Vishwavani Editorial: ದೀಪದ ಕೆಳಗೇ ಕತ್ತಲು...
ಇದು ವಿಷಾದನೀಯ ಬೆಳವಣಿಗೆ. ಪೊಲೀಸು, ಕೋರ್ಟು, ಕೇಸು, ಎಫ್ ಐಆರ್ ಮುಂತಾದ ಶಬ್ದಗಳನ್ನು ಕೇಳುತ್ತಿದ್ದಂತೆ ಸಮಾಜದ ಕೆಲವರಲ್ಲಿ ಸಹಜವಾಗೇ ಸಣ್ಣ ಮಟ್ಟಿಗಿನ ಭಯ ಹುಟ್ಟಿಕೊಳ್ಳುವುದಿದೆ. ಇಂಥ ಸಹಜ ತಲ್ಲಣವನ್ನೇ ದುರುಪಯೋಗ ಪಡಿಸಿಕೊಳ್ಳಲು ಮುಂದಾಗುವವರು ಇಂಥ ದುಸ್ಸಾಹಸಗಳಿಗೆ ಕೈಹಾಕುತ್ತಾರೆ ಎನ್ನಲಡ್ಡಿಯಿಲ್ಲ


ಲೋಕಾಯುಕ್ತ ಪೊಲೀಸರ ಹೆಸರು ಹೇಳಿಕೊಂಡು ಸರಕಾರಿ ಅಧಿಕಾರಿಗಳಿಂದ ಕೋಟಿಗಟ್ಟಲೆ ಹಣವನ್ನು ವಸೂಲಿ ಮಾಡಿದ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ನಿವೃತ್ತ ಹೆಡ್ಕಾನ್ಸ್ಟೇಬಲ್ ನಿಂಗಪ್ಪ ಎಂಬುವವರು ಬಂಧನಕ್ಕೊಳಗಾಗಿರುವ ಸುದ್ದಿ ಈಗಾಗಲೇ ಜಗಜ್ಜಾಹೀರು.
ಕರ್ತವ್ಯಕ್ಕೆ ಅನಧಿಕೃತವಾಗಿ ಗೈರುಹಾಜರಾಗುತ್ತಿದ್ದ ಇವರಿಗೆ ಅನೇಕ ಸಲ ತಿಳಿವಳಿಕೆ ನೋಟಿಸ್ ನೀಡಿದ್ದರೂ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸದ ಕಾರಣ ಇವರನ್ನು ಸೇವೆಯಿಂದ ವಜಾ ಗೊಳಿಸಲಾಗಿತ್ತು ಎಂಬುದು ಲಭ್ಯ ಮಾಹಿತಿ. ಆದರೆ, ಹೀಗೆ ವಜಾಗೊಂಡ ನಂತರವೂ ಲೋಕಾ ಯುಕ್ತ ಪೊಲೀಸರ ಹೆಸರು ಹೇಳಿಕೊಂಡು ಇವರು ಅಧಿಕಾರಿಗಳಿಂದ ವಸೂಲಿಗೆ ಇಳಿದದ್ದು ಇದೆಯಲ್ಲಾ, ಇದು ನಿಜಕ್ಕೂ ಅವರ ಧಾರ್ಷ್ಟ್ಯವೆನ್ನಬೇಕು. ಅವರು ಇಂಥದೊಂದು ಹುಂಬತನ ತೋರುವುದಕ್ಕೆ ಕಾರಣವಾದ ಅಂಶವಾದರೂ ಯಾವುದು ಹಾಗೂ ಅಂಥ ಭಂಡಧೈರ್ಯವನ್ನು ತೋರಲು ನಮ್ಮ ವ್ಯವಸ್ಥೆಯಲ್ಲಿನ ಯಾವ ಲೋಪವು ಅವರಿಗೆ ಅನುವು ಮಾಡಿಕೊಟ್ಟಿದೆ ಎಂಬುದರ ಕಡೆಗೆ ಗಮನ ಹರಿಸಲು ಇದು ಸಕಾಲ.
ಇದನ್ನೂ ಓದಿ: Vishwavani Editorial: ದುರಂತಗಳ ಸರಪಳಿ ತುಂಡಾಗಲಿ
ಸದ್ಯಕ್ಕೆ ಇದೊಂದು ಪ್ರಕರಣ ಬೆಳಕಿಗೆ ಬಂದಿದೆ; ಇನ್ನೂ ಯಾರಾದರೂ ಇಂಥ ಧಾರ್ಷ್ಟ್ಯವನ್ನು ತೋರುತ್ತಿರುವುದುಂಟಾ ಎಂಬುದನ್ನೂ ಇದೇ ಸಂದರ್ಭದಲ್ಲಿ ಪತ್ತೆ ಮಾಡಬೇಕಿದೆ. ವ್ಯವಸ್ಥೆಯಲ್ಲಿ ತೂರಿಕೊಂಡಿರುವ ‘ಭ್ರಷ್ಟ’ ಹುಳಗಳನ್ನು ಬೇಟೆಯಾಡಲು ರೂಪುಗೊಂಡಿರುವಂಥದ್ದು ಲೋಕಾ ಯುಕ್ತ ಪೊಲೀಸ್ ವ್ಯವಸ್ಥೆ.
ಆದರೆ ಅದರ ಹೆಸರನ್ನೇ ದುರುಪಯೋಗಪಡಿಸಿಕೊಳ್ಳಲು ಮುಂದಾಗುವ ಇಂಥವರು ‘ದೀಪದ ಕೆಳಗೆ ಕತ್ತಲು ಇರುತ್ತದೆ’ ಎಂಬ ಗ್ರಹಿಕೆಗೆ ಪುಷ್ಟಿ ನೀಡುವಂಥ ನಿದರ್ಶನಗಳಾಗಿ ಬಿಡುತ್ತಾರೆ. ಇದು ವಿಷಾದನೀಯ ಬೆಳವಣಿಗೆ. ಪೊಲೀಸು, ಕೋರ್ಟು, ಕೇಸು, ಎಫ್ ಐಆರ್ ಮುಂತಾದ ಶಬ್ದಗಳನ್ನು ಕೇಳುತ್ತಿದ್ದಂತೆ ಸಮಾಜದ ಕೆಲವರಲ್ಲಿ ಸಹಜವಾಗೇ ಸಣ್ಣ ಮಟ್ಟಿಗಿನ ಭಯ ಹುಟ್ಟಿಕೊಳ್ಳುವುದಿದೆ. ಇಂಥ ಸಹಜ ತಲ್ಲಣವನ್ನೇ ದುರುಪಯೋಗ ಪಡಿಸಿಕೊಳ್ಳಲು ಮುಂದಾಗುವವರು ಇಂಥ ದುಸ್ಸಾಹಸಗಳಿಗೆ ಕೈಹಾಕುತ್ತಾರೆ ಎನ್ನಲಡ್ಡಿಯಿಲ್ಲ. ದಯೆ- ದಾಕ್ಷಿಣ್ಯವಿಲ್ಲದೆ ಇಂಥ ದುರುಳರ ಹೆಡೆಮುರಿ ಕಟ್ಟಬೇಕಿದೆ.