Pralhad Joshi: ಗ್ಯಾರಂಟಿ ನೆಪದಲ್ಲಿ ಕಾರ್ಯಕರ್ತರ ಸಲಹುವ ರಾಜ್ಯ ಕಾಂಗ್ರೆಸ್ ಸರ್ಕಾರ: ಜೋಶಿ ಆರೋಪ
Pralhad Joshi: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಸ್ಕೀಂಗಳು ಆ ಪಕ್ಷದ ಕಾರ್ಯಕರ್ತರಿಗೆ ಆದಾಯದ ಮೂಲವಾಗಿವೆ. ʼಗೃಹಲಕ್ಷ್ಮಿʼ ನಿಜಕ್ಕೂ ಆ ಪಕ್ಷದವರಿಗೆ ವರದಾನವಾಗಿದೆ, ವರಮಾನ ತರುವ ಯೋಜನೆಯಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.


ನವದೆಹಲಿ: ರಾಜ್ಯ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ನೆಪದಲ್ಲಿ ತನ್ನ ಕಾರ್ಯಕರ್ತರನ್ನು ಸಲಹುತ್ತಿದೆ ಅಷ್ಟೇ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ. ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ ಮೂರು ತಿಂಗಳಿಂದಲೂ ಮಹಿಳೆಯರಿಗೆ ʼಗೃಹಲಕ್ಷ್ಮಿʼ ಹಣ ನೀಡಿಲ್ಲ. ಆದರೆ, ಗ್ಯಾರಂಟಿ ಅನುಷ್ಠಾನ ಸಮಿತಿಗೆ ಮಾತ್ರ 3 ತಿಂಗಳ ಮುಂಗಡ ಭತ್ಯೆ ಬಿಡುಗಡೆಗೆ ಆದೇಶಿಸಿದೆ ಎಂದು ಅವರು ದೂರಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಸ್ಕೀಂಗಳು ಆ ಪಕ್ಷದ ಕಾರ್ಯಕರ್ತರಿಗೆ ಆದಾಯದ ಮೂಲವಾಗಿವೆ. ʼಗೃಹಲಕ್ಷ್ಮಿʼ ನಿಜಕ್ಕೂ ಆ ಪಕ್ಷದವರಿಗೆ ವರದಾನವಾಗಿದೆ, ವರಮಾನ ತರುವ ಯೋಜನೆಯಾಗಿದೆ ಎಂದು ಟೀಕಿಸಿದ್ದಾರೆ.
ಅನುಷ್ಠಾನ ಸಮಿತಿಗೆ ಮುಂಗಡ ಸಂಬಳವೇ?
ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬರುವ ಮುನ್ನ ʼಮಹಿಳೆಯರಿಗೆ ಪ್ರತಿ ತಿಂಗಳು ₹2,000 ಟಕಾಟಕ್ ಹಾಕೇಬಿಡ್ತೀವಿʼ ಎಂದರು. ಆದರೆ, ಮೂರ್ನಾಲ್ಕು ತಿಂಗಳುಗಟ್ಟಲೇ ಹಾಕದೆ ಸತಾಯಿಸುತ್ತಿದೆ. ಪ್ರಶ್ನಿಸಿದರೆ ಅದೇನು ಸಂಬಳವೇ? ಎನ್ನುತ್ತಾರೆ. ಹಾಗಾದರೆ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಕೊಡುತ್ತಿರುವುದೇನು? ಎಂದು ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
ಗ್ಯಾರಂಟಿ ಸಮಿತಿಗೇಕೆ ಮುಂಗಡ ಭತ್ಯೆ?
ಮಹಿಳೆಯರಿಗೆ ಪ್ರತಿ ತಿಂಗಳು ಕೊಡಲು ಹಣವಿಲ್ಲ. ಆದರೆ, ಗ್ಯಾರಂಟಿ ಅನುಷ್ಠಾನ ಸಮಿತಿಗೆ ಒಟ್ಟಿಗೇ 5 ತಿಂಗಳು (3 ತಿಂಗಳು ಮುಂಗಡ) ಭತ್ಯೆಯಾಗಿ ₹7.65 ಕೋಟಿ ಬಿಡುಗಡೆ ಮಾಡಿದೆ. ರಾಜ್ಯದ ಜನರಿಗೆ ಮಾತ್ರ ಆಗಸ ತೋರಿಸಿ ಮಂಕುಬೂದಿ ಎರಚುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ʼಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡದಿದ್ರೆ ಆಕಾಶ ಏನೂ ಕಳಚಿ ಬೀಳಲ್ಲ' ಎಂಬ ದುರಹಂಕಾರದ ಮಾತನಾಡುತ್ತಿದ್ದಾರೆ. ಮತ್ತೆ ಕೆಲವರು ಅದೇನು ಸಂಬಳವೇ? ಎಂದು ಪ್ರತಿಕ್ರಿಯಿಸಿದರು. ಹಾಗಾದರೆ ಗ್ಯಾರಂಟಿ ಸಮಿತಿಯಲ್ಲಿರುವ ಕಾಂಗ್ರೆಸ್ ಮುಖಂಡರಿಗೆ, ಕಾರ್ಯಕರ್ತರಿಗೆ ಮುಂಗಡ ಭತ್ಯೆಗೆ ಆದೇಶ ಕೊಟ್ಟಿದ್ದಾರಲ್ಲ ಇದೇನು? ಎಂದು ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
₹ 7200 ಕೋಟಿ ಬಾಕಿ
ರಾಜ್ಯದ 1.25 ಕೋಟಿ ಮಹಿಳೆಯರಿಗೆ ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮಿ ಹಣ ಸಂದಾಯವಾಗಿಲ್ಲ. ಅಂದಾಜು ₹7200 ಕೋಟಿ ಹಣ ಬಿಡುಗಡೆ ಬಾಕಿ ಉಳಿಸಿಕೊಂಡಿದೆ. ಖಜಾನೆ ಪೂರ್ತಿ ಖಾಲಿ ಮಾಡಿದೆ ಎಂದು ಜೋಶಿ ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | HPCL Recruitment 2025: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ನಲ್ಲಿದೆ 411 ಹುದ್ದೆ; ದ್ವಿತೀಯ ಪಿಯು ಪಾಸಾದವರು ಅಪ್ಲೈ ಮಾಡಿ
ರಾಜ್ಯ ಕಾಂಗ್ರೆಸ್ ಸರ್ಕಾರ ಶ್ರೀಸಾಮಾನ್ಯರನ್ನು ಕಡೆಗಣಿಸಿದ್ದು, ತನ್ನ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಮುಂಗಡ ಭತ್ಯೆ ನೀಡಿ ಅವರನ್ನು ಸಲಹುತ್ತಿದೆ. ಕಾಂಗ್ರೆಸ್ ಸರ್ಕಾರ ದುರಾಡಳಿತ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.