Honeymoon Murder case: ರಾಜಾ ರಘುವಂಶಿ ಹತ್ಯೆ- ಪೊಲೀಸರಿಗೆ ಸುಳಿವು ಕೊಟ್ಟಿದ್ದು ಮಂಗಳಸೂತ್ರ
ಮದುವೆಯಾದ ಮೇಲೆ ಯಾವುದೇ ಹೆಣ್ಣು ಕುತ್ತಿಗೆಯಿಂದ ಮಂಗಳಸೂತ್ರವನ್ನು ತೆಗೆಯುವುದಿಲ್ಲ. ಪರಿಸ್ಥಿತಿ ಹೇಗೆ ಇರಲಿ ಮಂಗಳಸೂತ್ರಕ್ಕೆ ಅವಳು ಅತ್ಯಂತ ಗೌರವವನ್ನು ಕೊಡುತ್ತಾಳೆ. ಒಂದು ವೇಳೆ ಅವಳು ಗಂಡ ಬದುಕಿದ್ದಾಗಲೇ ಮಂಗಳಸೂತ್ರವನ್ನು ತೆಗೆಯಬೇಕೆಂದು ನಿರ್ಧರಿಸಿದರೆ ಅದು ಅವಳಿಗೆ ತುಂಬಾ ಕಷ್ಟವನ್ನು ಕೊಟ್ಟಿರುತ್ತದೆ ಎಂದೇ ಅರ್ಥ. ರಾಜಾ ರಘುವಂಶಿ ಹತ್ಯೆ ನಡೆದ ಬಳಿಕ ಪೊಲೀಸರಿಗೆ ಸೋನಮ್ ಮಂಗಳಸೂತ್ರ ದೊರಕಿತ್ತು. ಇದು ಅವರಿಗೆ ಯಾವ ದಿಕ್ಕಿನಲ್ಲಿ ಪ್ರಕರಣದ ತನಿಖೆ ನಡೆಸಬೇಕು ಎನ್ನುವ ದಾರಿಯನ್ನು ತೋರಿಸಿತ್ತು.


ಇಂದೋರ್: ಮದುವೆಯಾದ ಒಂದು ವರ್ಷದವರೆಗೆ ಯಾವುದೇ ಹೆಣ್ಣು ಮಗಳು ಕುತ್ತಿಗೆಯಿಂದ ಮಂಗಳ ಸೂತ್ರವನ್ನು ತೆಗೆಯುವುದಿಲ್ಲ. ಆ ಬಳಿಕ ಕೆಲವೊಂದು ವಿಧಿವಿಧಾನಗಳನ್ನು ಪೂರೈಸಿ ತಮಗಿಷ್ಟವಾದ ಸಣ್ಣ ಮಂಗಳಸೂತ್ರವನ್ನು ಮಾಡಿ ಹಾಕಿಕೊಳ್ಳುವ ನಿಯಮಗಳು ಕೆಲವೆಡೆ ಇವೆ. ತಮ್ಮಲ್ಲಿ ಎಷ್ಟೇ ಆಭರಣಗಳಿರಲಿ ಹೆಣ್ಣು ಮಕ್ಕಳು ಮಂಗಳಸೂತ್ರಕ್ಕೆ ಹೆಚ್ಚಿನ ಗೌರವವನ್ನು ಕೊಡುತ್ತಾರೆ. ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ಅದನ್ನು ಅವರು ಬಿಚ್ಚಿಡಲು ಮುಂದಾಗುವುದಿಲ್ಲ. ಒಂದು ವೇಳೆ ಗಂಡ ಬದುಕಿದ್ದಾಗಲೇ ಅವಳು ಮಂಗಳಸೂತ್ರವನ್ನು ಬಿಚ್ಚಿಡುವ ನಿರ್ಧಾರ ಮಾಡಿದಳು ಎಂದರೆ ಅದು ಅವಳಿಗೆ ತುಂಬಾ ಕಷ್ಟವನ್ನು ಕೊಟ್ಟಿರುತ್ತದೆ ಎಂದೇ ಅರ್ಥ. ರಾಜಾ ರಘುವಂಶಿ ಹತ್ಯೆ ಪ್ರಕರಣದಲ್ಲೂ (Raja Raghuvanshi murder case) ಆಗಿರುವುದು ಇದೆ. ಪ್ರೀತಿಯ ಮುಂದೆ ಸೋತಿದ್ದ ಸೋನಂ (sonam) ಮಂಗಳಸೂತ್ರದ ಭಾರವನ್ನು ಹೊರಲಾಗಲಿಲ್ಲ. ಹೀಗಾಗಿ ತನಿಖೆ (Honeymoon Murder case) ವೇಳೆ ಪೊಲೀಸರಿಗೆ ಮಹತ್ವದ ಸುಳಿವನ್ನು ಮಂಗಳಸೂತ್ರ ನೀಡಿತ್ತು.
ಇಂದೋರ್ ದಂಪತಿ ರಾಜಾ ರಘುವಂಶಿ ಮತ್ತು ಸೋನಂ ರಘುವಂಶಿಯ ನಾಪತ್ತೆ ಪ್ರಕರಣದ ತನಿಖೆ ವೇಳೆ ಮೇಘಾಲಯ ಪೊಲೀಸರು ಅವರು ತಂಗಿದ್ದ ಹೋಂಸ್ಟೇಯ ಕೊಠಡಿಯ ಶೋಧಿಸುತ್ತಿದ್ದರು. ಈ ವೇಳೆ ಅವರಿಗೆ ಸೋನಮ್ ಮಂಗಳಸೂತ್ರ ಮತ್ತು ರಾಜಾ ರಘುವಂಶಿ ತೊಡಿಸಿದ್ದ ಉಂಗುರ ಸಿಕ್ಕಿತ್ತು. ಇದು ಅವರಿಗೆ ಪ್ರಕರಣವನ್ನು ಯಾವ ದಿಕ್ಕಿನಲ್ಲಿ ತನಿಖೆ ನಡೆಸಬೇಕು ಎನ್ನುವ ಕುರಿತು ಮಹತ್ವದ ಸುಳಿವು ನೀಡಿತ್ತು.
ರಾಜಾ ರಘುವಂಶಿ ಜೊತೆ ಹೊರಗೆ ತಿರುಗಾಡಲು ಹೋಗುವಾಗ ಸೋನಮ್ ಮಂಗಳಸೂತ್ರವನ್ನು ಹೋಮ್ ಸ್ಟೇಯಲ್ಲಿ ಬಿಟ್ಟು ಹೋಗಿದ್ದರು ಎಂದು ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಡಿಎನ್ಆರ್ ಮಾರಕ್ ತಿಳಿಸಿದ್ದಾರೆ.
ತನಿಖೆ ವೇಳೆ ನಮಗೆ ಸೋನಮ್ ಅವರ ಮಂಗಳಸೂತ್ರ ಮತ್ತು ಸೂಟ್ಕೇಸ್ನಲ್ಲಿ ಉಂಗುರ ಸಿಕ್ಕಿತ್ತು. ಇದು ನಮಗೆ ಮೊದಲ ಬಾರಿಗೆ ಸೋನಮ್ ಮೇಲೆಯೇ ಅನುಮಾನ ಪಡುವಂತೆ ಮಾಡಿತ್ತು. ಇತ್ತೀಚೆಗೆ ಮದುವೆಯಾದ ಮಹಿಳೆ ಮಂಗಳಸೂತ್ರವನ್ನು ಏಕೆ ಸೂಟ್ಕೇಸ್ನಲ್ಲಿ ಬಿಡುತ್ತಾರೆ ಎಂದು ಶಂಕಿಸಿ ಪ್ರಕರಣವನ್ನು ಈ ದಿಕ್ಕಿನಲ್ಲಿ ಪರಿಶೀಲನೆ ಮಾಡಲು ಪ್ರೇರೇಪಣೆ ನೀಡಿತು ಎಂದು ಮಾರಕ್ ಹೇಳಿದ್ದಾರೆ. .
ಸೋನಂಳ ಪತಿ ರಾಜಾ ರಘುವಂಶಿ ಹತ್ಯೆಗೆ ಆಕೆಯ ಪ್ರಿಯಕರ ರಾಜ್ ಕುಶ್ವಾಹ ಸಹಾಯ ಮಾಡಿರುವುದು ದೃಢಪಟ್ಟಿದೆ. ಇವರಿಬ್ಬರು ಮೂವರು ಗುತ್ತಿಗೆ ಹಂತಕರನ್ನು ನೇಮಿಸಿಕೊಂಡಿದ್ದಾರೆ. ರಘುವಂಶಿ ದಂಪತಿ ಹನಿಮೂನ್ಗೆ ಹೋದಾಗ ರಾಜಾ ರಘುವಂಶಿ ಅವರನ್ನು ಕೊಲೆ ಮಾಡುವ ಯೋಜನೆಯನ್ನು ಮೊದಲೇ ಮಾಡಿಕೊಂಡಿದ್ದರು ಎಂದು ಅವರು ಹೇಳಿದರು.
ನಾವು ಬಹಳ ಕೂಲಂಕಷವಾಗಿ ತನಿಖೆ ನಡೆಸಿದ್ದೇವೆ. ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಮೇ 23ರಂದು ಹಂತಕರು ನೊಂಗ್ರಿಯಾತ್ ಗ್ರಾಮದ ಮತ್ತೊಂದು ಹೋಂಸ್ಟೇಯಲ್ಲಿ ಇದ್ದರು. ಕೆಲವು ಸುಂದರವಾದ ಫೋಟೋಗಳನ್ನು ತೆಗೆದುಕೊಳ್ಳುವ ನೆಪದಲ್ಲಿ ಸೋನಮ್ ತನ್ನ ಪತಿ ರಾಜಾ ಅವರೊಂದಿಗೆ ಸ್ಕೂಟರ್ ನಲ್ಲಿ ಹೋಂಸ್ಟೇಯಿಂದ ಹೊರಗೆ ಹೋಗಿದ್ದಾರೆ. ಈ ವೇಳೆ ಹಂತಕರು ಎರಡು ಸ್ಕೂಟಿಗಳಲ್ಲಿ ಅವರನ್ನು ಹಿಂಬಾಲಿಸಿದ್ದರು. ನಿರ್ಜನ ಸ್ಥಳದಲ್ಲಿ ಸೋನಮ್ ಗಂಡನಿಗೆ ಸ್ಕೂಟಿಯನ್ನು ನಿಲ್ಲಿಸಲು ಹೇಳಿ ತಾನು ಫೋಟೋಗಳನ್ನು ಕ್ಲಿಕ್ಕಿಸುವಂತೆ ನಟಿಸುತ್ತಾ ಮುಂದೆ ನಡೆಯುತ್ತಿದ್ದಳು. ಈ ವೇಳೆ ಗುತ್ತಿಗೆ ಹಂತಕರು ಹಿಂದಿನಿಂದ ಬಂದು ರಾಜಾ ಅವರನ್ನು ಕೊಂದಿದ್ದರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸೋನಮ್ ಒಬ್ಬ ಗುತ್ತಿಗೆ ಹಂತಕನೊಂದಿಗೆ ಸ್ಕೂಟಿಯಲ್ಲಿ ಕುಳಿತು ಇತರ ಇಬ್ಬರು ಹಂತಕರಲ್ಲಿ ಒಬ್ಬ ಇನ್ನೊಂದು ಸ್ಕೂಟಿಯನ್ನು ಅಲ್ಲಿಂದ ತೆಗೆದುಕೊಂಡು ಹೋಗಿದ್ದಾರೆ. ಅವರೆಲ್ಲ ಸೇರಿ ರಾಜಾ ಅವರ ಶವವನ್ನು ಮೌಲಖಿಯಾತ್ ಎಂಬ ಸ್ಥಳದಲ್ಲಿ ಕಮರಿಗೆ ಎಸೆದಿದ್ದಾರೆ. ಇದಕ್ಕೆ ಸೋನಮ್ ಕೂಡ ಸಹಾಯ ಮಾಡಿದ್ದಾಳೆ ಎಂದು ಮಾರಕ್ ಹೇಳಿದರು.
ರಾಜಾ ಮತ್ತು ಸೋನಮ್ ಬಳಿ ತಲಾ ಎರಡು ಮೊಬೈಲ್ ಫೋನ್ಗಳಿದ್ದು, ಅವುಗಳಲ್ಲಿ ಒಂದನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ. ಕೊಲೆಯ ಹಿಂದಿನ ಉದ್ದೇಶದ ಕುರಿತು ವಿಸ್ತೃತ ತನಿಖೆ ನಡೆಯುತ್ತಿದೆ ಮತ್ತು ಸಂಪೂರ್ಣ ವಿವರಗಳು ಬಳಿಕ ಹೊರಬರಲಿದೆ ಎಂದು ಅವರು ಹೇಳಿದರು.
ಸೆಕೆಂಡ್ ಪಿಯುಸಿ ಮುಗಿಸಿದ್ದ ರಾಜ್ ಕುಶ್ವಾಹ ಇಂದೋರ್ನಲ್ಲಿ ಸೋನಮ್ ಕುಟುಂಬದ ಒಡೆತನದಲ್ಲಿರುವ ಪೀಠೋಪಕರಣ ಹಾಳೆ ಘಟಕದಲ್ಲಿ ಅಕೌಂಟೆಂಟ್ ಆಗಿದ್ದನು. ಸೋನಮ್ ಮತ್ತು ರಾಜ್ ಕುಶ್ವಾಹ ನಡುವಿನ ಸಂಬಂಧದ ಬಗ್ಗೆ ಸೋನಮ್ ಕುಟುಂಬಕ್ಕೆ ತಿಳಿದಿರಬಹುದು ಎಂದು ರಾಜಾ ರಘುವಂಶಿ ತಾಯಿ ಉಮಾ ರಘುವಂಶಿ ಹೇಳಿರುವುದಾಗಿ ಮಾರಕ್ ತಿಳಿಸಿದರು.
ಸೋನಮ್ ತಾಯಿಗೂ ರಾಜ್ ಕುಶ್ವಾಹ ಬಗ್ಗೆ ತಿಳಿದಿರಬೇಕು. ಯಾಕೆಂದರೆ ಒಂದು ದಿನ ಸೋನಮ್ ಉಪವಾಸ ಇದ್ದಾಗ ನಾನು ಅವರ ಮನೆಗೆ ಕರೆಮಾಡಿದ್ದೆ. ಆಗ ನಾನು ಮಾತನಾಡಿದ್ದು ರಾಜ್ ಕುಶ್ವಾಹ ಜೊತೆ. ಆದರೆ ಆತನೇ ಮುಂದೆ ನನ್ನ ಮಗನ ಕೊಲೆ ಮಾಡುತ್ತಾನೆ ಎನ್ನುವ ಕಲ್ಪನೆಯು ನನಗಿರಲಿಲ್ಲ ಎಂದು ಅವರು ಹೇಳಿದ್ದಾರೆ ಎಂದರು.
ರಾಜ್ ಕುಶ್ವಾಹ ಅವರ ತಾಯಿ ಚುನ್ನಿ ದೇವಿಯು ತಮ್ಮ ಮಗನಿಗೆ ಸೋನಮ್ ಜೊತೆ ಯಾವುದೇ ಸಂಬಂಧವಿರಲಿಲ್ಲ ಎಂದು ಹೇಳಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.