ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ದಿಢೀರ್ ತವರಿಗೆ ಮರಳಿದ ಕೋಚ್ ಗಂಭೀರ್
Coach Gautam Gambhir: ಟೆಸ್ಟ್ ಕ್ರಿಕೆಟ್ನಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಅವರ ನಿವೃತ್ತಿಯ ನಂತರ ಭಾರತದ ಮೊದಲ ಪ್ರವಾಸ ಇದಾಗಿದೆ. ಆದ್ದರಿಂದ, ಇದು ನೂತನ ನಾಯಕ ಶುಭಮನ್ ಗಿಲ್ ಮತ್ತು ಕೋಚ್ ಗಂಭೀರ್ಗೆ ಮಹತ್ವದ ಮತ್ತು ಸವಾಲಿನ ಸರಣಿಯಾಗಿದೆ.


ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್(Coach Gautam Gambhir) ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಕೌಟುಂಬಿಕ ತುರ್ತು ಪರಿಸ್ಥಿತಿಯಿಂದಾಗಿ ಭಾರತಕ್ಕೆ(Gambhir returns to India ) ಮರಳಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಜೂನ್ 20 ರಿಂದ ಆರಂಭವಾಗಲಿದೆ. ಗಂಭೀರ್ ಅವರ ತಾಯಿಗೆ ಹೃದಯಾಘಾತವಾದ ಕಾರಣ ಅವರು ದಿಢೀರ್ ತವರಿಗೆ ಮರಳಿದ್ದಾರೆ ಎಂದು ತಿಳಿದುಬಂದಿದೆ.
ಗೌತಮ್ ಅವರ ತಾಯಿ ಸೀಮಾ ಗಂಭೀರ್ ಜೂನ್ 11 ರಂದು ಹೃದಯಾಘಾತದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಆದ್ದರಿಂದ ಗಂಭೀರ್ ಪ್ರವಾಸವನ್ನು ಅರ್ಧದಲ್ಲೇ ಬಿಟ್ಟು ತವರಿಗೆ ಮರಳಿದ್ದಾರೆ. ಸದ್ಯ ಗಂಭೀರ್ ತಾಯಿ ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಲೀಡ್ಸ್ನ ಹೆಡಿಂಗ್ಲಿಯಲ್ಲಿ ನಡೆಯುವ ಮೊದಲ ಟೆಸ್ಟ್ಗೆ ಕೇವಲ ಮೂರು ದಿನಗಳ ಮೊದಲು, ಜೂನ್ 17 ರಂದು ಗಂಭೀರ್ ತಂಡವನ್ನು ಸೇರಲಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಒ ವೇಳೆಯೂ ಗಂಭೀರ್ ತಾಯಿಯ ಅಸೌಖ್ಯ ಕಾರಣ ದಿಢೀರ್ ಆಗಿ ತವರಿಗೆ ಮರಳಿದ್ದರು.
ಟೆಸ್ಟ್ ಕ್ರಿಕೆಟ್ನಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಅವರ ನಿವೃತ್ತಿಯ ನಂತರ ಭಾರತದ ಮೊದಲ ಪ್ರವಾಸ ಇದಾಗಿದೆ. ಆದ್ದರಿಂದ, ಇದು ನೂತನ ನಾಯಕ ಶುಭಮನ್ ಗಿಲ್ ಮತ್ತು ಕೋಚ್ ಗಂಭೀರ್ಗೆ ಮಹತ್ವದ ಮತ್ತು ಸವಾಲಿನ ಸರಣಿಯಾಗಿದೆ.
ಇದನ್ನೂ ಓದಿ IND vs ENG: ಮೊದಲನೇ ಟೆಸ್ಟ್ಗೆ ಭಾರತದ ಪ್ಲೇಯಿಂಗ್ XI ಆರಿಸಿದ ಸಂಜಯ್ ಬಾಂಗರ್!
ಮೊದಲ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ತಂಡವನ್ನು ಕಟ್ಟಿಕೊಳ್ಳುವ ಸಲುವಾಗಿ ಇಂದಿನಿಂದ(ಶುಕ್ರವಾರ) ಭಾರತ ಮತ್ತು ಭಾರತ ಎ ತಂಡಗಳ ನಡುವೆ ನಾಲ್ಕು ದಿನಗಳ ತಂಡದೊಳಗಿನ ಅಭ್ಯಾಸ ಪಂದ್ಯ ಆರಂಭಗೊಳ್ಳಲಿದೆ. ಎದುರಾಳಿ ತಂಡಕ್ಕೆ ಆಟದ ಕುರಿತು ಯಾವುದೇ ಸುಳಿವು ಸಿಗಬಾರದೆನ್ನುವ ಉದ್ದೇಶದಿಂದ ಈ ಪಂದ್ಯವನ್ನು ಮುಚ್ಚಿದ ಬಾಗಿಲುಗಳ ನಡುವೆ ನಡೆಸಲು ಮುಖ್ಯ ಕೋಚ್ ಗೌತಮ್ ಗಂಭೀರ್ ಬಯಸಿದ್ದಾರೆ. ಆದರೆ ಪಂದ್ಯಕ್ಕೂ ಮುನ್ನವೇ ಅವರು ತಾಯಿಯ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ ತವರಿಗೆ ಮರಳಿದ್ದಾರೆ.