ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Turuvekere Prasad Column: ಐಪಿಎಲ್‌ UGLY, ಪಿಚ್ಚಲ್ಲಿ ಭಾವೋನ್ಮಾನದ GOOGLY !

ಮಾಧ್ಯಮ ಹಕ್ಕುಗಳಿಂದ 6.4 ಬಿಲಿಯನ್ ಡಾಲರ್ ವರಮಾನವಿದೆ. ಪ್ರತಿ ಐಪಿಎಲ್ ಮ್ಯಾಚ್ ಬೆಲೆ ಅಂದಾಜು 13.4 ಮಿಲಿಯನ್ ಡಾಲರ್. ಅಂದಾಜು ಪ್ರಾಯೋಜಕ ಆದಾಯವೇ ಸುಮಾರು 59 ಮಿಲಿ ಯನ್ ಡಾಲರ್. ಕ್ರಿಕೆಟ್ ಇಂಥ ಅನಾಹುತಕಾರಿ ಮಟ್ಟ ತಲುಪಿದ್ದಕ್ಕೆ ಮುಖ್ಯ ಕಾರಣ ರೋಚಕತೆ. ರೋಚಕತೆ ಹೆಚ್ಚಾದಷ್ಟೂ ಅದರಿಂದಾಗುವ ಅಪಾಯಗಳ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆ.

ಐಪಿಎಲ್‌ UGLY, ಪಿಚ್ಚಲ್ಲಿ ಭಾವೋನ್ಮಾನದ GOOGLY !

Profile Ashok Nayak Jun 14, 2025 10:21 AM

ಪದಪ್ರಸಾದ

ತುರುವೇಕೆರೆ ಪ್ರಸಾದ್

turuvekereprasad@gmail.com

ಕ್ರಿಕೆಟ್ ಒಂದು ಕಾಲಕ್ಕೆ ‘ಸಭ್ಯರ ಆಟ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಇತ್ತೀಚಿನ ವಿದ್ಯಮಾನಗಳನ್ನು ನೋಡಿದರೆ ಕ್ರಿಕೆಟ್ ‘ಅಸಭ್ಯರ ಕೂಟ’ ಎನ್ನುವಂತಾಗಿದೆ. ಕ್ರಿಕೆಟ್ ಎಂಬುದು ಆಟಕ್ಕಿಂತ ಹೆಚ್ಚಾಗಿ ಒಂದು ಉದ್ಯಮವಾಗಿದೆ. ಲಾಭಕೋರರ, ಶ್ರಮವಿಲ್ಲದೆ ಕೋಟಿ ಕೋಟಿ ಲಪಟಾಯಿಸುವ ಜೂಜುಕೋರರ ದಂಧೆಯಾಗಿದೆ.

ಕ್ರಿಕೆಟ್ ಒಂದು ‘ಕಲಾತ್ಮಕ ಮೋಜಿನ ಆಟ’ ಎನ್ನುವ ಖ್ಯಾತಿ ಕಳೆದುಕೊಂಡು ‘ಬಾಜಿ ಕಟ್ಟೋ ಆಟ’ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಕ್ರಿಕೆಟನ್ನೇ ಅದರಲ್ಲೂ ಐಪಿಎಲ್ ಅನ್ನೇ ಗುರಿಯಾಗಿಟ್ಟುಕೊಂಡೇ ಕೋಟಿ ಕೋಟಿ ಹಣ ಬಾಚಲು ಹಲವು ಫ್ರಾಂಚೈಸಿಗಳನ್ನು ಹುಟ್ಟುಹಾಕಲಾಗಿದೆ. ಈ ಫ್ರಾಂಚೈಸಿಗಳು ಕ್ರಿಕೆಟ್ ಆಟವನ್ನು ಪ್ರಮೋಟ್ ಮಾಡುತ್ತಿಲ್ಲ. ಬದಲಿಗೆ ಕ್ರಿಕೆಟ್ ಹೆಸರಲ್ಲಿ ಜನರ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ. ಈ ಎಲ್ಲಾ ಫ್ರಾಂಚೈಸಿಗಳ ಮಾಲೀಕರು ಕೋಟ್ಯಧೀಶ್ವರರು, ಸಿನಿಮಾ ತಾರೆಯರು ಮತ್ತು ಉದ್ಯಮಿಗಳು. ಹೊರದೇಶಗಳ 62 ಆಟಗಾರರೂ ಸೇರಿದಂತೆ 182 ಆಟಗಾರರು ಸುಮಾರು 640 ಕೋಟಿ ರು.ಗೆ ಹರಾಜಾಗಿದ್ದಾರೆ. ಒಂದಿಷ್ಟು ಫ್ರಾಂಚೈಸಿಗಳು, ನೂರಾರು ಆಟಗಾರರು, ಬೆಟ್ಟಿಂಗ್ ಏಜೆಂಟ್ಸ್, ಬೆಟ್ಟಿಂಗ್ ಜಾಲತಾಣಗಳು, ಜಾಹೀರಾತು ಸಂಸ್ಥೆಗಳು, ಮಾಧ್ಯಮ ಗುಂಪುಗಳು ಹೀಗೆ ಕೋಟಿ ಕೋಟಿ ಹಣ ಕೈ ಬದಲಾಗುವ ಒಂದು ವಿಷವರ್ತುಲವಿದು! ಜಗತ್ತಿನಲ್ಲೇ ಎರಡನೇ ಅತಿ ಶ್ರೀಮಂತ ಕ್ರಿಕೆಟ್ ಲೀಗ್ ಎಂದು ಐಪಿಎಲ್‌ಗೆ ಹೆಗ್ಗಳಿಕೆ ಇದೆ.

ಮಾಧ್ಯಮ ಹಕ್ಕುಗಳಿಂದ 6.4 ಬಿಲಿಯನ್ ಡಾಲರ್ ವರಮಾನವಿದೆ. ಪ್ರತಿ ಐಪಿಎಲ್ ಮ್ಯಾಚ್ ಬೆಲೆ ಅಂದಾಜು 13.4 ಮಿಲಿಯನ್ ಡಾಲರ್. ಅಂದಾಜು ಪ್ರಾಯೋಜಕ ಆದಾಯವೇ ಸುಮಾರು 59 ಮಿಲಿಯನ್ ಡಾಲರ್. ಕ್ರಿಕೆಟ್ ಇಂಥ ಅನಾಹುತಕಾರಿ ಮಟ್ಟ ತಲುಪಿದ್ದಕ್ಕೆ ಮುಖ್ಯ ಕಾರಣ ರೋಚಕತೆ. ರೋಚಕತೆ ಹೆಚ್ಚಾದಷ್ಟೂ ಅದರಿಂದಾಗುವ ಅಪಾಯಗಳ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆ.

ಇದನ್ನೂ ಓದಿ: Turuvekere Prasad Column: ʼಚಿಂವ್‌ ಚಿಂವ್‌ʼ ಗುಬ್ಬಿಯಿಂದ ದೊಡ್ಡಣ್ಣನ ʼಬೌ ಬೌʼ ಲಾಬಿಯವರೆಗೆ

ಐಪಿಎಲ್ ಷೇರು ಮಾರುಕಟ್ಟೆಯ ಒಂದು ಅಲ್ಪಕಾಲೀನ ವ್ಯಾಪಾರದ (ಷಾರ್ಟ್ ಟರ್ಮ್ ಟ್ರೇಡ್) ಸ್ವರೂಪ ಪಡೆದಿದೆ. ತ್ವರಿತ ನಿರ್ಧಾರಗಳು, ಅಪಾಯದ ಲೆಕ್ಕಾಚಾರಗಳು, ನಾಟಕೀಯ ಅನಿರೀಕ್ಷಿತ ತಿರುವುಗಳು ಅತಿ ದೊಡ್ಡ ಲಾಭಕ್ಕೆ ಎಡೆಮಾಡಿಕೊಡಬಹುದು ಇಲ್ಲವೇ ಅಪಾರ ನಷ್ಟವನ್ನೂ ಉಂಟುಮಾಡಬಹುದು. ಇದು ಐಪಿಎಲ್ ರೋಚಕತೆಯ ಒಂದು ವ್ಯಾವಹಾರಿಕ ಮುಖ. ಈ ರೋಚಕತೆಗೆ ಇನ್ನೊಂದು ಮುಖವಿದೆ. ಬದುಕಿನ ಎಲ್ಲಾ ಹಂತಗಳಲ್ಲೂ ಕ್ಷಣ ಕ್ಷಣಕ್ಕೂ ನಾವು ಮೇಲಿಂದ ಮೇಲೆ ರೋಚಕತೆಯನ್ನೇ ನಿರೀಕ್ಷಿಸುತ್ತಾ ಹೋಗುವ ಒಂದು ವಿಲಕ್ಷಣ ಜೀವನಶೈಲಿ ಯನ್ನು ಅಪ್ರಜ್ಞಾಪೂರ್ವಕವಾಗಿಯೇ ರೂಢಿಸಿಕೊಂಡು ಬಿಟ್ಟಿದ್ದೇವೆ.

ಕ್ರಿಕೆಟ್ ಸಹ ಇದರ ಒಂದು ಭಾಗ! ಪ್ರತಿ ಬಾಲು, ಪ್ರತಿ ಹೊಡೆತ ಒಂದು ರೋಚಕತೆ ತೆರೆದಿಡುವ ತುದಿಗಾಲಲ್ಲಿ ನಿಂತಿರುತ್ತೇವೆ. ವೈಯಕ್ತಿಕ ಹಂತದಿಂದ ಈ ರೋಚಕತೆ ಸಮುದಾಯದ ‘ಸಮೂಹ ಸನ್ನಿ’ ಹಂತ ತಲುಪಿಬಿಟ್ಟರಂತೂ ಅಪಾಯ ಕಟ್ಟಿಟ್ಟಬುತ್ತಿ. ಅತಿಯಾದ ರೋಚಕತೆ, ಭಾವೋನ್ಮಾದ ನಮ್ಮ ಯೋಚನಾಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಯುಕ್ತಾಯಕ್ತತೆಯ ಪರಿಜ್ಞಾನದಿಂದ ದೂರ ಮಾಡುತ್ತದೆ.

ಗಮನ ಕೇಂದ್ರೀಕರಿಸುವ ತಾದ್ಯಾತ್ಮ್ಯ ಶಕ್ತಿಯನ್ನು ಹಾಳುಗೆಡವುತ್ತದೆ. ನಿರ್ಧಾರಗಳು ಗೊಂದಲ ಮಯವಾಗುತ್ತವೆ. ಕಲ್ಪನೆಯ ಸುಖದ ಭ್ರಮೆಯಲ್ಲಿ ತೇಲುವಂತೆ ಮಾಡುತ್ತದೆ. ಚಿಕ್ಕ ವೈಫಲ್ಯವೂ ಹತಾಶೆ, ಖಿನ್ನತೆಯಲ್ಲಿ ಪರ್ಯವಸಾನವಾಗುತ್ತದೆ. ಮುಖ್ಯವಾಗಿ ಭಾವೋನ್ಮಾದ ಸಮೂಹ ಸನ್ನಿಯಾಗಿ ಸಾಮಾಜಿಕ ಸ್ವಾಸ್ಥ್ಯವನ್ನೇ ಹಾಳುಗೆಡವುತ್ತದೆ. ಇತ್ತೀಚೆಗೆ ಸಣ್ಣ ಪುಟ್ಟ ವಿಷಯಗಳೂ ಅತಿಸೂಕ್ಷ್ಮ ಎನಿಸುತ್ತಿರುವುದು, ಅನಗತ್ಯ ಮಹತ್ವ ಪಡೆದುಕೊಳ್ಳುತ್ತಿರುವುದು, ಕ್ರಿಕೆಟ್ ದುರಂತ ಎಲ್ಲಕ್ಕೂ ಈ ಸಮಚಿತ್ತತೆಯನ್ನು ಕಾಪಾಡಿಕೊಳ್ಳಲಾಗದ ಭಾವೋನ್ಮಾದವೇ ಕಾರಣವಾಗುತ್ತಿದೆ.

ಐಪಿಎಲ್‌ನಲ್ಲಿ ಎತ್ತು-ಕುರಿಗಳಂತೆ ಆಟಗಾರರನ್ನು ಹರಾಜು ಹಾಕುವುದೇ ಒಂದು ಅಮಾನವೀಯ ಪ್ರಕ್ರಿಯೆ. ಆಟಗಾರ ತನ್ನ ಶ್ರೇಷ್ಠತೆಯನ್ನು ವ್ಯಕ್ತಪಡಿಸಲು ತನ್ನನ್ನು ತಾನು ಮಾರಿಕೊಳ್ಳುವ ಅನಿವಾರ್ಯತೆಗೆ ಸಿಲುಕುತ್ತಾನೆ. ಇದು ಆಟಗಾರನೊಬ್ಬನ ಸೃಜನಶೀಲ, ಕಲಾತ್ಮಕ ಆಟಕ್ಕಿಂತ ಅವನ ಆಕ್ರಮಣಕಾರಿ ಆಟವನ್ನಷ್ಟೇ ಬೇಡುತ್ತದೆ.

ಇದಕ್ಕೆ ಅಗತ್ಯವಾದ ತರಬೇತಿಗೇ ಆಟಗಾರ ಲಕ್ಷಾಂತರ ರುಪಾಯಿ ಖರ್ಚು ಮಾಡಬೇಕು. ಬರೀ ಪ್ರತಿಭೆ ಇದ್ದರಷ್ಟೇ ಸಾಲದು, ಅವನು ಈ ಅನಾರೋಗ್ಯಕರ ಸ್ಪರ್ಧೆಯ ಎಲ್ಲ ಮಜಲುಗಳನ್ನೂ ಗೆಲ್ಲಬೇಕು. ಇದು ಕೌಶಲಕ್ಕಿಂತ ಹೆಚ್ಚಾಗಿ ಕುಯುಕ್ತಿಯನ್ನೇ, ಮೌಲ್ಯಗಳಿಗಿಂತ ಹೆಚ್ಚಾಗಿ ತಂತ್ರಗಾರಿಕೆ ಯನ್ನೇ ಅವಲಂಬಿಸುತ್ತದೆ.

ಹೀಗೆ ಒಂದು ಫ್ರಾಂಚೈಸಿ ಕೊಂಡ ಆಟಗಾರ ಆ ತಂಡಕ್ಕಾಗಿ ಆಡುತ್ತಾನೆಯೇ ಹೊರತು ಯಾವುದೇ ಪ್ರಾದೇಶಿಕ ಭಾವನೆ, ದೇಶವನ್ನು ಪ್ರತಿನಿಧಿಸುವ ಪರಿಕಲ್ಪನೆ ಅವನಲ್ಲಿರಲು ಸಾಧ್ಯವೇ ಇಲ್ಲ. ಆರ್ ಸಿಬಿ ತಂಡದ ಸಂಸ್ಥಾಪಕ ವಿಜಯ್ ಮಲ್ಯ ಅವರೇ ಸಂದರ್ಶನವೊಂದರಲ್ಲಿ “ರಾಯಲ್ ಚಾಲೆಂಜರ್ ಎನ್ನುವುದೊಂದು ಮದ್ಯದ ಬ್ರಾಂಡ್.

ಅದರ ಪ್ರಚಾರಕ್ಕಾಗಿಯಷ್ಟೇ ನಾನು ಫ್ರಾಂಚೈಸಿ ಸ್ಥಾಪಿಸಿದ್ದು, ವ್ಯಾಪಾರಿ ಉದ್ದೇಶ ಬಿಟ್ಟು ಬೇರೆ ಯಾವುದೇ ಉದ್ದೇಶ ಇರಲಿಲ್ಲ" ಎಂದು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ. ಹೀಗಿರುವಾಗ ‘ಆರ್‌ಸಿಬಿ ಬೆಂಗಳೂರು’ ಎಂದು ಹೆಸರಿರುವ ಮಾತ್ರಕ್ಕೆ ಅದು ‘ನಮ್ಮದು’ ಆಗುವುದು ಹೇಗೆ? ಆದರ ಆಟಗಾರರು ‘ಅವತಾರ ಪುರುಷರು’ ಆಗುವುದು ಹೇಗೆ? (ಇದು ಎಲ್ಲಾ ತಂಡಗಳಿಗೂ ಅನ್ವಯಿಸುತ್ತದೆ).

ಕಾಲ್ತುಳಿತ ದುರಂತ ಸಂಭವಿಸಿದ ಮೇಲೂ ಯಾವೊಬ್ಬ ಆಟಗಾರನೂ ಸಂತ್ರಸ್ತರ ಮನೆಗೆ ಹೋಗಿ ಸಾಂತ್ವನ ಹೇಳಲಿಲ್ಲ. ಒಂದು ಬಹಿರಂಗ ಪತ್ರಿಕಾಗೋಷ್ಠಿ ಮಾಡಿ ಕನ್ನಡ ಜನತೆಗೆ ವಿಷಾದ ತಿಳಿಸಲಿಲ್ಲ. ಪರಿಸ್ಥಿತಿ ಹೀಗಿರುವಾಗ ಯಾಕೀ ಭಾವೋನ್ಮಾದ? ವೀರಾವೇಶ? ಹರಾಜಾದ ಆಟಗಾರರು ಆಟದ ಮೈದಾನದಲ್ಲಿ ತೋರುವ ವರ್ತನೆಯಾದರೂ ಎಂಥದ್ದು? ಅದಕ್ಕೂ ನಿಜಕ್ಕೂ ಅಸಹ್ಯ ಹುಟ್ಟಿಸುವಂಥದ್ದು.

ಇವರು ಮೈದಾನದಲ್ಲೂ ಆಕ್ರಮಣಕಾರಿ ಮನಸ್ಥಿತಿಯನ್ನೇ ತೋರುತ್ತಾರೆ. ಮೈದಾನದುದ್ದಕ್ಕೂ ಎಂಜಲು ಉಗಿಯುತ್ತಾರೆ. ಹಲವರು ಅಂಪೈರ್‌ಗಳ ಜತೆ ಜಗಳಕ್ಕಿಳಿಯುತ್ತಾರೆ. ಬಹುತೇಕ ಸಂದರ್ಭ ಗಳಲ್ಲಿ ಸಹ-ಆಟಗಾರರನ್ನೂ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಅವರೊಂದಿಗೂ ಸಂಘರ್ಷ ಕ್ಕಿಳಿಯುತ್ತಾರೆ.

ಚುಚ್ಚುಮಾತುಗಳನ್ನು, ಕುಹಕಗಳನ್ನು ಆಡಿ ರೇಗಿಸಿ ಪ್ರಚೋದಿಸುತ್ತಾರೆ. ಒಬ್ಬ ಆಟಗಾರ ಚೆನ್ನಾಗಿ ಆಡಿ ಔಟಾದರಂತೂ ಶತ್ರುವೊಬ್ಬನನ್ನು ಸಂಹಾರ ಮಾಡಿದ ಪರಿಯಲ್ಲಿ ವಿಕಾರವಾಗಿ ಕಿರಿಚುತ್ತಾ, ವಿಕೃತ ಸಂತೋಷದಿಂದ ಮುಖ ಹಿಂಡಿ, ವಿಚಿತ್ರ ಅಂಗಚೇಷ್ಟೆಯಲ್ಲಿ ರಾಕ್ಷಸರಂತೆ ವರ್ತಿಸುತ್ತಾರೆ.

ಧೋನಿ, ಗಿಲ್, ಶ್ರೇಯಸ್ ಅಂತ ಬೆರಳೆಣಿಕೆಯಷ್ಟು ಮಂದಿಯನ್ನು ಬಿಟ್ಟರೆ ಹೆಸರಾಂತ ಆಟಗಾರರೂ ಒಂದು ಆಟದ ಶ್ರೇಷ್ಠತೆಗೆ ಕೊಡಬೇಕಾದ ಘನತೆ, ಗೌರವಗಳನ್ನು ಮೈದಾನದಲ್ಲಿ ಕೊಡುವುದಿಲ್ಲ. ಇವರು ಬ್ಯಾಟ್ ಕುಟ್ಟುವುದೇನು, ಒಂದು ಅರ್ಧ ಸೆಂಚುರಿ ಹೊಡೆದಾಕ್ಷಣ ಎದುರಾಳಿಯ ಮುಖಕ್ಕೆ ತಿವಿಯುವಂತೆ ಗಾಳಿಯಲ್ಲಿ ಬ್ಯಾಟ್ ಹಾರಿಸಿ ಸಂಜ್ಞೆ ಮಾಡುವುದೇನು, ಯಾವುದೋ ಸಾಮ್ರಾಜ್ಯ ಗೆದ್ದವರಂತೆ ಸಿನಿಮೀಯ ಮಾದರಿಯಲ್ಲಿ ಗೆರೆ ಹಾಕಿ ಬ್ಯಾಟ್ ಕುಟ್ಟಿ ಅಹಂಕಾರದಿಂದ ಸಂಭ್ರಮಿಸುವುದೇನು? ಹಿಂದಿನ ಆಟಗಾರರಲ್ಲಿ ಇದ್ದಂತೆ ಇವರಲ್ಲಿ ಸಂಯಮ, ಸಮಚಿತ್ತತೆ, ಆಟಕ್ಕೆ ಕೊಡಬೇಕಾದ ಗೌರವ, ಸ್ನೇಹ, ಪ್ರೀತಿಯ ಮೌಲ್ಯ, ತನ್ನ ಅಭಿಮಾನಿಗಳಿಗೆ ಅನುಕರಣೀಯ ಮಾದರಿ ಆಗುವ ವರ್ತನೆ ಇದ್ಯಾವುದೂ ಇರುವುದೇ ಇಲ್ಲ. ಇಂಥ ಅನುಚಿತ ನಡತೆ ಆಟಗಾರರಿಗೆ ಶೋಭೆ ತರುವಂಥದಲ್ಲ.

ಇನ್ನು, ಕ್ರಿಕೆಟ್ ಹೊರತಾಗಿಯೂ ಇವರ ವ್ಯಾಪಾರಿ ಮನೋಭಾವನೆ ಯುಕ್ತಾಯುಕ್ತತೆಗಳ ಪರಿಜ್ಞಾನಗಳಾಚೆ ವಿಸ್ತರಿಸಿಕೊಂಡಿದೆ. ಇವರು ಅಂತಾರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳಿಗೆ ಸ್ಟಾರ್ ಪ್ರಚಾರಕರು, ಬ್ರ್ಯಾಂಡ್ ಅಂಬಾಸಿಡರ್‌ಗಳು. ಪೆಪ್ಸಿ, ಕೋಲಾಗಳನ್ನಷ್ಟೇ ಯುವಕರು ಕುಡಿಯಬೇಕೆಂದು ಕರೆ ಕೊಡುತ್ತಾರೆ. ದುಬಾರಿ ಇಟಾಲಿಯನ್ ಲಕ್ಷುರಿ ಬ್ರ್ಯಾಂಡ್ ಬಟ್ಟೆಗಳನ್ನು ಧರಿಸಬೇಕೆಂದು ಪ್ರಚಾರ ಮಾಡುತ್ತಾರೆ.

ವೈಭವೋಪೇತ ವಿದೇಶಿ ಕಾರುಗಳನ್ನೇ (‘ಆಡಿ’ಯಂಥವನ್ನು) ಕೊಳ್ಳಲು ಪ್ರೇರೇಪಿಸುತ್ತಾರೆ. ದುಬಾರಿ ಸೆಂಟುಗಳನ್ನು ಪೂಸಿಕೊಂಡು ಸಂಭ್ರಮಿಸುತ್ತಾರೆ. ನಮ್ಮ ಎಳನೀರಿಗೆ, ಸಿರಿಧಾನ್ಯಕ್ಕೆ, ಮಜ್ಜಿಗೆಗೆ, ಖಾದಿ ಬಟ್ಟೆಗೆ, ಸೈಕಲ್ಲಿಗೆ ಕೊನೆಗೆ ನಮ್ಮ ಬೆವರಿಗೆ ಇವರು ಬ್ರ್ಯಾಂಡ್ ಅಂಬಾಸಿಡರ್ ಆಗುವುದೇ ಇಲ್ಲ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಕೆಲಸವನ್ನು ಇವರು ಮಾಡಲಾರರು.

ನಮಗೆಷ್ಟೇ ಅಭಿಮಾನವಿದ್ದರೂ ಅವರು ನಮ್ಮನ್ನು ತಮ್ಮ ವೈಭವೋಪೇತ ಭವ್ಯ ಜೀವನದ ಭ್ರಮೆಯಲ್ಲಷ್ಟೇ ತೇಲಿಸುತ್ತಾರೆ. ಜೂಜು, ಆನ್‌ಲೈನ್ ಆಟಗಳಿಗೂ ಪ್ರಚಾರಕರಾಗಿ ‘ಶ್ರಮವಿಲ್ಲದ, ದುಡಿಮೆಯದಲ್ಲದ ದಿಢೀರ್ ಗಂಟು ಮಾಡಿಕೊಳ್ಳಿ’ ಎಂಬ ದಿವ್ಯಸಂದೇಶ ನೀಡುತ್ತಾರೆ.

ಕ್ರಿಕೆಟ್ ತಾರೆಯರ ವೈಯಕ್ತಿಕ ಬದುಕೂ ಸರಳ, ನೇರಾ-ನೇರ ಎಂಬಂತಿರುವುದಿಲ್ಲ. ಅವರ ಪ್ರತಿಷ್ಠೆ, ಕೀರ್ತಿ, ಹಣಕ್ಕೆ ತಕ್ಕ ಹಾಗೆ ವೈಭವದ ಜೀವನವನ್ನೇ ರೂಢಿಸಿಕೊಂಡಿರುತ್ತಾರೆ. ಐಷಾರಾಮಿ ಬದು ಕಿನ ಎಲ್ಲಾ ಮಜಲುಗಳನ್ನೂ ಅನುಭವಿಸುತ್ತಾರೆ. ದೇಶ ವಿದೇಶಗಳನ್ನು ಸುತ್ತುತ್ತಾರೆ. ಬಹಳಷ್ಟು ಆಟಗಾರರು ತಮ್ಮ ಪ್ರತಿಷ್ಠೆಗೆ ತಕ್ಕಂತೆ ತಮ್ಮಂತೆಯೇ ಖ್ಯಾತಿವೆತ್ತ ತಾರೆಯರನ್ನು, ಮಾಡೆಲ್‌ಗಳನ್ನು ಜೀವನ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.

ಎರಡು ಮೂರು ಸಂಬಂಧಗಳ ಮೂಲಕ ಹಲವು ವಿವಾದಗಳ ಸುಳಿಯಲ್ಲೂ ಸಿಲುಕುತ್ತಾರೆ. ಆಸ್ತಿ, ಹಣ, ವರ್ಚಸ್ಸು, ಖ್ಯಾತಿಯ ಆಕರ್ಷಣೆಗೆ ಒಳಗಾಗಿ ಸಂಗಾತಿಯನ್ನು ಆಯ್ಕೆ ಮಾಡಿಕೊಂಡ ಕಾರಣ ಪರಸ್ಪರ ಹೊಂದಾಣಿಕೆ ಇಲ್ಲದೆ ಇಂಥ ಎಷ್ಟೋ ಮದುವೆಗಳು ಮುರಿದುಬಿದ್ದಿವೆ.

ಹಲವು ಆಟಗಾರರು ವಿಶ್ವಾಸದ್ರೋಹ, ಇನ್‌ಕಾಂಪಿಟಬಿಲಿಟಿ, ಮಾನಸಿಕ ಕಿರುಕುಳಗಳ ಕಾರಣಕ್ಕಾಗಿ ಸಂಗಾತಿಗಳಿಂದ ವಿಚ್ಛೇದನ ಪಡೆದಿದ್ದಾರೆ. ವಿಲಾಸಿ ಜೀವನದ ವೈಭೋಗದಲ್ಲಿ ತೇಲುತ್ತಾ ಶಾಂತಿ, ನೆಮ್ಮದಿಗಳಿಂದ ದೂರವಾಗಿ ಬದುಕನ್ನು ನರಕ ಮಾಡಿಕೊಂಡವರಿದ್ದಾರೆ. ಮಾಮೂಲಿ ಜನರಂತೆ ಯೇ ಗ್ರಹಾಂ ತೋರ್ಪ್, ಡೇವಿಡ್ ಬ್ಯಾರಿಸ್ಟೋ ಮೊದಲಾದ ಹಲವು ಕ್ರಿಕೆಟ್ ಆಟಗಾರರು ಬದುಕಿನ ಒತ್ತಡ ಸಹಿಸಲಾಗದೆ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಖ್ಯಾತ ಕ್ರಿಕೆಟಿಗ ಶೇನ್ ವಾರ್ನ್ ಥಾಯ್ಲೆಂಡ್‌ನಲ್ಲಿ ಸತ್ತ ಕಾರಣ ಇನ್ನೂ ನಿಗೂಢವಾಗಿದೆ. ಕ್ರಿಕೆಟ್ ಆಟಗಾರರಿಂದ ಕಲಿಯುವುದೂ ಬೇಕಾದಷ್ಟಿದೆ. ಹಲವು ಸಂದರ್ಭಗಳಲ್ಲಿ ಅವರು ಅನುಕರಣೀಯ ಮಾದರಿಯಾಗಿ ನಿಂತಿರುವುದೂ ನಿಜ. ಅವರ ಆರಂಭಿಕ ಕಷ್ಟ ಕಾರ್ಪಣ್ಯದ ಬದುಕು, ಆಟಕ್ಕೆಂದೇ ಮಾಡಿದ ತ್ಯಾಗ, ಸಮರ್ಪಣಾ ಮನೋಭಾವದಿಂದ ದೇಶಕ್ಕೆ ನೀಡಿದ ಕೊಡುಗೆ ನಿಜಕ್ಕೂ ಅತ್ಯದ್ಭುತ ವಾದದ್ದು.

ಸಚಿನ್ ತೆಂಡೂಲ್ಕರ್ ಅವರ ತಂದೆ ಹಠಾತ್ತನೆ ನಿಧನರಾದಾಗ ಅವರು 1999ರ ವಿಶ್ವಕಪ್ ಆಡುತ್ತಿದ್ದರು. ತಂದೆ ಸತ್ತ ಸುದ್ದಿ ಕೇಳಿ ಮುಂಬೈಗೆ ಧಾವಿಸಿ ಬಂದರು, ತೆಂಡೂಲ್ಕರ್ ಲಭ್ಯತೆ ಇಲ್ಲದೆ ಭಾರತ ಎರಡು ಪಂದ್ಯಗಳಲ್ಲಿ ಸೋತಿತು. ಎರಡೇ ದಿನದಲ್ಲಿ ವಾಪಸ್ ಬಂದ ತೆಂಡೂಲ್ಕರ್ ಕೀನ್ಯಾ ಪಂದ್ಯದಲ್ಲಿ 140 ಅಮೋಘ ರನ್‌ಗಳನ್ನು ಸಿಡಿಸಿ ಭಾರತದ ಗೆಲುವಿಗೆ ಕಾರಣರಾದರು. ತುಷಾರ್ ದೇಶಪಾಂಡೆ ತಮ್ಮ ತಾಯಿ ಕ್ಯಾನ್ಸರ್‌ನಿಂದ ಮರಣ ಹೊಂದಿದ ಸಂದರ್ಭದಲ್ಲಿ ಸಯ್ಯದ್ ಮುಷ್ತಾಕ್ ಅಲಿ ಪಂದ್ಯಾವಳಿಯಲ್ಲಿ ಆಡಿ ಅತಿ ಹೆಚ್ಚು ವಿಕೆಟ್ ಪಡೆದ ಖ್ಯಾತಿಗೆ ಪಾತ್ರರಾದರು.

ಆಸಿಫ್ ಅಲಿಯಂತೂ ತಮ್ಮ ಮಗಳು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಗ ಎರಡು ಅರ್ಧಶತಕ ಬಾರಿಸಿದರು, ಮಗಳು ಸತ್ತ ಬೆನ್ನಿಗೇ ವಿಶ್ವಕಪ್ ಆಡಲು ಇಂಗ್ಲೆಂಡ್‌ಗೆ ತೆರಳಿದರು. ವಿರಾಟ್ ಕೊಹ್ಲಿ ಕರ್ನಾಟಕದ ವಿರುದ್ಧವೇ ರಣಜಿ ಆಡುತ್ತಿದ್ದಾಗ ಅವರ ತಂದೆ ಹೃದಯ ಸ್ತಂಭನದಿಂದ ತೀರಿಕೊಂಡರು. ‌

ಅಪ್ಪನ ಅಂತ್ಯಕ್ರಿಯೆ ಮುಗಿಸಿ ಎರಡೇ ದಿನದಲ್ಲಿ ಹಿಂದಿರುಗಿ ಮತ್ತೆ ಅಂಗಳಕ್ಕಿಳಿದೇಬಿಟ್ಟರು. ರಿಷಭ್ ಪಂತ್ ಅವರದ್ದೂ ಇದೇ ಮಾದರಿ. 2017ರಲ್ಲಿ ವಿಶ್ವಕಪ್ ಆಡುತ್ತಿದ್ದಾಗ ಅವರ ತಂದೆ ಹೃದಯಾ ಘಾತಕ್ಕೆ ಒಳಗಾದರು. ಆ ನೋವಿನಲ್ಲೇ ಮೈದಾನಕ್ಕಿಳಿದ ಪಂತ್, ಆರ್‌ಸಿಬಿ ವಿರುದ್ಧ ಆರ್ಧಶತಕ ಸಿಡಿಸಿದರು.

ವಿಪರ್ಯಾಸವೆಂದರೆ ಕ್ರಿಕೆಟ್ ಆಟಗಾರರ ಇಂಥ ಮನೋಸ್ಥೈರ್ಯ, ದೃಢತೆ, ಛಲ, ಸಂಕಲ್ಪದ ಗುಣಗಳು ನಮ್ಮ ಯುವಕರಿಗೆ ಮಾದರಿ ಆಗುವುದೇ ಇಲ್ಲ. ಕೇವಲ ಅವರ ಹೇರ್ ಕಟ್, ಅವರ ವೈಭೋಗದ ಜೀವನ ಶೈಲಿ, ಅವರ ಜಾಹೀರಾತುಗಳ ವೈಖರಿ ಇಂಥ ಭೌತಿಕ ಅಂಶಗಳಷ್ಟೇ ಯುವಕ ರನ್ನು ಸೂಜಿಗಲ್ಲಿನಂತೆ ಸೆಳೆದುಬಿಡುತ್ತವೆ. ಆದಾಗ್ಯೂ ರನ್ ಗಳಿಸುವ ಚಾಕಚಕ್ಯತೆಗೋ, ವಿಕೆಟ್ ಕಬಳಿಸುವ ತಂತ್ರಕ್ಕೋ ಶಹಬ್ಬಾಶ್ ಗಿರಿ ಕೊಡಲೇಬೇಕು, ಕ್ರೀಡಾಮನೋಭಾವದಿಂದ ಮೆಚ್ಚಲೇ ಬೇಕು.

ಆಟಗಾರರ ಕುರಿತಾಗಿ ಅಭಿಮಾನವನ್ನು ಬೆಳೆಸಿಕೊಳ್ಳುವುದರಲ್ಲಿ ತಪ್ಪಿಲ್ಲ, ಆದರೆ ಅವರನ್ನೇ ದೇವರೆಂದು ತಲೆ ಮೇಲೆ ಹೊತ್ತುಕೊಂಡು ಭಾವೋದ್ವೇಗಕ್ಕೆ ಒಳಗಾಗಿ ಅನರ್ಥಗಳನ್ನು ಮೈಮೇಲೆ ಎಳೆದುಕೊಂಡು ಜೀವಹಾನಿ ಮಾಡಿಕೊಳ್ಳುವ ಹಂತಕ್ಕೆ ಯಾರೂ ಹೋಗಬಾರದು. ಆಟ ನೋಡಲು ಟಿಕೆಟ್ ತೆಗೆದುಕೊಳ್ಳುವಷ್ಟೇ ಅಭಿಮಾನವಿರೇಕು; ನಮ್ಮ ಆಟ ಮುಗಿಸಲು ಟಿಕೆಟ್ ತೆಗೆದುಕೊಳ್ಳ ಬಾರದು.

(ಲೇಖಕರು ಸಾಹಿತಿ)