BBK 12: ಬಿಗ್ ಬಾಸ್ ಫ್ಯಾನ್ಸ್ಗೆ ಗುಡ್ನ್ಯೂಸ್; ಮುಂದಿನ 4 ಸೀಸನ್ಗೂ ಸುದೀಪ್ ನಿರೂಪಕ
Sudeepa: ಬಿಗ್ ಬಾಸ್ ಕನ್ನಡ ಸೀಸನ್ 11ರ ಮುಕ್ತಾಯದ ವೇಳೆಗೆ ಅನಿವಾರ್ಯ ಕಾರಣಗಳಿಂದ ಇನ್ನುಮುಂದೆ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿ ಶಾಕ್ ನೀಡಿದ್ದ ಸುದೀಪ್ ಇದೀಗ ಮನಸ್ಸು ಬದಲಾಯಿಸಿದ್ದಾರೆ. ಮುಂದಿನ 4 ಅವಧಿಯನ್ನೂ ತಾವೇ ನಿರೂಪಿಸುವುದಾಗಿ ತಿಳಿಸಿದ್ದಾರೆ.

ಸುದೀಪ್.

ಬೆಂಗಳೂರು: ಬಿಗ್ ಬಾಸ್ (Bigg Boss) ಕನ್ನಡ ಅಭಿಮಾನಿಗಳಿಗೆ ಸುದೀಪ್ (Sudeepa) ಕೊನೆಗೂ ಗುಡ್ನ್ಯೂಸ್ ನೀಡಿದ್ದಾರೆ. ಸೀಸನ್ 11ರ ಮುಕ್ತಾಯದ ವೇಳೆಗೆ ಅನಿವಾರ್ಯ ಕಾರಣಗಳಿಂದ ಇನ್ನುಮುಂದೆ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿ ಶಾಕ್ ನೀಡಿದ್ದ ಸುದೀಪ್ ಇದೀಗ ಮನಸ್ಸು ಬದಲಾಯಿಸಿದ್ದಾರೆ. ಸೀಸನ್ 12ರ (Bigg Boss Kannada season 12) ಕುರಿತು ಮಾಹಿತಿ ನೀಡಲು ಸೋಮವಾರ (ಜೂ. 30) ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸೀಸನ್ ಮಾತ್ರವಲ್ಲ ಮುಂದಿನ 4 ಅವಧಿಯನ್ನೂ ತಾವೇ ನಿರೂಪಿಸುವುದಾಗಿ ತಿಳಿಸಿದ್ದಾರೆ (BBK 12). ಆ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ.
ಹೌದು, ಸೀಸನ್ 12 ಮಾತ್ರವಲ್ಲ 15 ಸೀಸನ್ವರೆಗೂ ಕಿಚ್ಚ ಸುದೀಪ್ ನಿರೂಪಣೆ ಮಾಡುವುದು ಪಕ್ಕಾ ಆಗಿದೆ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದಾರೆ. ಮುಂದಿನ 4 ಬಿಗ್ ಬಾಸ್ ಸೀಸನ್ಗಳನ್ನು ಹೋಸ್ಟ್ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾಗಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: BBK 12: ಸುದೀಪ್ ಮನವೊಲಿಸುವಲ್ಲಿ ಕಲರ್ಸ್ ಯಶಸ್ವಿ: ಬಿಗ್ ಬಾಸ್ 12ಕ್ಕೆ ಕಿಚ್ಚನ ನಿರೂಪಣೆ
ವಿವಾದಿತರನ್ನು ಕರೀಬೇಡಿ ಎಂದಿಲ್ಲ
ಬಿಗ್ ಬಾಸ್ ಸ್ಪರ್ಧಿಗಳಾಗಿ ವಿವಾದಿತರನ್ನು ಕರೀಬೇಡಿ ಎಂದಿಲ್ಲ. ಆದರೆ ಅವರನ್ನು ಯಾಕೆ ಕರೆದಿದ್ದೀರಿ ಅನ್ನೋ ಕ್ಲಾರಿಟಿ ಬೇಕು ಎಂದು ಸುದೀಪ್ ಹೇಳಿದ್ದಾರೆ. ʼʼನನ್ನ ಜವಾಬ್ದಾರಿ ಬೆಟರ್ ಶೋ ಮಾಡೋದು. ನಾನು ಟೆಲಿವಿಷನ್ ಫಾಲೋ ಮಾಡಲ್ಲ. ಆದರೆ ಈ ಶೋ ಮಾತ್ರ ನೋಡ್ತೀನಿ. ವೀಕೆಂಡ್ ಅಷ್ಟೇ ಬಂದು ಶೋ ನಡಿಸಿಕೊಡೋಲ್ಲ. ವಾರವಿಡೀ ಬಿಗ್ ಬಾಸ್ ಮನೆಯಲ್ಲಿ ಏನು ನಡೆಯಿತು ಎನ್ನುವುದನ್ನು ಗಮನಿಸುತ್ತೇನೆʼʼ ಎಂದಿದ್ದಾರೆ.
ಈ ಹಿಂದೆ ಸುದೀಪ್ ಬಿಗ್ ಬಾಸ್ ನಡೆಸಲಿ ಕೊಡಲು ಹಲವು ಷರತ್ತುಗಳನನು ವಿಧಿಸಿದ್ದರು ಎನ್ನುವ ಸುದ್ದಿ ಹಬ್ಬಿತ್ತು. ಈ ಸುದ್ದಿಯನ್ನು ಕಲರ್ಸ್ ಕನ್ನಡ ಕ್ಲಸ್ಟರ್ ಹೆಡ್ ಸುಷ್ಮಾ ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ʼʼಸುದೀಪ್ ಇಲ್ಲದ ಶೋ ಊಹಿಸಲೂ ಸಾಧ್ಯವಿಲ್ಲ. ನಮ್ಗೆ ಸುದೀಪ್ ಯಾವುದೇ ರೀತಿಯ ಕಂಡಿಷನ್ ಹಾಕಿಲ್ಲ. ಆದರೆ ಸಲಹೆ ಕೊಟ್ಟಿದ್ದಾರೆ. ಸುದೀಪ್ ಅವರನ್ನ ಒಪ್ಪಿಸೋದು ತುಂಬ ಕಷ್ಟ ಇತ್ತು. ನಮ್ಮ ನಡುವೆ ನಡೆದ ಮಾತುಕತೆ ಬಗ್ಗೆ ಹೇಳೋಕೆ ಆಗಲ್ಲʼʼ ಎಂದು ತಿಳಿಸಿದ್ದಾರೆ.
ಮತ್ತೆ ನಿರೂಪಣೆ ಮಾಡಲು ಒಪ್ಪಿಕೊಂಡ ಬಗ್ಗೆ ತಿಳಿಸಿದ ಸುದೀಪ್, ʼʼನನಗೆ ನಾನು ಕನ್ವಿನ್ಸ್ ಮಾಡೋದು ಕಷ್ಟ ಆಗಲ್ಲ. ಎದುರುಗಡೆ ಇರೋರಲ್ಲಿ ಪ್ರೀತಿ ಇದ್ಯಾ ಎನ್ನುವುನ್ನು ಮೊದಲು ಗಮನಿಸ್ತೇನೆ. ಅವರ ಪ್ರಾಮಾಣಿಕವಾಗಿ ಮನವಿ ಮಾಡಿದ್ರು. 12 ಸಲ ಮೀಟಿಂಗ್ಸ್ ಮಾಡಿದ ಮೇಲೆ ಒಪ್ಕೊಂಡೆ. ಎಲ್ಲರೂ ಇಷ್ಟು ಹೇಳಬೇಕಾದ್ರೆ ನಾನು ಯೋಚನೆ ಮಾಡಬೇಕಾಗಿ ಬಂತುʼʼ ಎಂದು ಹೇಳಿದ್ದಾರೆ.
ʼʼತಾಯಿ ಮೃತಪಟ್ಟ ಎರಡು ವಾರಕ್ಕೆ ವೇದಿಕೆ ಬಂದಿದ್ದೆ. ಅವರಿಲ್ಲ ಎನ್ನುವ ನೋವು ತುಂಬಾ ಕಾಡುತ್ತಿತ್ತು. ಅದೇ ಕಾರಣಕ್ಕೆ ಶೋ ಸಾಕು ಎಂದುಕೊಂಡಿದ್ದೆ. ತಾಯಿ ಹೋದಮೇಲೆ ನನ್ನ ಡ್ರೆಸ್ಸಿಂಗ್ ಸೆನ್ಸ್ ಕೂಡ ಬದಲಾಗಿತ್ತು. ಆಮೇಲೆ ಎಲ್ಲರ ಒತ್ತಾಯದ ಮೇರೆಗೆ ನಾನು ಮತ್ತೆ ಒಳ್ಳೆ ಡ್ರೆಸ್ ಹಾಕಲು ಆರಂಭಿಸಿದೆ. ನನ್ನ ಮಗಳು ನನ್ನ ತೀರ್ಮಾನ ಒಪ್ಪಿಕೊಂಡಿದ್ದಾಳೆʼʼ ಎಂದು ಸುದೀಪ್ ಹೇಳಿದ್ದಾರೆ.