ತಮಿಳುನಾಡು ವಿರುದ್ದ ಗೆದ್ದು ದಕ್ಷಿಣ ವಲಯ ಚಾಂಪಿಯನ್ಷಿಪ್ ಜಯಿಸಿದ ಕರ್ನಾಟಕ!
ಎಚ್ಸಿಎಲ್ ಫೌಂಡೇಷನ್ ಆತಿಥ್ಯದ ಏಳನೇ ಆವೃತ್ತಿಯ ದಕ್ಷಿಣ ವಲಯದ ಕ್ರಿಕೆಟ್ ಚಾಂಪಿಯನ್ಷಿಪ್ ಟೂರ್ನಿಯಲ್ಲಿ ಕರ್ನಾಟಕ 15ರ ವಯಸ್ಸಿನೊಳಗಿನವರ ಬಾಲಕಿಯರ ತಂಡ ಚಾಂಪಿಯನ್ ಆಗಿದೆ. ಸೋಮವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ತಂಡ 60 ರನ್ಗಳ ಭರ್ಜರಿ ಗೆಲುವು ದಾಖಲಿಸಿತು.

ದಕ್ಷಿಣ ವಲಯದ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕ ಆಟಗಾರ್ತಿಯರು. ಶೀತಲ್ ಕಿರಣ್ (ತರಬೇತುದಾರ), ಸಾಹಿತಿ, ಗಗನ ಪ್ರಿಯಾ, ನರ್ತನಾ, ತನುಶ್ರೀ, ಸಿರೀಶಾ, ಜಾಹಿಲ್, ದಿಶಾ, ಸಹನಾ, ಚೈತ್ರಾ (ನಿರ್ವಾಹಕಿ). ಎಡದಿಂದ ಕುಳಿತವರು, ಚಂದನಾ, ಶರಣ್ಯ, ಶ್ರಾವಣಿ, ಸೋಹಾನಿ ಶೀತಲ್ ಕಿರಣ್.

ತುಮಕೂರು: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿನ ಸಂಘಟಿತ ಪ್ರದರ್ಶನದ ಬಲದಿಂದ ಕರ್ನಾಟಕ ತಂಡ, ಬಾಲಕಿಯರ 15ರ ವಯೋಮಾನದ ಎಚ್ಸಿಎಲ್ ಫೌಂಡೇಷನ್ ಆತಿಥ್ಯದ ಏಳನೇ ಆವೃತ್ತಿಯ ದಕ್ಷಿಣ ವಲಯದ ಚಾಂಪಿಯನ್ಷಿಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 60 ರನ್ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಕರ್ನಾಟಕ ಬಾಲಕಿಯರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಜೂನ್ 27 ರಿಂದ 30ರ ವರೆಗೆ ನಡೆದಿದ್ದ ಈ ರೋಚಕ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದ ಆತಿಥೇಯ ಕರ್ನಾಟಕ ತಂಡ ಚಾಂಪಿಯನ್ ಆಗಿದ್ದು ವಿಶೇಷ ಸಂಗತಿಯಾಗಿದೆ.
ಜೂನ್ 30 ರಂದು ತುಮಕೂರಿನ ಎಸ್ಐಟಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಕರ್ನಾಟಕ ತಂಡ, ತನ್ನ ಪಾಲಿನ 24 ಓವರ್ಗಳಿಗೆ 207 ರನ್ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ತಮಿಳುನಾಡಿಗೆ 208 ರನ್ಗಳ ಕಠಿಣ ಗುರಿಯನ್ನು ನೀಡಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ತಮಿಳುನಾಡು, ತನ್ನ ಪಾಲಿನ 24 ಓವರ್ಗಳನ್ನು ಮುಗಿಸಿದರೂ 147 ರನ್ಗಳಿಗೆ ಆಲ್ಔಟ್ ಆಯಿತು. ಇದರೊಂದಿಗೆ 60 ರನ್ಗಳಿಂದ ಸೋಲು ಒಪ್ಪಿಕೊಂಡಿತು.
IND vs ENG: ರಾಹುಲ್ ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ಜೋ ರೂಟ್!
ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡದ ಪರ ಸಿರೀಷಾ ಅದ್ಭುತ ಬ್ಯಾಟ್ ಮಾಡಿದರು. ಅವರು 30 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 49 ರನ್ಗಳನ್ನು ಸಿಡಿಸಿದರು. ಇವರ ಜೊತೆ ಸೋಹಾನಿ ಎಸ್ ಕಿರಣ್ ಕೂಡ ಸ್ಪೋಟಕ ಬ್ಯಾಟ್ ಮಾಡಿದರು. ತಮಿಳುನಾಡು ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಸೋಹಾನಿ, 33 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 44 ರನ್ಗಳನ್ನು ಗಳಿಸಿದರು. ಇವರ ಜೊತೆಗೆ ನಾಯಕಿ ಸಹನಾ 21 ಎಸೆತಗಳಲ್ಲಿ 25 ರನ್ ಗಳಿಸಿದರೆ, ಚಂದನಾ 31 ಎಸೆತಗಳಲ್ಲಿ 23 ರನ್ ಕಲೆ ಹಾಕಿದರು. ಆ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಲು ನೆರವು ನೀಡಿದರು.
ತಮಿಳುನಾಡು ತಂಡದ ಪರ ಪರಿಣಾಮಕಾರಿಯಾಗಿ ಬೌಲಿಂಗ್ ದಾಳಿ ನಡೆಸಿದ ಬೃಂದಾ ಹಾಗೂ ಕಾವ್ಯ ತಲಾ ಮೂರು ವಿಕೆಟ್ಗಳನ್ನು ಪಡೆದರೆ, ನಾಯಕಿ ಪ್ರಯಂಕಾ ಎರಡು ವಿಕೆಟ್ ಕಿತ್ತರು.
IND vs ENG: ʻಶುಭಮನ್ ಗಿಲ್ಗೆ ಸಮಯ ಕೊಡಿ-ಟೀಕಾಕಾರರ ವಿರುದ್ಧ ಮೊಹಮ್ಮದ್ ಅಝರುದ್ದಿನ್ ಕಿಡಿ!
147 ಕ್ಕೆ ತಮಿಳುನಾಡು ಆಲ್ಔಟ್
ಬಳಿಕ 208 ರನ್ಗಳ ಗುರಿಯನ್ನು ಹಿಂಬಾಲಿಸಿದ ತಮಿಳುನಾಡು ತಂಡದ ಪರ ಯಾವುದೇ ಆಟಗಾರ್ತಿಯಿಂದ ದೊಡ್ಡ ಇನಿಂಗ್ಸ್ ಮೂಡಿ ಬರಲಿಲ್ಲ. ಸಿರೀಷಾ ಸೇರಿದಂತೆ ಆತಿಥೇಯರ ಬೌಲಿಂಗ್ ದಾಳಿಗೆ ನಲುಗಿದ ತಮಿಳುನಾಡು ತಂಡ, 150 ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಪ್ರವಾಸಿ ತಂಡದ ಪರ ಬೃಂದಾ 41 ಎಸೆತಗಳಲ್ಲಿ 34 ರನ್, ಕಾವ್ಯಾ 29 ಎಸೆತಗಳಲ್ಲಿ 26 ರನ್ ಹಾಗೂ ವಿವೇತಾ 42 ಎಸೆತಗಳಲ್ಲಿ 25 ರನ್ಗಳನ್ನು ಗಳಿಸಿದರು. ಕರ್ನಾಟಕ ತಂಡದ ಪರ ಸಿರೀಷಾ 21 ರನ್ಗಳಿಗೆ 3 ವಿಕೆಟ್ ಪಡೆದರೆ, ಸಾಹಿತಿ ಮತ್ತು ಸಹನಾ ತಲಾ ಒಂದೊಂದು ವಿಕೆಟ್ ಕಿತ್ತರು.