Ahmedabad Plane Crash: ವಿಮಾನ ದುರಂತದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಲಿ: ಮಲ್ಲಿಕಾರ್ಜುನ ಖರ್ಗೆ
Ahmedabad Plane Crash: ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನಮ್ಮ ಪಕ್ಷದ ವತಿಯಿಂದ ಏನು ಸಹಾಯ ಮಾಡಬೇಕೋ ಅದನ್ನು ಮಾಡುತ್ತೇವೆ. ಈ ಬಗ್ಗೆ ಗುಜರಾತ್ ಕಾಂಗ್ರೆಸ್ ಘಟಕಕ್ಕೆ ಸೂಚಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.


ಕಲಬುರಗಿ: ಗುಜರಾತ್ನ ಅಹಮದಾಬಾದ್ನಲ್ಲಿ ದೊಡ್ಡ ದುರಂತ (Ahmedabad Plane Crash) ನಡೆದಿದೆ. ಇದರಿಂದ ನಮಗೆ ದೊಡ್ಡ ಶಾಕ್ ಆಗಿದೆ. ಒಮ್ಮೆಲೆ ಅಷ್ಟೊಂದು ದೊಡ್ಡ ಮಟ್ಟದ ಸಾವು ಆಗಿದೆ. ವಿಮಾನ ದುರಂತದಲ್ಲಿ ಇಲ್ಲಿಯವರೆಗೆ 169 ಜನ ಮೃತಪಟ್ಟಿದ್ದಾರೆ ಎನ್ನೋ ಮಾಹಿತಿ ಇದೆ. ಇದು ಅತ್ಯಂತ ದುಖಃದ ವಿಚಾರ. ಕಾಂಗ್ರೆಸ್ ಅಧ್ಯಕ್ಷನಾಗಿ ಸಂತಾಪ ಸೂಚಿಸುತ್ತೇನೆ. ಈ ಘಟನೆ ಬಗ್ಗೆ ಸುಪ್ರೀಂ ಕೋರ್ಟ್ ಸಿಟ್ಟಿಂಗ್ ಜಡ್ಜ್ ಮೂಲಕ ತನಿಖೆ ಮಾಡಿಸಬೇಕು. ಯಾಕೆಂದರೆ ಹಾರಿದ ಕೆಲವೇ ಕ್ಷಣಗಳಲ್ಲಿ ಪತನವಾಗಿದೆ. ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿರುವ ಅವರು, ಮೃತರ ಕುಟುಂಬಗಳಿಗೆ ನಮ್ಮ ಪಕ್ಷದ ವತಿಯಿಂದ ಏನು ಸಹಾಯ ಮಾಡಬೇಕೋ ಅದನ್ನು ಮಾಡುತ್ತೇವೆ. ಈ ಬಗ್ಗೆ ಗುಜರಾತ್ ಕಾಂಗ್ರೆಸ್ ಘಟಕಕ್ಕೆ ಸೂಚಿಸುತ್ತೇನೆ. ವಿಮಾನದಲ್ಲಿ ನಮ್ಮ ದೇಶ ಹಾಗೂ ಹೊರದೇಶದ ಪ್ರಜೆಗಳಿದ್ದರು. ಇದರ ಜವಾಬ್ದಾರಿ ಕೇಂದ್ರ ಹೊತ್ತುಕೊಂಡು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಕೆಲ ಪ್ರಯಾಣಿಕರು ಬೇಗನೇ ವಿಮಾನ ಬಿಡಬೇಕು ಎನ್ನೋ ಒತ್ತಡ ಇತ್ತಂತೆ. ಈ ಬಗ್ಗೆಯೂ ಕೇಂದ್ರ ತನೀಖೆ ನಡೆಸಬೇಕು.
ಫೈಲಟ್ ವಾತಾವರಣ ಸರಿಯಿಲ್ಲ ಅಂತ ಹೇಳಿದರೂ ವಿಮಾನ ಹಾರಿಸಿದ್ದಾರೆ. ಈ ಘಟನೆಯನ್ನು ಸುಪ್ರೀಂ ಕೋರ್ಟ್ ಸಿಟ್ಟಿಂಗ್ ಜಡ್ಜ್ ಮೂಲಕ ತನಿಖೆ ಮಾಡಿಸಬೇಕು. ಯಾಕೆಂದರೆ ಹಾರಿದ ಕೆಲವೇ ಕ್ಷಣಗಳಲ್ಲಿ ಪತನವಾಗಿದೆ. ನಿಷ್ಪಕ್ಷಪಾತ ತನಿಖೆಯಾಗಬೇಕು. ಯಾಕೆಂದರೆ ಇದರಲ್ಲಿ ತಾಂತ್ರಿಕ ದೋಷ ಕಾರಣವೋ, ಪೈಲಟ್ ಕಾರಣವೋ ಅಥವಾ ಬೇರೆ ಏನೇ ಇದೆಯೋ ಎನ್ನುವುದು ತನಿಖೆಯಾಗಬೇಕು. ಕೇಂದ್ರವು ಮೂರು ತಿಂಗಳಲ್ಲಿ ಸುಪ್ರೀಂ ಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ ವರದಿ ಪಡೆಯಬೇಕು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | DK Shivakumar: ಅಹಮದಾಬಾದ್ ವಿಮಾನ ದುರಂತ ಆಘಾತಕಾರಿ- ಡಿ.ಕೆ.ಶಿವಕುಮಾರ್
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಂಗಳೂರಿನ ಸಹ ಪೈಲಟ್ ಕ್ಲೈವ್ ಕುಂದರ್ ಸಾವು

ಮಂಗಳೂರು: ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ (Ahmedabad Plane Crash) ಮಂಗಳೂರು ಮೂಲದ ಮುಂಬೈ ನಿವಾಸಿ, ಸಹ ಪೈಲಟ್ ಕ್ಲೈವ್ ಕುಂದರ್ (Clive Kundar) ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕ್ಲೈವ್ ಕುಂದರ್ ಅವರು ಪ್ಯಾರಿಸ್ ಏರ್ ಇಂಕ್ನಲ್ಲಿ ತರಬೇತಿ ಪಡೆದಿದ್ದರು. 1,100 ಗಂಟೆಗಳ ಹಾರಾಟದ ಅನುಭವ ಹೊಂದಿರುವ ಇವರು, ಇಂದು ಅಪಘಾತಕ್ಕೀಡಾದ ವಿಮಾನದ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಅವರ ಜತೆ ಸಹ ಪೈಲಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್ಲೈನರ್ ಗುರುವಾರ ಮಧ್ಯಾಹ್ನ ಅಹಮದಾಬಾದ್ನಲ್ಲಿ ಟೇಕಾಫ್ ಆದ ಕೆಲವೇ ನಿಮಿಷದಲ್ಲಿ ಪತನಗೊಂಡಿದೆ. ಅವಘಡ ನಡೆದಾಗ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು ಫಸ್ಟ್ ಆಫೀಸರ್ (ಸಹ ಪೈಲಟ್) ಕ್ಲೈವ್ ಕುಂದರ್ ವಿಮಾನ ಚಾಲನೆ ಮಾಡುತ್ತಿದ್ದರು. ಇಬ್ಬರಿಗೂ ಒಟ್ಟು 9,300 ಗಂಟೆಗಳ ಹಾರಾಟದ ಅನುಭವವಿದೆ ಎಂದು ವರದಿಯಾಗಿದೆ.
ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಲೈನ್ ಟ್ರೈನಿಂಗ್ ಕ್ಯಾಪ್ಟನ್ (LTC) ಆಗಿದ್ದಾರೆ. ಕ್ಯಾಪ್ಟನ್ ಸಭರ್ವಾಲ್ 8,200 ಗಂಟೆಗಳ ವಿಮಾನ ಹಾರಾಟದ ಅನುಭವ ಹೊಂದಿದ್ದರು. ಸಹಾಯಕ ಪೈಲಟ್ ಕ್ಲೈವ್ ಕುಂದರ್ 1,100 ಗಂಟೆಗಳ ಅನುಭವ ಹೊಂದಿದ್ದರು ಎಂದು ನಾಗರಿಕ ವಿಮಾನಯಾನ ನಿಯಂತ್ರಣ ಮಂಡಳಿ ಹೇಳಿದೆ. ವಿಮಾನವು ಪ್ರತಿ ನಿಮಿಷಕ್ಕೆ 475 ಅಡಿಗಳಷ್ಟು ಕೆಳಗೆ ಬೀಳುತ್ತಿತ್ತು. 625 ಅಡಿ ಎತ್ತರದಿಂದ ವೇಗವಾಗಿ ಕೆಳಗೆ ಬಂದ ಕಾರಣ ಪೈಲಟ್ಗಳಿಗೆ ಪ್ರತಿಕ್ರಿಯಿಸಲು ಕೇವಲ ಒಂದು ನಿಮಿಷಕ್ಕಿಂತ ಕಡಿಮೆ ಸಮಯವಿತ್ತು. ATCಯನ್ನು ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಲ್ಲ. ನಂತರ ಕೆಲವೇ ಕ್ಷಣಗಳಲ್ಲಿ ವಿಮಾನ ನೆಲಕ್ಕೆ ಅಪ್ಪಳಿಸಿದೆ.
ಪತನಗೊಂಡ ವಿಮಾನದಲ್ಲಿ ಇಬ್ಬರು ಪೈಲೆಟ್, 10 ಕ್ಯಾಬಿನ್ ಸಿಬ್ಬಂದಿ, 169 ಭಾರತೀಯರು, 53 ಬ್ರಿಟೀಷ್ ಪ್ರಜೆಗಳು, ಒಬ್ಬ ಕೆನಡಾ ಪ್ರಜೆ ಮತ್ತು7 ಪೋರ್ಚುಗೀಸ್ ಪ್ರಜೆಗಳು ಇದ್ದರು ಎನ್ನಲಾಗಿದೆ.