ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಕೈ ಶಾಸಕರಿಗೆ ಲಗಾಮು ಹಾಕೋದ್ಯಾರು ?

ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಆಡಳಿತ ಪಕ್ಷದ ಎಲ್ಲ ಶಾಸಕರು, ನಾಯಕರು ತೃಪ್ತರಾಗಿರು ತ್ತಾರೆ ಎನ್ನುವುದು ಸುಳ್ಳು. ಆದರೆ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕುವ ಬದಲಿಗೆ, ಪಕ್ಷದ ವೇದಿಕೆಯಲ್ಲಿಯೇ ತಮ್ಮ ಅತೃಪ್ತಿಯನ್ನು ಹೊರ ಹಾಕುವುದು ಸಾಮಾನ್ಯ. ಅದಕ್ಕೆ ಪೂರಕವಾಗಿ ತಮ್ಮದೇ ಸರಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡಬಾರದು ಎನ್ನುವ ‘ಅಲಿಖಿತ’ ನಿಯಮವೂ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಬಂದಾಗಿದೆ.

ಕೈ ಶಾಸಕರಿಗೆ ಲಗಾಮು ಹಾಕೋದ್ಯಾರು ?

ಅಶ್ವತ್ಥಕಟ್ಟೆ

ranjith.hoskere@gmail.com

ಆಡಳಿತದಲ್ಲಿರುವ ಯಾವುದೇ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಬರುವುದು ಸಹಜ. ಅದನ್ನು ರಾಜಕೀಯವಾಗಿ ಎದುರಿಸುವುದಕ್ಕೆ ಎಲ್ಲ ಪಕ್ಷಗಳೂ ತಮ್ಮದೇ ಆದ ತಂತ್ರಗಾರಿಕೆಯನ್ನು ಹೊಂದಿರುತ್ತವೆ. ಪ್ರತಿಪಕ್ಷ ಸ್ಥಾನದಲ್ಲಿ ಕೂತಿರುವ ಪಕ್ಷ ಅಥವಾ ನಾಯಕರ ಕೆಲಸವೇ ಆಡಳಿತ ಪಕ್ಷದ ವಿರುದ್ಧದ ನಿರಂತರ ಆರೋಪದ ಮೂಲಕ ಜನಾಭಿಪ್ರಾಯ ಮೂಡಿಸುವುದಾಗಿರುತ್ತದೆ.

ಸಾಮಾನ್ಯವಾಗಿ ಪ್ರತಿಪಕ್ಷಗಳು ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವುದಕ್ಕೆ, ಮುಜುಗರಕ್ಕೀಡು ಮಾಡುವುದಕ್ಕೆ ಬೇಕಿರುವ ಎಲ್ಲ ಪ್ರಯತ್ನ ಮಾಡುವುದು ಸಹಜ ಹಾಗೂ ಇದು ವಿಪಕ್ಷ ಸ್ಥಾನ ದಲ್ಲಿರುವ ಪಕ್ಷಗಳ ಕೆಲಸವೂ ಹೌದು. ಆದರೆ ಆಡಳಿತ ಪಕ್ಷದ ಶಾಸಕರೇ ತಮ್ಮ ಸರಕಾರದ ವಿರುದ್ಧ ನಿರಂತರ ಹೇಳಿಕೆ ನೀಡುವುದು, ಭ್ರಷ್ಟಾಚಾರದ ಆರೋಪ ಮಾಡುವುದು ಕೊಂಚ ‘ವಿಚಿತ್ರ ಹಾಗೂ ವಿವಾದ’ವಾಗುತ್ತದೆ.

ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಆಡಳಿತ ಪಕ್ಷದ ಎಲ್ಲ ಶಾಸಕರು, ನಾಯಕರು ತೃಪ್ತರಾಗಿರು ತ್ತಾರೆ ಎನ್ನುವುದು ಸುಳ್ಳು. ಆದರೆ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕುವ ಬದಲಿಗೆ, ಪಕ್ಷದ ವೇದಿಕೆಯಲ್ಲಿಯೇ ತಮ್ಮ ಅತೃಪ್ತಿಯನ್ನು ಹೊರ ಹಾಕುವುದು ಸಾಮಾನ್ಯ. ಅದಕ್ಕೆ ಪೂರಕವಾಗಿ ತಮ್ಮದೇ ಸರಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡಬಾರದು ಎನ್ನುವ ‘ಅಲಿಖಿತ’ ನಿಯಮವೂ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಬಂದಾಗಿದೆ.

ಇದನ್ನೂ ಓದಿ: Ranjith H Ashwath Column: ಅಲೆ ಮೇಲೊಂದು ಅಲೆ; ಇದಕ್ಕಿಲ್ಲ ಕೊನೆ

ಅದರಲ್ಲಿಯೂ ರಾಷ್ಟ್ರೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಸ್ವಪಕ್ಷೀಯ ಶಾಸಕರಿಗೆ ಯಾವುದೇ ಸಮಸ್ಯೆಯಿದ್ದರೂ ಅದನ್ನು ನುಂಗಿಕೊಂಡು ಅಥವಾ ಹೆಚ್ಚೆಂದರೆ ನಾಲ್ಕು ಗೋಡೆಯ ನಡುವೆ ಹೇಳಿಕೊಳ್ಳುವ ಅವಕಾಶವಿರುತ್ತದೆ. ಆದರೆ ಈ ಎಲ್ಲ ಸೂತ್ರಗಳನ್ನು ಮೀರಿ ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕರು ಪದೇಪದೆ ಸರಕಾರದ ವಿರುದ್ಧ ಅಥವಾ ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿಯ ಹೇಳಿಕೆಗಳನ್ನು ನೀಡಿಕೊಂಡು ಬಂದಿದ್ದಾರೆ. ಈ ರೀತಿಯ ಬಹಿರಂಗ ಹೇಳಿಕೆಗೆ ಕಠಿಣ ಕ್ರಮದ ಎಚ್ಚರಿಕೆಯನ್ನು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡುತ್ತಲೇ ಬಂದಿದ್ದರೂ, ಈ ಎಲ್ಲ ಎಚ್ಚರಿಕೆಗಳನ್ನು ಮೀರಿ ಹೇಳಿಕೆ ನೀಡುವುದು ಕಾಂಗ್ರೆಸ್‌ನ ಕೆಲ ಶಾಸಕರ ಟ್ರೇಂಡ್ ಆಗಿದೆ.

ಹೌದು, ಇಷ್ಟು ದಿನ ಮುಖ್ಯಮಂತ್ರಿ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೆಂದು ಓಡಾಡಿಕೊಂಡಿದ್ದ ಕಾಂಗ್ರೆಸ್ ಶಾಸಕರು ಇದೀಗ ಸರಕಾರದಲ್ಲಿ ಭ್ರಷ್ಟಾಚಾರವಿದೆ ಎನ್ನುವ ಆರೋಪವನ್ನು ಮಾಡುತ್ತಿದ್ದಾರೆ. ಇದನ್ನು ಇಲ್ಲಿಗೆ ನಿಲ್ಲಿಸದೇ, ಮಾಡಿದ ಆರೋಪಕ್ಕೆ ಕತ್ತರಿ ಪ್ರಯೋಗವಾಗಿರುವ ಆಡಿಯೊ ತಾವೇ ವೈರಲ್ ಮಾಡುವ ಹಾಗೂ ‘ನಾವು ಹೇಳುತ್ತಿರುವುದು ಸತ್ಯ’ ಎಂದು ಪುನರುಚ್ಚರಿಸುವ ಮೂಲಕ ಪ್ರತಿಪಕ್ಷಗಳಿಗೆ ಅಸ್ತ್ರವನ್ನು ಕೊಡುವ ಕೆಲಸಗಳಾಗುತ್ತಿದೆ.

ಸಿದ್ದರಾಮಯ್ಯ ನೇತೃತ್ವದಲ್ಲಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಕಾರಣಕ್ಕೆ ಸರಕಾರದ ವಿರುದ್ಧ ‘ಕೊಸರಾಡಿಕೊಂಡಿದ್ದ’ ಬಿ.ಆರ್ ಪಾಟೀಲ್ ಇದೀಗ ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ಆರೋಪ ಮಾಡುತ್ತಿದ್ದಾರೆ. ಬಿ.ಆರ್.ಪಾಟೀಲ್ ಆರೋಪವನ್ನು ಸಮರ್ಥಿಸಿಕೊಳ್ಳುವ ಮೊದಲೇ ಮತ್ತೊಬ್ಬ ಶಾಸಕ ಬೇಳೂರು ಗೋಪಾಲಕೃಷ್ಣರು ವಸತಿ ಸಚಿವ ಜಮೀರ್ ಅಹ್ಮದ್ ರಾಜೀನಾಮೆಗೆ ಆಗ್ರಹಿಸಿದ್ದರೆ, ಮತ್ತೊಬ್ಬ ಶಾಸಕ ರಾಜು ಕಾಗೆ, ತಾವೇ ರಾಜೀನಾಮೆ ನೀಡುವ ಬೆದರಿಕೆ ಯನ್ನು ಹಾಕಿದ್ದಾರೆ.

ಹಾಗೆ ನೋಡಿದರೆ, ಬಿ.ಆರ್.ಪಾಟೀಲ್ ಅಥವಾ ರಾಜು ಕಾಗೆ ಅವರ ಈ ಬೆದರಿಕೆ ಅಥವಾ ಆರೋಪಗಳು ಇದೇ ಮೊದಲಲ್ಲ. ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಕಾರಣವನ್ನು ಮುಂದಿಟ್ಟುಕೊಂಡು ಪಕ್ಷ ಹಾಗೂ ಸರಕಾರವನ್ನು ಮುಜುಗರಕ್ಕೀಡು ಮಾಡುವ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಿಂದಲೇ ಅಧಿಕಾರಕ್ಕೆ ಬಂದ ಈ ಶಾಸಕರು, ಗ್ಯಾರಂಟಿಗಳೇ ನಮಗೆ ಸಮಸ್ಯೆ ಮಾಡುತ್ತಿವೆ ಎನ್ನುವ ಹೇಳಿಕೆ ನೀಡಿ ಪ್ರತಿಪಕ್ಷಗಳಿಗೆ ಆಹಾರವಾಗಿದ್ದರು.

ಇದೇ ರೀತಿ ಅಧಿಕಾರಿಗಳು ಮಾತು ಕೇಳುತ್ತಿಲ್ಲ, ಸಚಿವರು ಕೆಲಸ ಮಾಡಿಕೊಡುತ್ತಿಲ್ಲ ಎನ್ನುವ ಮೂಲಕ ಮೂಲಕ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಆದರೆ ಈ ಬಾರಿ ವಸತಿ ಇಲಾಖೆಯ ವಿರುದ್ಧ ‘ಭ್ರಷ್ಟಾಚಾರ’ ಆರೋಪವನ್ನು ಮಾಡಿದ್ದಾರೆ. ಈ ರೀತಿಯ ಆರೋಪದಿಂದ ಸರಕಾರಕ್ಕೆ ಯಾವುದೇ ಬಹುದೊಡ್ಡ ಸಮಸ್ಯೆಯಾಗುತ್ತೆ ಎಂದಲ್ಲ.

ಬದಲಿಗೆ ಈ ರೀತಿಯ ಅನಗತ್ಯ ಹೇಳಿಕೆಗಳನ್ನು ನಿಲ್ಲಿಸಲು ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಕಾಂಗ್ರೆಸ್ ಹೈಕಮಾಂಡ್‌ಗೆ ಸಾಧ್ಯವಾಗಿಲ್ಲ ಎನ್ನುವುದು ಪಕ್ಷಕ್ಕೆ ತೀವ್ರ ಮುಜುಗರದ ವಿಷಯ! ಈ ಹಿಂದೆ 2013ರಿಂದ ೧೮ವರೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಿದ್ದಾಗಲೂ ಪಕ್ಷದಲ್ಲಿ ಕೆಲ ಗೊಂದಲಗಳಿದ್ದವು. ಆದರೆ ಅದ್ಯಾವುದೂ ಮಾಧ್ಯಮಗಳ ಮುಂದೆ ಬರುತ್ತಿರಲಿಲ್ಲ. ಆದರೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ರಾಜ್ಯ ನಾಯಕರ ‘ಅನವಶ್ಯಕ’ ಹೇಳಿಕೆಗಳೇ ಸರಕಾರದ ಸಾಧನೆಗಳನ್ನು ಮರೆಮಾಚುವಂತಾಗುತ್ತಿದೆ. ಈ ರೀತಿಯ ಡ್ಯಾಮೇಜಿಂಗ್ ಹೇಳಿಕೆಗಳನ್ನು ನಿಯಂತ್ರಿಸಬೇಕು ಎನ್ನುವ ಮಾತನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಹೈಕಮಾಂಡ್‌ಗೆ ನೇರವಾಗಿಯೂ ಪರೋಕ್ಷವಾಗಿಯೂ ಹಲವು ಬಾರಿ ಹೇಳಿದ್ದಾರೆ.

ಹೈಕಮಾಂಡ್ ನಾಯಕರೂ ‘ಕಠಿಣ ಕ್ರಮ’ದ ಎಚ್ಚರಿಕೆ ನೀಡುತ್ತಿದ್ದಾರೆಯೇ ಹೊರತು, ಈ ಗೊಂದಲದ ನಿವಾರಣೆಗೆ ತಾರ್ಕಿಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ ಎನ್ನುವುದು ಸ್ಪಷ್ಟ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ನ ಸಂಘಟನೆಯನ್ನು ದೇಶಾದ್ಯಂತ ಗಮನಿಸಿದರೆ ಕರ್ನಾಟಕ ದಲ್ಲಿ ಉತ್ತಮ ರೀತಿಯಲ್ಲಿದೆ ಎನ್ನುವುದು ಸ್ಪಷ್ಟ.

ಕರ್ನಾಟಕದಿಂದಲೇ ಹಲವು ರಾಜ್ಯಗಳ ಪಕ್ಷದ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಒಪನ್ ಸೀಕ್ರೆಟ್ ಆಗಿದೆ. ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನೇ ಇತರೆ ರಾಜ್ಯಗಳಲ್ಲಿಯೂ ವಿಸ್ತರಿಸಿ ಉಸಿರಾಡುವ ಸ್ಥಿತಿಗೆ ಪಕ್ಷ ಬಂದು ನಿಂತಿದೆ ಎನ್ನುವುದು ದೆಹಲಿ ನಾಯಕರಿಗೆ ಗೊತ್ತಿರುವ ವಿಷಯ. ಆದರೆ ಕರ್ನಾಟಕದಲ್ಲಿ ಪಕ್ಷ ಹಾಗೂ ಸರಕಾರಕ್ಕೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮಾತ್ರ ತಲೆಕೆಡಿಸಿಕೊಂಡಿಲ್ಲ ಎನ್ನುವ ಮಾತಿದೆ.

ಒಂದು ವೇಳೆ ತಲೆಕೆಡಿಸಿಕೊಂಡು ಸೂಚನೆ ನೀಡಿದರೂ, ಇಂದಿನ ಪರಿಸ್ಥಿತಿಯಲ್ಲಿ ರಾಜ್ಯದ ಬಹುತೇಕ ನಾಯಕರು ಹೈಕಮಾಂಡ್ ಹೇಳಿದ್ದನ್ನು ಶಿರಸಾವಹಿಸಿ ಪಾಲಿಸುವ ಮನಸ್ಥಿತಿಯಲ್ಲಿಲ್ಲ. ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರತಿಪಕ್ಷವಾಗಿ ಬಿಜೆಪಿ ಸಜ್ಜಾಗದಿದ್ದರೂ, ಕಾಂಗ್ರೆಸ್‌ನ ಕೆಲ ಶಾಸಕರೇ ಈ ಕೆಲಸವನ್ನು ಮಾಡುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಹಾಗೆ ನೋಡಿದರೆ, ಕಾಂಗ್ರೆಸ್‌ನ ಹಲವು ಶಾಸಕರ ಪ್ರಕಾರ ‘ಅನುದಾನದ ಕೊರತೆ’ ಮೊದಲ ವರ್ಷದಲ್ಲಿತ್ತು. ಆದರೆ ಎರಡನೇ ವರ್ಷಕ್ಕೆ ಹಲವು ಯೋಜನೆಗಳ ಮೂಲಕ ಕ್ಷೇತ್ರಗಳಿಗೆ ಅನುದಾನ ವನ್ನು ಘೋಷಿಸಲಾಗುತ್ತಿದೆ (ಅನುದಾನ ಬಿಡುಗಡೆಯಾಗುವುದು ಬೇರೆ ಮಾತು). ಆದರೆ ತಾವು ಇಚ್ಛಿಸಿದ ‘ಯೋಜನೆ’ ನೀಡಲಿಲ್ಲ ಎನ್ನುವ ಕಾರಣಕ್ಕೆ ಕೆಲ ಶಾಸಕರು ಈ ರೀತಿ ಬೇಸರವನ್ನು ಹೊರ ಹಾಕುತ್ತಿದ್ದಾರೆ ಎನ್ನುವ ಗುಸುಗುಸು ಚರ್ಚೆ ಕಾಂಗ್ರೆಸ್‌ನಲ್ಲಿದೆ. ಅದರಲ್ಲಿಯೂ ಬಿ.ಆರ್. ಪಾಟೀಲ್ ಹಾಗೂ ರಾಜು ಕಾಗೆ, ಸರಕಾರ ಬಂದು ಎರಡು ವರ್ಷ ಕಳೆಯುವಷ್ಟರಲ್ಲಿ ಕನಿಷ್ಠ ಮೂರು ಬಾರಿ ಸರಕಾರದ ವಿರುದ್ಧ ಆರೋಪಿಸಿ, ರಾಜೀನಾಮೆಯ ಮಾತುಗಳನ್ನು ಆಡಿದ್ದಾರೆ.

ಈ ರೀತಿ ಪ್ರಚಾರಕ್ಕೆ ಬರುತ್ತಿದ್ದಂತೆ ಸಹಜವಾಗಿಯೇ ಮುಖ್ಯಮಂತ್ರಿ, ಡಿಸಿಎಂ ಹಾಗೂ ಇತರೆ ಸಚಿವರು ಬುಲಾವ್ ನೀಡುತ್ತಾರೆ. ಬುಲಾವ್ ನೀಡಿದ ಸಮಯದಲ್ಲಿ ತಮಗಾಗಬೇಕಿರುವ ‘ಪಟ್ಟಿ’ ನೀಡಿ ಅವುಗಳನ್ನು ಮಾಡಿಸಿಕೊಳ್ಳುವ ಲೆಕ್ಕಾಚಾರಗಳಿವೆ ಎನ್ನುವ ಆರೋಪಗಳೂ ಇವೆ.

ಭ್ರಷ್ಟಾಚಾರದ ಆರೋಪಕ್ಕೂ ಮಿಗಿಲಾಗಿ ಕೆಲ ಶಾಸಕರು ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಮೊದಲ ಬಾರಿಗೆ ಶಾಸಕರಾಗಿರುವ ಇವರೆಲ್ಲ ಇಂಥ ಅತಿಸೂಕ್ಷ್ಮ ಹಾಗೂ ರಾಜಕೀಯವಾಗಿ ಅಳೆದು ತೂಗಿ ನಿರ್ಣಯಿಸಬೇಕಾದ ವಿಷಯಗಳ ಬಗ್ಗೆ ಬಹಿರಂಗ ಹೇಳಿಕೆ ನೀಡುವುದರಿಂದ ಯಾರಿಗೆ ಲಾಭ ಎನ್ನುವುದು ಗೊತ್ತಿಲ್ಲ.

ಹೋಗಲಿ ಈ ಶಾಸಕರ ಮಾತನ್ನು ಕೇಳಿಕೊಂಡು ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದು ಕೊಳ್ಳುವಷ್ಟು ‘ವೀಕ್’ ಆಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ರಾಜ್ಯ ಕಾಂಗ್ರೆಸ್‌ನಲ್ಲಿ ಈ ಸರಕಾರದ ಅವಧಿಯಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಗಮನಿಸಿದರೆ ಹೈಕಮಾಂಡ್‌ಗೆ ಇಲ್ಲಿರುವ ನಾಯಕರ ಮೇಲೆ ಯಾವ ಪ್ರಮಾಣದಲ್ಲಿ ಹಿಡಿತವಿದೆ ಎನ್ನುವುದು ಗೊತ್ತಾಗುತ್ತದೆ. ಈ ಹಿಂದೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್ ಅವರು ಬಹಿರಂಗವಾಗಿ ಪತ್ರ ಬರೆದು ಎಚ್ಚರಿಕೆ ನೀಡಿದ್ದರು.

ಇದಾದ ಬಳಿಕ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ‘ಯಾವುದೇ ರೀತಿಯ ಹೇಳಿಕೆ ನೀಡುವಂತಿಲ್ಲ’ ಎನ್ನುವ ಎಚ್ಚರಿಕೆಯನ್ನು ಸುದ್ದಿಗೋಷ್ಠಿಯ ಮೂಲಕವೇ ನೀಡಿದ್ದರು. ರಾಹುಲ್ ಗಾಂಧಿ ಅವರು ರಾಜ್ಯ ನಾಯಕರನ್ನು ಭೇಟಿಯಾದಾಗ ಅಥವಾ ರಾಜ್ಯಕ್ಕೆ ಆಗಮಿಸಿದಾಗಲೆಲ್ಲ ‘ಒಗ್ಗಟ್ಟಿನ ಮಂತ್ರ’ ಪಠಿಸುವಂತೆ, ಎಲ್ಲರೂ ವಿಶ್ವಾಸದಲ್ಲಿ ಕೆಲಸ ಮಾಡುವಂತೆ ಹೇಳುತ್ತಲೇ ಬಂದಿದ್ದಾರೆ. ಇಷ್ಟಾದರೂ, ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಗೊಂದಲಗಳಿಗೆ ಕೊನೆಯಿಲ್ಲವಾಗಿದೆ.

ನಾಯಕರು ‘ಎಚ್ಚರಿಕೆ’ ನೀಡಿದ ಎರಡು ತಿಂಗಳು ತಣ್ಣಗಾಗುವವರು ಕೆಲ ಸಮಯವಾಗುತ್ತಿದ್ದಂತೆ ಒಂದಿಲ್ಲೊಂದು ರೀತಿಯಲ್ಲಿ ಸರಕಾರಕ್ಕೆ ಡ್ಯಾಮೇಜ್ ಆಗುವ ಹೇಳಿಕೆಯನ್ನು ನೀಡುವುದು ಸರ್ವೇ ಸಾಮಾನ್ಯ ಎನಿಸಿದೆ. ಈ ಎಲ್ಲ ಸವಾಲುಗಳ ನಡುವೆಯೂ ಕಾಂಗ್ರೆಸ್‌ನಲ್ಲಿ ಶಿಸ್ತು ಕಾಯ್ದುಕೊಳ್ಳ ಬೇಕಿರುವುದು ಇಂದಿನ ಅಗತ್ಯವಾಗಿದೆ.

ರಾಷ್ಟ್ರಮಟ್ಟದಲ್ಲಿನ ಇಂದಿನ ಕಾಂಗ್ರೆಸ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕರ್ನಾಟಕ ದಲ್ಲಿ ‘ಮಾದರಿ’ ಸರಕಾರವನ್ನು ನೀಡುವ ಅನಿವಾರ್ಯತೆಯಿದೆ. ದೇಶದೆಲ್ಲೆಡೆ ಬಲ ಕಳೆದುಕೊಳ್ಳು ತ್ತಿರುವ ಸಮಯದಲ್ಲಿ, ಸ್ಪಷ್ಟ ಹಾಗೂ ದಾಖಲೆಯ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಇಲ್ಲಿಯೂ ಗೊಂದಲಗಳನ್ನು ಮಾಡಿಕೊಂಡರೆ ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದ ಇತರೆ ರಾಜ್ಯಗಳ ಮೇಲೆಯೂ ಅದು ಪರಿಣಾಮ ಬೀರುವ ಸಾಧ್ಯತೆ ಯಿರುತ್ತದೆ. ಆದ್ದರಿಂದ ತಮ್ಮದೇ ಶಾಸಕರ ಮೂಲಕ ಪ್ರತಿಪಕ್ಷಗಳಿಗೆ ‘ಅಸ್ತ್ರ’ ನೀಡುವುದನ್ನು ನಿಯಂತ್ರಿಸುವ ಕೆಲಸವಾಗ ಬೇಕಿದೆ. ರಾಜ್ಯದ ಬಹುತೇಕ ಶಾಸಕರನ್ನು ‘ಮೌನ’ವಾಗಿಸುವುದಕ್ಕೆ ಪಕ್ಷದ ಹೈಕಮಾಂಡ್‌ಗಿಂತ ರಾಜ್ಯ ನಾಯಕತ್ವವೇ ನಿಯಂತ್ರಿಸಬಹುದು. ಆದರೆ ಕರ್ನಾಟಕದಲ್ಲಿರುವ ಕಾಂಗ್ರೆಸ್‌ನ ಎರಡು ಶಕ್ತಿಕೇಂದ್ರಗಳಿಂದಾಗಿ ಈ ತಿಕ್ಕಾಟ ಮತ್ತಷ್ಟು ಜೋರಾಗುತ್ತಿದೆ ಎಂದರೆ ತಪ್ಪಾಗುವುದಿಲ್ಲ.

ನಾಯಕತ್ವ ತಿಕ್ಕಾಟಕ್ಕೆ ಹೈಕಮಾಂಡ್ ‘ಸೂತ್ರ’ವೊಂದನ್ನು ಸಿದ್ಧಪಡಿಸಿದರೆ, ಕೈಪಡೆಯಲ್ಲಿರುವ ಬಹುದೊಡ್ಡ ಸಮಸ್ಯೆಗೆ ಪರಿಹಾರ ಸಿಗುವುದರಲ್ಲಿ ಅನುಮಾನವಿಲ್ಲ.