Road Accident: ಬೆಂಗಳೂರು, ಬೆಳಗಾವಿಯಲ್ಲಿ ಭೀಕರ ಅಪಘಾತ; ನಾಲ್ವರು ಸಾವು
Road Accident: ಬೆಂಗಳೂರು ಹಾಗೂ ಬೆಳಗಾವಿಗಳಲ್ಲಿ ಸಂಭವಿಸಿರುವ ಎರಡು ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಎರಡೂ ಕಡೆಗಳಲ್ಲೂ ಬೈಕ್ಗಳಿಗೆ ಲಾರಿಗಳು ಗುದ್ದಿದ್ದು, ಬೈಕ್ ಸವಾರಿ ಮಾಡುತ್ತಿದ್ದವರು ಸಾವಿಗೀಡಾಗಿದ್ದಾರೆ. ಲಾರಿ ಚಾಲಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು/ಬೆಳಗಾವಿ : ಬೆಂಗಳೂರು (Bengaluru) ಹಾಗೂ ಬೆಳಗಾವಿಯಲ್ಲಿ (Belagavi) ಇಂದು ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನ ನೆಲಮಂಗಲದ ಕುಣಿಗಲ್ ಬೈಪಾಸ್ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬೈಕ್ಗೆ ಲಾರಿ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಶ್ರೀರಾಂಪುರದ ಪ್ರಜ್ವಲ್ (22) ಹಾಗೂ ಸಹನಾ (21) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.
ಕುಣಿಗಲ್ನಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಲಾರಿ ಚಾಲಕ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಈ ಅಪಘಾತಕ್ಕೆ ಕಾರಣನಾಗಿದ್ದಾನೆ ಎಂದು ಹೇಳಲಾಗಿದೆ. ಲಾರಿಯನ್ನು ಜಪ್ತಿ ಮಾಡಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನೆಲಮಂಗಲದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿಯಲ್ಲಿ ಬೈಕ್ಗೆ ಲಾರಿ ಡಿಕ್ಕಿ, ಇಬ್ಬರು ಸಾವು
ಬೆಳಗಾವಿ : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಬಳಿ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ನಿನ್ನೆ ಭೀಕರವಾದ ಅಪಘಾತ ಸಂಭವಿಸಿದ್ದು, ಬೈಕ್ ಹಾಗೂ ಲಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಟ್ಟಣದ ಕಜ್ಜಾಳ ಮಡ್ಡಿಯ ಶ್ರೀಶೈಲ ಹಾದಿಮನಿ(34), ತಾಲ್ಲೂಕಿನ ರಂಗಾಪುರ ಗ್ರಾಮದ ಸುರೇಶ ಮಾರಾಪುರ(32) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮೂಡಲಗಿ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.
ಸಿದ್ಧಗಂಗಾ ಮಠದ ಬಳಿ ಮಹಿಳೆಗೆ ʼಎಕ್ಕʼ ಚಿತ್ರತಂಡದ ಕಾರು ಡಿಕ್ಕಿ
ತುಮಕೂರು: ನಗರದ ಸಿದ್ಧಗಂಗಾ ಮಠಕ್ಕೆ ಯುವ ರಾಜ್ಕುಮಾರ್ (Yuva Rajkumar) ನಟನೆಯ ಎಕ್ಕ ಚಿತ್ರತಂಡ (Ekka Movie) ಭೇಟಿ ನೀಡಿದ್ದ ವೇಳೆ ಎಡವಟ್ಟು ನಡೆದಿದ್ದು, ನಟನ ಬೌನ್ಸರ್ಗಳು ಇದ್ದ ಕಾರು ಮಹಿಳೆಯೊಬ್ಬರಿಗೆ ಡಿಕ್ಕಿಯಾದ ಪರಿಣಾಮ ಆಕೆಯ ಕಾಲಿಗೆ ಗಂಭೀರವಾಗಿ ಗಾಯವಾಗಿದೆ. ಹೀಗಿದ್ದರೂ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸದೇ ಅಮಾನವೀಯ ವರ್ತನೆ ತೋರಿರುವ ಆರೋಪ ಕೇಳಿ ಬಂದಿದೆ.
ಎಕ್ಕ ಚಿತ್ರತಂಡವು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ಅಪಘಾತ ನಡೆದಿದೆ. ಬೌನ್ಸರ್ ಕಾರು ರಸ್ತೆ ಬದಿಯಿದ್ದ ಮಹಿಳೆಯೊಬ್ಬರಿಗೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಮಹಿಳೆಯ ಕಾಲಿಗೆ ಗಂಭೀರ ಪೆಟ್ಟಾಗಿದೆ. ಇದರಿಂದ ಮಹಿಳೆ ನರಳಾಡುತ್ತ ಆಸ್ಪತ್ರೆಗೆ ಸೇರಿಸುವಂತೆ ಕೋರಿದರೂ ಗಮನಸದೇ ಎಕ್ಕ ಚಿತ್ರತಂಡ ಸ್ಥಳದಿಂದ ತೆರಳಿದೆ. ಚಿತ್ರತಂಡದ ಜತೆ ನಟ ಯುವರಾಜ್ ಕುಮಾರ್ ಸಹ ಇದ್ದರು ಎಂದು ತಿಳಿದುಬಂದಿದೆ.
ಸಿದ್ಧಗಂಗಾ ಮಠದ ಶಾಲೆಗೆ ಮಗುವನ್ನು ಬಿಟ್ಟು ಹೋಗಲು ಮಹಿಳೆ ಬಂದಿದ್ದರು. ವಾಪಸ್ ತೆರಳುತ್ತಿದ್ದ ವೇಳೆ ಎಕ್ಕ ಚಿತ್ರತಂಡ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲೇ ಬೌನ್ಸರ್ ಕಾರು ಮಹಿಳೆಗೆ ಡಿಕ್ಕಿಯಾಗಿದೆ. ಈ ವೇಳೆ ಬಳ್ಳಾರಿ ಮೂಲದ ಲಿಂಗಮ್ಮ ಎಂಬುವರ ಕಾಲಿಗೆ ಪೆಟ್ಟು ಬಿದ್ದಿದ್ದು, ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ವರ್ಷದ ಹಿಂದೆ ವಿಮಾನ ದುರಂತದಲ್ಲಿ ಮಗ ಸಾವು; ಈಗ ಏರ್ ಇಂಡಿಯಾ ಅಪಘಾತದಲ್ಲಿ ತಂದೆ-ತಾಯಿ ಬಲಿ