ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Stampede: ಕಾರ್ಯಕ್ರಮ ಆಯೋಜಿಸಿದವರು ನಾವಲ್ಲ: ಆರ್‌ಸಿಬಿ ಮತ್ತು ಕೆಎಸ್‌ಸಿಎ: ಗೃಹ ಸಚಿವ ಪರಮೇಶ್ವರ್

Bengaluru Stampede: "ಆರ್‌ಸಿಬಿ ಮತ್ತು ಕ್ರಿಕೆಟ್ ಸಂಘ ಈ ಸಮಾರಂಭವನ್ನು ಬಯಸಿದ್ದವು. ನಾವು ಅದು ಸುಗಮವಾಗುವಂತೆ ಅನುಮತಿ ನೀಡಿದ್ದೆವು. ‌ಅವರೇ ತಂಡವನ್ನು ಬೆಂಗಳೂರಿಗೆ ಕರೆತಂದವರು. ಸರಕಾರ ಕೂಡ ಇದನ್ನು ಸುಗಮಗೊಳಿಸಬೇಕೆಂದು ಭಾವಿಸಿತು. ಸರಕಾರವಾಗಿ ನಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ ಮಾತ್ರ" ಎಂದು ಗೃಹ ಸಚಿವರು ಹೇಳಿದ್ದಾರೆ.

ಕಾರ್ಯಕ್ರಮ ಆಯೋಜಿಸಿದವರು ಆರ್‌ಸಿಬಿ ಮತ್ತು ಕೆಎಸ್‌ಸಿಎ: ಸಚಿವ ಪರಮೇಶ್ವರ್

ಹರೀಶ್‌ ಕೇರ ಹರೀಶ್‌ ಕೇರ Jun 5, 2025 11:45 AM

ಬೆಂಗಳೂರು: ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ನಡೆದ ಭೀಕರ ಕಾಲ್ತುಳಿತದ (Bengaluru Stampede) ಹೊಣೆಗಾರಿಕೆಯನ್ನು ಒಬ್ಬರ ಹೆಗಲಿನಿಂದ ಇನ್ನೊಬ್ಬರ ಹೆಗಲಿಗೆ ಜಾರಿಸುವ ಕೆಲಸ ಜೋರಾಗಿದೆ. ಇದೀಗ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮ ಆಯೋಜಿಸಿದವರು ನಾವಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ (Home Minister G Parameshwara) ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (KSCA) ಈ ಕಾರ್ಯಕ್ರಮವನ್ನು ನಡೆಸಲು ಬಯಸಿದ್ದವು. ಸರಕಾರ ಅದಕ್ಕೆ ಅನುಮತಿ ನೀಡಿತ್ತಷ್ಟೇ ಎಂದು ಪರಮೇಶ್ವರ ಹೇಳಿದ್ದಾರೆ.

"ಘಟನೆಯ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಈಗಾಗಲೇ ಹೇಳಿದ್ದಾರೆ. ಅದರ ವರದಿ ಬಂದ ಬಳಿಕ ಈ ಘಟನೆಗೆ ಯಾರು ಹೊಣೆಗಾರರೋ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ ಪರಮೇಶ್ವರ್. "ಈ ಘಟನೆ ನಡೆದಿದ್ದಕ್ಕೆ ನನಗೆ ತುಂಬಾ ವಿಷಾದವಿದೆ. ಮೃತ ದೇಹಗಳನ್ನು ನೋಡಿ ನನಗೆ ತುಂಬಾ ದುಃಖವಾಯಿತು. ಅವರಲ್ಲಿ ಹೆಚ್ಚಿನವರು ಯುವಕರು. ಇಂಥ ದುರಂತ ಯಾರೂ ಊಹಿಸಿರಲಿಲ್ಲ. ನಾವು ಎಲ್ಲಿ ಲೋಪಗಳು ಸಂಭವಿಸಿದೆ ಎಂಬುದನ್ನು ಕಂಡುಹಿಡಿಯುತ್ತೇವೆ ಮತ್ತು ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ಅವರು ನುಡಿದರು.

"ಆರ್‌ಸಿಬಿ ಮತ್ತು ಕ್ರಿಕೆಟ್ ಸಂಘ (ಕೆಎಸ್‌ಸಿಎ) ಈ ಸಮಾರಂಭವನ್ನು ಬಯಸಿದ್ದವು. ನಾವು ಅದು ಸುಗಮವಾಗುವಂತೆ ಅನುಮತಿ ನೀಡಿದ್ದೆವು. ‌ಅವರೇ ತಂಡವನ್ನು ಬೆಂಗಳೂರಿಗೆ ಕರೆತಂದವರು. ಸರಕಾರ ಕೂಡ ಇದನ್ನು ಸುಗಮಗೊಳಿಸಬೇಕೆಂದು ಭಾವಿಸಿತು. ಏಕೆಂದರೆ ಅದು ಬೆಂಗಳೂರು ತಂಡ. ಸರಕಾರವಾಗಿ ನಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ ಮಾತ್ರ" ಎಂದಿದ್ದಾರೆ.

ಆರ್‌ಸಿಬಿ- ಕೆಎಸ್‌ಸಿಎಯಿಂದ ಪರಿಹಾರ

ಗೃಹ ಸಚಿವರ ಮಾತುಗಳಿಗೆ ಆರ್‌ಸಿಬಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಇದಕ್ಕೂ ಮುನ್ನ ದುರ್ಘಟನೆ ಬಗ್ಗೆ ಆರ್‌ಸಿಬಿ-ಕೆಎಸ್‌ಸಿಎ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ದುರ್ಘಟನೆಗೆ ತೀವ್ರ ಸಂತಾಪ ಸೂಚಿಸಿವೆ. ಈ ದುಃಖದ ಸಂದರ್ಭದಲ್ಲಿ ನಾವು ಮೃತರ ಕುಟುಂಬಗಳೊಂದಿಗೆ ಇರುತ್ತೇವೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿವೆ. ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟ 11 ಮಂದಿಯ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 10 ಲಕ್ಷ ಪರಿಹಾರ ಘೋಷಿಸಿತ್ತು. ಇದೀಗ ಆರ್‌ಸಿಬಿ ಪ್ರಾಂಚೈಸಿ ಹಾಗೂ ಕೆಎಸ್‌ಸಿಎ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದೆ.

ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸಿದ ಹೈಕೋರ್ಟ್‌

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದೆ. ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದ್ದು, ಇಂದು ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತಾ ಲೋಪವಾಗಿದೆ, ಹಲವರ ಸಾವು-ನೋವು ಸಂಭವಿಸಿದೆ. ಘಟನೆ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ ನೀಡಿದೆ.

ಇದನ್ನೂ ಓದಿ: Bengaluru Stampede: ಆರ್‌ಸಿಬಿ ಪೆರೇಡ್ ಕಾಲ್ತುಳಿತಕ್ಕೆ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್‌ ಸಂತಾಪ