Rain News: ತಂದೆಯ ಬರ್ತ್ಡೇಗೆ ಮಟನ್ ತರಲು ಹೋದವನ ತಲೆ ಮೇಲೆ ಬಿದ್ದ ಮರದ ಕೊಂಬೆ, ಯುವಕ ಚಿಂತಾಜನಕ
Rain News: ತಂದೆಯ ಬರ್ತ್ಡೇ ಖುಷಿಯಲ್ಲಿದ್ದ ಯುವಕ ಮರದ ಕೊಂಬೆ ಬಿದ್ದು ಗಾಯಗೊಂಡು ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸ್ ಠಾಣೆಯಿಂದ ತನಿಖೆ ಆರಂಭವಾಗಿದೆ.

ಗಾಯಾಳು ಅಕ್ಷಯ್

ಬೆಂಗಳೂರು: ರಾಜ್ಯದ ಹಲವೆಡೆ ಮಳೆ (Rain news) ಅಬ್ಬರಿಸಿದ್ದು, ಹಲವೆಡೆ ಅನಾಹುತ ಸೃಷ್ಟಿಸಿದೆ. ಬೆಂಗಳೂರಿನ ಬನಶಂಕರಿ ಬ್ರಹ್ಮ ಚೈತನ್ಯ ಮಂದಿರದ ಬಳಿ ಭಾನುವಾರ ಒಣಗಿದ ಮರದ ಕೊಂಬೆ (Tree branch) ಬಿದ್ದು ದ್ವಿಚಕ್ರ ವಾಹನ ಸವಾರನೊಬ್ಬ ಗಂಭೀರವಾಗಿ (injured) ಗಾಯಗೊಂಡಿದ್ದಾನೆ. ತಂದೆಯ ಬರ್ತ್ಡೇ ಆಚರಣೆಗೆ ಮಟನ್ ತರಲೆಂದು ಬಂದ ಅಕ್ಷಯ್ ಎಂಬಾತನ ಮೇಲೆ ಕೊಂಬೆ ಬಿದ್ದಿದೆ. ಅಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಚಿಂತಾಜನಕ ಪರಿಸ್ಥಿತಿಯಲ್ಲಿದ್ದಾನೆ.
ಗಾಯಗೊಂಡ ಯುವಕ ಶ್ರೀನಗರದ ನಿವಾಸಿಯಾಗಿದ್ದು, ಈತನ ಹೆಸರು ಅಕ್ಷಯ್ ಎಂದು ಗುರುತಿಸಲಾಗಿದೆ. ಯುವಕನನ್ನು ಸ್ಥಳೀಯರು ತಕ್ಷಣ ಪ್ರಶಾಂತ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವರದಿಗಳ ಪ್ರಕಾರ, ಯುವಕ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸ್ ಠಾಣೆಯಿಂದ ತನಿಖೆ ಆರಂಭವಾಗಿದೆ.
ಅಕ್ಷಯ್ನ ಚಿಕಿತ್ಸೆಗೆ ಈಗಾಗಲೇ ಕುಟುಂಬ 1.5 ಲಕ್ಷ ರೂಪಾಯಿಗಳನ್ನು ಆಸ್ಪತ್ರೆಗೆ ಕಟ್ಟಿದೆ. ಆದರೆ, ಇನ್ನೂ ಸುಮಾರು ಒಂದು ಲಕ್ಷ ರೂಪಾಯಿಗಳನ್ನು ಕಟ್ಟಲು ಕುಟುಂಬಸ್ಥರು ಆರ್ಥಿಕವಾಗಿ ಪರದಾಡುತ್ತಿದ್ದಾರೆ. ಚಿಕಿತ್ಸೆ ಮುಂದುವರಿಸಲು ಸಾಕಷ್ಟು ತೊಂದರೆಯನ್ನು ಎದುರಿಸುತ್ತಿರುವ ಕುಟುಂಬ, ಆರ್ಥಿಕ ನೆರವಿಗಾಗಿ ಕಾಯುತ್ತಿದೆ. ಬಿಬಿಎಂಪಿ ಅರಣ್ಯಾಧಿಕಾರಿ ರಂಗನಾಥ್ ಸ್ವಾಮಿ ಹೇಳಿಕೆಯಲ್ಲಿ, "ಅಕ್ಷಯ್ನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ. ಗಾಳಿಯ ಪ್ರಭಾವದಿಂದ ಮರದ ಕೊಂಬೆ ಬಿದ್ದು ಈ ಅವಘಡ ಸಂಭವಿಸಿದೆ. ಸದ್ಯ ವೈದ್ಯರು ಸರ್ಜರಿ ನಡೆಸುತ್ತಿದ್ದಾರೆ," ಎಂದು ತಿಳಿಸಿದ್ದಾರೆ.
ಈ ಘಟನೆಗೆ ಬಿಬಿಎಂಪಿಯ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ನಡೆದ ಬಳಿಕ ಯಾವುದೇ ಬಿಬಿಎಂಪಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿರಲಿಲ್ಲ. ಭಾನುವಾರ ರಜೆಯ ಮಜದಲ್ಲಿದ್ದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಗೆ, ಬಿಬಿಎಂಪಿ ಅರಣ್ಯಾಧಿಕಾರಿ ರಂಗನಾಥ್ ಸ್ವಾಮಿ ಜಯನಗರದ ಆಸ್ಪತ್ರೆಗೆ ಭೇಟಿ ನೀಡಿ, ಅಕ್ಷಯ್ನ ಆರೋಗ್ಯವನ್ನು ವಿಚಾರಿಸಿದ್ದಾರೆ.
ಸ್ಥಳೀಯರಿಂದ ಬಿಬಿಎಂಪಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮರಗಳ ಸುರಕ್ಷಿತ ನಿರ್ವಹಣೆಯಲ್ಲಿ ಬಿಬಿಎಂಪಿಯ ವೈಫಲ್ಯವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಅಕ್ಷಯ್ನ ಅಜ್ಜಿ ಸಾವಿತ್ರಮ್ಮ, ಬಿಬಿಎಂಪಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. "ಅಕ್ಷಯ್ ಕೆಲಸಕ್ಕೆ ಹೋಗುವ ತನಕ ನೀವು ನಮ್ಮ ಜೊತೆಗಿರಬೇಕು. ಮಧ್ಯದಲ್ಲಿ ಕೈ ಬಿಟ್ಟರೆ ನಾವು ಸುಮ್ಮನಿರೋದಿಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Karnataka Weather: ಹವಾಮಾನ ವರದಿ; ಇಂದು ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಭರ್ಜರಿ ಮಳೆ!