಘಟನೆಗಳು ಹಮ್ಮಿಕೊಂಡಿದ್ದವು. ಬಹು ಪಾಲು ರಾಜಕಾರಣಿಗಳು, ನಾಯಕರು ಸೆರೆಮನೆಯಲ್ಲಿದ್ದರು. ಪ್ರತಿಭಟನೆಯನ್ನು ವಿಫಲಗೊಳಿಸಲು ಅಂದಿನ ಕೇಂದ್ರ ಸರಕಾರ ಮುನ್ನೆಚ್ಚರಿಕೆಯ ಬಂಧನಗಳಿಗೆ ( Preventive Arrests ) ಆಜ್ಞೆ ಮಾಡಿತ್ತು. ಆ ಕಾರಣಕ್ಕೆ ನಾವೆ ಬಂಧನಕ್ಕೆ ಒಳಗಾದುದು ನವೆಂಬರ್ 13ರಂದು. ಪೊಲೀಸರು, “ನೀವು ಭಾರತೀಯರೋ ರಾಷ್ಟ್ರೀಯರೋ?" ಎಂದು ಪ್ರಶ್ನೆ ಹಾಕಿದಾಗ ನಾನೂ ನನ್ನ ಉಳಿದ ಸ್ವಯಂಸೇವಕ ಬಂಧುಗಳೂ ಕಕ್ಕಾಬಿಕ್ಕಿಯಾದೆವು.
ನಮ್ಮ ಮುಂದೆ PSR (Prisoners' Search Register) ಹರಡಿಕೊಂಡಿತ್ತು. ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ಮುಗ್ಧತೆಯಿಂದ “ನಾವೆ ಭಾರತೀಯರೂ ಹೌದು, ರಾಷ್ಟ್ರೀಯರೂ ಹೌದು" ಎಂದೆವು. “ಎರಡರಲ್ಲಿ ಒಂದು ಹೇಳ್ರೀ" ಎಂದು ಅವರು ಅಬ್ಬರಿಸಿದಾಗ ಇನ್ನಷ್ಟು ಗೊಂದಲ. ಕೊನೆಗೆ ಆ ಪ್ರಶ್ನೆ ನಾವು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದವರೋ, ಭಾರತೀಯ ಜನಸಂಘಕ್ಕೆ ಸಂಬಂಧಿಸಿದವರೋ ಎಂಬುದಾಗಿತ್ತು ಎಂದು ತಿಳಿದಾಗ, ಗೊಂದಲ ದಿಂದ ಪರಿಹಾರ.
ನಾವೆ ಒಕ್ಕೊರಲಿನಿಂದ “ನಾವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು" ಎಂದೆವು. ಅಂದಿನ ದಿನಮಾನಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರನ್ನು ಸರಿಯಾಗಿ ಉಚ್ಚರಿಸಲು, ಉಲ್ಲೇಖಿಸಲು ಬಹಳ ಜನರಿಗೆ ಬರುತ್ತಿರಲಿಲ್ಲ (ಕೆಲವರಿಗೆ ಈಗಲೂ ಗೊಂದಲ!). ಇದೆ ನಡೆದು ಅರ್ಧ ಶತಮಾನವೇ ಉರುಳಿದೆ. ಕರಾಳ ತುರ್ತುಪರಿಸ್ಥಿತಿಯ ನೂರೆಂಟು ನೆನಪುಗಳು ಕಣ್ಮುಂದೆ ಸುತ್ತುತ್ತವೆ.
ಇಡೀ ದೇಶದಲ್ಲಿ ಈ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಬ್ಬನೇ ಒಬ್ಬ MP, MLA, MLC ಸತ್ಯಾಗ್ರಹ ಮಾಡಲಿಲ್ಲ, ಪ್ರತಿಭಟಿಸಲಿಲ್ಲ, ಬಂಧನಕ್ಕೆ ಒಳಗಾಗಲಿಲ್ಲ ಎಂಬುದು ಇಂದಿಗೂ ಪ್ರಶ್ನೆಯಾಗಿ ಕಾಡುತ್ತದೆ. ಎಂಥ ಪಕ್ಷವಿದು. “ನಾವೇ ಸ್ವಾತಂತ ಕ್ಕಾಗಿ ಹೋರಾಡಿದೆವು, ಬ್ರಿಟಿಷರಿಂದ ನಾವೇ ಸ್ವಾತಂತ್ರ್ಯವನ್ನು ಪಡೆದೆವು" ಎಂದು ದಶಕಗಳಿಂದ ಸುಳ್ಳು ಹೇಳಿಕೊಂಡೇ ಬಂದ ಕಾಂಗ್ರೆಸ್ಸಿನವರಿಗೆ ಇದು ಪ್ರಜಾದ್ರೋಹ, ಇದು ಸ್ವಾತಂತ್ರ್ಯಹರಣ, ಈ ತುರ್ತುಪರಿಸ್ಥಿತಿಯು ಅನ್ಯಾಯದ ಪರಮಾವಧಿ ಎಂದು ಅನ್ನಿಸಲೇ ಇಲ್ಲ!
ಕಾಂಗ್ರೆಸ್ಸಿನ ಒಬ್ಬನೇ ಒಬ್ಬ MP, MLA, MLC ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲೇ ಇಲ್ಲ. ಕಾಸು ಮಾಡಿಕೊಳ್ಳುವ ದಂಧೆಯನ್ನು ಎಲ್ಲ ಕಾಂಗ್ರೆಸ್ಸಿಗರೂ ಇನ್ನಷ್ಟು ನಿರಾಳವಾಗಿ ಮುಂದುವರಿಸಿ ಕೊಂಡು ಹೋದರು. ಕಳೆದ ಏಳೆಂಟು ದಶಕಗಳ ಭಾರತೀಯ ಇತಿಹಾಸವನ್ನು ಅವಲೋಕಿಸಿದರೆ ಈ ಕಾಂಗ್ರೆಸ್ ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷವಾಗಿರದೆ, ದೇಶಕ್ಕೆ ಅಂಟಿದ ಒಂದು ಶಾಪ, ಒಂದು ರೋಗ ಎಂಬುದು ಖಚಿತವಾಗುತ್ತದೆ.
ಪ್ರಜಾತಂತ್ರದ ಮೂಲದ್ರವ್ಯ ಇಲ್ಲಿದೆ
1977ರ ಮಾರ್ಚ್ ತಿಂಗಳಲ್ಲಿ ಅಂದಿನ ಆಂತರಿಕ ತುರ್ತುಪರಿಸ್ಥಿತಿ ತೆಗೆಯಲ್ಪಟ್ಟು ಪ್ರಜಾತಂತ್ರ ಮತ್ತೆ ಅರಳುವಂತಾಯಿತು. ನಮ್ಮ ಮಣ್ಣಿನಲ್ಲಿರುವ ಗಣತಂತ್ರದ ಮೂಲದ್ರವ್ಯ ಸಹಜವಾಗಿಯೇ ನನ್ನಲ್ಲಿ ಪ್ರತಿಬಾರಿ ಬೆರಗು ಉಂಟುಮಾಡುತ್ತದೆ. ಅದು ನಮ್ಮ ರಕ್ತದಲ್ಲಿಯೇ ಇದೆ. ಒಂದು ಕಾನೂನು, ಒಂದು ವಿಧಿ ಜಾರಿಯಾಗಲು ಮತ್ತು ಹಾಗೆ ಜಾರಿಯಾಗಿ ಯಶಸ್ವಿಯಾಗಲು, ಇಡಿಯ ಜನಪದದ ನರನಾಡಿ ಗಳಲ್ಲಿ ಪೂರ್ವಸಿದ್ಧತೆ ಇರಬೇಕಲ್ಲವೇ? ಇಲ್ಲವಾದರೆ ಜನಪದದಲ್ಲಿ ಒಂದು ಬದಲಾವಣೆಯನ್ನು, ಒಂದು ಸಂಚಲನವನ್ನು ಅಷ್ಟು ಸುಲಭವಾಗಿ ಕಾಣುತ್ತೇವೆಯೇ? ಅಂಥ ಒಂದು ನವೋನ್ಮೇಷ ವ್ಯವಸ್ಥೆಯು, ಒಂದು ಪಾರಂಪರಿಕ ಮೌಲ್ಯವಾಗಿ ನಮ್ಮ ನಡುವೆ ಉಳಿದು ಬಂದಿದ್ದರೆ ಮಾತ್ರ ಅರ್ಥಪೂರ್ಣವಾಗಿ ನೆಲೆಗೊಳ್ಳಲು ಸಾಧ್ಯ.
ಗಣತಂತ್ರವಾಗಲೀ, ಸ್ವಾತಂತ್ರ್ಯವಾಗಲೀ ಒಂದಕ್ಕೊಂದು ಪೂರಕವಾಗಿ ಇರುವಂಥ ಸಾಮಾಜಿಕ ಮೌಲ್ಯಗಳು. ಸ್ವಾತಂತ್ರ್ಯೋತ್ತರ ಕಾಲಾವಧಿಯ ಸಂಜಾತರಿಗೆ ನಮ್ಮ ಸ್ವಾತಂತ್ರ್ಯ ಸಂಗ್ರಾಮ, ದೇಶವಿಭಜನೆಗಳು ಕೇವಲ ಅಧ್ಯಯನ ಸಾಮಗ್ರಿಗಳು ಮತ್ತು ನೇರಾನೇರ ಅನುಭವಕ್ಕೆ ದಕ್ಕಿರದ ಬಲುದೊಡ್ಡ ಸಂಗತಿಗಳು. ಅಂಥ ನಮ್ಮೆಲ್ಲರಿಗೆ ಸ್ವಾತಂತ್ರ್ಯದ ಉನ್ನತ ಮೌಲ್ಯದ ಪರಿಚಯ ವಾದುದು 1975ರ ಈ ತುರ್ತುಪರಿಸ್ಥಿತಿಯಿಂದಲೇ. ಆಕ್ರಮಕರ ಮತ್ತು ಬ್ರಿಟಿಷರ ಆಡಳಿತದ ಕ್ರೌರ್ಯಗಳು ಹೇಗಿದ್ದಿರಬಹುದೆಂದು ನಾವು ಊಹಿಸಲು ಸಾಧ್ಯವಾದುದು ಆ ಅವಧಿಯಲ್ಲಿಯೇ. ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಬಂದುದೇ ತನ್ನಿಂದ ಎಂದು ಹೇಳುತ್ತದೆ. ಇಂದಿರಾ ಅವರು ಪ್ರಜಾ ಪ್ರಭುತ್ವವನ್ನು ಕೊಂದು ಹಾಕಿದಾಗ, ನ್ಯಾಯಾಲಯಗಳನ್ನು ಟೀಕಿಸಿದಾಗ, ಹಿರಿಯ ನ್ಯಾಯಾಧೀಶ ರನ್ನು ಕಡೆಗಣಿಸಿ ತಮ್ಮ ಪ್ರೀತಿಪಾತ್ರರನ್ನೇ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಿದಾಗ, ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಿದಾಗ, ಸಂಸತ್ತನ್ನು ದುರುಪಯೋಗ ಪಡಿಸಿಕೊಂಡಾಗ, ಬೇಕಾಬಿಟ್ಟಿಯಾಗಿ ಸಂವಿಧಾನವನ್ನೇ ತಿದ್ದುಪಡಿ ಮಾಡಿದಾಗ ಸಹ, ಇಡೀ ದೇಶದಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ಎಂಪಿ, ಎಂಎಲಎ ಪ್ರತಿಭಟಿಸಲಿಲ್ಲ, ರಾಜೀನಾಮೆ ಕೊಡಲಿಲ್ಲ. ಬಗ್ಗಿ ಎಂದು ಇಂದಿರಾ ಹೇಳಿದ್ದೇ ತಡ, ಕಾಲಿಗೆರಗಿದ ಈ ಕಾಂಗ್ರೆಸ್ಸಿಗರು ಮೇಲೆ ಏಳಲೇ ಇಲ್ಲ. ನಾಲ್ಕು ದಶಕಗಳಿಂದ ಲೇಖಕನಾಗಿ, ಅಂಕಣ ಕಾರನಾಗಿ ದೇಶದ ರಾಜಕೀಯವನ್ನು, ಸಾಮಾಜಿಕ ಬದಲಾವಣೆಯನ್ನು ಗಮನಿಸುವ ಪ್ರಯತ್ನ ಮಾಡಿದ್ದೇನೆ.
ಜನತಂತ್ರ-ಗಣತಂತ್ರಗಳನ್ನು ಉಳಿಸಲು ಒಬ್ಬ ಕಾಂಗ್ರೆಸ್ಸಿಗನೂ ಮುಂದೆ ಬರಲಿಲ್ಲವ, ಅದೂ ಐತಿಹಾಸಿಕ ಮಹತ್ವದ ಅಂಥ ವಿಶೇಷ ಸಂದರ್ಭದಲ್ಲಿ ಎಂಬುದು ನನಗೆ ಇಂದಿಗೂ ವ್ಯಥೆಯ ವಿಷಯವಾಗಿದೆ. ನಮಗೆ, ನಮ್ಮ ದೇಶಕ್ಕೆ ಆಧುನಿಕವಾದುದು, ಒಳ್ಳೆಯದು ಪಶ್ಚಿಮದಿಂದಲೇ ಬಂದಿದೆ. ಪ್ರಜಾಪ್ರಭುತ್ವ-ಗಣತಂತ್ರಗಳೂ ಅಷ್ಟೆ.
ಬ್ರಿಟಿಷರು ನಮ್ಮನ್ನು ಆಳಿದುದರಿಂದಲೇ ಬಂದಿವೆ ಎನ್ನುವ ವಾದವಿದೆ. ಬ್ರಿಟಿಷ್ ಪೂರ್ವದ ಅವಧಿಯನ್ನು ‘ಅಂಧಕಾರದ ಅವಧಿ’ ಎಂದು ನಮ್ಮ ಬುದ್ಧಿಜೀವಿಗಳು ದಿನಕ್ಕೊಮ್ಮೆ ನೆನಪಿಸುತ್ತಾರೆ. ನಮ್ಮನ್ನು ಬ್ರಿಟಿಷರು ಆಳಿದುದರಿಂದ ನಮ್ಮ ಆಡಳಿತ ವ್ಯವಸ್ಥೆಯಲ್ಲಿ, ರಾಜಕೀಯ ವ್ಯವಸ್ಥೆಯಲ್ಲಿ ತುಂಬ ಬದಲಾವಣೆಗಳಾದವು. ಆದರೆ ಅವೆ ಅವರ ಅನುಕೂಲಕ್ಕೆ, ಅವರ ಲೂಟಿಗೆ, ಅವರ ವಸಾಹತುಶಾಹಿ ಸಾಮ್ರಾಜ್ಯದ ವಿಸ್ತರಣೆ-ಪಾಲನೆಗಳ ಸಲುವಾಗಿ ಅನುಷ್ಠಾನವಾದವು ಎಂಬುದನ್ನೂ ಮರೆಯುವಂತಿಲ್ಲ. ಹಾಗೆಂದೇ, ನಮ್ಮ ಬುದ್ಧಿಜೀವಿಗಳು ಎಲ್ಲವನ್ನೂ ಬ್ರಿಟಿಷರ ಮಹೋಪಕಾರವೆಂದು ಬಣ್ಣಿಸುವುದನ್ನು ನೋಡಿದರೆ ಹೇಸಿಗೆಯಾಗುತ್ತದೆ.
ಅನೇಕ ದೋಷಗಳ ನಡುವೆಯೂ, ನಮ್ಮ ಭಾರತೀಯ ಪಾರಂಪರಿಕ ವ್ಯವಸ್ಥೆಯ ಜನತಂತ್ರದ ಪರಿಕಲ್ಪನೆಯು ಉಳಿದುಕೊಂಡಿರುವುದು ತುಂಬ ವಿಶೇಷ ಸಾಧನೆಯಾಗಿ ಕಾಣುತ್ತದೆ. ನಮ್ಮ ನೆರೆಹೊರೆಯ ತುಂಬ ದೇಶಗಳು ಸೇನಾ ಸರ್ವಾಧಿಕಾರಿಗಳ ಕೈಲಿ, ಕಮ್ಯುನಿಸ್ಟರ ಕೈಲಿ ಸಿಕ್ಕಿಹಾಕಿ ಕೊಂಡಿವೆ.
ಅಲ್ಲಿ ಸಾಮಾನ್ಯ ಜನರ ಧ್ವನಿಯು ಕ್ಷೀಣವಾಗಿ ಕೇಳಿಸುವುದೂ ಕಷ್ಟಕರವಾಗಿದೆ. ನಮ್ಮ ದೇಶದ ಭಾಗಗಳೇ ಆಗಿದ್ದ ಬಾಂಗ್ಲಾದೇಶ-ಪಾಕಿಸ್ತಾನ ಮುಂತಾದವುಗಳ ಪಾಡು ನೋಡಿದಾಗ, ನಮ್ಮಲ್ಲಿ ಜನತಂತ್ರ ಉಳಿದಿರುವುದರ ಹಿನ್ನೆಲೆಯಲ್ಲಿ ನಮ್ಮ ಪರಂಪರೆಯ ಸತ್ವ ಗುಣಲಕ್ಷಣಗಳೇ ಪ್ರಧಾನ ವಾಗಿ ಕಾಣುತ್ತವೆ.
ಭಾರತ ಮತ್ತೆ ತನ್ನ ಪ್ರಜಾಪ್ರಭುತ್ವವನ್ನು ಪುನರ್ -ಪ್ರತಿಷ್ಠಾಪಿಸಿಕೊಂಡಿತು. ಇದು ಅದ್ಭುತ. ಇದು ಈ ಮಣ್ಣಿನ ವೈಶಿಷ್ಟ್ಯ. ಭವಿಷ್ಯದಲ್ಲಿಯೂ ಭಾರತವು ತನ್ನ ಸನಾತನ ಧರ್ಮದ ಮೌಲ್ಯಗಳನ್ನು ಉಳಿಸಿಕೊಂಡಾಗ ಮಾತ್ರ ಇಲ್ಲಿನ ಜನತಂತ್ರ ಉಳಿದೀತು. ತುರ್ತುಪರಿಸ್ಥಿತಿಯ ಹೇರಿಕೆಯ (25/6/1975) ಕಹಿನೆನಪುಗಳ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯದ ಪರಿಕಲ್ಪನೆಯ ಮೂಲದ್ರವ್ಯವು ನಮ್ಮಲ್ಲಿ ಅರ್ಥಪೂರ್ಣ ವಿಚಾರಗಳನ್ನು ಹೊಮ್ಮಿಸಲಿ.
ಇತಿಹಾಸ, ಸ್ವಾತಂತ್ರ್ಯ ಹೋರಾಟಗಳ ಸರಿಯಾದ ವಿಮರ್ಶಾತ್ಮಕ ವಿಶ್ಲೇಷಣೆಗಳು ಈ ಪರಿಪ್ರೇಕ್ಷ್ಯ ದಲ್ಲಿ, ನಮ್ಮ ಮೇಲೆ ಬೆಳಕು ಚೆಲ್ಲಲಿ, ನಮ್ಮನ್ನು ಕವಿದಿರುವ ಕತ್ತಲನ್ನು ಮತ್ತೊಮ್ಮೆ ನೀಗಲಿ.
(ಲೇಖಕರು ಹಿರಿಯ ಸಾಹಿತಿ)