19ಕ್ಕೆ ನಡೆಯಲಿದೆ ನಂದಿ ಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ಸಭೆ : ಜನತೆಯ ನಿರೀಕ್ಷೆಯ ಭಾರ ಕಡಿಮೆ ಮಾಡುವುದೇ ಸರ್ಕಾರ
ಪ್ರಸಿದ್ದ ಪ್ರವಾಸಿ ತಾಣವಾದ ನಂದಿ ಬೆಟ್ಟದಲ್ಲಿ 1986ರಲ್ಲಿ ಸಾರ್ಕ್ ಸಮ್ಮೇಳನ ನಡೆದು ಹೊಸ ಇತಿಹಾಸ ಸೃಷ್ಟಿಸಿತ್ತು. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ದಕ್ಷಿಣ ಭಾರತದ ಪ್ರವಾಸ ಕೈಗೊಂಡಿದ್ದ ವೇಳೆ ಮಹಾತ್ಮಾಗಾಂಧಿ ಯವರ ಆರೋಗ್ಯ ಕೈ ಕೊಟ್ಟಿತ್ತು. ಆಗ 1927ಮತ್ತು 1934 ಈ ಎರಡು ಅವಧಿಯಲ್ಲಿ ನಂದಿ ಬೆಟ್ಟದಲ್ಲಿ ಅವರು ೬೦ಕ್ಕೂ ಹೆಚ್ಚು ದಿನ ಬಿಡು ಬಿಟ್ಟು ಆರೋಗ್ಯ ಸುಧಾರಿಸಿಕೊಂಡಿದ್ದರು.

ನಂದಿಬೆಟ್ಟದಲ್ಲಿ ಸಂಪುಟ ಸಭೆ ನಡೆಯಲಿರುವ ಮಯೂರ ಫೈನ್ಟಾಪ್ ರೆಸ್ಟೋರೆಂಟ್ನ ಚಿತ್ರ

ಮುನಿರಾಜು ಎಂ.ಅರಿಕೆರೆ
ಚಿಕ್ಕಬಳ್ಳಾಪುರ: ಜೂನ್ 19ರಂದು ನಂದಿಬೆಟ್ಟದಲ್ಲಿ ನಡೆಯಲಿರುವ ರಾಜ್ಯ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆಯು ಜಿಲ್ಲೆಯ ಜನತೆಯಲ್ಲಿ ತೀವ್ರ ಕುತೂಹಲ ಮೂಡಿಸಿರುವುದಷ್ಟೇ ಅಲ್ಲದೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಕೈಗನ್ನಡಿಯಾಗುವುದೇ ಎಂಬ ಬಗ್ಗೆ ಪ್ರಜೆಗಳಲ್ಲಿ ನಿರೀಕ್ಷೆಯ ಭಾರ ಹೆಚ್ಚಾಗಿದೆ.
ಹೌದು. ಸಚಿವ ಸಂಪುಟ ಸಭೆಯೆಂಬುದು ವಿಧಾನೌಧಕ್ಕೆ ಸೀಮಿತವಾದ ಕಾಲವೊಂದಿತ್ತು. ಆದರೆ ಸಾಮಾಜಿಕ ಅಸಮತೋಲನೆ ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ವಿಶೇಷ ಸಂಪುಟ ಸಭೆ, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಇತ್ತೀಚೆಗೆ ಶ್ರೀಕಾರ ಹಾಡಲಾಗಿದೆ.

ಚಿಕ್ಕಬಳ್ಳಾಪುರ, ಕೋಲಾರ ಬೆಂಗಳೂರು ವಿಭಾಗದ ಜಿಲ್ಲಾ ಉಸ್ತುವಾರಿ ಸಚಿವರ ಮುತುವರ್ತಿಯ ಕಾರಣವಾಗಿ ಜಿಲ್ಲೆಯ ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಏರ್ಪಡಿಸಲಾಗಿದೆ.
ಸಂಪುಟ ಸಭೆಗೂ ಮುನ್ನವೇ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್, ಕೋಲಾರದ ಭೈರತಿ ಸುರೇಶ್, ಬೆಂಗಳೂರು ಗ್ರಾಮಾಂತರದ ಕೆ.ಹೆಚ್.ಮುನಿಯಪ್ಪ, ಕೃಷ್ಣಭೈರೇಗೌಡ, ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಸೇರಿ ಈ ಭಾಗದ ಜನಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರಗಳ ಬೇಡಿಕೆ ಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ನಂದಿಬೆಟ್ಟದ ವಿಶೇಷ ಸಚಿವ ಸಂಪುಟ ಸಭೆ ಯಲ್ಲಿ ಸರ್ಕಾರ ತೆಗೆದುಕೊಳ್ಳುವ ತೀರ್ಮಾನವು ಬರಪೀಡಿತ ಜಿಲ್ಲೆಯೆಂಬ ಹಣೆಪಟ್ಟಿಯನ್ನು ಕಳಚುವಲ್ಲಿ ಯಶಸ್ವಿಯಾಗುವುದೇ ಇಲ್ಲವೆ ವಿಫಲವಾಗುವುದೇ ಎಂಬುದಕ್ಕೆ ಗುರುವಾರದ ತನಕ ಕಾಯಬೇಕಾಗಿದೆ.
ಪ್ರಸಿದ್ದ ಪ್ರವಾಸಿ ತಾಣವಾದ ನಂದಿ ಬೆಟ್ಟದಲ್ಲಿ 1986ರಲ್ಲಿ ಸಾರ್ಕ್ ಸಮ್ಮೇಳನ ನಡೆದು ಹೊಸ ಇತಿಹಾಸ ಸೃಷ್ಟಿಸಿತ್ತು. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ದಕ್ಷಿಣ ಭಾರತದ ಪ್ರವಾಸ ಕೈಗೊಂಡಿದ್ದ ವೇಳೆ ಮಹಾತ್ಮಾಗಾಂಧಿ ಯವರ ಆರೋಗ್ಯ ಕೈ ಕೊಟ್ಟಿತ್ತು. ಆಗ 1927ಮತ್ತು 1934 ಈ ಎರಡು ಅವಧಿಯಲ್ಲಿ ನಂದಿ ಬೆಟ್ಟದಲ್ಲಿ ಅವರು 60ಕ್ಕೂ ಹೆಚ್ಚು ದಿನ ಬೀಡುಬಿಟ್ಟು ಆರೋಗ್ಯ ಸುಧಾರಿಸಿಕೊಂಡಿದ್ದರು. ಗಾಂಧೀಜಿ ಮೆಟ್ಟಿಲುಗಳನ್ನು ಬಳಸಿ ಬೆಟ್ಟವನ್ನು ಹತ್ತಿದ ಕುರುಹಾಗಿ ಬೆಟ್ಟದ ಬಿಡದಲ್ಲಿರುವ ಗ್ರಾಮಕ್ಕೆ ನೆನಪಿನಾರ್ಥವಾಗಿ ಗಾಂಧಿಪುರ ಎಂದು ಹೆಸರಿಡಲಾಗಿದೆ.
ಇಂತಹ ಐತಿಹಾಸಿಕ ಹಿನ್ನೆಲೆ ಇರುವ ನಂದಿ ಗಿರಿಧಾಮದಲ್ಲಿ ಸ್ವಾತಂತ್ರ್ಯ ಬಂದಾದ ಮೇಲೆ ಇದೆ ಮೊದಲ ಬಾರಿಗೆ ವಿಶೇಷ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಜನತೆಯಲ್ಲಿ ಸಂತೋಷ ಮನೆಮಾಡುವಂತೆ ಮಾಡಿದೆ.
ಅಂತರ್ಜಲವೇ ಬದುಕು!!!
ನದಿ ನಾಲೆಗಳ ಆಶ್ರಯವಿಲ್ಲದ ಜಿಲ್ಲೆಗೆ ಅಂತರ್ಜಲವೇ ಆಧಾರವಾಗಿದ್ದು, ಇದರ ಆಧಾರದಲ್ಲಿ ಜನತೆ ಬದುಕು ಕಟ್ಟಿಕೊಂಡಿದ್ದಾರೆ. ಕೊಳವೆ ಬಾವಿಗಳಿಗಾಗಿ ಸಾಲ ಸೋಲ ಮಾಡಿ ಮಾಡಿ ಸರ್ವ ನಾಶವಾದ ರೈತರ ಸಂಖ್ಯೆ ಲೆಕ್ಕಕ್ಕಿಲ್ಲ. ಸಾವಿರದಿಂದ 1500 ಅಡಿ ಆಳಕ್ಕೆ ಕೊಳವೆ ಬಾವಿ ಕೊರೆದರೂ ಶುದ್ಧವಾದ ನೀರು ದೊರೆಯುತ್ತಿಲ್ಲ.ಆಳದಿಂದ ಬರುವ ಖನಿಜಯುಕ್ತ ಅಲ್ಪಸ್ವಲ್ಪ ನೀರನ್ನು ಬಳಸಿ ಕೊಂಡು ಇಲ್ಲಿನ ಮಂದಿ ಜೀವನ ಸಾಗಿಸುತ್ತಿದ್ದಾರೆ.ಇದನ್ನು ಮನಗಂಡು ಶಾಶ್ವತ ನೀರಾವರಿ ಗಾಗಿ ಯೋಜನೆ ಘೋಷಣೆ ಮಾಡಿ ಕಾರ್ಯಗತ ಮಾಡುವ ನಿಟ್ಟಿನಲ್ಲಿ ಸಭೆ ಒಮ್ಮತದ ತೀರ್ಮಾನಕ್ಕೆ ಬರಬೇಕಿದೆ.
ಕೃಷ್ಣೆ ಹರಿಯುವಳೆ!!!
ಸ್ವಾತಂತ್ರ್ಯ ಬಂದಾಗಿನಿAದಲೂ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೆ ಲಕ್ಷಾಂತರ ಕೋಟಿ ಅನುದಾನ ನೀಡಿರುವ ಸರ್ಕಾರಗಳು, ಬಯಲು ಸೀಮೆಯ ಜಿಲ್ಲೆಗಳಿಗೆ ಕಡೆಗಣಿಸಿರುವುದು ಎದ್ದು ಕಾಣುತ್ತಿದೆ.ಇದೇ ಕಾರಣವಾಗಿ ಈ ಭಾಗದಲ್ಲಿ ನೀರಿಗಾಗಿ ಹೋರಾಟ ಜೀವಂತವಾಗಿರುವAತೆ ಮಾಡಿದೆ.ನದಿ ಜೋಡಣೆಯ ಕೂಗಿಗೆ ಬಲತುಂಬಿ ಕೃಷ್ಣಾನದಿ ನೀರನ್ನು ಜಿಲ್ಲೆಗೆ ಹರಿಸಲು ದಿಟ್ಟ ನಿರ್ಧಾರ ಕೈಗೊಳ್ಳಲು ಇದು ಸಕಾಲವಾಗಿದೆ.
ಗ್ಯಾರೆಂಟಿಯಿಲ್ಲದ ಎತ್ತಿನಹೊಳೆ??
ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಇತ್ಯಾದಿ ಬಯಲು ಸೀಮೆ ಜಿಲ್ಲೆಗಳಲ್ಲಿ ಕುಡಿಯುವ ನೀರನ್ನು ಒದಗಿಸುವ ಯೋಜನೆಯಾಗಿ 2012ರಲ್ಲಿ ಡಾ.ಎಂ.ವೀರಪ್ಪ ಮೊಯ್ಲಿ ಕೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ಶಂಕುಸ್ಥಾಪನೆ ನೆರವೇರಿದ ಎತ್ತಿನಹೊಳೆ ಯೋಜನೆ,ಇಂದಿಗೂ ಸಕಲೇಶಪುರದಲ್ಲಿಯೇ ಠಿಕಾಣಿ ಹೂಡಿದೆ. 8000 ಕೋಟಿ ಆರಂಭಿಕ ಅಂದಾಜಿನಲ್ಲಿ ಆರಂಭವಾದ ಈ ಯೋಜನೆ ಸರ್ಕಾರಗಳು ಬದಲಾದಂತೆ 12000 ದಿಂದ ಪ್ರಸ್ತುತ 25000 ಕೋಟಿಗೆ ಏರಿಕೆ ಯಾಗಿದ್ದು ಬಿಟ್ಟರೆ ಜಿಲ್ಲೆಗೆ ಹರಿಯಲೇ ಇಲ್ಲ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸರಕಾರಗಳು ಈ ಸಂಬಂಧ ಎರಡು ವರ್ಷ ಎರಡು ವರ್ಷ ಎನ್ನುತಲೇ ಸಾಗಿರುವುದು ಇದೊಂದು ಬದ್ಧತೆಯಿಲ್ಲದ ಯೋಜನೆ ಎಂಬುದನ್ನು ಸಾಬೀತು ಮಾಡಿದೆ.ಇದೇ ಜೂನ್ 11ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಗೌರಿಬಿದನೂರಿನಲ್ಲಿ 2027ಕ್ಕೆ ಎತ್ತಿನಹೊಳೆ ಪೂರ್ಣವಾಗಲಿದೆ ಎನ್ನುವ ಮೂಲಕ ಹಳೇ ರಾಗಕ್ಕೆ ಗಂಟು ಬಿದ್ದಿದ್ದಾರೆ.
ಕೆರೆಗಳ ಪುನರುಜ್ಜೀವನ!!
ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ನಾಲ್ಕು ಸಾವಿರದ ಮುನ್ನೂರಕ್ಕೂ ಹೆಚ್ಚು ಕೆರೆಗಳು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿವೆ. ಕೃಷಿಯ ಅಕ್ಷಯ ಪಾತ್ರೆಯಾದ ಕೆರೆಗಳ ಪುನರ್ಜೀವನಕ್ಕೆ ವಿಶೇಷ ಯೋಜನೆ ರೂಪಿಸಬೇಕಾಗಿದೆ.
ಪುಷ್ಪಕೃಷಿಗೆ ಉತ್ತೇಜನ??
ರಾಜ್ಯದಲ್ಲಿಯೇ ದೊಡ್ಡ ಹೂವಿನ ಮಾರುಕಟ್ಟೆ ಚಿಕ್ಕಬಳ್ಳಾಪುರದಲ್ಲಿದೆ.ಆದರೆ ಸ್ವಂತ ಸೂರಿಲ್ಲದೆ ನರಳುತ್ತಿದೆ.ಇಷ್ಟಾದರು ಇಲ್ಲಿಂದ ದೇಶದ ನಾನಾ ಮೂಲೆಗಳಲ್ಲದೆ,ವಿದೇಶಗಳಿಗೂ ಗುಣಮಟ್ಟದ ಹೂವು ರಫ್ತು ಮಾಡುತ್ತಿದೆ.ಇದನ್ನು ಮನಗಂಡ ರಾಜ್ಯ ಸರಕಾರ 150 ಕೋಟಿ ವೆಚ್ಚದಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆಯನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ಮುಂದಾಗಿ ಬಜೆಟ್ನಲ್ಲಿ ಅನುದಾನ ಘೋಷಣೆ ಮಾಡಿದೆ.ಪಿಪಿಪಿ ಮಾದರಿ ಕೈಬಿಟ್ಟು ಸರಕಾರಿ ಸಹಭಾಗಿತ್ವದಲ್ಲಿಯೇ ಮಾರು ಕಟ್ಟೆ ನಿರ್ಮಾಣ ಮಾಡಲು ದಿಟ್ಟಕ್ರಮ ಕೈಗೊಂಡು ರೈತಾಪಿಗಳ ಮೊಗದಲ್ಲಿ ಹರ್ಷವು ಕ್ಕುವಂತೆ ಮಾಡುವಲ್ಲಿ ಈ ಸಭೆ ಸಫಲವಾಗುವುದೇ ಕಾದು ನೋಡಬೇಕಿದೆ. ಇಷ್ಟಾದಲ್ಲಿ ಜಿಲ್ಲೆಯ ಪುಷ್ಪಸಂಸ್ಕೃತಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದ್ದು,ಕೃಷಿ ಆಧಾರಿತ ಪ್ರವಾಸೋದ್ಯ ಮಕ್ಕೂ ಅನಂತ ಅವಕಾಶಗಳನ್ನು ಮುಕ್ತವಾಗಿ ತೆರೆಯಲಿದೆ..
ಪ್ರವಾಸೋದ್ಯಮಕ್ಕೆ ಒತ್ತು!!!
ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯು ಪ್ರವಾಸೋದ್ಯಮ ಬೆಳವಣಿಗೆಗೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿ ಚಾರಣಕ್ಕೆ ಪ್ರವಾಸೋದ್ಯಮ ಬೆಳೆಸಲು ವಿಫುಲ ಅವಕಾಶ ಗಳಿವೆ. ಕಾರಣ ಸರ್ಕಾರ ಪ್ರವಾಸಿ ಹಬ್ ನಿರ್ಮಾಣಕ್ಕೆ ಮುಂದಾಗುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕಿದೆ.
ವಿಶ್ವವಿಖ್ಯಾತ ನಂದಿ ಗಿರಿಧಾಮ, ಸ್ಕಂದಗಿರಿ, ಚನ್ನಗಿರಿ, ಬ್ರಹ್ಮಗಿರಿ, ದಿಬ್ಬಗಿರಿಗಳು ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳಗಳಾಗಿವೆ. ಈಶಾಧ್ಯಾನಕೇಂದ್ರವೂ ಪ್ರವಾಸಿಗರನ್ನು ಸೆಳೆಯುವಲ್ಲಿ ದಾಪುಗಾಲು ಇಟ್ಟಿದೆ. ಇಲ್ಲೆಲ್ಲಾ ಪ್ರವಾಸಿಗರಿಗೆ ಅಗತ್ಯವಾಗಿ ಬೇಕಾದ ಮೂಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಆಕರ್ಷಣೆ ಮಾಡಬಹುದಾಗಿದೆ. ಜತೆಗೆ ಸೆಲ್ಫಿ ಬಂಡೆ ಖ್ಯಾತಿಯ ಆವುಲ ಬೆಟ್ಟ , ಆಮನಿ ಬೈರಸಾಗರಕೆರೆ, ಸುರಸದ್ಮಗಿರಿ, ಬಾಗೇಪಲ್ಲಿಯ ಗುಮ್ಮನಾಯಕನ ಕೋಟೆ, ಗಡದಿಂ ವೆಂಕಟೇಶ್ವರ ಸನ್ನಿಧಿ, ಶಿಡ್ಲಘಟ್ಟದ ತಲಕಾಯಲ ಬೆಟ್ಟ, ದಾಸರಹಳ್ಳಿಯ ಬೇಟೆರಾಯಸ್ವಾಮಿ ದೇವಾಲಯ, ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ, ಮುರುಗಮಲೆ, ಕೈವಾರ, ಕೈಲಾಸನಾಥ ಬೆಟ್ಟ ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ.
ಪ್ರವಾಸಿಗರು ಹೆಚ್ಚಾದಲ್ಲಿ ಹೋಟೆಲ್ ಉದ್ಯಮದ ಬೆಳವಣಿಗೆ,ರಿಯಲ್ ಎಸ್ಟೇಟ್ ಉದ್ಯಮದ ಬೆಳವಣಿಗೆ ನಾಗಾಲೋಟದಲ್ಲಿ ಬೆಳವಣಿಗೆ ಆಗುವ ಮೂಲಕ ಉದ್ಯೋಗಾವಕಾಶಗಳು ಹೆಚ್ಚಲಿವೆ.
ಜಿಲ್ಲೆಯ ಏಕೈಕ ಸರಕಾರಿ ಮೆಡಿಕಲ್ ಕಾಲೇಜನ್ನು ಅಭಿವೃದ್ಧಿಪಡಿಸಿ, ಇಲ್ಲೇ ಸಾರ್ವಜನಿಕ ಆಸ್ಪತ್ರೆಗಳ ಸೇವೆ ಪ್ರಾರಂಭವಾಗಬೇಕಿದೆ.ಇದಾಗಬೇಕಾದಲ್ಲಿ 100 ಕೋಟಿಗೂ ಹೆಚ್ಚು ಅನುದಾನ ಬೇಕಿದೆ ಎನ್ನುವುದು ಆಸ್ಪತ್ರೆ ಮೂಲಗಳ ಮಾತು. ಇದಕ್ಕೆ ಸಂಪುಟದಲ್ಲಿ ಅನುಮೋದನೆ ದೊರೆಯುವುದೇ ಕಾದು ನೋಡಬೇಕಿದೆ.
ಮೂರನೇ ಹಂತದ ಶುದ್ಧೀಕರಣ ?
ಜಿಲ್ಲೆಯಲ್ಲಿ ಅಂತರ್ಜಲ ವೃದ್ದಿಗೆ ಕಾರಣವಾಗಿರುವ ಹೆಚ್.ಎನ್.ವ್ಯಾಲಿ ಸಂಸ್ಕರಿತ ನೀರನ್ನು ೩ನೇ ಹಂತದ ಶುದ್ಧಿಕರಣ ಮಾಡಲು 1000 ಕೋಟಿ ಅನುದಾನದ ಕೊರತೆಯಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಜಾರಿಗೊಳಿಸಿರುವ ಈ ಯೋಜನೆಯನ್ನು ಜನರ ಆರೋಗ್ಯದ ಹಿತದೃಷ್ಟಿ ಯಿಂದ ೩ನೇ ಹಂತದಲ್ಲಿ ಶುದ್ಧೀಕರಿಸಿ ಹರಿಸಿದರೆ ಜನರ ಆಶೀವಾದ ಸದಾ ಸರಕಾರದ ಮೇಲಿರಲಿದೆ. ಬೆಂಗಳೂರು ವಿಭಾಗದ ಎಲ್ಲಾ ಜನಪ್ರತಿನಿಧಿಗಳು ಈ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸುವರೇ ಕಾದು ನೀಡಬೇಕಿದೆ.
ರೋಪ್ವೇ ಆಗುವುದೇ???
ಪರಿಸರವಾದಿಗಳ ಪ್ರತಿರೋಧದ ನಡುವೆಯೂ ನಂದಿ ಬೆಟ್ಟದ ತಪ್ಪಲಿನಲ್ಲಿ ರೋಪವೇ ಕಾಮಗಾರಿ ಚಾಲನೆಯಲ್ಲಿದೆ. ಸುಪ್ರಸಿದ್ಧ ಕನ್ನಡದ ನಟ ದಿವಂಗತ ಶಂಕರ್ ನಾಗ್ ಕನಸಿನ ಯೋಜನೆಯಾದ ರೋಪ್ವೇ ನಿರ್ಮಾಣವು ಈಡೇರಿದರೆ ನಂದಿಬೆಟ್ಟದ ಅಸ್ಮಿತೆಗೆ ಕಂಠಕ ಶುರುವಾಗುವುದು ಖಚಿತ ಎನ್ನುವುದು ಪರಿಸರವಾದಿಗಳ ಆತಂಕ.ಆದರೆ ಸರಕಾರ ಮತ್ತು ಸಚಿವರು ನಂದಿಬೆಟ್ಟಕ್ಕೆ ಅಪಾಯ ಆಗದ ರೀತಿಯಲ್ಲಿ ಈ ಯೋಜನೆ ಮಾಡಲಿದ್ದೇವೆ. ಇದರಿಂದಾಗಿ ಪ್ರವಾಸೋದ್ಯಮಕ್ಕೆ ವಿಶ್ವಮಟ್ಟ ದಲ್ಲಿ ಸ್ಥಾನದೊರೆಯಲಿದೆ ಎನ್ನುತ್ತಿದ್ದಾರೆ. ಇದರ ಪ್ರಸ್ತಾಪವೂ ಈ ಸಭೆಯಲ್ಲಿ ಆಗುವುದೇ ಇಲ್ಲವೇ ಕಾದು ನೋಡಬೇಕಿದೆ ಎಂದರು.
ಚಿಮುಲ್ಗೆ ಕಾಯಕಲ್ಪ!!
ಚಿಮುಲ್ ರಚನೆಯಾಗಿ ಒಂದು ವರ್ಷ ಕಳೆಯುತ್ತಿದ್ದರೂ ಸ್ವತಂತ್ರವಾಗಿ ಕಾರ್ಯ ನಿರ್ವಹಿಸ ಲಾಗದೆ, ಮೂಲಸೌಕರ್ಯಗಳಿಲ್ಲದೆ ನರಳುತ್ತಿದೆ.ಚುನಾವಣೆ ನಡೆದು ಆಡಳಿತ ಮಂಡಳಿ ರಚನೆ ಯಾಗದೆ, ಆಡಳಿತಾಧಿಕಾರಿಗಳ ನೆರಳಲ್ಲಿ ತೆವಳುತ್ತಾ ಸಾಗಿದೆ.ಇಲ್ಲಿ ಪಾಕೆಟ್ ಯೂನಿಟ್ ಇಲ್ಲದೆ ಬೇರೆಡೆ ಮಾಡುಸುತ್ತಿರುವುದರಿಂದ ಒಕ್ಕೂಟಕ್ಕೆ ನಷ್ಟವೇ ಹೆಚ್ಚಿದೆ.ಈ ಸಭೆಯಲ್ಲಿ ಪಾಕೆಟ್ ಯೂನಿಟ್ ಘೋಷಣೆ ಮಾಡುವುದೇ ನೋಡಬೇಕಿದೆ.
ಹೀಗೆ ಜಿಲ್ಲೆಯಲ್ಲಿರುವ ಹತ್ತು ಹಲವು ಸಮಸ್ಯೆಗಳಿಗೆ ನಂದಿಬೆಟ್ಟದ ಸಚಿವ ಸಂಪುಟ ಸಭೆ ಮದ್ದರೆಯುವುದೇ ಎಂಬ ಆಶಾವಾದ ಜನತೆಯಲ್ಲಿ ಮಡುಗಟ್ಟಿದೆ. ಈ ಎಲ್ಲಾ ಕನಸುಗಳಿಗೆ ಜೂ.೧೯ ರ ಸಭೆ ಬೆಳಕಾಗುವುದೋ, ಇಲ್ಲಾ ಮೋಡಕವಿಸುವುದೋ ಎಂಬುದಕ್ಕೆ ಬರುವ ಗುರುವಾರದ ತನಕ ಕಾಯುವುದು ಮಾತ್ರ ನಮ್ಮ ಕೆಲಸವಾಗಿದೆ.