Laxmi Hebbalkar: ಕಾಲ್ತುಳಿತಕ್ಕೂ ರಾಜಕೀಯ ಬೆರೆಸಬೇಡಿ: ಲಕ್ಷ್ಮೀ ಹೆಬ್ಬಾಳ್ಕರ್
ಈಗ ದುರಂತ ನಡೆದ ಬಗ್ಗೆ ಚರ್ಚೆ ಮಾಡುವ ಸಮಯವಲ್ಲ. ಯಾರು ದುಃಖದಲ್ಲಿದ್ದಾರೆ, ಅವರಿಗೆ ಸಾಂತ್ವನ ಹೇಳುವುದು ಮುಖ್ಯ. ಈ ವಿಚಾರದಲ್ಲಿ ಯಾರೇ ರಾಜಕಾರಣ ಮಾಡಿದರೂ ತಪ್ಪು. ರಾಜ್ಯದ ಜನರಿಗೆ, ಅದರಲ್ಲೂ ಯಾರು ದುಃಖದಲ್ಲಿದ್ದಾರೆ, ಅವರಿಗೆ ಸಾಂತ್ವನ ಹೇಳುವ ಕೆಲಸ ಆಗಬೇಕು. ಈ ವಿಷಯದಲ್ಲಿ ಯಾರೂ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.


ಬೆಂಗಳೂರು: ಆರ್ಸಿಬಿ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತ ಘಟನೆ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ತಿಳಿಸಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ದುರಂತವನ್ನು ಯಾರೂ ನಿರೀಕ್ಷಿಸಲು ಸಾಧ್ಯವಿಲ್ಲ. ಘಟನೆಯು ನಡೆಯಬಾರದಿತ್ತು. ನಡೆದು ಹೋಗಿದೆ. ಇದಕ್ಕಾಗಿ ಸರ್ಕಾರ ತೀವ್ರ ದುಃಖ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ ಸಚಿವರು, ದುರ್ಘಟನೆ ವಿಷಯದಲ್ಲಿ ರಾಜಕಾರಣ ನಡೆಸುವುದು ಸರಿಯಲ್ಲ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.
ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು
ಈಗ ದುರಂತ ನಡೆದ ಬಗ್ಗೆ ಚರ್ಚೆ ಮಾಡುವ ಸಮಯವಲ್ಲ. ಯಾರು ದುಃಖದಲ್ಲಿದ್ದಾರೆ, ಅವರಿಗೆ ಸಾಂತ್ವನ ಹೇಳುವುದು ಮುಖ್ಯ. ಈ ವಿಚಾರದಲ್ಲಿ ಯಾರೇ ರಾಜಕಾರಣ ಮಾಡಿದರೂ ತಪ್ಪು. ರಾಜ್ಯದ ಜನರಿಗೆ, ಅದರಲ್ಲೂ ಯಾರು ದುಃಖದಲ್ಲಿದ್ದಾರೆ, ಅವರಿಗೆ ಸಾಂತ್ವಾನ ಹೇಳುವ ಕೆಲಸ ಆಗಬೇಕು. ಈ ವಿಷಯದಲ್ಲಿ ಯಾರೂ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು ಎಂದು ಅವರು ತಿಳಿಸಿದರು.
ಕೊಲೆಯೆಂದು ಬಿಂಬಿಸುವುದು ಸರಿಯಲ್ಲ
ವಿಜಯೋತ್ಸವದ ವೇಳೆ ಸಂಭವಿಸಿರುವ ಘಟನೆ ಅಚಾನಕ್ಕಾಗಿ ನಡೆದಿರುವುದು. ಘಟನೆಯ ಬಗ್ಗೆ ಎಲ್ಲರಿಗೂ ಅತ್ಯಂತ ನೋವು ಇದೆ. ಆದರೆ, ಇದೊಂದು ಸರ್ಕಾರದ ಕೊಲೆಯೆಂದು ಬಿಂಬಿಸುವುದು ಸರಿಯಲ್ಲ. ಈ ರೀತಿ ಘಟನೆ ಆಗಲಿ ಎಂದು ನಾವಾಗಲಿ, ನೀವಾಗಲಿ ಯಾರಾದರೂ ಬಯಸಬಹುದಾ ಎಂದು ಸಚಿವರು ಪ್ರಶ್ನಿಸಿದರು.
ಈ ಸುದ್ದಿಯನ್ನೂ ಓದಿ | Bengaluru Stampede: ಕಾರ್ಯಕ್ರಮ ಆಯೋಜಿಸಿದವರು ನಾವಲ್ಲ: ಆರ್ಸಿಬಿ ಮತ್ತು ಕೆಎಸ್ಸಿಎ: ಗೃಹ ಸಚಿವ ಪರಮೇಶ್ವರ್
ಮೃತರ ಕುಟುಂಬಗಳಿಗೆ ಸಾಂತ್ವಾನ
ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗ, ವಾರಸುದಾರರಿಗೆ, ಪೋಷಕರಿಗೆ ಸಾವಿನ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರಲ್ಲದೆ, ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಶಿಸಿದರು.