ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶಾಶ್ವತ ನೀರಾವರಿ ಯೋಜನೆ ಘೋಷಣೆ ಮಾಡಬೇಕು; ತಪ್ಪಿದ್ದಲ್ಲಿ ಜನತಾ ನ್ಯಾಯಾಲಯದಲ್ಲಿ ಹೋರಾಟ ಖಚಿತ : ಶಾಶ್ವತ ನೀರಾವರಿ ಹೋರಾಟ ಸಮಿತಿ ಎಚ್ಚರಿಕೆ

ನಾಯನಹಳ್ಳಿಯ ಆಂಜನೇಯರೆಡ್ಡಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಹೋರಾಟಗಾರರು ಭಾಗವಹಿಸಿದ್ದರು. ಈ ವೇಳೆ, ಸರ್ಕಾ ರಕ್ಕೆ ನೀರಾವರಿ ವಿಚಾರದಲ್ಲಿ ಬಹಿರಂಗ ಸವಾಲಿನ ಪತ್ರವನ್ನು ರವಾನಿಸಲು ತೀರ್ಮಾನಿಸಿದರು.

ಯೋಜನೆ ಘೋಷಣೆ ತಪ್ಪಿದ್ದಲ್ಲಿ ಜನತಾ ನ್ಯಾಯಾಲಯದಲ್ಲಿ ಹೋರಾಟ ಖಚಿತ

ಚಿಕ್ಕಬಳ್ಳಾಪುರ ತಾಲೂಕು ನಾಯನಹಳ್ಳಿ ಗ್ರಾಮದ ಆರ್.ಆಂಜನೇಯರೆಡ್ಡಿ ಅವರ ನಿವಾಸದಲ್ಲಿ ನಡೆದ ಶಾಶ್ವತ ನೀರಾವರಿ ಹೋರಾಟದ ಚಿಂತನ ಮಂಥನ ಸಭೆಯಲ್ಲಿ ಮುಖಂಡರು ಮಾತನಾಡಿದರು.

Profile Ashok Nayak Jun 13, 2025 11:26 PM

ಚಿಕ್ಕಬಳ್ಳಾಪುರ: ಜೂ.19ರ ಸಂಪುಟ ಸಭೆಯಲ್ಲಿ ಶಾಶ್ವತ ನೀರಾವರಿ ಯೋಜನೆ ಬಗ್ಗೆ ಸರಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜನತಾ ನ್ಯಾಯಾಲಯದಲ್ಲಿ ಹೋರಾಟ ಪ್ರಾರಂಭಿಸಲಾಗುವುದು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಎಚ್ಚರಿಕೆ ನೀಡಿತು.

ತಾಲೂಕಿನ ನಾಯಯನಹಳ್ಳಿ ಗ್ರಾಮದ ಆರ್.ಆಂಜನೇಯರೆಡ್ಡಿ ಅವರ ನಿವಾಸದಲ್ಲಿ ಶುಕ್ರವಾರ ಸಂಪುಟ ಸಭೆ ಅಂಗವಾಗಿ, ನಡೆಸಿದ ನೀರಾವರಿ ಹೋರಾಟಗಾರರ ಚಿಂತನ ಮಂಥನ ಸಭೆಯಲ್ಲಿ ಭಾಗವಾಹಿಸಿದ್ದ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ಮಾತನಾಡಿದರು.

ಈ ಸಭೆಯಲ್ಲಿ ಜಿಲ್ಲೆಯ ವಿಶ್ವ ಪ್ರಸಿದ್ಧ ನಂದಿಗಿರಿಧಾಮದಲ್ಲಿ ಜೂ.19ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ನೀರಾವರಿ ಸಮಸ್ಯೆಗೆ ಪರಿಹಾರ ನೀಡುವ ಕ್ರಮಗಳನ್ನು ಸರ್ಕಾರ ಕೈಗೊಳ್ಳದಿದ್ದರೆ ಜನತಾ ನ್ಯಾಯಾಲಯದಲ್ಲಿ ಹೋರಾಟ ಆರಂಭಿಸುವ ಮುನ್ಸೂಚನೆ ಯನ್ನು ಶಾಶ್ವತ ನೀರಾವರಿ ಹೋರಾಟ ಸಮಿತಿ ನೀಡಿದರು.

ಇದನ್ನೂ ಓದಿ: Chikkaballapur News: ಮಕ್ಕಳಿಗೆ ಉತ್ತಮ ಭವಿಷ್ಯ ನಿರ್ಮಾಣ ಸಮಾಜದ ಎಲ್ಲರ ಹೊಣೆ : ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎನ್.ರಮೇಶ್

ನಿಲುವು ಸ್ಪಷ್ಟಪಡಿಸಲು ಆಗ್ರಹ
ನಾಯನಹಳ್ಳಿಯ ಆಂಜನೇಯರೆಡ್ಡಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಹೋರಾಟಗಾರರು ಭಾಗವಹಿಸಿದ್ದರು. ಈ ವೇಳೆ, ಸರ್ಕಾರಕ್ಕೆ ನೀರಾವರಿ ವಿಚಾರದಲ್ಲಿ ಬಹಿರಂಗ ಸವಾಲಿನ ಪತ್ರವನ್ನು ರವಾನಿಸಲು ತೀರ್ಮಾನಿಸಿದರು. ಸಭೆಯ ಬಳಿಕ ಸಿದ್ದರಾಮಯ್ಯ ಅವರು ನೀರಾವರಿ ಕುರಿತಾಗಿ ತಮ್ಮ ನಿಲು ವನ್ನು ಸ್ಪಷ್ಟಪಡಿಸಬೇಕು ಇಲ್ಲವಾದಲ್ಲಿ ಅವರಿಗೆ ಜನತಾ ನ್ಯಾಯಾಲಯದಲ್ಲಿ ಯಾವ ರೀತಿಯ ಬುದ್ಧಿ ಕಲಿಸಬೇಕೋ ಆರೀತಿ ಕಲಿಸಲು ತೀರ್ಮಾನಿಸಿದರು.

ಎತ್ತಿನಹೊಳೆ ಸುಳ್ಳು!!
ಈ ವೇಳೆ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯರೆಡ್ಡಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರಾವರಿಯ ವಿಚಾರದಲ್ಲಿ ತೀರದ ಮೋಸವಾಗುತ್ತಿದೆ. 2013ರಲ್ಲಿ ವೀರಪ್ಪಮೊಯ್ಲಿ ಅವರು ಚದಲಪುರ ಸಮೀಪ ಎತ್ತಿನಹೊಳೆ ಅಡಿಗಲ್ಲು ಹಾಕಿ, ೨ ವರ್ಷದಲ್ಲಿ ಜಿಲ್ಲೆಗೆ ನೀರು ಬರಲಿದೆ ಎಂದು ಹೇಳಿ 13 ವರ್ಷಗಳೇ ಕಳೆದಿವೆ. ಇದೀಗ ಸಿಎಂ ಸಿದ್ದರಾಮಯ್ಯ ಅವರು ಗೌರಿಬಿದನೂರಿನಲ್ಲಿ ಮತ್ತೆ ೨ ವರ್ಷಕ್ಕೆ ನೀರು ಬರಲಿದೆ ಎಂದು ಪುನರುಚ್ಚರಿಸಿದ್ದಾರೆ ಎಂದು ಲೇವಡಿ ಮಾಡಿದರು.

ನೀರು ಬರುವುದಿಲ್ಲ??
ಮೂರು ಜಿಲ್ಲೆಗಳಿಗೆ 80 ಟಿಎಂಸಿ ಶುದ್ಧ ನೀರು ಬೇಕಿದೆ. 5400 ಕ್ಕೂ ಹೆಚ್ಚು ಕೆರೆಗಳನ್ನು ಜೀರ್ಣೋ ದ್ಧಾರ ಮಾಡಬೇಕಿದೆ. ರಾಜಕಾಲುವೆಗಳನ್ನು ತೆರವುಗೊಳಿಸಬೇಕಿದೆ. ಇದನ್ನು ಮಾಡದೆ ನಾವು ಹೇಳಿದ್ದ ಮಾತನ್ನೇ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ 8 ಟಿಎಂಸಿ ನೀರು ಲಭ್ಯವಿದೆ ಎಂದು ಹೇಳಿದೆ. ಇದರಿಂದ ಜಿಲ್ಲೆಗಳಿಗೆ ನೀರು ಸಿಗುವುದಿಲ್ಲ ಎಂದು ವೈಜ್ಞಾನಿಕ ಸಂಸ್ಥೆಗಳು ತಿಳಿಸಿವೆ. ಆದರೆ ಎತ್ತಿನ ಹೊಳೆ ಯೋಜನೆಯಿಂದ ನೀರು ಹರಿಯದಿದ್ದರೂ ಪ್ರವಾಹದ ರೂಪದಲ್ಲಿ ಹಣ ಹರಿದಿದೆ ಎಂದು ಟೀಕಿಸಿದರು.

ಕೆಳದರ್ಜೆ ಪ್ರಜೆಗಳು !!!
ಗೌರಿಬಿದನೂರಿನ ಸಭೆಯಲ್ಲಿ ರೈತ ಹೋರಾಟಗಾರರು ಎಚ್‌ಎನ್ ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಿ ಹರಿಸಿ ಎಂದು ಮನವಿ ಸಲ್ಲಿಸುವ ವೇಳೆ ಸಚಿವ ಡಾ.ಎಂ.ಸಿ.ಸುಧಾಕರ್ ೩ ಹಂತದಲ್ಲಿ ಸಂಸ್ಕರಿತ ನೀರನ್ನು ಶುದ್ಧೀಕರಿಸಿದಲ್ಲಿ ಕುಡಿಯಬಹುದು ಹಾರಿಕೆ ಉತ್ತರ ನೀಡಿದ್ದಾರೆ. ಬೆಂಗಳೂರಿನ 3 ಕಡೆ ಸಂಸ್ಕರಿತ ನೀರನ್ನು 3ನೇ ಹಂತದಲ್ಲಿ ಶುದ್ಧೀಕರಿಸಿ ಗಿಡಗಳನ್ನು ಬೆಳೆಸಲು, ವಿಧಾನಸೌಧದ ಶೌಚಾಲಯ ಬಳಕೆಗೆ  ಉಪಯೋಸಲಾಗುತ್ತಿದೆ. ಆದರೆ ನಾವು ಕೆಳದರ್ಜೆಯ ಪ್ರಜೆಗಳೆಂದು ಭಾವಿಸಿ ಕೇವಲ 2 ಹಂತದಲ್ಲಿ ಶುದ್ಧೀಕರಿಸಿ ಹರಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕುಡಿದು ತೋರಿಸಲಿ

ಈಗಾಗಲೇ ವೈಜ್ಞಾನಿಕ ಸಂಸ್ಥೆಗಳು 3ನೇ ಹಂತದಲ್ಲಿ ಶುದ್ಧಿಕರಿಸಿ ಹರಿಸದೇ ಇದ್ದಲ್ಲಿ ಈ ಜಿಲ್ಲೆಗಳು ವಾಸಯೋಗ್ಯವಲ್ಲದ ಪ್ರದೇಶಗಳಾಗಿ ಮಾರ್ಪಡಲಿದೆ ಎಂದು ಎಚ್ಚರಿಸಿದ್ದಾರೆ. ಜಿಲ್ಲೆಯ ಮುಂದಿನ ಪೀಳಿಗೆ ರೋಗಗಳಿಗೆ ತುತ್ತಾಗಿ ನರಳಿ ಸಾಯುವ ಸ್ಥಿತಿ ನಿರ್ಮಾಣವಾಗಲಿದೆ. ಇಂತಹ ವಿಷಮ ಸ್ಥಿತಿ ಯಿದ್ದರೂ ಕೇವಲ 2 ಹಂತದ ಶುದ್ಧೀಕರಣ ಸಾಕು ಎನ್ನುತ್ತಿರುವ ಸಚಿವರು, ಸ್ಥಳೀಯ ಶಾಸಕರು ಗಳು 3ನೇ ಹಂತದಲ್ಲಿ ಶುದ್ಧೀಕರಿಸಿದ ನೀರನ್ನು ಕುಡಿದು ತೋರಿಸಲಿ ಎಂದು ಸವಾಲೆೆಸೆದರು.

ಮಲತಾಯಿ ಧೋರಣೆ ವಿರುದ್ಧ ಜನಜಾಗೃತಿ

ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಆದಿಯಿಂದ ಅಂತ್ಯದವರೆಗೂ ಹೋರಾಟ ನಡೆಸಲಾಗಿದ್ದು, ಯಾವುದೇ ಉಪಯೋಗವಾಗಿಲ್ಲ. ಇದೀಗ ಮತ್ತೆ ಆದಿಯಿಂದ ಹೋರಾಟ ಆರಂಭಿಸಬೇಕಾದ ಅಗತ್ಯ ಎದುರಾಗಿದೆ. ಆದ್ದರಿಂದ ನಂದಿಬೆಟ್ಟ ಸಭೆಯಲ್ಲಿ ಸರ್ಕಾರ ತನ್ನ ನಿಲುವು ಪ್ರಕಟಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯ ಪ್ರತಿಹಳ್ಳಿಗೂ ಭೇಟಿ ಸರ್ಕಾರ ಮಲತಾಯಿ ಧೋರಣೆ ಹಾಗೂ ಜಿಲ್ಲೆಯಲ್ಲಿನ ವಿಷಮ ಪರಿಸ್ಥಿತಿಯ ಕುರಿತು ಜನಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್, ಕೋಲಾರದ ನಾರಾಯಣಸ್ವಾಮಿ, ಬಾಗೇಪಲ್ಲಿಯ ಜಿ.ಜಿ.ಹಳ್ಳಿ ನಾರಾಯಣಸ್ವಾಮಿ, ಮಳ್ಳೂರು ಹರೀಶ್, ಕರವೇ ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಕಾಮ್ರೆಡ್ ಲಕ್ಷ್ಮಯ್ಯ, ಲಲಿತಮ್ಮ, ಉಷಾರೆಡ್ಡಿ, ಮಂಚನ ಬಲೆ ಶ್ರೀನಿವಾಸ್, ರವಿಕುಮಾರ್ ಮತ್ತಿತರರು ಇದ್ದರು.

ಆರೋಗ್ಯಕರ ಜೀವನ ನೀಡಲಿ
ಪ್ರದೀಪ್ ಈಶ್ವರ್ ಶಾಸಕರಾಗುವುದಕ್ಕೂ ಮುನ್ನ ಎಚ್‌ಎನ್ ವ್ಯಾಲಿ ಕುರಿತು ಸರ್ಕಾರವನ್ನು ಪ್ರಶ್ನಿಸಿದ್ದರು. ನೀರಾವರಿ ಸಮಸ್ಯೆಯ ಕುರಿತು ಧ್ವನಿಗೂಡಿಸಿದ್ದರು. ಆದರೆ ಶಾಸಕರಾಗುತ್ತಿದ್ದಂತೆ ನೀರಾವರಿಯ ವಿಚಾರದ ಬಗ್ಗೆ ಚಕಾರ ಎತ್ತುತ್ತಿಲ್ಲ. ಶಾಸಕರು ಆಂಬುಲೆನ್ಸ್ ಕೊಡುವುದು ದೊಡ್ಡದಲ್ಲ. ಜನರ ಆರೋಗ್ಯ ಕಾಪಾಡುವ ಶುದ್ಧ ಕುಡಿಯುವ ನೀರಿಗಾಗಿ ಧ್ವನಿ ಎತ್ತಬೇಕು ರೈತ ಸಂಘದ ಸುಷ್ಮಾಶ್ರೀನಿವಾಸ್ ಕಿಡಿಕಾರಿದರು.

ಡಾ.ಎಂ.ಸಿ.ಸುಧಾಕರ್ ಅವರು ನೀರಾವರಿ ಹೋರಾಟಕ್ಕೆ ಬೆಂಬಲ ಸೂಚಿದ್ದರು. ಅವರು ಉಸ್ತುವಾರಿ ಸಚಿವರಾದ ನಂತರ ಸೌಜನ್ಯಕ್ಕಾದರೂ ಹೋರಾಟಗಾರರ ಸಭೆ ನಡೆಸಿಲ್ಲ. ಅಲ್ಲದೆ ಹಿಂದೆ ನೀರಾವರಿ ಕುರಿತು ಮಾತನಾಡದ ಸಂಸದ ಸುಧಾಕರ್, ಇಂದು ನೀರು ತಂದು ತೀರುವೆ ಎನ್ನುತ್ತಿದ್ದಾರೆ. ಜನರನ್ನು ಮಾತುಗಳಿಂದ ಮೋಸ ಮಾಡಬಹುದು ಎಂಬ ಅವರ ತಂತ್ರ ಫಲಿಸುವುದಿಲ್ಲ.ಜನರೇ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಮುಂದಿನಪೀಳಿಗೆಗೆ ಶುದ್ಧ ಕುಡಿಯುವ ನೀರನ್ನು ಸರ್ಕಾರ ಒದಗಿಸುವವರೆಗೆ ಹೋರಾಟ ನಿಲ್ಲುವುದಿಲ್ಲ. ತೆಲಂಗಾಣ ಮಾದರಿಯ ಉಗ್ರ ರೂಪವನ್ನು ಪಡೆಯಲಿದೆ ಎಂದು ಎಚ್ಚರಿಸಿದರು.

ದೇವರು ಕ್ಷಮಿಸುವುದಿಲ್ಲ!
ಎಚ್.ಎನ್, ಕೆ.ಸಿ ವ್ಯಾಲಿ ಯೋಜನೆ ನೀರನ್ನು ಎರಡು ಹಂತದ ಶುದ್ಧೀಕರಣ ಸಾಕು ಎಂದಿದ್ದ ರಾಜಕಾರಣಿಗಳು ಈಗ 3ನೇ ಹಂತದ ಶುದ್ಧೀಕರಣ ಅಗತ್ಯವಿದೆ ಎನ್ನುತ್ತಿದ್ದಾರೆ. ಇನ್ನು ಈ ಹಿಂದೆ ಎಚ್.ಎನ್ ವ್ಯಾಲಿ ನೀರು ಮೂರು ಹಂತದಲ್ಲಿ ಶುದ್ಧೀಕರಣ ಆಗಲೇಬೇಕು ಎಂದು ಹೋರಾಟದಲ್ಲಿ ಭಾಗವಹಿಸಿ ಅಬ್ಬರಿಸಿದ್ದವರು ಇದೀಗ ಮೌನಕ್ಕೆ ಶರಣಾಗಿದ್ದಾರೆ. ಗುಳ್ಳೆನರಿಗಳ ಬುದ್ಧಿ ಪ್ರದರ್ಶಿಸು ತ್ತಿರುವ ಈ ಭಾಗದ ಜನಪ್ರತಿನಿಧಿಗಳನ್ನು ದೇವರು ಎಂದಿಗೂ ಕೂಡ ಕ್ಷಮಿಸುವುದಿಲ್ಲ ಎಂದು ಪುರದಗಡ್ಡೆ ಕೃಷ್ಣಪ್ಪ ಶಾಪ ಹಾಕಿದರು.