ನಿದ್ರೆಯಲ್ಲಿದ್ದ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಕಿರಾತಕಿ ಪತ್ನಿ!
ಇಂದೋರ್ ಮೂಲದ ದಂಪತಿ ರಾಜಾ ರಘುವಂಶಿ ಹತ್ಯೆ ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೊಂದು ಅಂತಹದ್ದೇ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದಲ್ಲಿ ಮದುವೆಯಾಗಿ ಮೂರೇ ವಾರಗಳಲ್ಲಿ ಪತ್ನಿಯೇ ತನ್ನ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾಳೆ. ನಿದ್ರೆ ಮಾಡುತ್ತಿರುವ ವೇಳೆ ಕೊಡಲಿಯಿಂದ ಬಲವಾಗಿ ಹೊಡೆದ ಪರಿಣಾಮ ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮಹಾರಾಷ್ಟ್ರ ಅಪರಾಧ ಸುದ್ದಿ

ಮುಂಬೈ: ಕಳೆದ ಕೆಲವು ದಿನಗಳಿಂದ ಪತ್ನಿಯಿಂದ ಪತಿ ಕೊಲೆ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಇದೀಗ ಮಹಾರಾಷ್ಟ್ರದ ಸಂಗ್ಲಿ ಜಿಲ್ಲೆಯಲ್ಲಿ ಇಂತಹದ್ದೇ ಮತ್ತೊಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ. ಮದುವೆಯಾದ ಕೇವಲ ಮೂರು ವಾರಗಳಲ್ಲೇ ಪತ್ನಿ ನಿದ್ರಿಸುತ್ತಿದ್ದ ತನ್ನ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮಾಹಿತಿ ನೀಡಿರುವ ಪೋಲಿಸರು, "ದಂಪತಿ ಅನಿಲ್ ಲೋಖಂಡೆ ಮತ್ತು ರಾಧಿಕಾ ಲೋಖಂಡೆ ಅವರು ಮೇ 23ರಂದು ಮದುವೆಯಾಗಿದ್ದಾರೆ. ಜೂನ್ 10 ರಂದು ರಾತ್ರಿ ಇಬ್ಬರ ನಡುವೆ ಜಗಳ ಉಂಟಾಗಿತ್ತು. ಬಳಿಕ ಅನಿಲ್ ಮಧ್ಯರಾತ್ರಿಯ ವೇಳೆಗೆ ನಿದ್ರೆಗೆ ಜಾರಿದ್ದಾರೆ. ಜಗಳದಿಂದ ಆಕ್ರೋಶಕ್ಕೆ ಒಳಗಾಗಿದ್ದ ರಾಧಿಕಾ ಕೊಡಲಿಯಿಂದ ತನ್ನ ಪತಿಯ ತಲೆಗೆ ಬಲವಾಗಿ ಹೊಡೆದಿದ್ದಾರೆ. ಇದರ ಪರಿಣಾಮ ಅನಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ," ಎಂದು ಅವರು ಮಾಹಿತಿ ನೀಡಿದ್ದಾರೆ.
ಸ್ವಲ್ಪ ಸಮಯದ ನಂತರ, ಹಂತಕಿ ರಾಧಿಕಾ ಆತಂಕದಲ್ಲಿ ತನ್ನ ಸಂಬಂಧಿಯೊಬ್ಬರಿಗೆ ಕರೆಮಾಡಿ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ನಂತರ ಪೊಲೀಸರು ಆಕೆಯನ್ನು ಬುಧವಾರ ಬಂಧಿಸಿದ್ದು, ಪತಿಯ ಹತ್ಯೆ ಸಂಬಂಧ ಸೆಕ್ಷನ್ 103 (1) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಕುಟುಂಬದ ಕಲಹವೇ ಈ ಹತ್ಯೆಗೆ ಕಾರಣ ಎಂದು ಪೋಲಿಸರು ಹೇಳಿದ್ದಾರೆ.
Honeymoon Murder case: ರಾಜಾ ರಘುವಂಶಿ ಹತ್ಯೆ- ಪೊಲೀಸರಿಗೆ ಸುಳಿವು ಕೊಟ್ಟಿದ್ದು ಮಂಗಳಸೂತ್ರ
ಸಂಚಲನ ಮೂಡಿಸಿದ್ದ ರಾಜಾ ರಘುವಂಶಿಯ ಹತ್ಯೆ ಪ್ರಕರಣ
ಇಂದೋರ್ ಮೂಲದ ದಂಪತಿ ರಾಜಾ ರಘುವಂಶಿಯ ಹತ್ಯೆ ಇಡೀ ದೇಶದಲ್ಲೆ ಒಂದು ಸಂಚಲನ ಮೂಡಿಸಿತ್ತು. ಹಂತಕಿ ಸೋನಂ ಮಿಸ್ಟ್ರಿಯ ನಾಟಕ ದಿನೇ ದಿನೇ ಬಗೆದಷ್ಟು ಹೊರಬೀಳುತ್ತಿದೆ. ಮೇ 11ರಂದು ಮದುವೆಯಾದ ರಾಜಾ ಮತ್ತು ಸೋನಂ ಮೇ 20ರಂದು ಹನಿಮೂನ್ಗೆ ಮೆಘಾಲಯಕ್ಕೆ ತೆರಳಿದ್ದರು. ಆದರೆ, ಮೇ 23ರಂದು ಅವರು ನಾಪತ್ತೆಯಾಗಿದ್ದರು. ತದನಂತರ ಜೂನ್ 2ರಂದು ರಾಜಾ ಅವರ ಶವ ಪತ್ತೆಯಾಗಿತ್ತು. ಇದೀಗ ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದಿದ್ದು, ರಘುವಂಶಿಯ ತಲೆಗೆ ಬಲವಾಗಿ ಹೊಡೆತ ಬಿದ್ದಿದೆ ಎನ್ನಲಾಗಿದೆ.
ಜೂನ್ 7ರಂದು ಸೋನಂ ಅವರನ್ನು ಉತ್ತರಪ್ರದೇಶದ ಘಾಜೀಪುರದ ಡಾಬಾದಲ್ಲಿ ಪೋಲಿಸರು ವಶಕ್ಕೆ ಪಡೆದಿದ್ದರು. ಹಂತಕಿ ಸೋನಂ ಮತ್ತು ಅವಳ ಪ್ರೇಮಿ ರಾಜ್ ಕುಶ್ವಾಹಾ ಹಾಗೂ ಸಹಚರರಾದ ಆಕಾಶ್, ಆನಂದ್ ಹಾಗೂ ವಿಶಾಲ್ ಅವರನ್ನು ಜೂನ್ 10ರಂದು ಬಂಧಿಸಿ ಎಂಟು ದಿನಗಳ ಕಾಲ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.