ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕುಪಕಡ್ಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ರೈತರು ಈರುಳ್ಳಿ ರಾಶಿ ಸುರಿದು ಪ್ರತಿಭಟನೆ ಮಾಡಿದ್ದಾರೆ. ಕಳೆದೆರಡು ವಾರದ ಹಿಂದೆ ಈರುಳ್ಳಿ ಬೆಲೆ ಏಕಾ ಏಕಿ ಕುಸಿತ ಕಂಡಿತ್ತು. ಇದರಿಂಂದ ಬೇಸತ್ತ ಹಡಗಲಿ ತಾಲೂಕಿನ ಉತ್ತಂಗಿಯ ರೈತ ಮೂಲಿ ಮನಿ ಶರಣಪ್ಪ 3 ಎಕರೆಯಲ್ಲಿ ಬೆಳೆದ ಕಟಾವಿಗೆ ಬಂದಿದ್ದ ಈರುಳ್ಳಿಯನ್ನು ಕುರಿ ಮೇಯಿಸಿ ನಾಶಪಡಿಸಿದ್ದಾರೆ.


ಹೂವಪ್ಪ ಐ.ಹೆಚ್, ಬೆಂಗಳೂರು
ಈರುಳ್ಳಿ ಬೆಲೆ ದಿಢೀರ್ ಕುಸಿತ, ರೈತರು ಕಂಗಾಲು
ರಸ್ತೆಗೆ ಈರುಳ್ಳಿ ಸುರಿದು ಆಕ್ರೋಶ
ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಪರಿಣಾಮ ಈರುಳ್ಳಿ ಬೆಳೆಗಾರರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಈರುಳ್ಳಿ ಬೆಳೆಯಲು ಮಾಡಿರುವ ಖರ್ಚು ಕೂಡ ರೈತರ ಕೈಸೇರದ ಪರಿಸ್ಥಿತಿ ನಿರ್ಮಾಣ ಆಗಿದೆ. ಕೊಯ್ಲು ಮಾಡಿಸದೇ ಹೊಲದಲ್ಲೇ ಈರುಳ್ಳಿಯನ್ನು ನಾಶ ಮಾಡಿಸಲು ರೈತರು ಮುಂದಾಗಿದ್ದಾರೆ.
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕುಪಕಡ್ಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ರೈತರು ಈರುಳ್ಳಿ ರಾಶಿ ಸುರಿದು ಪ್ರತಿಭಟನೆ ಮಾಡಿದ್ದಾರೆ. ಕಳೆದೆರಡು ವಾರದ ಹಿಂದೆ ಈರುಳ್ಳಿ ಬೆಲೆ ಏಕಾಏಕಿ ಕುಸಿತ ಕಂಡಿತ್ತು. ಇದರಿಂಂದ ಬೇಸತ್ತ ಹಡಗಲಿ ತಾಲೂಕಿನ ಉತ್ತಂಗಿಯ ರೈತ ಮೂಲಿ ಮನಿ ಶರಣಪ್ಪ 3 ಎಕರೆಯಲ್ಲಿ ಬೆಳೆದ ಕಟಾವಿಗೆ ಬಂದಿದ್ದ ಈರುಳ್ಳಿಯನ್ನು ಕುರಿ ಮೇಯಿಸಿ ನಾಶ ಪಡಿಸಿದ್ದಾರೆ.
ವಿಜಯಪುರ ಮಾರುಕಟ್ಟೆಯಲ್ಲಿ ಈರುಳ್ಳಿ ಕ್ವಿಂಟಾಲ್ಗೆ ಕೇವಲ 200 ರು.ಗೆ ಹರಾಜಾಗುತ್ತಿದೆ. ಡಿಮೆ ದರಕ್ಕೆ ಹರಾಜು ಹಿನ್ನೆಲೆ ಈರುಳ್ಳಿ ಬೆಳೆಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೈವೆ ಮೇಲೆ ಈರುಳ್ಳಿ ಸುರಿದು ಬಿದ್ದುಬಿದ್ದು ಮಲ್ಲಿಕಾರ್ಜುನ ಬೋಲಗೊಂಡ ಎಂಬ ರೈತ ಹೊರಳಾಡಿದ್ದಾರೆ.
ಇದೇ ಈರುಳ್ಳಿ ಬಾಗಲಕೋಟೆಯಲ್ಲಿ ಕ್ವಿಂಟಾಲ್ಗೆ 1000 ರುಪಾಯಿಗೆ ಮಾರಾಟವಾಗಿತ್ತು. ಡಿಎಪಿ ರಸಗೊಬ್ಬರ 1200 ರು ಯೂರಿಯಾ 300 ರು. ಇದೆ. ನಾವು ಕಷ್ಟಪಟ್ಟು ಬೆಳೆದ ಈರುಳ್ಳಿಗೆ ಬೆಲೆ ಇಲ್ಲ ದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Benefits of Spring Onions: ಈರುಳ್ಳಿ ಸೊಪ್ಪು: ರುಚಿ, ಘಮ, ಸತ್ವಗಳ ಸಂಗಮ
ಇನ್ನು ದೂರದ ವಿಜಯಪುರ, ಕಲಬುರಗಿಯಿಂದ ಬರುವ ಈರುಳ್ಳಿ ಬೆಂಗಳೂರು ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ 800-1200 ಮಾರಾಟ ಆಗುತ್ತಿದೆ. ಸದ್ಯ ಮಹಾರಾಷ್ಟ್ರ, ವಿಜಯಪುರದಿಂದ 40-50 ಸಾವಿರ ಚೀಲದ ಈರುಳ್ಳಿ ಬೆಂಗಳೂರಿಗೆ ಆವಕ ಆಗುತ್ತಿದೆ. ಇನ್ನು ಗೋಲ್ಟಾ ಗೊಲ್ಟಿ 100-200 ಇದೆ. ಚಿಲ್ಲಿರೆ ದರ ಕೆಜಿಗೆ 20 ರು.ಇದೆ. ಇನ್ನು ಕೈಗಾಡಿ, ಆಟೋ ಗಾಡಿಗಳಲ್ಲಿ 100 ರು. ಗೆ 5-6 ಕೆಜಿ ಮಾರಾಟ ಮಾಡಲಾಗುತ್ತಿದೆ.
ಈರುಳ್ಳಿ ಕಿತ್ತು, ಗ್ರೇಡಿಂಗ್ ಮಾಡಿ ಮಾರುಕಟ್ಟೆಗೆ ಸಾಗಿಸಲು 50 ಕೆಜಿಯ ಪ್ರತಿ ಪಾಕಿಟ್ಗೆ 300ರಿಂದ 400 ಖರ್ಚು ತಗುಲುತ್ತದೆ. ಕಟಾವು, ಕಾರ್ಮಿಕರ ಖರ್ಚು, ಸಾಗಣೆ ವೆಚ್ಚ ಎಲ್ಲ ಕಳೆದರೆ ರೈತನಿಗೆ ಏನು ಗಿಟ್ಟುತ್ತಿಲ್ಲ. ಆದ್ದರಿಂದ ರೈತ ಮೂಲಿಮನಿ ಶರಣಪ್ಪ ಕುರಿ ಮೇಯಿಸಿ ಈರುಳ್ಳಿ ನಾಶಪಡಿಸಿ ದ್ದಾರೆ.
ಕೃತಕ ಅಭಾವ ಸೃಷ್ಟಿ
ಈರುಳ್ಳಿ ಬೆಳೆದ ರೈತರು ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ಇಲ್ಲ. ಹೀಗಾಗಿ ಕೊಯ್ಲು ಆಗುವಾಗ ಹೊಲದ ಬಳಿಗೆ ಬರುವ ವರ್ತಕರು ಹೇಳಿದ ಬೆಲೆಗೆ ಅಥವಾ ಹರಾಜಿನ ಮೂಲಕವೇ ಬೆಲೆ ನಿರ್ಧಾರವಾಗುತ್ತದೆ. ಈರುಳ್ಳಿ, ಗೆಣಸು ಬೆಳೆಯಲ್ಲಿ ಆಗುವ ಸ್ವಾಭಾವಿಕ ಏರಿಳಿತದ ಪರಿಸ್ಥಿತಿ ನೋಡಿಕೊಂಡು ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚು, ಕಡಿಮೆಯಾಗುವಂತೆ ನೋಡಿಕೊಳ್ಳುವುದೂ ಇದೆ ಎನ್ನುತ್ತಾರೆ ಈರುಳ್ಳಿ ಬೆಲೆಗಾರರು.
*
3 ಎಕರೆಯಲ್ಲಿ ಈರುಳ್ಳಿ ಬೆಳೆ ಬೆಳೆಯಲು ಸುಮಾರು 1.20 ಲಕ್ಷ ಖರ್ಚು ಮಾಡಿರುವೆ. ಸದ್ಯ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ಉತ್ತಮ ಆದಾಯ ನಿರೀಕ್ಷಿಸಿ 4 ತಿಂಗಳ ಹಿಂದೆಯಷ್ಟೇ ಈರುಳ್ಳಿ ಬೆಳೆ ಹಾಕಿದ್ದೆ. ಈರುಳ್ಳಿ ಬೆಲೆ ಕುಸಿದಿದ್ದು, ಖರ್ಚು ಮಾಡಿದ ಹಣವು ಸಿಗುವುದಿಲ್ಲ ಎಂದು ಈರುಳ್ಳಿ ನಾಶ ಮಾಡಿರುವೆ.
-ಮೂಲಿಮನಿ ಶರಣಪ್ಪ, ಈರುಳ್ಳಿ ಬೆಳೆದ ರೈತ